ಮಡಿಕೇರಿ, NEWS DESK ಸೆ.20: ನವತಂತ್ರಜ್ಞಾನದ ಮೂಲಕ ಅಪಾರ ಜ್ಞಾನ ಗಳಿಸುತ್ತಿರುವ ವಿದ್ಯಾರ್ಥಿಗಳಿಗೆ ಯಾವ ರೀತಿಯ ಶಿಕ್ಷಣ ನೀಡಬೇಕೆಂಬುದೇ ಶಿಕ್ಷಕ ವರ್ಗದ ನೈಜ ಸವಾಲಾಗಿ ಪರಿಣಮಿಸಿದೆ. ಶಿಕ್ಷಕರು ಪ್ರತಿನಿತ್ಯವೂ ತಮ್ಮ ಜ್ಞಾನ ಮತ್ತು ಕೌಶಲ್ಯವನ್ನು ಪರಿಷ್ಕರಿಸಿಕೊಂಡು ಪಾಠ ಮಾಡುವ ಅನಿವಾರ್ಯತೆ ಇದೆ ಎಂದು ಮಡಿಕೇರಿ ಆಕಾಶವಾಣಿ ಕೇಂದ್ರದ ಮುಖ್ಯಸ್ಥೆ ಸುಜಾತ ಎಫ್. ತಳವಾರ್ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಆಯೋಜಿಸಿದ್ದ ನಾಲ್ವರು ಸಾಧಕ ಶಿಕ್ಷಕರಿಗೆ ನೇಷನ್ ಬಿಲ್ಡರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ದಿನಕಳೆದಂತೆ ವಿದ್ಯಾರ್ಥಿಗಳಿಗೆ ಲಭ್ಯವಾಗುತ್ತಿರುವ ನವತಾಂತ್ರಿಕತೆಯ ಮಾಧ್ಯಮಗಳಿಂದಾಗಿ ಮೊದಲಿನಂತೆ ಪಾಠ ಹೇಳುವುದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಶಿಕ್ಷಕರ ವೃತ್ತಿ ಮತ್ತಷ್ಟು ಸವಾಲಿನದ್ದಾಗುತ್ತಿದೆ ಎಂದರು.
ವಿದ್ಯಾರ್ಥಿಗಳಿಗೆ ಹೊಸ ವಿಚಾರಗಳ ಬಗ್ಗೆ ತಿಳಿಹೇಳುವುದರ ಜೊತೆಗೆ ಪಠ್ಯ ಮತ್ತು ಪಠ್ಯೇತರ ವಿಚಾರಗಳನ್ನು ಕಲಿಸುವ ದೊಡ್ಡ ಹೊಣೆಗಾರಿಕೆ ಶಿಕ್ಷಕರ ಮೇಲಿದೆ. ಮಕ್ಕಳು ಕೂಡ ಹಲವು ಸಂದರ್ಭಗಳಲ್ಲಿ ಪೋಷಕರಿಗೆ ಗುರುಗಳಾಗಿ ಪರಿಣಮಿಸುತ್ತಾರೆ. ಮಕ್ಕಳಿಂದಲೂ ಕಲಿಯುವುದು ಸಾಕಷ್ಟಿದೆ ಎಂದು ಹೇಳಿದರು.
ಹಿಂದಿನ ಕಾಲದಿಂದ ಇಂದಿನವರೆಗೂ ತರಗತಿಯಲ್ಲಿ ಪಾಠ ಮಾಡುವುದು ಶಿಕ್ಷಕರಿಗೆ ನಿತ್ಯದ ಅಗ್ನಿಪರೀಕ್ಷೆಯಂತಿದೆ. ಪಠ್ಯದಲ್ಲಿರುವ ವಿಷಯಗಳ ಜೊತೆಗೆ ಜೀವನದ ಮೌಲ್ಯಗಳನ್ನೂ ಕಲಿಸಬೇಕಾದ ಶಿಕ್ಷಕರು ಸಮಾಜದಲ್ಲಿ ಇತರ ಯಾವುದೇ ವೃತ್ತಿಗೆ ಸರಿಸಾಟಿಯಾಗದ ಜ್ಞಾನವಂತರಾಗಿದ್ದಾರೆ. ಬದುಕಿನಲ್ಲಿ ನಿಖರ ಗುರಿ ಮುಟ್ಟಲು ಸರಿಯಾದ ಗುರು ಮುಖ್ಯರಾಗಿದ್ದು, ಇಂಥ ಗುರುವಿದ್ದರೆ ಸಾಧನೆಯ ಗುರಿ ಸುಲಭಸಾಧ್ಯವಾಗುತ್ತದೆ ಎಂದು ಸುಜಾತ ತಳವಾರ್ ಹೇಳಿದರು.
ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪಿ.ಆರ್. ರಾಜೇಶ್ ಮಾತನಾಡಿ, ಶಿಕ್ಷಕರನ್ನು ಸನ್ಮಾನಿಸುವ ಮೂಲಕ ರೋಟರಿ ಸಂಸ್ಥೆಯು ದೇಶಕ್ಕೆ ಉತ್ತಮ ಪ್ರಜೆಗಳನ್ನು ರೂಪಿಸುವವರನ್ನು ಗುರುತಿಸಿ ಗೌರವಿಸುವ ಕೆಲಸ ಮಾಡುತ್ತಿದೆ. ಜೀವನದ ಎಲ್ಲಾ ಹಂತಗಳಲ್ಲಿಯೂ ಒಂದಲ್ಲ ಒಂದು ಹಂತದಲ್ಲಿ ಗುರುವಿನ ಅಗತ್ಯವಿದೆ ಎಂದರು.
ರೋಟರಿ ವಲಯ 6ರ ಸಹಾಯಕ ಗವರ್ನರ್ ಎಚ್.ಎಸ್. ವಸಂತಕುಮಾರ್ ಮಾತನಾಡಿ, ವಿದ್ಯಾರ್ಥಿಗಳಿಗೆ ದಾರಿದೀಪದಂತಿರುವ ಶಿಕ್ಷಕರು ಸಮಾಜಕ್ಕೂ ಉತ್ತಮ ಮಾರ್ಗದರ್ಶಕರಾಗಿದ್ದಾರೆ. ಶಿಕ್ಷಕರ ಸಾಧನೆಯನ್ನು ಗುರುತಿಸಿ ಸನ್ಮಾನಿಸುವ ಮೂಲಕ ಭವಿಷ್ಯದಲ್ಲಿ ಮತ್ತಷ್ಟು ಯುವ ಶಿಕ್ಷಕರಿಗೆ ಪ್ರೇರಣೆ ನೀಡುವ ಕಾರ್ಯವನ್ನು ರೋಟರಿ ಸಂಸ್ಥೆಗಳು ಮಾಡುತ್ತಿವೆ ಎಂದರು.
ರೋಟರಿ ವಲಯ ಸೇನಾನಿ ಪೊನ್ನಚ್ಚನ ಮಧುಸೂಧನ್ ಮಾತನಾಡಿ, ಉತ್ತಮ ಗುರುಗಳಿದ್ದಾಗ ಉತ್ತಮ ಸಮಾಜ ನಿರ್ಮಾಣ ಸುಲಭಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಸೇನೆ ಸೇರುವ ಯುವಪೀಳಿಗೆಗೆ ತರಬೇತಿ ನೀಡುತ್ತಿರುವ ಅಮ್ಮತ್ತಿ-ಕಾಮಾರ್ಡು ಗ್ರಾಮದ ಕುಟ್ಟಂಡ ಲವ ಭೀಮಯ್ಯ, ಮಡಿಕೇರಿಯ ಚೆಸ್ ತರಬೇತುದಾರ ಎನ್.ಟಿ. ಶಂಕರನಾರಾಯಣ, ಅರೆಕಾಡು ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿ ಪಿ.ಎಂ. ಪದ್ಮಾವತಿ ಹಾಗೂ ಮದೆನಾಡಿನ ನಿವೃತ್ತ ಪ್ರಾಂಶುಪಾಲ ಸಿದ್ದರಾಜು ಬೆಳ್ಳಯ್ಯ ಅವರನ್ನು ನೇಷನ್ ಬಿಲ್ಡರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ರೋಟರಿ ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಡಾ. ಚೇತನ್ ಜಿ.ಡಿ. ವಂದಿಸಿದರು. ಕಾರ್ಯಕ್ರಮವನ್ನು ರೋಟರಿ ನಿರ್ದೇಶಕರಾದ ಅನಿಲ್ ಹೆಚ್.ಟಿ., ಅನಿತಾ ಪೂವಯ್ಯ, ಸತೀಶ್ ಸೋಮಣ್ಣ, ಡಾ. ತಾರಾನಂದ್ ಹಾಗೂ ಡಾ. ಕೃಷ್ಣದೀಪ್ ನಿರ್ವಹಿಸಿದರು. ಪತ್ರಕರ್ತ ನಿಶಾಂತ್ ಬೆಳ್ಳ್ಯಪ್ಪ ಸಂಪಾದಕತ್ವದ ‘ರೋಟೋ ಮಿಸ್ಟ್ ವಾರ್ತಾ’ ಸಂಚಿಕೆಯನ್ನು ಇದೇ ಸಂದರ್ಭದಲ್ಲಿ ಅನಾವರಣಗೊಳಿಸಲಾಯಿತು.
ಸನ್ಮಾನಿತರ ಅನಿಸಿಕೆ
ಕುಟ್ಟಂಡ ಲವ ಭೀಮಯ್ಯ, ಸೇನಾ ತರಬೇತುದಾರ:
ಕೊಡಗಿನಿಂದ ಸೇನೆ ಸೇರುವವರ ಸಂಖ್ಯೆ ಇಳಿಮುಖವಾಗುತ್ತಲೇ ಇದೆ. ಸೇನೆ, ಪೊಲೀಸ್, ಕಂದಾಯ, ಚೆಸ್ಕಾಂ ಇಲಾಖೆಗೆ ಸೇರ್ಪಡೆಯಾಗಲು ಕೊಡಗಿನವರು ಆಸಕ್ತರಾಗುತ್ತಿಲ್ಲ. ವಿದ್ಯಾರ್ಥಿಗಳನ್ನು ಸೇನೆ ಸೇರುವ ನಿಟ್ಟಿನಲ್ಲಿ ಪ್ರೇರೇಪಿಸುವಂತಹ ಕೆಲಸವಾಗಬೇಕು.
ಎನ್.ಟಿ. ಶಂಕರನಾರಾಯಣ, ಚೆಸ್ ತರಬೇತುದಾರ:
ಚೆಸ್ ಕ್ರೀಡೆಯಲ್ಲಿ ಸೋಲು-ಗೆಲುವಿನ ಚಿಂತೆಯಿಲ್ಲದೆ ಆಟದತ್ತ ಗಮನ ಕೇಂದ್ರೀಕರಿಸುವಂತೆಯೇ ಜೀವನದಲ್ಲಿಯೂ ಸೋಲು-ಗೆಲುವಿನ ಚಿಂತೆ ಮಾಡದೆ ಸಂತೋಷ, ನೆಮ್ಮದಿ ಹಾಗೂ ಆರೋಗ್ಯದ ಬಗ್ಗೆ ಯೋಚಿಸಬೇಕು.
ಪಿ.ಎಂ. ಪದ್ಮಾವತಿ, ಮುಖ್ಯ ಶಿಕ್ಷಕಿ, ಅರೆಕಾಡು ಸರ್ಕಾರಿ ಶಾಲೆ:
ಸಮಾಜದ ಅಭ್ಯುದಯಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಾ ಬಂದಿರುವ ರೋಟರಿ ಸಂಸ್ಥೆ ಶಿಕ್ಷಕರ ಸೇವೆಯನ್ನು ಗುರುತಿಸಿರುವುದು ಶ್ಲಾಘನೀಯ.
ಸಿದ್ದರಾಜು ಬೆಳ್ಳಯ್ಯ, ನಿವೃತ್ತ ಪ್ರಾಂಶುಪಾಲರು, ಮದೆ:
ಶಿಕ್ಷಕರ ಪಾಲಿಗೆ ಮಕ್ಕಳೇ ದೇವರು, ಶಾಲೆಯೇ ದೇವಾಲಯ ಇದ್ದಂತೆ. ಸಮಾಜ ಉತ್ತಮ ಶಿಕ್ಷಕರನ್ನು ಸದಾ ಗೌರವಿಸುತ್ತದೆ. ಹೀಗಾಗಿ ಶಿಕ್ಷಕರು ಜಾಗ್ರತರಾಗಿಯೇ ವೃತ್ತಿ ನಿರ್ವಹಿಸುವ ಹೊಣೆಗಾರಿಕೆ ಹೊಂದಿದ್ದಾರೆ.







