Advertisement
2:32 AM Thursday 7-December 2023

ಭೃಂಗರಾಜ ಗಿಡದ ಔಷಧಿ ಗುಣಗಳು

07/03/2023

ಭಾರತೀಯ ವೈದ್ಯಕೀಯ ಪದ್ಧತಿಯಲ್ಲಿ ಭೃಂಗರಾಜ ಸಸ್ಯಕ್ಕೆ ಹೆಚ್ಚಿನ ಮಹತ್ವವಿದೆ. ಇದು ಮನೆಯ ಎದುರಿಗೆ ಕಳೆಗಳ ಮದ್ಯದಲ್ಲಿ ಬೆಳೆಯುವಂತ ಸಸ್ಯ. ಇದು 1 ರಿಂದ 2 ಅಡಿ ಎತ್ತರಕ್ಕೆ ಬೆಳೆಯುವಂತ ಸಸ್ಯವಾಗಿದೆ. ಭೃಂಗರಾಜ ಗಿಡವು ನೀರು ಇರುವ ತಂಪು ಪ್ರದೇಶದಲ್ಲಿ ಗದ್ದೆ, ತೋಟ, ನದಿಯ ಪಕ್ಕದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಇದರ ಕಾಂಡ, ಗಿಡವು ಪೂರ್ತಿ ಬೆಳೆದ ಮೇಲೆ ಕೆಂಪಾಗುತ್ತದೆ. ಹಾಗು ಇದರಲ್ಲಿ ಚಿಕ್ಕ ಚಿಕ್ಕ ಬಿಳಿ ಹೂಗಳು ಬಿಡುತ್ತವೆ. ಇದರ ಬೀಜಗಳು ಕಪ್ಪಾಗಿದ್ದೂ, ಎಲೆಗಳು ನೆಲಬೇವಿನ ಎಲೆಗಳನ್ನು ಹೋಲುತ್ತವೆ.
ಭೃಂಗರಾಜವನ್ನು “ಕೇಶರಾಜ’ ಎಂದು ಕರೆಯುತ್ತಾರೆ. ಏಕೆಂದರೆ ಇದು ಕೂದಲಿನ ಅರೋಗ್ಯ ಕಾಪಾಡುವಲ್ಲಿ ಹೆಚ್ಚಿನ ಪಾತ್ರ ವಹಿಸುತ್ತದೆ. ಈ ಸಸ್ಯವನ್ನು ಹಳ್ಳಿಗಳಲ್ಲಿ ಗರುಗದ ಗಿಡವೆಂದು ಕೂಡ ಕರೆಯುತ್ತಾರೆ. ಭೃಂಗರಾಜ ಗಿಡವನ್ನು ಆಹಾರೌಷಧವಾಗಿಯೂ ಬಳಸುತ್ತಾರೆ. ಇದು ಕಹಿ ರುಚಿಯನ್ನು ಹೊಂದಿರುತ್ತದೆ. ಹಾಗು ಭೃಂಗರಾಜ ಅನೇಕ ಸಮಸ್ಯೆಗಳನ್ನು ನಿವಾರಣೆ ಮಾಡಬಲ್ಲದ್ದಾಗಿದೆ. ಇದರಿಂದ ಎಣ್ಣೆಯನ್ನು ತಯಾರಿಸುತ್ತಾರೆ. ಅದು ಮಾರುಕಟ್ಟೆಗಳಲ್ಲಿ ಲಭ್ಯವಿದೆ. ಭೃಂಗರಾಜ ಎಲೆಗಳನ್ನು ಸೂಪ್ ಮಾಡಿಕೊಂಡು ಆಹಾರೌಷಧವಾಗಿ ಉಪಯೋಗಿಸುವುದರಿಂದ, ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ, ಹೃದಯ ರೋಗ ಸಮಸ್ಯೆ ನಿವಾರಣೆಯಾಗುತ್ತದೆ, ರಕ್ತನಾಳಗಳ ಅರೋಗ್ಯದಿಂದಿರುತ್ತವೆ, ಮತ್ತು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚುತ್ತದೆ.

 ಚರ್ಮರೋಗ ನಿವಾರಣೆಗೆ ಸಹಕಾರಿ  : 
ಭೃಂಗರಾಜ ಎಲೆಯ ರಸವನ್ನು ತೆಗೆದುಕೊಂಡು, ಮೈಗೆ ಹಚ್ಚಿಕೊಂಡು ಅರ್ಧ ಗಂಟೆ ಬಿಟ್ಟು ಸ್ನಾನ ಮಾಡುದರಿಂದ ಚರ್ಮದ ಕಾಂತಿಯು ಹೆಚ್ಚುತ್ತದೆ. ಹಾಗೂ ಚರ್ಮವು ಆರೋಗ್ಯದಿಂದ ಇರುತ್ತದೆ. ಮತ್ತು ಭೃಂಗರಾಜ ಗಿಡದ ಬೇರನ್ನು ಪುಡಿಮಾಡಿಟ್ಟುಕೊಂಡು ಅದಕ್ಕೆ ಸ್ವಲ್ಪ ನೀರು ಸೇರಿಸಿ ಚರ್ಮಕ್ಕೆ ಹಚ್ಚಿ ಕೊಳ್ಳುವುದರಿಂದ ಚರ್ಮರೋಗ ನಿವಾರಣೆಯಾಗುತ್ತದೆ.

 ಕಣ್ಣಿನ ಆರೋಗ್ಯ  ಕಾಪಾಡುತ್ತದೆ :

ಭೃಂಗರಾಜದಲ್ಲಿ ಕೆರೋಟಿನ್ ಅಂಶ ಸಾಕಷ್ಟು ಪ್ರಮಾಣದಲ್ಲಿರುತ್ತದೆ. ಆದ್ದರಿಂದ ಇದರ ಎಲೆಯ ಕಷಾಯ ಮಾಡಿ ಕುಡಿಯುವುದರಿಂದ ಕಣ್ಣಿನ ಆರೋಗ್ಯವನ್ನು ಇದು ಕಾಪಾಡುತ್ತದೆ.

ಗಂಟಲು ನೋವು ನಿವಾರಣೆ : ಭೃಂಗರಾಜ ಎಲೆಯ ಕಷಾಯವನ್ನು ಮಾಡಿಕೊಂಡು, ಗಂಟಲವರೆಗೂ ಬರುವಂತೆ ಬಾಯಿಗೆ ಹಾಕಿ, ಮುಕ್ಕಳಿಯುವುದರಿಂದ ಗಂಟಲು ನೋವು ನಿವಾರಣೆಯಾಗುತ್ತದೆ.

ಅಜೀರ್ಣವನ್ನು ಹೋಗಲಾಡಿಸುತ್ತದೆ :  ಅಜೀರ್ಣವಾದಾಗ ಭೃಂಗರಾಜದ ಎಲೆಯನ್ನು ಸಣ್ಣಗೆ ಹೆಚ್ಚಿಕೊಂಡು, ಸ್ವಲ್ಪ ತುಪ್ಪದಲ್ಲಿ ಹುರಿದು, ಅದಕ್ಕೆ ಮೊಸರು, ಜೀರಿಗೆ, ಸೇರಿಸಿ ತಿನ್ನುವುದರಿಂದ ಜೀರ್ಣಕ್ರಿಯೆ ಸರಾಗವಾಗುತ್ತದೆ.

ತಲೆನೋವು ನಿವಾರಣೆಗೆ  : ಭೃಂಗರಾಜ ಎಲೆಯ ರಸವನ್ನು ತೆಗೆದುಕೊಂಡು ಎಳ್ಳೆಣ್ಣೆ ಜೊತೆ ಸೇರಿಸಿ ತಲೆಗೆ ಹಚ್ಚಿಕೊಳ್ಳುವುದರಿಂದ ತಲೆನೋವು ವಾಸಿಯಾಗುತ್ತದೆ.

ಕೂದಲಿನ ಆರೋಗ್ಯ ಕಾಪಾಡುವಲ್ಲಿ  ಸಹಕಾರಿ  :  ಭೃಂಗರಾಜ ಗಿಡವನ್ನು ಕೇಶರಾಜ ಎಂದೇ ಕರೆಯುತ್ತಾರೆ. ಭೃಂಗರಾಜದ ಪುಡಿ ಮತ್ತು ಮೆಂತ್ಯೆ ಪುಡಿಯನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು, ಅದಕ್ಕೆ ಸ್ವಲ್ಪ ನೀರು ಸೇರಿಸಿ ಈ ಮಿಶ್ರಣವನ್ನು ಕೂದಲಿನ ಬುಡಕ್ಕೆ ಹಚ್ಚಿಕೊಂಡು, ಒಂದು ಗಂಟೆಗಳ ಕಾಲ ಬಿಟ್ಟು ಸ್ನಾನ ಮಾಡುವುದರಿಂದ ಕೂದಲಿನ ಆರೋಗ್ಯವನ್ನು ಕಾಪಾಡಬಹುದು. ಹಾಗು ನಾವು ಪ್ರತಿದಿನ ಇಲ್ಲವೇ ವಾರಕ್ಕೆ 2 ಬಾರಿ ಭೃಂಗರಾಜ ಎಲೆಯ ರಸವನ್ನು ತೆಗೆದು ಕೊಂಡು, ಕೊಬ್ಬರಿ ಎಣ್ಣೆಯೊಂದಿಗೆ ಬೆರಸಿ ಕುದಿಸಿಕೊಳ್ಳಬೇಕು.ಅದನ್ನು ತಣ್ಣಗಾದ ನಂತರ ತಲೆಗೆ ಹಾಕಿಕೊಳ್ಳುವುದರಿಂದ ಕೂದಲು ಉದುರುವುದನ್ನು ತಡೆಯಬಹುದು. ಮತ್ತು ಕೂದಲು ಸೊಂಪಾಗಿ ಬೆಳೆಯುತ್ತದೆ. ಹಾಗು ಅದರಿಂದ ಕೂದಲಿಗೆ ಹೊಳಪು ಬರುತ್ತದೆ.