
ಮಡಿಕೇರಿ ಆ.29 NEWS DESK : ಇಂದು August 29 ರಾಷ್ಟ್ರೀಯ ಕ್ರೀಡಾ ದಿನ. ಕ್ರೀಡೆ ಇದು ಎರಡು ಅಕ್ಷರವಾದರೂ ಇದರ ಹಿನ್ನಲೆ ಮತ್ತು ಮಹತ್ವವಾದದ್ದು, ಪುರಾತನವಾದದ್ದು. ಕ್ರೀಡೆ ಮನುಷ್ಯನ ಹುಟ್ಟಿನೊಂದಿಗೆ ಹುಟ್ಟಿದೆ ಎನ್ನಬಹುದು. ಮೊದಲಿಗೆ ಸಮಯ ಕಳೆಯಲು ಕ್ರೀಡೆ ಒಂದು ಮಾರ್ಗವಾಗಿತ್ತು. ನಾಗರೀಕತೆ ಬೆಳೆದಂತೆ ಕ್ರೀಡೆ ಬಲಪ್ರದರ್ಶನದ ಒಂದು ವೇದಿಕೆಯಾಯಿತು. ಇದು ವಿವಿಧ ರೀತಿಯಲ್ಲಿ ಬೆಳವಣಿಗೆ ಕಂಡಿತು. ಪುರಾಣದಲ್ಲಿ ಕುಸ್ತಿ, ಪಗಡೆ ಆಟ, ಬಿಲ್ಲು ವಿದ್ಯೆ ಉಲ್ಲೇಖವಾಗಿದ್ದು ಅದು ಹಾಗೇ. ಮುಂದುವರಿದು ಇತಿಹಾಸದಲ್ಲೂ ರಾಜಾಮಹಾರಾಜರ ಕಾಲದಲ್ಲೂ ಉಲೇಖವಿದ್ದು, ಇಂದಿಗೂ ಕೆಲವು ಕ್ರೀಡೆಗಳನ್ನು ಆಡುವುದು ನಾವು ಕಾಣಬಹುದು. ಇಂದು ಕ್ರೀಡೆ ಮನುಕುಲದ ಒಂದು ಅವಿಭಾಜ್ಯ ಅಂಗವಾಗಿದೆ. ವಿಶ್ವದಲ್ಲಿ ಯುದ್ಧಭೂಮಿಯಲ್ಲಿ ಬಿಟ್ಟರೆ ಒಂದು ದೇಶದ ಬಲವನ್ನು ಅಳೆಯುವುದು ಕ್ರೀಡಾ ಮೈದಾನದಲ್ಲಿ. ಆರಂಭದಲ್ಲಿ ಓಲಂಪಿಕ್ಸ್ ಒಂದು ಪ್ರತಿಷ್ಠೆಯ ವೇದಿಕೆಯಾಗಿತ್ತು. ಅದಕ್ಕಾಗಿ ಯುರೋಪ್ ದೇಶಗಳಲ್ಲಿ ವರ್ಷಗಳಿಂದ ತಯಾರಿ ನಡೆಸುತ್ತಿದ್ದರು. ಆರಂಭದ ವರ್ಷಗಳಲ್ಲಿ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಲು ಅಮೇರಿಕಾ ಸಂಸ್ಥಾನ ರಷ್ಯಾ ಒಕ್ಕೂಟ ನಡುವೆ ತೀವ್ರ ಪೈಪೋಟಿ ನಡೆಯುತ್ತಿತ್ತು. ಅಮೇರಿಕಾ ಅಥ್ಲೆಟಿಕ್ಸ್ನಲ್ಲಿ ಮೇಲುಗೈ ಸಾಧಿಸುತ್ತಿದ್ದರೆ ರಷ್ಯಾ ಒಳಾಂಗಣ ಕ್ರೀಡೆಯಲ್ಲಿ ಮೇಲುಗೈ ಸಾದಿಸುತ್ತಿತ್ತು. ವಿಶೇಷವೆಂದರೆ ಆಫ್ರಿಕಾದ ದೇಶದ ಕ್ರೀಡಾಪಟುಗಳು ಅಮೇರಿಕಾ ದೇಶವನ್ನು ಪ್ರತಿನಿಧಿಸಿ ಚರಿತ್ರೆಯನ್ನು ಬರೆದಿದ್ದಾರೆ. ನಂತರದ ದಿನಗಳಲ್ಲಿ ಏಷ್ಯದ ದೇಶಗಳಾದ ಜಪಾನ್, ಚೀನಾ, ಕೊರಿಯಾ ದೇಶಗಳು ಯುರೋಪ್ ದೇಶಗಳಿಗೆ ಪೈಪೋಟಿ ನೀಡಲು ನೀಡಲು ಆರಂಭಿಸಿತು. ವಿಶೇಷವೇನೆಂದರೆ ಇಂದು ಅನೇಕ ರಾಷ್ಟ್ರಗಳು ಭದ್ರತೆ ನೀಡುವಷ್ಟು ಆದ್ಯತೆ, ಪ್ರಾಮುಖ್ಯತೆ, ಹಣ, ಇತರೆ ಸಂಪನ್ಮೂಲಗಳನ್ನು ಕ್ರೀಡೆಗೆ ನೀಡುವುದನ್ನು ಗಮನಿಸಿದರೆ ಅದರ ಪ್ರಾಮುಖ್ಯತೆ ಅರಿವುವಾಗುತ್ತದೆ. ನಂತರದ ದಿನಗಳಲ್ಲಿ ಕಾಮನ್ವೆಲ್ತ್ ಏಶಿಯನ್ ಮುಂತಾದ ಕ್ರೀಡಾಕೂಟಗಳು ಆರಂಭವಾದರೂ ಒಲಂಪಿಕ್ಸ್ ಇಂದಿಗೂ ಜನಪ್ರಿಯತೆ ಉಳಿಸಿಕೊಂಡಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕ್ರೀಡೆಯ ಮೇಲಿನ ಆಸಕ್ತಿ ಜನರಿಂದ ದೂರವಾಗುತ್ತಿದೆ ಅನಿಸುತ್ತದೆ. ಇಂದು ಪ್ರೋತ್ಸಾಹ, ಅವಕಾಶ, ಸೌಲಭ್ಯ ಎಲ್ಲಾ ದೊರೆಯುತಿದ್ದರೂ ಕ್ರೀಡಾ ಕ್ಷೇತಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಅದಕ್ಕೆ ಹಲವಾರು ಕಾರಣಗಳಿವೆ. 1990 ರವರೆಗೂ ಕ್ರೀಡೆಯ ಸುವರ್ಣ ಯುಗ ಎನ್ನಬಹುದು. ಅಂದು ಒಲಂಪಿಕ್ಸ್, ಫುಟ್ಬಾಲ್ ವಿಶ್ವಕಪ್, ಕ್ರಿಕೆಟ್ ವಿಶ್ವಕಪ್, ಟೆನಿಸ್ನಲ್ಲಿ ವಿಂಬಲ್ಡನ್ ಬ್ಯಾಡ್ಮೆಂಟನ್ ಪಂದ್ಯಾಟಗಳು ಆರಂಭವಾದರೆ ಇಡೀ ವಿಶ್ವದ ಎಲ್ಲೆಡೇ ಕ್ರೀಡೆಯ ಕಲರವ. ಜನರ ಗಮನವೆಲ್ಲ ಆ ಕಡೆ. ಅದರದೇ ಮಾತು ಚರ್ಚೆ. ಈಗ ಅಂತ ವಾತಾವರಣ ಇಲ್ಲ. ಕ್ರೀಡೆಗೇ ಅಂದು ಜನರಿಗೆ ಕ್ರೀಡೆ ಒಂದು ರೀತಿಯ ಹವ್ಯಾಸವಾಗಿತ್ತು. ಅದು ಆಟಗಾರರೇ ಇರಲಿ, ಪ್ರೇಕ್ಷಕರೇ ಇರಲಿ ಅಥವಾ ಪ್ರಯೋಜಕರೇ ಇರಲಿ ತಾವೇ ಸ್ವಂತ ಖರ್ಚಿನಿಂದ ಪಂದ್ಯಾಟಗಳನ್ನು ಆಯೋಜಿಸುತ್ತಿದ್ದರು. ಆಟಗಾರರು ತಮ್ಮ ಸ್ವಂತ ಖರ್ಚಿನಿಂದ ಭಾಗವಹಿಸುತ್ತಿದ್ದರು. ಅಂದು ಎಲ್ಲಾ ಗ್ರಾಮೀಣ ಕ್ರೀಡಾಕೂಟಗಳನ್ನು, ಶಾಲೆಗಳ ಕ್ರೀಡಾಕೂಟಗಳನ್ನು ಗ್ರಾಮಸ್ಥರೇ ಆಯೋಜಿಸುತ್ತಿದ್ದರು. ಅಂದು, ಇಂದು ಎಲ್ಲದಕ್ಕೂ ಸರಕಾರದ ಕಡೆ ಮುಖ ಮಾಡುವುದು ಅಭ್ಯಾಸ ಆಗಿ ಹೋಗಿದೆ. ಮೂಲಭೂತ ಸೌಲಭ್ಯಗಳ ಕೊರತೆಯ ನಡುವೆಯು ಅದ್ಬುತ ಪ್ರತಿಭಾವಂತ ಕ್ರೀಡಾಪಟುಗಳು ಹೊರ ಹೊಮ್ಮುತ್ತಿದ್ದರು. ಇಂದು ಎಲ್ಲಾ ಇದ್ದರೂ ಮನದಲ್ಲಿ ಉಳಿಯುವ ಆಟಗಾರರು ಬಹಳ ಕಡಿಮೆ. ಅಂದು ಪ್ರತಿ ಒಂದು ಕ್ರೀಡೆಯಲ್ಲಿ ಅದ್ಬುತ ಪ್ರತಿಭೆಗಳು ಹೊರ ಹೊಮ್ಮಿದ ಸಮಯ. 1990ರ ತನಕ ಉದಾಹರಣೆಗೇ ಹಾಕಿಯಲ್ಲಿ ಧಾನ್ಚಂದ್, ಫುಟ್ಬಾಲ್ನಲ್ಲಿ ಪಿಲೇ, ಹೀಗೆ ಎಲ್ಲಾ ಕ್ರೀಡೆಯಲ್ಲಿ ದಂತಕಥೆಯಾದ ಆಟಗಾರರಿದ್ದಾರೆ. ಅವರ ಹೆಸರುಗಳ ಪಟ್ಟಿ ಮಾಡುತ್ತಾ ಹೋದರೆ ಒಂದು ಪುಸ್ತಕ ಬರೆಯಹುದು. ನಂತರದ ದಿನಗಳಲ್ಲಿ ಕ್ರೀಡೆಗೆ ಆಧುನಿಕತೆ, ತಾಂತ್ರಿಕತೆ ಕ್ರೀಡಾಲೋಕವನ್ನು ಆವರಿಸಿತ್ತು. ಅತ್ಯಾಧುನಿಕ ಕ್ರೀಡಾ ಸಲಕರಣೆ, ಕೃತಕ ಮೈದಾನಗಳ ನಿರ್ಮಾಣ ಬಳಕೆ ಕಾರಣಗಳಿಂದಾಗಿ ಕ್ರೀಡೆ ಬಡವರ ಪಾಲಿಗೆ ಗಗನ ಕುಸುಮವಾಯಿತು. ನಗರ ಪ್ರದೇಶಗಳಲ್ಲಿ ತರಬೇತಿ ನೆಪದಲ್ಲಿ ಅಕಾಡೆಮಿಗಳ ಸ್ಥಾಪನೆಯಾಯಿತು. ಅವುಗಳು ಕೆಲವು ಉದಾಹರಣೆ ಬಿಟ್ಟರೆ ಕೆಲವರಿಗೆ ಹಣ ಮಾಡುವ ಕೇಂದ್ರವಾಯಿತೇ ಹೊರತು ಕ್ರೀಡಾಪಟುಗಳ ಹೊರ ತರುವ ಕೇಂದ್ರಗಳಾಗಲಿಲ್ಲ. ಏಕೆಂದರೆ ಇವುಗಳ ದುಬಾರಿ ಶುಲ್ಕಗಳು ಶ್ರೀಮಂತರ ಪ್ರತಿಷ್ಠೆ ಕೇಂದ್ರಗಳಾದವು. ಮಕ್ಕಳನ್ನು ಸ್ವಪ್ರತಿಷ್ಠೆಗೇ ಇಂತಹ ಅಕಾಡೆಮಿಗೆ ಸೇರಿಸುತ್ತಿದ್ದರು. ಇಲ್ಲಿ ಮಕ್ಕಳ ಆಸಕ್ತಿಗಿಂತ ಪೋಷಕರಸ್ವಪ್ರತಿಷ್ಠೆಯೇ ಜಾಸ್ತಿ ಇತ್ತು. ಪರಿಣಾಮ ಪ್ರತಿಭೆಗಳನ್ನು ಹುಟ್ಟು ಹಾಕುವಲ್ಲಿ ವಿಫಲವಾಯಿತು. ಯಾವುದೇ ವಿದ್ಯೆ ಇಷ್ಟ ಪಟ್ಟು ಕಲಿಯಬೇಕು. ಕಷ್ಟಪಟ್ಟು ಅಲ್ಲ. ಹಾಗೇ ನೋಡಿದರೆ ಸರ್ಕಾರ ಕ್ರೀಡಾ ಇಲಾಖೆ ಮುಖಾಂತರ ಆರಂಭವಾದ ಕ್ರೀಡಾ ಹಾಸ್ಟೆಲ್ಗಳು ಮೂಲಭೂತ ಸೌಲಭ್ಯ ಕೊರತೆ ನಡುವೆಯು ಸಾಕಷ್ಟು ಕ್ರೀಡಾಪಟು ಗಳನ್ನು ದೇಶಕ್ಕೆ ನೀಡುವಲ್ಲಿ ಯಶಸ್ವಿಯಾಯಿತು. ಕಾರಣವೆಂದರೆ ಇಲ್ಲಿ ಬಡವರ, ಮಾಧ್ಯಮ ವರ್ಗದ ಮಕ್ಕಳು ಇಷ್ಟ ಪಟ್ಟು ಸೇರಿ ಕಷ್ಟ ಪಟ್ಟು ಆಟ ಕಲಿಯುತ್ತಿದ್ದರು. ಇಂದಿನ ದಿನಗಳಲ್ಲಿ ಕ್ರೀಡಾ ಕ್ಷೇತ್ರದತಂಹ ಯುವ ಪೀಳಿಗೆ ಆಸಕ್ತಿ ತೋರುತ್ತಿಲ್ಲ. ಪೋಷಕರು ಕೂಡ ತಮ್ಮ ಮಕ್ಕಳನ್ನು ಕ್ರೀಡಾಕ್ಷೇತ್ರಕ್ಕೆ ಕಳುಹಿಸಲು ಹಿಂಜರಿಯುತ್ತಿದ್ದಾರೆ. ಅದಕ್ಕೆ ಅನೇಕ ಕಾರಣಗಳಿವೆ. ಇಂದಿನ ಶೈಕ್ಷಣಿಕ ವ್ಯವಸ್ಥೆ, ಕ್ರೀಡೆಯಲ್ಲಿನ ಸಲಕರಣೆಗಳು ದುಬಾರಿಯಾದದ್ದು. ಅದರಲ್ಲಿ ತಮ್ಮ ಜೀವನ ರೂಪಿಸಿಕೊಳ್ಳಲು ಸಾಧ್ಯವಾಗದೇ ಇರುವುದು. ಹಿಂದಿನ ದಿನಗಳಲ್ಲಿ ಸರ್ಕಾರ, ಅರೆ ಸರ್ಕಾರ ಸಂಸ್ಥೆಗಳಲ್ಲಿ, ಸರ್ಕಾರಿ ಫ್ಯಾಕ್ಟರಿ ಗಳಲ್ಲಿ, ಭಾರತಿಯ ಸೇನೆಯಲ್ಲಿ ಭಾರತೀಯ ರೈಲ್ವೆಯಲ್ಲಿ, ಬ್ಯಾಂಕ್ಗಳಲ್ಲಿ, ಪೊಲೀಸ್ ಇಲಾಖೆಗಳಲ್ಲಿ ಅಗಾಧವಾದ ಪ್ರೋತ್ಸಾಹ ಮತ್ತು ಕ್ರೀಡಾಪಟುಗಳಿಗೆ ಉದ್ಯೋಗಗಳು ಮೀಸಲಾತಿ ಇರುತ್ತಿತ್ತು. ಈಗ ಸಂಪೂರ್ಣ ಕಾಣೆಯಾಗಿದೆ. ಭಾರತಿಯ ಸೇನೆಯಲ್ಲಿ, ಸೇನೆಗೆ ಸೇರಿ ಸ್ವಲ್ಪ ಮಟ್ಟಿಗೆ ಕ್ರೀಡೆಗೆ ಇನ್ನು ಅವಕಾಶ ಜೀವಂತವಾಗಿದೆ. ಅದಕ್ಕೆ ಪೂರಕವಾದ ವಾತಾವರಣ ನಮ್ಮ ದೇಶದಲ್ಲಿ ಕಂಡು ಬರುತ್ತಿತ್ತು. ಕೇವಲ 90 ರ ದಶಕದಲ್ಲಿ ನಮ್ಮ ದೇಶದಲ್ಲಿ ಪುಟ್ಬಾಲ್ ಮತ್ತು ಹಾಕಿ ಎಷ್ಟು ಜನಪ್ರಿಯ ಕ್ರೀಡೆ ಆಗಿತ್ತು ಅಂದರೆ ಎಷ್ಟೋ ಖಾಸಗಿ ಕ್ಲಬ್ಗಳ ತಂಡಗಳು ಇದ್ದವು ಹಾಗೂ ಅರೆ ಸರ್ಕಾರಿ ಸೇನೆಯ ತಂಡಗಳು ಇದ್ದವು. ಉದಾಹರಣೆಗೆ ಫುಟ್ಬಾಲ್ನಲ್ಲಿ ಮೋಹನ್ ಭಾಗನ್ ಈಸ್ಟ್ ಬೆಂಗಾಲ್, ಮೊಹಮ್ಮದ್ ಸ್ಪೋಟಿಂಗ್, ಕೇರಳ ಪೊಲೀಸ್, ಐ.ಟಿ.ಐ ಹಾಗೆ ಹಾಕಿಯಲ್ಲಿ ಇಂಡಿಯನ್ ಏರ್ಲೈನ್, ಏರ್ ಇಂಡಿಯಾ ರೈಲ್ವೇಸ್, ಸರ್ವಿಸಸ್ಟ್ ಪಂಜಾಬ್ ಪೊಲೀಸ್ ಹೀಗೆ ಹಲವಾರು ತಂಡ ಇಂದು ಕಾಣೆಯಾಗಿದೇ ಅದರೊಡನೆ ಲೀಗ್ ಪಂದ್ಯಾಟಗಳು ಇಂದು ಕಾಣೆಯಾಗಿದೆ. ಕೇಂದ್ರ, ರಾಜ್ಯ ಸರಕಾರಗಳು ಇಂದು ಕ್ರೀಡೆಯ ಬಗ್ಗೆ ಒಲವು ತೋರಿಸುತ್ತಿಲ್ಲ. ಬರೀ ಸ್ವಂತ ಪ್ರತಿಭೆಯಿಂದ ಸ್ವಂತ ಖರ್ಚಿನಿಂದ ಸಾಲ ಸೋಲ ಮಾಡಿ ಮೇಲೆ ಬಂದವರನ್ನು ಕರೆದು ಬೆನ್ನುತಟ್ಟಿ ಜೊತೆಯಲ್ಲಿ ನಿಂತು ಪೋಟೊ ತೆಗೆಸುವ ಕಾರ್ಯವನ್ನು ಮಾಡುವ ಬದಲು ಪದಕ ಗೆದ್ದಾಗ ಕೊಡುವ ಹಣಕ್ಕಿಂತ ಉತ್ತಮ ತರಬೇತಿ ಕೇಂದ್ರಗಳನ್ನು ಆರಂಭಿಸಿದರೆ ಅಂತರಾಷ್ಟ್ರೀಯ ಕೀಡಾಕೂಟಗಳಲ್ಲಿ ಇನ್ನಷ್ಟು ಪದಕಗಳ ನಿರೀಕ್ಷೆ ಮಾಡಬಹುದು. ಒರಿಸ್ಸಾದ ಮಾಜಿಮುಖ್ಯಮಂತ್ರಿ ಬಿಜು ಪಟ್ನಾಯ್ಕ್ ಮಾತ್ರ ದೇಶದಲ್ಲಿ ಕ್ರೀಡೆಗೆ ಪ್ರೋತ್ಸಾಹಿಸಿ ಅದರಲ್ಲೂ ದೇಶದ ಹಾಕಿ ತಂಡಕ್ಕೆ ಪ್ರಾಯೋಜಕತ್ವವನ್ನು ನೀಡಿದ ಹೆಮ್ಮೆ ನಮ್ಮದು ಇದೆಲ್ಲ ಕ್ರೀಡೆಯ ಅವನತಯ ಉದಾಹರಣೆಯಾಗಿದೆ. ಪರಿಸ್ಥಿತಿ ಇದೇ ರೀತಿಯಲ್ಲಿ ಮುಂದುವರೆದರೆ ಹಿಂದಿನ ದಿನಗಳ ಗತವೈಭವ ಮರುಕಳಿಸುವುದು ಇರಲಿ, ಮುಂದಿನ ವರ್ಷಗಳಲ್ಲಿ ಅನೇಕ ಕ್ರೀಡೆಗಳು ಇತಿಹಾಸದ ಪುಟ ಸೇರಿ ಹೋಗುವುದರಲ್ಲಿ ಸಂಶಯವಿಲ್ಲ. ಈಗಾಗಲೇ ಅನೇಕ ಗ್ರಾಮೀಣ ಕ್ರೀಡೆಗಳು ಇತಿಹಾಸದ ಪುಟಗಳಲ್ಲಿ ಸೇರಿ ಹೋದ ಉದಾಹರಣೆ ನಮ್ಮ ಕಣ್ಣ ಮುಂದೆ ಇದೆ.
ಬಾಳೆಯಡ ಕಿಶನ್ ಪೂವಯ್ಯ
ಲೇಖಕರು ಮತ್ತು ವಕೀಲರು
ಮಡಿಕೇರಿ
ಮೋ:- 9448899554







