ಮಡಿಕೇರಿ, NEWS DESK ಆ.26: ಚಾಲಕನ ನಿಯಂತ್ರಣ ಕಳೆದುಕೊಂಡ ಸರಕು ತುಂಬಿದ ಲಾರಿಯೊಂದು ರಸ್ತೆ ಬದಿ ನಿಲ್ಲಿಸಿದ್ದ ಟೆಂಪೋ ಟ್ರಾವೆಲರ್ ವಾಹನದ ಮೇಲೆ ಬಿದ್ದ ಪರಿಣಾಮ ನಾಲ್ವರು ಗಾಯಗೊಂಡ ಘಟನೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೊಯನಾಡು ಅಬ್ಬಿಕೊಲ್ಲಿ ಬಳಿ ನಡೆದಿದೆ.
ಗುಜರಾತ್ ರಾಜ್ಯದ ಅಹಮದಾಬಾದ್ ಮೂಲದ 8 ಮಂದಿ ಪ್ರವಾಸಿಗರು ನೆನ್ನೆ ದಿನ ಮಡಿಕೇರಿಗೆ ಆಗಮಿಸಿ ಇಲ್ಲಿನ ಹೋಂ ಸ್ಟೇ ಒಂದರಲ್ಲಿ ತಂಗಿದ್ದರು. ಬುಧವಾರ ಈ ತಂಡ ಟಿ.ಟಿ ವಾಹನದಲ್ಲಿ(ಕೆಎ.13.ಸಿ.3250) ಮಂಗಳೂರು ಕಡೆಗೆ ಪ್ರಯಾಣ ಬೆಳೆಸಿದ್ದರು. ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 275ರ ಮದೆನಾಡು-ಜೋಡುಪಾಲ ನಡುವಿನ ಅಬ್ಬಿಕೊಲ್ಲಿ ಎಂಬಲ್ಲಿ ಈ ಪ್ರವಾಸಿ ತಂಡ ಹೆದ್ದಾರಿ ಬದಿ ಇರುವ ಜಲಪಾತ ವೀಕ್ಷಿಸಿ ಟೀ ಕುಡಿಯುವ ಸಲುವಾಗಿ ವಾಹನ ನಿಲ್ಲಿಸಿದ್ದರು. ಈ ವೇಳೆ ಮೂವರು ವಾಹನದಿಂದ ಕೆಳಗೆ ಇಳಿದಿದ್ದರು. ವಾಹನದಲ್ಲಿದ್ದ ಚಾಲಕ ಸಹಿತ 6 ಮಂದಿ ಕೆಳಗೆ ಇಳಿಯುವ ಸಂದರ್ಭ ಮಡಿಕೇರಿ ಕಡೆಯಿಂದ ಸುಳ್ಯ ಕಡೆಗೆ ತೆರಳುತ್ತಿದ್ದ ಸರಕು ತುಂಬಿದ ಲಾರಿ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿ ನಿಲ್ಲಿಸಿದ್ದ ಟಿ.ಟಿ ವಾಹನದ ಮೇಲೆ ಮಗುಚಿದೆ.
ಪರಿಣಾಮ ಟಿ.ಟಿ ವಾಹನ ಹೆದ್ದಾರಿ ಬದಿಯ ಬರೆಗೆ ಅಪ್ಪಳಿಸಿದ್ದು ವಾಹದಿಂದ ಹೊರ ಬರುವ ಎಲ್ಲಾ ಕಿಟಕಿ ಬಾಗಿಲುಗಳು ಜಖಂ ಆಗಿ ಬಂದ್ ಆಗಿದ್ದವು. ಇದರಿಂದ ಸ್ಥಳೀಯ ನಿವಾಸಿಗಳು ಗಾಯಾಳುಗಳನ್ನು ಹೊರ ತೆಗೆಯಲು ಹರ ಸಾಹಸ ಪಡುವಂತಾಯಿತು. ಆ ಬಳಿಕ ಕ್ರೇನ್ ಅನ್ನು ಸ್ಥಳಕ್ಕೆ ಕರೆಯಿಸಿ ಲಾರಿಯನ್ನು ಎಳೆದು ಬದಿಗೆ ಸರಿಸಿ ಕಿಟಕಿ ಬಾಗಿಲುಗಳನ್ನು ಕ್ರೇನ್ ಸಹಾಯದಿಂದ ಎಳೆದು 4 ಮಂದಿ ಗಾಯಾಳುಗಳನ್ನು ಸುರಕ್ಷಿತವಾಗಿ ಹೊರ ತೆಗೆದರು. ಬಳಿಕ ಗಾಯಾಳುಗಳನ್ನು ಸುಳ್ಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಗಾಯಾಳುಗಳು ಸಣ್ಣಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಘಟನೆ ಕುರಿತು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಗ್ರಾಮಾಂತರ ಠಾಣೆ ವೃತ್ತ ನಿರೀಕ್ಷಕ ಚಂದ್ರಶೇಖರ್ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.








