ವಿರಾಜಪೇಟೆ, NEWS DESK ಸೆ.20: ಸಮೀಪದ ಬೇಟೋಳಿ ಗ್ರಾಮದ ರಾಮನಗರದಲ್ಲಿರುವ ಶ್ರೀ ಪುದುಪಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ 44ನೇ ವರ್ಷದ ಗೌರಿ ಗಣೇಶ ಮೂರ್ತಿಗಳ ವಿಸರ್ಜನೋತ್ಸವವು ಶ್ರದ್ಧಾ ಭಕ್ತಿಯಿಂದ ನೆರವೇರಿತು.
ಏಳು ದಿನಗಳ ಕಾಲ ಗೌರಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗಿತ್ತು. ವಿಸರ್ಜನೋತ್ಸವದಂದು ಬೆಳಗ್ಗಿನಿಂದಲೇ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ವಿಶೇಷ ಪೂಜೆ ಹಾಗೂ ಗಣಪತಿ ಪೂಜೆಯನ್ನು ಸಲ್ಲಿಸಿದರು.
ದೇವಸ್ಥಾನದ ಒಳ ಆವರಣದಲ್ಲಿರುವ ಶ್ರೀ ಮಹಾಗಣಪತಿ ಸ್ವಾಮಿ, ಶ್ರೀ ಅಯ್ಯಪ್ಪ ಸ್ವಾಮಿ, ಶ್ರೀ ವನದುರ್ಗ ಹಾಗೂ ಶ್ರೀ ನಾಗದೇವರಿಗೆ ಅರ್ಚಕರು ವಿಶೇಷ ಪ್ರಾರ್ಥನೆ ಹಾಗೂ ಪೂಜೆ ಸಲ್ಲಿಸಿದರು. ವಿವಿಧ ಧಾರ್ಮಿಕ ಸೇವೆಗಳ ಬಳಿಕ ಶ್ರೀ ಮಹಾಗಣಪತಿ ಸ್ವಾಮಿ ಹಾಗೂ ಗೌರಿ ದೇವರಿಗೆ ಮಹಾ ಮಂಗಳಾರತಿಯನ್ನು ನೆರವೇರಿಸಲಾಯಿತು. ನಂತರ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.
ಮಧ್ಯಾಹ್ನದ ಬಳಿಕ ವಿದ್ಯುತ್ ಹಾಗೂ ಹೂವಿನ ಅಲಂಕೃತ ತೇರಿನ ಮಂಟಪದಲ್ಲಿ ಶ್ರೀ ಗಣಪತಿ ಹಾಗೂ ಗೌರಿ ದೇವರುಗಳನ್ನು ಪೂಜಿಸಿ ಪ್ರತಿಷ್ಠಾಪಿಸಲಾಯಿತು. ದೇವಸ್ಥಾನದ ಎದುರಿನಿಂದ ಆರಂಭವಾದ ಶೋಭಾಯಾತ್ರೆಯು ಬೇಟೋಳಿ ಮೂಲೆ ಅಂಗಡಿಯ ಹೊಳೆಯವರೆಗೆ ಸಾಗಿತು. ಬಳಿಕ ಅರ್ಚಕರು ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿದ ನಂತರ ಶ್ರೀ ಗಣಪತಿ ಹಾಗೂ ಗೌರಿ ದೇವರುಗಳ ಮೂರ್ತಿಗಳನ್ನು ಮೂಲೆ ಅಂಗಡಿ ಹೊಳೆಯಲ್ಲಿ ವಿಸರ್ಜಿಸಲಾಯಿತು.
ಶೋಭಾಯಾತ್ರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಕುಣಿತ ಭಜನೆ ತಂಡ ಹಾಗೂ ಸಮೀಪದ ರಾಮನಗರದ ಮಕ್ಕಳ ಕುಣಿತ ಭಜನೆ ತಂಡವು ವಿಶೇಷ ಮೆರುಗು ನೀಡಿತು. ದಾರಿಯುದ್ದಕ್ಕೂ ದೇವರ ಹಾಡುಗಳಿಗೆ ನೃತ್ಯ ಮಾಡುತ್ತಾ ತಂಡಗಳು ಶೋಭಾಯಾತ್ರೆಯಲ್ಲಿ ಸಾಗಿದವು. ರುದ್ರಂ ಚಂಡೆ ಬಳಗದಿಂದ ಚಂಡೆ ಸೇವೆ, ದೇವಸ್ಥಾನದ ಮಹಿಳಾ ಭಜನಾ ಮಂಡಳಿಯಿಂದ ಭಜನೆ ಸೇವೆ, ಬೊಂಬೆ ಕುಣಿತ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ವಿಸರ್ಜನೋತ್ಸವದ ಬಳಿಕ ದೇವಸ್ಥಾನಕ್ಕೆ ಮರಳಿದ ಅರ್ಚಕರು ವಿಶೇಷ ಪೂಜೆ ನೆರವೇರಿಸಿದರು. ಧಾರ್ಮಿಕ ಕಾರ್ಯಕ್ರಮಗಳನ್ನು ದೇವಸ್ಥಾನದ ಪ್ರಧಾನ ಅರ್ಚಕರಾದ ವಿಶ್ವನಾಥ್ ಭಟ್ ಹಾಗೂ ವಾಮನಮೂರ್ತಿ ಭಟ್ ನೆರವೇರಿಸಿದರು.
ಶೋಭಾಯಾತ್ರೆಯುದ್ದಕ್ಕೂ ಬೇಟೋಳಿ ಗ್ರಾಮ, ಸುತ್ತಮುತ್ತಲಿನ ಗ್ರಾಮಗಳು ಹಾಗೂ ವಿರಾಜಪೇಟೆ ನಗರದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ಸಂತೋಷ್ ಬಿ.ಪಿ., ಉಪಾಧ್ಯಕ್ಷರಾದ ನಂದ ಬಿ.ಜಿ., ಶೈಲೇಶ್ ಬಿ.ಎಂ., ಕಾರ್ಯದರ್ಶಿ ಬಿ.ಎನ್. ಶಾಂತಿಭೂಷಣ್, ಖಜಾಂಚಿ ಜ್ಯೋತಿ, ಆಡಳಿತ ಮಂಡಳಿಯ ಸರ್ವ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.








