ಮಡಿಕೇರಿ, NEWS DESK ಆ. 26: ಹಾಕತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2025-26ನೇ ಸಾಲಿನಲ್ಲಿ 144.60 ಕೋಟಿ ರೂ. ವಹಿವಾಟು ನಡೆಸುವ ಮೂಲಕ 46.86 ಲಕ್ಷ ರೂ. ನಿವ್ವಳ ಲಾಭ ಗಳಿಸಿರುವುದಾಗಿ ಸಂಘದ ಅಧ್ಯಕ್ಷ ಮಂದ್ರೀರ ಎನ್. ತೇಜಸ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದ ಸದಸ್ಯರ ಪಾಲು ಹಣದ ಮೇಲೆ ಶೇ. 11.50ರಷ್ಟು ಡಿವಿಡೆಂಡ್ ನೀಡಲು ಆಡಳಿತ ಮಂಡಳಿ ತೀರ್ಮಾನಿಸಿದೆ. ಸಂಘದ ವಾರ್ಷಿಕ ಮಹಾಸಭೆಯು ಇದೇ ಆ. 29ರಂದು ಬೆಳಗ್ಗೆ 10.30 ಗಂಟೆಗೆ ಹಾಕತ್ತೂರಿನ ಸಂಘದ ಮುಖ್ಯ ಕಚೇರಿಯ ಸಭಾಂಗಣದಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಸಂಘವು ಹಾಕತ್ತೂರು, ಬಿಳಿಗೇರಿ, ಕಗ್ಗೋಡ್ಲು ಮತ್ತು ಮೇಕೇರಿ ಗ್ರಾಮಗಳನ್ನು ಒಳಗೊಂಡಂತೆ ಕಾರ್ಯನಿರ್ವಹಿಸುತ್ತಿದ್ದು, ಸಂಘದಲ್ಲಿ 1,261 ಸದಸ್ಯರಿದ್ದಾರೆ. 1.81 ಕೋಟಿ ರೂ. ಪಾಲು ಬಂಡವಾಳ ಹಾಗೂ 2.43 ಕೋಟಿ ರೂ. ಕ್ಷೇಮ ನಿಧಿಯನ್ನು ಹೊಂದಿದೆ. ಸಂಘದ ದುಡಿಯುವ ಬಂಡವಾಳ 27.75 ಕೋಟಿ ರೂ.ಗಳಾಗಿದ್ದು, ಪ್ರಸ್ತುತ 16.39 ಕೋಟಿ ರೂ. ಠೇವಣಿ ಸಂಗ್ರಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ಶೇ. 99.40ರಷ್ಟು ಸಾಲ ವಸೂಲಾತಿ
ಸಂಘದಿಂದ ಕೃಷಿ ಮತ್ತು ಕೃಷಿಯೇತರ ಸಾಲವಾಗಿ ಒಟ್ಟು 23.02 ಕೋಟಿ ರೂ. ಸಾಲವನ್ನು ವಿತರಿಸಲಾಗಿದೆ. ಈ ಪೈಕಿ ಸಂಘದ ಸ್ವಂತ ಬಂಡವಾಳದಿಂದ ಸುಮಾರು 16.20 ಕೋಟಿ ರೂ. ಸಾಲವನ್ನು ನೀಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಸಾಲ ವಸೂಲಾತಿಯ ಪ್ರಮಾಣ ಶೇ. 99.40ರಷ್ಟಿದೆ ಎಂದು ಮಾಹಿತಿ ನೀಡಿದರು.
ಕೃಷಿ ಸಾಮಗ್ರಿ ಮಾರಾಟದಿಂದ 19.62 ಲಕ್ಷ ರೂ. ಲಾಭ
ಸಂಘವು ಹಾಕತ್ತೂರು ಮತ್ತು ಮೇಕೇರಿಯಲ್ಲಿ ಗೋದಾಮುಗಳನ್ನು ಹೊಂದಿದ್ದು, ರಸಗೊಬ್ಬರ, ಕೀಟನಾಶಕ, ಕೃಷಿ ಸಾಮಗ್ರಿ ಹಾಗೂ ಮದ್ದುಗುಂಡುಗಳ ಮಾರಾಟದಿಂದ 2025-26ನೇ ಸಾಲಿನಲ್ಲಿ 19.62 ಲಕ್ಷ ರೂ. ಲಾಭ ಗಳಿಸಿರುವುದಾಗಿ ಮಂದ್ರೀರ ತೇಜಸ್ ಮಾಹಿತಿ ನೀಡಿದರು.
ಸಂಘದಿಂದ ವರ್ಷಂಪ್ರತಿ ಸದಸ್ಯರ ಮಕ್ಕಳಲ್ಲಿ ಎಸ್ಎಸ್ಎಲ್ಸಿ, ದ್ವಿತೀಯ ಪಿಯುಸಿ ಮತ್ತು ಪದವಿ ಪರೀಕ್ಷೆಗಳಲ್ಲಿ ಅತೀ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಪ್ರೋತ್ಸಾಹಕ ಬಹುಮಾನ ನೀಡುತ್ತಾ ಬರಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಂಘದ ಮೇಲ್ಛಾವಣಿ ನಿರ್ಮಾಣ ಹಾಗೂ ಕಾಂಪೌಂಡ್ ವಾಲ್ ನಿರ್ಮಾಣದ ಗುರಿಗಳನ್ನು ಹೊಂದಿರುವುದಾಗಿ ತಿಳಿಸಿದರು.
ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಲು ಮನವಿ
ಸಂಘದ ಉಪಾಧ್ಯಕ್ಷರಾದ ಮಂಜೀರ ಉಮೇಶ್ ಅಪ್ಪಣ್ಣ ಮಾತನಾಡಿ, ಗ್ರಾಮೀಣರು ತಮ್ಮ ಜಾಗದ ಅಗತ್ಯ ದಾಖಲೆ ಪತ್ರಗಳನ್ನು ಹೊಂದಿಸಿಕೊಳ್ಳಲು ಸಾಧ್ಯವಾಗದೆ ಸಂಘದ ಸದಸ್ಯತ್ವದಿಂದ ದೂರ ಉಳಿದು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯು ಗ್ರಾಮಸ್ಥರ ಜಾಗದ ದಾಖಲೆಗಳನ್ನು ಸರಿಪಡಿಸಲು ಸಮಾಲೋಚಕರನ್ನು ನಿಯೋಜಿಸಿ ನೆರವಾಗಬೇಕೆಂದು ಮನವಿ ಮಾಡಿದರು.
ಕಳೆದ ಕೆಲ ವರ್ಷಗಳಿಂದ ಮುಂಗಾರು ವಿಳಂಬ ಮತ್ತು ಅತಿವೃಷ್ಟಿಯಿಂದ ಬೆಳೆಗಾರರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಾವೇರಿ ನೀರನ್ನು ಬಳಸುವ ಕರ್ನಾಟಕ ಮತ್ತು ನೆರೆಯ ತಮಿಳುನಾಡು ಸರ್ಕಾರಗಳು ಕಾವೇರಿಯ ನಾಡು ಕೊಡಗಿಗೆ ವಿಶೇಷ ಪ್ಯಾಕೇಜ್ ಒದಗಿಸುವಂತೆ ಉಮೇಶ್ ಅಪ್ಪಣ್ಣ ಕೋರಿದರು. ಅಲ್ಲದೆ, ಜೂನ್ ಆರಂಭಿಕ ಹಂತದಲ್ಲೇ ರಾಜ್ಯ ಸರ್ಕಾರ ಮಳೆ ದೇವರು ಪಾಡಿ ಶ್ರೀ ಇಗ್ಗುತ್ತಪ್ಪನಿಗೆ ವಿಶೇಷ ಪೂಜೆ ಸಲ್ಲಿಸಲು ಮುಂದಾಗಬೇಕೆಂದು ಕೋರಿದರು.
ಮಂಗಗಳ ಸ್ಥಳಾಂತರಕ್ಕೆ ಆಗ್ರಹ
ಗ್ರಾಮೀಣ ಭಾಗಗಳಲ್ಲಿ ಮಂಗಗಳ ಉಪಟಳದಿಂದ ಕೃಷಿಕ ಸಮೂಹ ಕಂಗೆಟ್ಟಿದೆ. ಈ ಹಿನ್ನೆಲೆಯಲ್ಲಿ ಗ್ರಾಮ ವ್ಯಾಪ್ತಿಯಲ್ಲಿ ಕಂಡುಬರುವ ಮಂಗಗಳನ್ನು ಸೆರೆಹಿಡಿದು ಅರಣ್ಯಕ್ಕೆ ಬಿಡುವ ಕೆಲಸವನ್ನು ಅರಣ್ಯ ಇಲಾಖೆ ಮಾಡಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ನಿರ್ದೇಶಕರಾದ ಪರ್ಲಕೋಟಿ ಎ. ಕಾವೇರಪ್ಪ, ತುಂತಜ್ಜಿರ ಆರ್. ತಿಮ್ಮಯ್ಯ, ಚೋಂಡಿರ ಜಿ. ಚಂಗಪ್ಪ, ಹೆಚ್.ಆರ್. ವಾಸಪ್ಪ ಹಾಗೂ ಲೋಕೇಶ್ ಟಿ.ವಿ. ಉಪಸ್ಥಿತರಿದ್ದರು.







