ಮಡಿಕೇರಿ, NEWS DESK ಸೆ.19: ಬಹುಸಂಖ್ಯಾತರ ರಾಜ್ಯಾಧಿಕಾರದ ವ್ಯಾಪ್ತಿಯಲ್ಲಿ ಕಾಂಪ್ಯಾಕ್ಟ್ ಭೂಪ್ರದೇಶದಲ್ಲಿ ವಾಸಿಸುವ ಸಣ್ಣ ಆದಿಮಸಂಜಾತ ಸಮುದಾಯಗಳಿಗೆ ಭೂ-ರಾಜಕೀಯ ಸ್ವಾಯತ್ತತೆ ಮತ್ತು ಸ್ವಯಂ ಆಡಳಿತವು ಸಹಜ ಹಕ್ಕಾಗಿದೆ. ವಿಶ್ವಸಂಸ್ಥೆಯ ಆದಿಮಸಂಜಾತರ ಹಕ್ಕುಗಳ ಘೋಷಣೆ ಹಾಗೂ ಭಾರತದ ಸಂವಿಧಾನದ ಆಶಯಗಳ ಆಧಾರದಲ್ಲಿ ಕೊಡವಲ್ಯಾಂಡ್ ಸ್ವಾಯತ್ತತೆಗಾಗಿ ಹೋರಾಟ ನಡೆಸಲಾಗುತ್ತಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ (CNC) ಅಧ್ಯಕ್ಷ ಎನ್.ಯು. ನಾಚಪ್ಪ ಹೇಳಿದರು.
ಚೆಟ್ಟಳ್ಳಿಯಲ್ಲಿ ನಡೆದ 3ನೇ ಶಾಂತಿಯುತ CNC ಮಾನವ ಸರಪಳಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೊಡವರು ಯಾರ ದಯೆಯನ್ನೂ ಕೇಳುತ್ತಿಲ್ಲ. ಕೊಡವಲ್ಯಾಂಡ್ ಸ್ವಾಯತ್ತತೆ ಕೊಡವರ ಕಾನೂನುಬದ್ಧ ಹಕ್ಕು ಎಂದು ಪ್ರತಿಪಾದಿಸಿದರು. ಕೊಡವಲ್ಯಾಂಡ್ ಸ್ವಾಯತ್ತತೆಯ ಬೇಡಿಕೆಯನ್ನು ಬಹುಸಂಖ್ಯಾತ ಸಮುದಾಯದ ಹೆದರಿಸುವಿಕೆ ಅಥವಾ ಬೆದರಿಕೆಗಳಿಂದ ತಡೆಯಲು ಸಾಧ್ಯವಿಲ್ಲ. ಜನಸಂಖ್ಯಾ ಬಲದ ಮೂಲಕ ಬೆದರಿಸುವ ತಂತ್ರಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇದು ಅಸಂವಿಧಾನಿಕ ಮತ್ತು ಸಾರ್ವತ್ರಿಕ ಮಾನವ ಹಕ್ಕುಗಳ ಒಡಂಬಡಿಕೆಯ ಉಲ್ಲಂಘನೆಯಾಗಿದೆ ಎಂದು ಅವರು ಹೇಳಿದರು.
ನಮ್ಮ ಆದಿಮಸಂಜಾತರ ಶ್ರೇಷ್ಠ (Classical) ಗುಣಲಕ್ಷಣಗಳನ್ನು ಸಾಬೀತುಪಡಿಸುವಾಗ, ಯಾವುದೇ ದೃಷ್ಟಿಯಲ್ಲಿ ನಮ್ಮ ಸಂಪೂರ್ಣ ಗುರುತು ಬೇರೆಯವರೊಂದಿಗೆ ವಿಲೀನಗೊಂಡು ನಾಶವಾಗದಂತೆ (Assimilated) ನೋಡಿಕೊಳ್ಳಬೇಕು. ನಮ್ಮ ರೋಮಾಂಚಕ ಸಾಂಸ್ಕೃತಿಕ ಸತ್ವ ಮತ್ತು ಅಸ್ಮಿತೆಯು ಸ್ಪಷ್ಟವಾಗಿ ಕಾಣಿಸಬೇಕು ಎಂದು ನಾಚಪ್ಪ ಹೇಳಿದರು.
ವಿಶ್ವದ ಅತಿದೊಡ್ಡ ಜನಾಂಗೀಯ ವೈವಿಧ್ಯತೆಯ ದೇಶದಲ್ಲಿ, ನಮ್ಮ ಸಾಂಪ್ರದಾಯಿಕ ಮತ್ತು ಅವಿಭಾಜ್ಯ ಮಾತೃಭೂಮಿಯಲ್ಲಿ ನಮ್ಮ ಭವಿಷ್ಯವನ್ನು ನಾವೇ ನಿರ್ಧರಿಸಲು ಸಂವಿಧಾನದ ಅಡಿಯಲ್ಲಿ ಸುರಕ್ಷಿತ ಸ್ಥಳ ಮತ್ತು ಸ್ಥಾನವನ್ನು ನಾವು ಕೊಡವರು ಬಯಸುತ್ತೇವೆ. ಇದು ನಮ್ಮ ಸಹಜ ಹಕ್ಕು, ಜನ್ಮಸಿದ್ಧ ಹಕ್ಕು, ಮೂಲಭೂತ ಹಕ್ಕು, ಸಾಂವಿಧಾನಿಕ ಹಕ್ಕು ಮತ್ತು ಮಾನವ ಹಕ್ಕು. ಭೂಮಿಯ ಮೇಲಿನ ಯಾವುದೇ ಶಕ್ತಿಯು ಇದನ್ನು ತಡೆಯಲು ಸಾಧ್ಯವಿಲ್ಲ ಎಂದು ನಾಚಪ್ಪ ಹೇಳಿದರು.
ಡಾರ್ಜಿಲಿಂಗ್ನ ಗೋರ್ಖಾಲ್ಯಾಂಡ್ ಹಾಗೂ ವಿಶಾಖಪಟ್ಟಣಂ–ಗೋದಾವರಿ ಹಿಲ್ ಟ್ರ್ಯಾಕ್ಟ್ ಏಜೆನ್ಸಿಗಳ ಮಾದರಿಯಲ್ಲಿ ಸಂವಿಧಾನದ 5ನೇ ಅನುಸೂಚಿಯಡಿ ಕೊಡವಲ್ಯಾಂಡ್ಗೆ ಭೂ-ರಾಜಕೀಯ ಸ್ವಾಯತ್ತತೆ ಮತ್ತು ಸ್ವಯಂ ಆಡಳಿತ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದರು.
ಕೊಡವರ ಭೂಮಿ, ನೀರು, ಸಂಸ್ಕೃತಿ, ಪರಂಪರೆ, ಪರಿಸರ ಹಾಗೂ ಜೀವವೈವಿಧ್ಯತೆಯನ್ನು ಸಂರಕ್ಷಿಸಲು ಕೊಡವರನ್ನು ಪ್ರತ್ಯೇಕ ನಿಸರ್ಗ ಆರಾಧಕ ಜನಾಂಗೀಯ ಸಮುದಾಯವಾಗಿ ಸಾಂವಿಧಾನಿಕವಾಗಿ ಗುರುತಿಸುವ ಅಗತ್ಯವಿದೆ. ಕೊಡವರ ವಿಶಿಷ್ಟ ವಂಶಾವಳಿ, ಗುರುತು ಮತ್ತು ಸಾಂಸ್ಕೃತಿಕ ಅಸ್ಮಿತೆಯನ್ನು ಸಂರಕ್ಷಿಸಬೇಕು ಎಂದು ನಾಚಪ್ಪ ಹೇಳಿದರು.
2027ರ ಜನಗಣತಿಯಲ್ಲಿ ಪ್ರತ್ಯೇಕ ಎಣಿಕೆಗೆ ಒತ್ತಾಯ
ಮುಂಬರುವ ರಾಷ್ಟ್ರೀಯ ಜನಗಣತಿ 2027ರಲ್ಲಿ ಕೊಡವರನ್ನು ಪ್ರತ್ಯೇಕ ಜನಾಂಗೀಯ ಸಮುದಾಯವಾಗಿ ದಾಖಲಿಸಿ, ಪ್ರತ್ಯೇಕವಾಗಿ ಎಣಿಕೆ ಮಾಡಬೇಕು ಎಂದು ಅವರು ಒತ್ತಾಯಿಸಿದರು. 1871-72ರಿಂದ 1941ರವರೆಗಿನ ಜನಗಣತಿಗಳಲ್ಲಿ ಕೊಡವರನ್ನು ಪ್ರತ್ಯೇಕ ಸಮುದಾಯವಾಗಿ ಗುರುತಿಸಲಾಗಿತ್ತು. ನಂತರದ ಅವಧಿಯಲ್ಲಿ ಈ ಪ್ರತ್ಯೇಕ ಗುರುತು ಕಳೆದುಹೋಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕೊಡವ ತಕ್ಕ್ ಭಾಷೆಯನ್ನು ಸಂವಿಧಾನದ 8ನೇ ಅನುಸೂಚಿಗೆ ಸೇರಿಸುವುದು, ಕೊಡವ ಪ್ರದೇಶಕ್ಕೆ ಇನ್ನರ್ ಲೈನ್ ಪರ್ಮಿಟ್ (ILP) ವ್ಯವಸ್ಥೆ ಜಾರಿಗೊಳಿಸುವುದು, ಕೊಡವರ ಸಾಂಪ್ರದಾಯಿಕ ಭೂಮಿಯ ರಕ್ಷಣೆಗೆ ಕ್ರಮ ಕೈಗೊಳ್ಳುವುದು ಹಾಗೂ ಸಂಸತ್ತು ಮತ್ತು ರಾಜ್ಯ ಶಾಸನಸಭೆಗಳಲ್ಲಿ ಪ್ರತ್ಯೇಕ ಪ್ರಾತಿನಿಧ್ಯ ಕಲ್ಪಿಸುವ ಕುರಿತು CNC ಹಲವು ಬೇಡಿಕೆಗಳನ್ನು ಮುಂದಿಟ್ಟಿದೆ.
ಕೊಡವರ ಧಾರ್ಮಿಕ ಮತ್ತು ಸಾಂಸ್ಕೃತಿಕ ಆಚರಣೆಗಳಾದ ಮಂದ್, ದೇವಬನ, ಗನ್-ತೋಕ್ ಪರಂಪರೆ ಸೇರಿದಂತೆ ಕೊಡವ ಪರಂಪರೆಯ ತಾಣಗಳು ಮತ್ತು ಆಚರಣೆಗಳನ್ನು ಸಂರಕ್ಷಿಸಬೇಕು. UNESCO ಮಾನ್ಯತೆ ಸೇರಿದಂತೆ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ನಾಚಪ್ಪ ಹೇಳಿದರು.
ಕೊಡಗಿನ ಭೂ ಪರಿವರ್ತನೆಗೆ ವಿರೋಧ
ಕೊಡಗಿನಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ನಡೆಯುತ್ತಿರುವ ಭೂ ಪರಿವರ್ತನೆ ಹಾಗೂ ದೊಡ್ಡ ಪ್ರಮಾಣದ ರೆಸಾರ್ಟ್, ಟೌನ್ಶಿಪ್ ಮತ್ತು ಲೇಔಟ್ ನಿರ್ಮಾಣಗಳಿಂದ ಪರಿಸರ, ಕೃಷಿಭೂಮಿ, ಕಾಫಿ ತೋಟಗಳು ಹಾಗೂ ನೈಸರ್ಗಿಕ ಜಲಮೂಲಗಳ ಮೇಲೆ ಪರಿಣಾಮ ಉಂಟಾಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಪಶ್ಚಿಮ ಘಟ್ಟ ಹಾಗೂ ಕಾವೇರಿ ಜಲಾನಯನ ಪ್ರದೇಶದ ಸೂಕ್ಷ್ಮ ಪರಿಸರ ವ್ಯವಸ್ಥೆಯನ್ನು ಸಂರಕ್ಷಿಸುವ ದೃಷ್ಟಿಯಿಂದ ಕೊಡಗಿನಲ್ಲಿ ಭೂ ಬಳಕೆಯ ಬದಲಾವಣೆ ಮತ್ತು ವಾಣಿಜ್ಯ ನಿರ್ಮಾಣಗಳ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ ಅಗತ್ಯ ಎಂದು ನಾಚಪ್ಪ ಹೇಳಿದರು. 2018ರ ಕೊಡಗು ಪ್ರವಾಹ ಮತ್ತು ಭೂಕುಸಿತ, 2024ರ ವಯನಾಡು ದುರಂತದಂತಹ ಘಟನೆಗಳ ಹಿನ್ನೆಲೆಯಲ್ಲಿ ಪರಿಸರ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದು ಅವರು ಹೇಳಿದರು.
ಕೊಡಗಿನಲ್ಲಿ ಹೊರಗಿನ ಬಂಡವಾಳದ ಮೂಲಕ ಭೂಮಿ ಖರೀದಿ ಹಾಗೂ ವಾಣಿಜ್ಯೀಕರಣ ಹೆಚ್ಚುತ್ತಿರುವುದರಿಂದ ಜನಸಂಖ್ಯಾ ಸ್ವರೂಪ, ಭೂಪ್ರದೇಶ ಮತ್ತು ಅರಣ್ಯ ಪ್ರದೇಶದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಅವರು ಆರೋಪಿಸಿದರು. ಈ ಬೆಳವಣಿಗೆಗಳನ್ನು ತಡೆಯಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕೊಡವ ನಾಮಕರಣಕ್ಕೆ ಸಂಬಂಧಿಸಿದ ಹೈಕೋರ್ಟ್ ತೀರ್ಪಿನ ಉಲ್ಲೇಖ
CNC ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ, ‘ಕೊಡವ’ ಎಂಬ ನಾಮಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ನ 2021ರ ತೀರ್ಪನ್ನು ಉಲ್ಲೇಖಿಸಲಾಗಿದೆ. Writ Petition No.48624/2016 (GM-RES), ಡಿ.8, 2021ರ ಪ್ರಕರಣದಲ್ಲಿ ನ್ಯಾಯಮೂರ್ತಿ ಕೃಷ್ಣ ಶ್ರೀಪಾದ ದೀಕ್ಷಿತ್ ಅವರ ತೀರ್ಪನ್ನು CNC ತನ್ನ ನಾಮಕರಣದ ಹೋರಾಟಕ್ಕೆ ಸಂಬಂಧಿಸಿದ ಪ್ರಮುಖ ಬೆಳವಣಿಗೆ ಎಂದು ವಿವರಿಸಿದೆ.
ಕೊಡವರ ಪ್ರತ್ಯೇಕ ಗುರುತು, ಜನಗಣತಿಯಲ್ಲಿ ಪ್ರತ್ಯೇಕ ದಾಖಲಾತಿ ಹಾಗೂ ಸಂವಿಧಾನಾತ್ಮಕ ರಕ್ಷಣೆಯ ಬೇಡಿಕೆಗಳಿಗೆ ಈ ಬೆಳವಣಿಗೆ ಆಧಾರವಾಗಲಿದೆ ಎಂದು ನಾಚಪ್ಪ ಹೇಳಿದರು.
ಕೊಡವರ ಇತಿಹಾಸ, ವಂಶಾವಳಿ, ಭಾಷೆ ಮತ್ತು ಸಾಂಸ್ಕೃತಿಕ ಅಸ್ಮಿತೆಯನ್ನು ದಾಖಲಿಸುವ ಐತಿಹಾಸಿಕ ಹಾಗೂ ಮಾನವಶಾಸ್ತ್ರೀಯ ಕೃತಿಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದು ಅವರು ಹೇಳಿದರು.
ಪ್ರಮಾಣ ವಚನ ಸ್ವೀಕಾರ
ಮಾನವ ಸರಪಳಿಯಲ್ಲಿ ಪಾಲ್ಗೊಂಡವರು ಗುರು-ಕಾರೋಣ, ಸೂರ್ಯ-ಚಂದ್ರ, ಭೂತಾಯಿ, ವನದೇವಿ, ಜಲದೇವಿ ಕಾವೇರಿ ಹಾಗೂ ಭಾರತದ ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಗೀತೆ ‘ಜನಗಣಮನ’ ಗಾಯನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ಪಾಲ್ಗೊಂಡವರು: ಚೋಳಪಂಡ ಜ್ಯೋತಿ ನಾಣಯ್ಯ, ಚೋಳಪಂಡ ತಾಜಾ ಕಾಳಯ್ಯ, ಅಡಿಕೆರೆ ಶಾಂತಿ ಜಯ, ಪುತ್ತರೀರ ಸೀತಮ್ಮ, ಪುತ್ತರೀರ ಲತಾ ಜೋಯಪ್ಪ, ಪಟ್ಟಮಡ ಲಲಿತಾ, ಮುಲ್ಲಂಡ ಮಾಯಮ್ಮ, ಕೊಂಗೇಟಿರ ವಾಣಿ ಕಾಳಪ್ಪ, ಕೊಂಗೇಟಿರ ವೀಣಾ ಅಪ್ಪಣ್ಣ, ಕೊಂಗೇಟಿರ ಮೀರಾ ಚಂಗಪ್ಪ, ನಂದಿನೆರವಂಡ ಪಾರ್ವತಿ, ಪೊರಿಮಂಡ ದಿನಮಣಿ ಪೂವಯ್ಯ, ಚೋಳಪಂಡ ನಾಣಯ್ಯ, ಚೋಳಪಂಡ ಸುರೇಶ್ ಕಾಳಯ್ಯ, ಚೋಳಪಂಡ ಪೂವಯ್ಯ, ಪತ್ರಕರ್ತ ಪುತ್ತರೀರ ಕರುಣ್ ಕಾಳಯ್ಯ, ಪುತ್ತರೀರ ವಾಸು ಕೇಶವ, ಪುತ್ತರೀರ ಪಪ್ಪು ತಿಮ್ಮಯ್ಯ, ನಿವೃತ್ತ ಏರ್ ಫೋರ್ಸ್ ಅಧಿಕಾರಿ ಪುತ್ತರೀರ ಗಣೇಶ್ ಭೀಮಯ್ಯ, ಪುತ್ತರೀರ ರಮೇಶ್ ಮುತ್ತಣ್ಣ, ಚೋಳಪಂಡ ವಿಜಯ, ಕೊಂಗೇಟಿರ ಹರೀಶ್ ಅಪ್ಪಣ್ಣ, ಮುಳ್ಳಂಡ ಸನ್ನಿ ಅಯ್ಯಪ್ಪ, ಚೋಳಪಂಡ ಗಣಪತಿ, ಅಡಿಕೆರೆ ಜಯ ಮುತ್ತಪ್ಪ, ಬದಲೆರ ಕೌಶಿಕ್, ಬಲ್ಲಾರಂಡ ದೇವಿ, ಮುಳ್ಳಂಡ ಪುಷ್ಯ ರಂಜನ್, ಮುಳ್ಳಂಡ ರತು ಚಂಗಪ್ಪ, ಪೊರಿಮಂಡ ಲೋಕ ದೇವಯ್ಯ, ವಕೀಲ ಕಾಡೆಮಡ ವಿನ್ಸಿ ಅಪ್ಪಯ್ಯ, ಮುಳ್ಳಂಡ ರಾಮು, ಸೊಮೇಯಂಡ ದಿಲೀಪ್ ಅಪ್ಪಚ್ಚು, ಕೊಕ್ಕೇರ ದೊರೆ, ಬಟ್ಟೀರ ಕಾವೇರಪ್ಪ, ಪಾಲೇಕಂಡ ಪೂಣಚ್ಚ, ಬಿದ್ದಂಡ ಮಾದಯ್ಯ, ಬಿದ್ದಂಡ ಅಚಯ್ಯ, ಐಚೆಟ್ಟಿರ ಉಮೇಶ್ ಮಾಚಯ್ಯ, ಮುಳ್ಳಂಡ ಲೋಹಿತ್ ಅಪ್ಪಣ್ಣ, ಶ್ರೀಮಂಗಲ ಲಕ್ಷ್ಮಿ ನಿಧಿ ಅಧ್ಯಕ್ಷ ಬಟ್ಟೀರ ರಕ್ಷು ಕಾಳಪ್ಪ, ಕೊಂಗೇಟಿರ ಬೋಪಯ್ಯ, ಕೊಂಗೇಟಿರ ಕುಶ, ಪುತ್ತರೀರ ರಾಬಿನ್ ಚಂಗಪ್ಪ, ಬಟ್ಟೀರ ಬಿದ್ದಪ್ಪ, ಪುತ್ತರೀರ ಬೆಳ್ಳಿಯಪ್ಪ, ಚೋಳಪಂಡ ಪೂವಯ್ಯ, ಐತಿಚಂಡ ಪೂವಣ್ಣ.
ಕಾರ್ಯಕ್ರಮದಲ್ಲಿ ಚೆಟ್ಟಳ್ಳಿ ಕೊಡವ ಸಮಾಜದ ಅಧ್ಯಕ್ಷ ಮುಳ್ಳಂಡ ರತ್ತು ಚಂಗಪ್ಪ ಸ್ವಾಗತಿಸಿದರು. ನೂರೂಕ್ಕನಾಡ್ ತಕ್ಕ ಪೊರಿಮಂಡ ದಿನಮಣಿ ಪೂವಯ್ಯ ವಂದಿಸಿದರು.
CNC ವತಿಯಿಂದ ಕೊಡವ ಪ್ರದೇಶದಾದ್ಯಂತ ನಡೆಸುತ್ತಿರುವ ಜಾಗೃತಿ ಅಭಿಯಾನದ ಮುಂದಿನ ಕಾರ್ಯಕ್ರಮ ಅಕ್ಟೋಬರ್ 1ರಂದು ಸಿದ್ಧಾಪುರದಲ್ಲಿ ಹಾಗೂ ಅಕ್ಟೋಬರ್ 5ರಂದು ಚೆರಂಬಾಣೆಯಲ್ಲಿ ನಡೆಯಲಿದೆ ಎಂದು ಎನ್.ಯು. ನಾಚಪ್ಪ ತಿಳಿಸಿದರು.







