
ಮಡಿಕೇರಿ NEWS DESK ಆ.26 : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ವತಿಯಿಂದ ಆಗಸ್ಟ್ 22 ಹಾಗೂ 23ರಂದು ಎರಡುದಿನಗಳ ಉತ್ತರ ಕರ್ನಾಟಕದ ವಾಡೆ ಮನೆಗಳ ಅಧ್ಯಯನ ಪ್ರವಾಸವನ್ನು ಕೈಗೊಳ್ಳಲಾಯಿತು. ಅರೆಭಾಷಿಕರ ಐನ್ ಮನೆಗಳು ಹಾಗೂ ವಾಡೆ ಮನೆಗಳ ತುಲನಾತ್ಮಕ ಅಧ್ಯಯನದ ದೃಷ್ಟಿಯಿಂದ ಈ ಪ್ರವಾಸವನ್ನು ಹಮ್ಮಿಕೊಳ್ಳಲಾಗಿತ್ತು. ಅಧ್ಯಕ್ಷರಾದ ಸದಾನಂದ ಮಾವಜಿಯವರ ನೇತೃತ್ವದ ಅಧ್ಯಯನ ಪ್ರವಾಸದ ವೇಳೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಚಚಡಿ ಗ್ರಾಮದಲ್ಲಿರುವ ಸುಮಾರು 850 ವರ್ಷದ ಭವ್ಯ ಇತಿಹಾಸ ವಿರುವ ಚಚಡಿ ದೇಸಾಯಿ ವಾಡೆಯನ್ನು ಪ್ರಧಾನವಾಗಿ ವೀಕ್ಷಿಸಿ ಅಧ್ಯಯನ ನಡೆಸಲಾಯಿತು. ವಾಡೆಯಲ್ಲಿ ಪ್ರಸ್ತುತ ವಾಸ್ತವ್ಯವಿರುವ ನಾಗರಾಜ ದೇಸಾಯಿಯವರು ಮಾಹಿತಿ ನೀಡಿದರು. 12ನೇ ಶತಮಾನದಲ್ಲಿ ರಟ್ಟರ ರಾಜವಂಶದ ಎರಡನೇಯ ಕಾರ್ತ್ಯವೀರ ನಿರ್ಮಿಸಿದ ಈ ಮಹಲ್ ಕೋಟೆಯಿಂದ ಆವೃತವಾಗಿದ್ದು 25 ತಲೆಮಾರುಗಳನ್ನು ಕಂಡಿದ್ದು ಇದೀಗ 26ನೇ ತಲೆಮಾರಿನ ದೇಸಾಯಿ ಕುಟುಂಬ ಇದನ್ನು ಮುನ್ನಡೆಸುತ್ತಿದೆ. ಚಚಡಿ ವಾಡೆ ವೀಕ್ಷಣೆ ಬಳಿಕ ಅಧ್ಯಯನ ತಂಡವು ಸವದತ್ತಿ ತಾಲೂಕಿನ ರುದ್ರಾಪುರದಲ್ಲಿರುವ ರುದ್ರಾಪುರ ವಾಡೆಯನ್ನು ವೀಕ್ಷಿಸಿತು. ಉದಯ ಕುಮಾರ್ ಅವರ ವಶದಲ್ಲಿರುವ ವಾಡೆಯು ಚಿಕ್ಕ ವಾಡೆಯಾದರೂ ಇಂದಿಗೂ ತನ್ನ ಪುರಾತನ ಭವ್ಯತೆಯನ್ನು ಉಳಿಸಿಕೊಂಡಿದೆ. ಬಳಿಕ ಅಧ್ಯಯನ ತಂಡವು ತಲ್ಲೂರು ವಾಡೆಯನ್ನು ವೀಕ್ಷಿಸಿತು. ತಲ್ಲೂರು ವಾಡೆಯು ಮುಖ್ಯವಾಗಿ ಕಿತ್ತೂರು ಸಂಸ್ಥಾನದ ರಾಜಮನೆತನದೊಂದಿಗೆ ನೇರ ರಕ್ತಸಂಬಂಧ ಮತ್ತು ಐತಿಹಾಸಿಕ ಒಡನಾಟವನ್ನು ಹೊಂದಿದ್ದ ವಾಡೆಯಾಗಿರುತ್ತದೆ. ಇಲ್ಲಿ ವಾಸ್ತವ್ಯವಿದ್ದ ಅನಿಲ್ ಕುಮಾರ್ ದೇಸಾಯಿ ಅವರು ವಾಡೆಯ ಕುರಿತು ವಿವರ ನೀಡಿದರು. ಈ ಮೂರು ವಾಡೆಗಳ ಮೂಲ ಪುರುಷ ಅಪ್ರತಿಮ ವೀರ ವೀರಪ್ಪ ನಾಯ್ಕ ಎಂಬವರು. ಕರಿ ಹುಲಿಯನ್ನು (ಕಪ್ಪುಚಿರತೆ) ಬರಿಗೈಯಲ್ಲಿ ಹೊಡೆದು ಹಾಕಿದ್ದ ಕಾರಣ ರಟ್ಟ ವಂಶಸ್ಥ ರಾಜ ಎರಡನೇ ಕಾರ್ತವೀರ್ಯರಿಂದ 1126ರಲ್ಲಿ 30 ಹಳ್ಳಿಗಳ ಬಹುಮಾನವನ್ನು ಪಡೆದಿದ್ದರು. ಚಚಡಿ, ತಲ್ಲೂರು, ರುದ್ರಾಪುರ, ಮುತವಾಡ, ಗೊಂತಮಾರ, ಇಂಗಳಗಿ, ಬೆಳವಡಿ ಸಂಸ್ಥಾನಗಳ ಮೂಲ ಪುರುಷ ವೀರಪ್ಪ ನಾಯ್ಕ ಎಂಬುದಾಗಿ ಇತಿಹಾಸ ಸಾರುತ್ತದೆ. ಕಿತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಬಿ.ಎಸ್. ಪಾಟೀಲರ ವಾಡೆಮನೆಗೆ ಭೇಟಿ ಅಧ್ಯಯನದ ವೇಳೆ ತಂಡವು ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದ ಕೇಸರಕೊಪ್ಪ ಗ್ರಾಮದಲ್ಲಿರುವ ಕಿತ್ತೂರು ಶಾಸಕರಾದ ಬಾಬೂಸಾಹೇಬ ಪಾಟೀಲರು ವಾಸ್ತವ್ಯ ಇರುವ ವಾಡೆಗೂ ಭೇಟಿ ನೀಡಿತು. ಈ ವಾಡೆಯು ಸುಮಾರು 400 ವರ್ಷಗಳಷ್ಟು ಹಳೆಯದಾಗಿದ್ದು ಇದು ಸಹ ಗತವೈಭವವನ್ನು ಸಾರುತ್ತಿದೆ. ಚಚಡಿ ವಾಡೆಗೂ ಈ ವಾಡೆಗೂ ಬೀಗತನದ ಸಂಬಂಧವಿದೆ. ಶಾಸಕರ ಅಕ್ಕ ಪಾರ್ವತಿ ದೇಸಾಯಿ (ಸೀಮಾ) ಅವರು ಚಚಡಿ ವಾಡೆಯ ಯಜಮಾನರಾಗಿರುವ ನಾಗರಾಜ ದೇಸಾಯಿಯವರ ಪತ್ನಿಯಾಗಿದ್ದಾರೆ. ಈ ಸಂದರ್ಭದಲ್ಲಿ ಶಾಸಕ ಪಾಟೀಲ ದಂಪತಿಗಳು ಅರೆಭಾಷೆ ಅಕಾಡೆಮಿ ಅಧ್ಯಯನ ತಂಡವನ್ನು ಬರಮಾಡಿಕೊಂಡರು. ತಂಡವು ವಾಡೆಗಳ ಕುರಿತು ವಿಚಾರ ವಿನಿಮಯ ಮಾಡಿಕೊಂಡುದಲ್ಲದೆ, ಅಕಾಡೆಮಿಯ ಕಾರ್ಯವೈಖರಿಗಳ ಬಗ್ಗೆ ಮಾಹಿತಿ ನೀಡಿತು. ಶಾಸಕರು ಹಾಗೂ ಅವರ ಪತ್ನಿ ಹಾಲಿ ಕೆಪಿಸಿಸಿ ಸದಸ್ಯೆ ಹಾಗೂ ಮಾಜಿ ಜಿಲ್ಲಾಪಂಚಾಯತ್ ಸದಸ್ಯರಾದ ರೋಹಿಣಿ ಪಾಟೀಲ್ ಅವರನ್ನು ಈ ಸಂದರ್ಭದಲ್ಲಿ ಅಕಾಡೆಮಿ ವತಿಯಿಂದ ಶಾಲು ಹೊದಿಸಿ ಹೂಗುಚ್ಛ ಹಾಗೂ ಪುಸ್ತಕ ನೀಡಿ ಗೌರವಿಸಲಾಯಿತು. ಪಾಟೀಲ್ ದಂಪತಿಗಳು ಅಕಾಡೆಮಿ ಅಧ್ಯಕ್ಷರು ಹಾಗೂ ಸದಸ್ಯರನ್ನು ಶಾಲು ಹೊದಿಸಿ ಗೌರವಿಸಿದರು. ಪ್ರವಾಸದ ಉಸ್ತುವಾರಿಯನ್ನು ಸದಸ್ಯ ಸಂಚಾಕರಾದ ಡಾ. ಜ್ಞಾನೇಶ್ ಎನ್.ಎ ವಹಿಸಿದ್ದರು. ತಂಡದಲ್ಲಿ ಸದಸ್ಯರಾದ ಚಂದ್ರಶೇಖರ ಪೇರಾಲು, ಚಂದ್ರಾವತಿ ಬಡ್ಡಡ್ಕ, ಲತಾ ಪ್ರಸಾದ್ ಕುದ್ಪಾಜೆ, ಪಿ.ಎಸ್. ಕಾರ್ಯಪ್ಪ, ಸೂದನ್ ಎಸ್. ಈರಪ್ಪ, ಪಿ.ಎಂ. ಸಂದೀಪ್, ಲೋಕೇಶ್ ಊರುಬೈಲು, ವಿನೋದ್ ಮೂಡಗದ್ದೆ, ಮೋಹನ್ ಪೊನ್ನಚನ, ಪ್ರಕಾಶ್ ಕುದುಪಜೆ ಇವರುಗಳು ಭಾಗಿಯಾಗಿದ್ದರು. ಧಾರವಾಡದವರಾಗಿರುವ ಕಾರವಾರ ಜಿಲ್ಲೆಯ ಮುಂಡಗೋಡು ತಾಲೂಕು ಕಾರ್ಯನಿರ್ವಹಣಾಧಿಕಾರಿ ಟಿ. ವೈ. ದಾಸನಕೊಪ್ಪ ಹಾಗೂ ಅಧ್ಯಯನ ಪ್ರವಾಸಕ್ಕಾಗಿ ಸವದತ್ತಿ ತಾಲೂಕು ಪಂಚಾಯತ್ ನಿಯೋಜನೆ ಮಾಡಿದ ರುದ್ರಾಪುರ ಗ್ರಾಮ ಪಂಚಾಯತ್ ಅಧಿಕಾರಿ ವಿಜಯ ಕುಮಾರ್ ಅಂಗಡಿ ಅವರು ಎರಡು ದಿನಗಳ ಪ್ರವಾಸದ ವೇಳೆ ತಂಡಕ್ಕೆ ಮಾರ್ಗದರ್ಶಕರಾಗಿ ಸಹಕರಿಸಿದರು.









