
ಮಡಿಕೇರಿ ಸೆ.25 NEWS DESK : ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ ದೇಶಭಕ್ತಿ ಮತ್ತು ದೇಶ ರಕ್ಷಣೆಯ ಕುರಿತು ದೃಢ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ಕೊಡಗು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲ ಸಚಿವ ಎಂ.ಸುರೇಶ್ ಕರೆ ನೀಡಿದ್ದಾರೆ. ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜ್ ನ ಎನ್ಸಿಸಿ ಘಟಕದ ವತಿಯಿಂದ ‘ವಿದ್ಯಾರ್ಥಿಗಳಿಗೆ ನಾಯಕತ್ವದ ಗುಣಲಕ್ಷಣಗಳು’ ಎಂಬ ವಿಷಯದ ಕುರಿತು ನಡೆದ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಎನ್ಸಿಸಿಗೆ ಸೇರುವುದರ ಮೂಲಕ ಶಿಸ್ತನ್ನು ಅಳವಡಿಸಿಕೊಂಡು ಸಮಾಜದಲ್ಲಿ ಉತ್ತಮ ನಾಗರೀಕರಾಗಿ ಬದುಕಬೇಕು. ತಮ್ಮ ಭವಿಷ್ಯದ ಗುರಿಯನ್ನು ತಲುಪಬೇಕಾದರೆ ಶ್ರಮ ಮತ್ತು ಹೋರಾಟ ಮನೋಭಾವ ಹೊಂದಿರಬೇಕು ಎಂದರು. ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದ ಐಕ್ಯುಎಸಿ ಹಾಗೂ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಕೆ.ಪಿ.ನಾಗರಾಜು ಅವರು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶಿಸ್ತು, ಸಂಯಮ, ಧೈರ್ಯ, ಕ್ರೀಡಾ ಸ್ಫೂರ್ತಿ, ಛಲ ಮತ್ತು ನಾಯಕತ್ವದ ಗುಣಗಳನ್ನು ಅಳವಡಿಸಿಕೊಂಡರೆ ಸಮರ್ಥ ನಾಯಕನಾಗಬಹುದು ಎಂದು ಸಲಹೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜ್ ನ ಪ್ರಾಂಶುಪಾಲ ಮೇಜರ್ ಪ್ರೊ.ಬಿ.ರಾಘವ ಅವರು, ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಶಿಕ್ಷಣವನ್ನು ಒಂದು ಅಸ್ತ್ರವನ್ನಾಗಿ ಬಳಸಿಕೊಳ್ಳಬೇಕು ಎಂದರು. ತಾನು ಬೆಳೆಯುವುದರೊಂದಿಗೆ ಸಮಾಜ ಹಾಗೂ ದೇಶದ ಪರಿವರ್ತನೆಯಲ್ಲಿ ತೊಡಗಿಸಿಕೊಳ್ಳಬೇಕು. ಸುಸ್ಥಿರ ಅಭಿವೃದ್ಧಿಗೆ ಗಮನ ಹರಿಸಬೇಕು ಮತ್ತು ದುಶ್ಚಟಗಳಿಂದ ದೂರವಿರಬೇಕು. ಓದಿನೊಂದಿಗೆ ಪಠ್ಯೇತರ ಚಟುವಟಿಕೆಗಳಿಗೆ ಒತ್ತು ನೀಡಬೇಕೆಂದು ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ಹಿಂದಿ ವಿಭಾಗದ ಉಪನ್ಯಾಸಕಿ ಖುರ್ಷಿದ ಬಾನು, ಪ್ರೊ.ತಿಪ್ಪೆಸ್ವಾಮಿ ಈ, ಪ್ರೊ.ಎಂ.ಪಿ.ಕೃಷ್ಣ, ಎನ್ಸಿಸಿ ಕೆಡೆಡ್ಗಳ ನಾಯಕರಾದ ಕೆ.ಎಂ.ತಿಮ್ಮಯ್ಯ, ನಿಖಿಲ್ ಸಿ.ಎ, ಎ.ಕೆ.ಸೋಮಣ್ಣ, ಚರಿಷ್ಮ ರೈ, ವರ್ಷ ಕೆ.ವಿ, ಬೋಧಕ ಹಾಗೂ ಬೋಧಕೇತರ ವರ್ಗದವರು ಉಪಸ್ಥಿತರಿದ್ದರು. ಸಿ.ಟಿ.ಸೆಜಲ್ ಸ್ವಾಗತಿಸಿ, ಕೆಡೆಟ್ ಮೇಹಕ್ ನಿರೂಪಿಸಿ, ಎಂ.ಎಸ್.ಆಶಿತ ವಂದಿಸಿದರು. ಇದೇ ಸಂದರ್ಭ ಕೆಡೆಟ್ಗಳಿಗೆ ರ್ಯಾಂಕಿಂಗ್ ಬ್ಯಾಡ್ಜ್ಗಳನ್ನು ನೀಡುವುದರ ಮೂಲಕ ನಾಯಕತ್ವದ ಜವಾಬ್ದಾರಿಯನ್ನು ಹಸ್ತಾಂತರಿಸಲಾಯಿತು. ಸಭಾ ಕಾರ್ಯಕ್ರಮದ ನಂತರ ಎನ್ಸಿಸಿ ಕೆಡೆಟ್ಗಳು ಭರತನಾಟ್ಯ, ಕರಾಟೆ, ಗಾಯನ ಮತ್ತು ಜನಪದ ನೃತ್ಯಗಳ ಮೂಲಕ ತಮ್ಮ ಪ್ರತಿಭಾ ಕೌಶಲ್ಯವನ್ನು ಪ್ರದರ್ಶಿಸಿ ಗಮನ ಸೆಳೆದರು.








