
ಮಡಿಕೇರಿ ಅ.25 NEWS DESK : ಸಾಮಾಜಿಕ ಜಾಲತಾಣಗಳೇ ಹೆಚ್ಚು ಪ್ರಭಾವ ಬೀರುತ್ತಿರುವ ಇಂದಿನ ದಿನಗಳಲ್ಲಿ ಪುಸ್ತಕಗಳನ್ನು ಓದುವವರ ಸಂಖ್ಯೆ ಬಹಳ ವಿರಳ ಎನ್ನುವ ಮಾತಿದೆ. ಆದರೆ ಪ್ರಪಂಚಕ್ಕೆ ಬರವಣಿಗೆ ನೀಡುವ ಅಮೂಲ್ಯವಾದ ಸಾರವನ್ನು ಎಐ ತಂತ್ರಜ್ಞಾನ ನೀಡಲು ಸಾಧ್ಯವಿಲ್ಲವೆಂದು ಸಾಹಿತಿ ಹಾಗೂ ಸಮಾಜ ಸೇವಕಿ ಮಾಳೇಟಿರ ಸೀತಮ್ಮ ವಿವೇಕ್ ಅವರು ಅಭಿಪ್ರಾಯಪಟ್ಟಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ನಡೆದ ಲೇಖಕಿ ಕೊಟ್ಟಂಗಡ ಕವಿತಾ ವಾಸುದೇವ ಅವರು ರಚಿಸಿರುವ ಕೊಡವ ಮಕ್ಕಡ ಕೂಟದ 119ನೇ ಪುಸ್ತಕ “ಬಯಂದ ಬಾಳ್” ಕೊಡವ ಕೃತಿಯ ಬಿಡುಗಡೆ ಸಮಾರಂಭದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಯಾವುದೇ ನಿರೀಕ್ಷೆಗಳಿಲ್ಲದೆ ಸಾಹಿತ್ಯವನ್ನು ಸಮಾಜಕ್ಕೆ ಧಾರೆ ಎರೆಯಬೇಕು, ಆಗ ಸಮಾಜ ಅದನ್ನು ಉತ್ತಮ ರೀತಿಯಲ್ಲಿ ಸ್ವೀಕರಿಸುತ್ತದೆ. ಸಮಾಜವನ್ನು ಬದಲಾಯಿಸುವ ಶಕ್ತಿ ಸಾಹಿತ್ಯಕ್ಕಿದೆ, ಪ್ರತಿಯೊಬ್ಬ ವ್ಯಕ್ತಿಯಲ್ಲೂ ವೈಯಕ್ತಿಕ ಭಾವಗಳಿರುತ್ತವೆ. ಬರಹಗಾರರು ಅದಕ್ಕೆ ಅಕ್ಷರದ ರೂಪ ನೀಡಿ ಪುಸ್ತಕವನ್ನಾಗಿ ಹೊರ ತರುತ್ತಾರೆ. ಮೌಲ್ಯಯುತವಾದ ಪುಸ್ತಕಗಳನ್ನು ಓದುವ ಸಾಹಿತ್ಯಾಸಕ್ತರು ಸಮಾಜದಲ್ಲಿ ಇನ್ನೂ ಇದ್ದಾರೆ. ಆದ್ದರಿಂದ ಬರಹಗಾರರು ಮತ್ತಷ್ಟು ಬೆಳೆಯಬೇಕು ಎಂದು ಕರೆ ನೀಡಿದರು. ವಿಶಿಷ್ಟ ಸಂಸ್ಕøತಿಯನ್ನು ಹೊಂದಿರುವ ಕೊಡಗಿನ ಆಚಾರ, ವಿಚಾರ, ಪರಂಪರೆ ಇಂದಿಗೂ ಜೀವಂತವಾಗಿರಲು ಸಾಹಿತ್ಯವೇ ಕಾರಣವಾಗಿದೆ. ಪುಸ್ತಕದ ರೂಪದಲ್ಲಿ ಅಪರೂಪದ ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯಿಸುತ್ತಿರುವುದು ಶ್ಲಾಘನೀಯ. ಖ್ಯಾತ ಸಾಹಿತಿ ಸಾಯಿಸುತೆಯವರ ಅಭಿಮಾನಿಯಾಗಿರುವ ಲೇಖಕಿ ಕೊಟ್ಟಂಗಡ ಕವಿತಾ ವಾಸುದೇವ ಅವರು ರಚಿಸಿರುವ ‘ಬಯಂದ ಬಾಳ್’ ಕಾದಂಬರಿ ನನ್ನನ್ನು ಹೆಚ್ಚು ಕಾಡಿತು. ದಾಖಲೆಯ 119 ಪುಸ್ತಕಗಳನ್ನು ಹೊರ ತರುವ ಮೂಲಕ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಅವರು ದೊಡ್ಡ ಸಾಧನೆಯನ್ನೇ ಮಾಡಿದ್ದಾರೆ ಎಂದು ಸೀತಮ್ಮ ವಿವೇಕ್ ಮೆಚ್ಚುಗೆ ವ್ಯಕ್ತಪಡಿಸಿದರು. ‘ಬಯಂದ ಬಾಳ್’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಸುಂಟಿಕೊಪ್ಪ ಕೊಡವ ಸಮಾಜದ ಕಾರ್ಯದರ್ಶಿ ಅಜ್ಜಿಕುಟ್ಟೀರ ಸಿ.ಗಿರೀಶ್ ಅವರು ಯುವ ಬರಹಗಾರರು ಪುಸ್ತಕ ರಚನೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು. ಯುವ ಸಾಹಿತಿಗಳಿಗೆ ಪ್ರೋತ್ಸಾಹದ ಅಗತ್ಯವಿದೆ, ಯುವ ಸಮೂಹ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರು ಕೂಟದ ಮೂಲಕ 2024ನೇ ಇಸವಿಯಲ್ಲಿ 27 ಮತ್ತು 2025ರಲ್ಲಿ ಜನವರಿಯಿಂದ ಇಲ್ಲಿಯವರೆಗೆ ಸುಮಾರು 13 ಪುಸ್ತಕಗಳನ್ನು ಬಿಡುಗಡೆಗೊಳಿಸಲಾಗಿದೆ. ಇನ್ನೂ ಹಲವು ಪುಸ್ತಕಗಳು ಮುದ್ರಣ ಹಂತದಲ್ಲಿವೆ. ಸರಕಾರದ ಅನುದಾನವಿಲ್ಲದೆ ಅತೀ ಹೆಚ್ಚು ಪುಸ್ತಕ ಪ್ರಕಟಿಸಿದ ಹೆಗ್ಗಳಿಕೆ ನಮ್ಮದು ಎಂದರು. ಸಾಮಾಜಿಕ ಕಳಕಳಿ, ಕೊಡಗಿನ ಅಭ್ಯುದಯ, ಸಂಸ್ಕøತಿ, ಸಾಹಿತ್ಯದ ಬೆಳೆವಣಿಗೆಯ ಮೇಲಿನ ಆಸಕ್ತಿಯಿಂದ ನಿರಂತರ ಕಾರ್ಯನಿರ್ವಹಣೆಯಲ್ಲಿ ತೊಡಗಿರುವ ಕೊಡವ ಮಕ್ಕಡ ಕೂಟ ಜಿಲ್ಲೆಯ ಬರಹಗಾರರು ಬರೆದ ಕೊಡವ, ಕನ್ನಡ, ಇಂಗ್ಲೀಷ್ ಮತ್ತು ಹಿಂದಿ ಕೃತಿಗಳನ್ನು ಬಿಡುಗಡೆ ಮಾಡಿದೆ. ಇದೀಗ 119ನೇ ಪುಸ್ತಕ “ಬಯಂದ ಬಾಳ್” ಕೊಡವ ಕೃತಿಯನ್ನು ಲೋಕಾರ್ಪಣೆಗೊಳಿಸಲಾಗಿದೆ. ಯಾವುದೇ ಪುಸ್ತಕವನ್ನು ಮಾರಾಟ ಮಾಡದೆ ಬರಹಗಾರರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಓದುಗರಿಗೆ ಉಚಿತವಾಗಿ ನೀಡಲಾಗಿದೆ. ಕೊಡವ ಮಕ್ಕಡ ಕೂಟ ಪ್ರಕಟಿಸಿರುವ 118 ಪುಸ್ತಕಗಳಲ್ಲಿ ಐದು ಪುಸ್ತಕಗಳಿಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಚಿಗುರೆಲೆಗಳು ಪುಸ್ತಕಕ್ಕೆ ರಾಜ್ಯ ಪ್ರಶಸ್ತಿ, ಅಗ್ನಿಯಾತ್ರೆ ಪುಸ್ತಕಕ್ಕೆ “ಗೌರಮ್ಮ ದತ್ತಿ ನಿಧಿ “ಪ್ರಶಸ್ತಿ ಲಭಿಸಿದೆ. ಐದು ಪುಸ್ತಕಗಳು ಕೊಡವ ಸಿನಿಮಾವಾಗಿದೆ. ಚೆಪ್ಪುಡಿರ ಎ.ಕಾರ್ಯಪ್ಪ ಅವರು ಬರೆದ ಕೊಡಗಿನ ಕ್ರೀಡಾಪಟುಗಳ ಜೀವನ ಚರಿತ್ರೆ ಎಂಬ ದಾಖಲೀಕರಣ ಪುಸ್ತಕವನ್ನು 1500 ಪ್ರತಿಗಳನ್ನು ಮುದ್ರಿಸಿ ಕೊಡಗಿನಾದ್ಯಂತ ಶಾಲಾ-ಕಾಲೇಜು ಮತ್ತು ಗ್ರಂಥಾಲಯಗಳಿಗೆ ಉಚಿತವಾಗಿ ನೀಡಿದೆ. ಕೊಡವ ಮಕ್ಕಡ ಕೂಟವು ಪುಸ್ತಕವನ್ನು ಪ್ರಕಟಣೆಗೊಳಿಸುವುದರ ಜೊತೆಯಲ್ಲಿ ಹಲವು ಸಮಾಜಮುಖಿ ಕೆಲಸದಲ್ಲಿ ಸಹ ತೊಡಗಿಸಿಕೊಂಡಿದೆ ಎಂದು ಬೊಳ್ಳಜಿರ ಅಯ್ಯಪ್ಪ ವಿವರಿಸಿದರು.
ಸಮಾಜ ಸೇವಕರು ಹಾಗೂ ದಾನಿಗಳಾದ ಅವರೆಮಾದಂಡ ಶರಣ್ ಪೂಣಚ್ಚ ಅವರು ಮಾತನಾಡಿ ಡಿಜಿಟಲ್ ಯುಗದ ಈ ದಿನಗಳಲ್ಲಿ ಬರಹಗಾರರ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ ಪುಸ್ತಕಗಳು ಶಾಶ್ವತವಾಗಿ ಉಳಿಯುವುದರಿಂದ ಮುಂದಿನ ಪೀಳಿಗೆಗೆ ಸಾಹಿತ್ಯ ಕ್ಷೇತ್ರ ಹೆಚ್ಚು ಸಹಕಾರಿಯಾಗಿದೆ. ಆದ್ದರಿಂದ ಸಾಹಿತ್ಯಾಸಕ್ತರು ಹಾಗೂ ಬರಹಗಾರರು ಹೆಚ್ಚಾಗಬೇಕು ಎಂದರು. ಕೊಡವ ಮಕ್ಕಡ ಕೂಟ ಸಾಹಿತ್ಯ ಕ್ಷೇತ್ರದ ಬೆಳವಣಿಗೆಗೆ ಹೆಚ್ಚು ಶ್ರಮಿಸುತ್ತಿದ್ದು, ಮುಂದಿನ ದಿನಗಳಲ್ಲಿ ಕೂಟದ ಕಾರ್ಯಚಟುವಟಿಕೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು. “ಬಯಂದ ಬಾಳ್” ಕೊಡವ ಕೃತಿಯ ಲೇಖಕಿ ಕೊಟ್ಟಂಗಡ ಕವಿತಾ ವಾಸುದೇವ ಅವರು ಮಾತನಾಡಿ ಇದು ನನ್ನ 3ನೇ ಕಾದಂಬರಿಯಾಗಿದ್ದು, ನಮ್ಮಂತಹ ಸಣ್ಣ ಬರಹಗಾರರಿಗೆ ಓದುಗರ ಪ್ರೋತ್ಸಾಹದ ಅಗತ್ಯವಿದೆ ಎಂದು ತಿಳಿಸಿದರು.ಕೊಡವ ಮಕ್ಕಡ ಕೂಟ ಹಾಗೂ ದಾನಿಗಳ ಸಹಕಾರವನ್ನು ಅವರು ಇದೇ ಸಂದರ್ಭ ಸ್ಮರಿಸಿಕೊಂಡರು. ಸಮಾಜ ಸೇವಕ ಚೀಯಕಪೂವಂಡ ಸಚಿನ್ ಪೂವಯ್ಯ ಅವರು ಉಪಸ್ಥಿತರಿದ್ದು ಶುಭ ಹಾರೈಸಿದರು. *ಕೊಟ್ಟಂಗಡ ಕವಿತಾ ವಾಸುದೇವ ಪರಿಚಯ* ನಾಪೋಕ್ಲು ನಾಡು, ಬಲ್ಲಮಾವಟಿ ಗ್ರಾಮದ ಅಪ್ಪಚೆಟ್ಟೋಳಂಡ ಸಿ.ಪೂವಯ್ಯ ಮತ್ತು ಮೀನಾಕ್ಷಿ (ತಾಮನೆ-ತಾಪಂಡ) ದಂಪತಿಯ ದ್ವಿತೀಯ ಪುತ್ರಿ ಕವಿತಾ ಬೋಜಮ್ಮ. ಇವರು ಬಾಲ್ಯದಿಂದ ಕಥೆ, ಕವನ ಬರೆಯುವ ಮತ್ತು ಓದುವ ಹವ್ಯಾಸವನ್ನು ಹೊಂದಿದ್ದರು. ಇವರ ಬರಹಗಳು ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ಮಡಿಕೇರಿ ಆಕಾಶವಾಣಿಯಿಂದ ಕೊಡವ ಸಿರಿ,ಮಹಿಳಾಲೋಕ ಕಾರ್ಯಕ್ರಮದಲ್ಲೂ ಇವರು ಭಾಗವಹಿಸಿರುತ್ತಾರೆ.ಸಣ್ಣ ಸಣ್ಣ ಕಥೆ, ಕವನವನ್ನು ಬರೆಯಲು ಆರಂಭಿಸಿದ ಕವಿತಾ ಬೋಜಮ್ಮ, ಪ್ರಸ್ತುತ ಎರಡು ಸಾಮಾಜಿಕ ಕಾದಂಬರಿ ಬರೆಯುವ ಮೂಲಕ ಕೊಡವ ಸಾಹಿತ್ಯ ಲೋಕಕ್ಕೆ ಕೊಡುಗೆಯನ್ನು ನೀಡಿದ್ದಾರೆ. ಬಲ್ಯಮುಂಡೂರಿನ ಕೊಟ್ಟಂಗಡ ವಾಸುದೇವ ಅವರನ್ನು ವಿವಾಹವಾಗಿದ್ದು, ಈ ದಂಪತಿಗೆ ವರ್ಷಿತ ಕಾವೇರಮ್ಮ, ನಮಿತ ಮುತ್ತಮ್ಮ ಹಾಗೂ ಅನ್ವಿತ ಬೊಳ್ಳಮ್ಮ ಎಂಬ ಮೂವರು ಮಕ್ಕಳಿದ್ದಾರೆ. ಸಾಹಿತ್ಯಾಸಕ್ತಿ ಹೊಂದಿರುವ ಹೆಚ್ಚಿನ ಬರಹಗಾರರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಲಿ ಎಂದು ಕೊಟ್ಟಂಗಡ ಕವಿತಾ ವಾಸುದೇವ ಅವರು ಶುಭ ಹಾರೈಸಿದ್ದಾರೆ.









