ಸುಂಟಿಕೊಪ್ಪ, NEWS DESK ಆ. 26: ಕೊಡಗು ಜಿಲ್ಲೆಯಲ್ಲಿ ನೆಲೆಸಿರುವ ಕೇರಳ ಮೂಲದ ಮಲಯಾಳಿ ಭಾಷಿಕರು ದೇವರ ನಾಡು ಕೇರಳದ ನಾಡಹಬ್ಬವಾದ ಓಣಂ ಅನ್ನು ಸಂಭ್ರಮ, ಸಡಗರ ಹಾಗೂ ಸಾಂಪ್ರದಾಯಿಕ ಆಚರಣೆಗಳೊಂದಿಗೆ ಆಚರಿಸಿದರು. ಸುಂಟಿಕೊಪ್ಪದಲ್ಲಿಯೂ ಮಲಯಾಳಿ ಭಾಷಿಕರು ವಿಶೇಷವಾಗಿ ಓಣಂ ಹಬ್ಬವನ್ನು ಆಚರಿಸಿ ಸಂಭ್ರಮಿಸಿದರು.
ಓಣಂ ಹಬ್ಬದ ಆಚರಣೆಯ ಹಿಂದೆ ಬಲಿಚಕ್ರವರ್ತಿಯ ಪೌರಾಣಿಕ ಕಥೆಯಿದೆ. ಬಲಿಚಕ್ರವರ್ತಿ ಧರ್ಮಿಷ್ಠ, ಪರಾಕ್ರಮಿ ಹಾಗೂ ಮಹಾದಾನಿಯಾಗಿದ್ದು, ಆತನ ಆಡಳಿತದಲ್ಲಿ ರಾಜ್ಯ ಸುಭಿಕ್ಷೆಯಿಂದ ಕೂಡಿತ್ತು. ಪ್ರಜೆಗಳು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದರು ಎನ್ನುವುದು ಪುರಾಣದ ನಂಬಿಕೆ.
ಬಲಿಚಕ್ರವರ್ತಿ ಇಂದ್ರಪದವಿ ಪಡೆಯಲು ಮಹಾಯಾಗ ನಡೆಸಲು ಮುಂದಾದಾಗ ದೇವತೆಗಳು ಆತಂಕಗೊಂಡು ಮಹಾವಿಷ್ಣುವಿನ ಮೊರೆ ಹೋದರು. ಆಗ ವಿಷ್ಣು ವಾಮನ ರೂಪದಲ್ಲಿ ಬಲಿಚಕ್ರವರ್ತಿಯ ಬಳಿಗೆ ತೆರಳಿ ಮೂರು ಹೆಜ್ಜೆ ಜಾಗವನ್ನು ದಾನವಾಗಿ ಕೇಳಿದರು. ಬಲಿಚಕ್ರವರ್ತಿ ಮಾತು ನೀಡಿದಂತೆ ದಾನ ಮಾಡಲು ಒಪ್ಪಿದಾಗ, ವಾಮನನು ತ್ರಿವಿಕ್ರಮನಾಗಿ ಬೆಳೆದು ಒಂದು ಹೆಜ್ಜೆಯಲ್ಲಿ ಭೂಮಿಯನ್ನೂ, ಮತ್ತೊಂದು ಹೆಜ್ಜೆಯಲ್ಲಿ ಆಕಾಶವನ್ನೂ ಆವರಿಸಿದನು. ಮೂರನೇ ಹೆಜ್ಜೆ ಇಡಲು ಸ್ಥಳ ಕೇಳಿದಾಗ, ಬಲಿಚಕ್ರವರ್ತಿ ತನ್ನ ತಲೆಯನ್ನೇ ಅರ್ಪಿಸಿದನು ಎಂಬುದು ಪೌರಾಣಿಕ ಕಥೆ.
ಬಲಿಚಕ್ರವರ್ತಿ ತನ್ನ ಪ್ರಜೆಗಳನ್ನು ಪ್ರೀತಿಸುತ್ತಿದ್ದ ಹಿನ್ನೆಲೆಯಲ್ಲಿ, ಪ್ರತಿವರ್ಷ ಓಣಂ ಸಂದರ್ಭದಲ್ಲಿ ತನ್ನ ಪ್ರಜೆಗಳನ್ನು ನೋಡಲು ಬರುತ್ತಾನೆ ಎಂಬ ನಂಬಿಕೆ ಮಲಯಾಳಿ ಭಾಷಿಕರಲ್ಲಿದೆ.
ಸಿಂಹ ಮಾಸದ ಹಸ್ತ ನಕ್ಷತ್ರದ ಸಂದರ್ಭದಲ್ಲಿ ಹತ್ತು ದಿನಗಳ ಕಾಲ ಓಣಂ ಆಚರಣೆ ನಡೆಯುತ್ತದೆ. ಹಬ್ಬಕ್ಕೆ ಹತ್ತು ದಿನಗಳ ಮುನ್ನವೇ ಮಹಿಳೆಯರು ಮನೆ ಅಂಗಳವನ್ನು ಸ್ವಚ್ಛಗೊಳಿಸಿ, ಸೆಗಣಿ ಸಾರಿಸಿ, ವಿವಿಧ ಹೂಗಳಿಂದ ಸುಂದರವಾದ ಹೂವಿನ ರಂಗೋಲಿ (ಪೂಕಳಂ) ನಿರ್ಮಿಸುವುದು ಸಂಪ್ರದಾಯವಾಗಿದೆ. ಪೂಕಳಂನ ಮಧ್ಯಭಾಗದಲ್ಲಿ ಸೆಗಣಿ ಗುಚ್ಛದ ಮೇಲೆ ಮಣ್ಣಿನ ದೀಪವಿಟ್ಟು ದೀಪ ಬೆಳಗಿಸಲಾಗುತ್ತದೆ.
ಓಣಂ ದಿನದಂದು ಹೊಸ ಬಟ್ಟೆ ಧರಿಸಿ, ಮನೆಗಳಿಗೆ ತಳಿರು ತೋರಣ ಕಟ್ಟಲಾಗುತ್ತದೆ. ಬಳಿಕ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಮಧ್ಯಾಹ್ನ ಬಂಧು-ಮಿತ್ರರು ಒಂದೆಡೆ ಸೇರಿ ಸಸ್ಯಾಹಾರದಿಂದ ತಯಾರಿಸಿದ ವಿವಿಧ ಬಗೆಯ ಪಲ್ಯ, ಪುಳಿಇಂಜಿ, ಪಪ್ಪಡ, ಪಾಯಸ ಸೇರಿದಂತೆ ಹಲವು ಖಾದ್ಯಗಳನ್ನೊಳಗೊಂಡ ಸಾಂಪ್ರದಾಯಿಕ ಓಣಂ ಸದ್ಯವನ್ನು ಸವಿದು ಹಬ್ಬದ ಸಂಭ್ರಮವನ್ನು ಹಂಚಿಕೊಳ್ಳುತ್ತಾರೆ.
ಜಾತಿ, ಮತ, ಬಡವ-ಬಲ್ಲಿದ ಎಂಬ ಯಾವುದೇ ಭೇದವಿಲ್ಲದೆ ಎಲ್ಲರೂ ಒಗ್ಗಟ್ಟಿನಿಂದ ಆಚರಿಸುವುದು ಓಣಂ ಹಬ್ಬದ ವಿಶೇಷತೆಯಾಗಿದೆ. ಸಂಸ್ಕೃತಿ, ಪರಂಪರೆ, ಸಹಬಾಳ್ವೆ ಹಾಗೂ ಸೌಹಾರ್ದತೆಯ ಸಂದೇಶ ಸಾರುವ ಓಣಂ ಹಬ್ಬವು ಸುಂಟಿಕೊಪ್ಪದಲ್ಲೂ ಮಲಯಾಳಿ ಭಾಷಿಕರ ನಡುವೆ ಸಂಭ್ರಮದ ವಾತಾವರಣ ಮೂಡಿಸಿತು.








