
ಅಮ್ಮತ್ತಿ ಜು.26 NEWS DESK : ಕೊಡಗಿನ ಭೂ ಮತ್ತು ನಿವೇಶನ ರಹಿತ ಬಡ ಕೂಲಿ ಕಾರ್ಮಿಕರ ಕುಟುಂಬಗಳ ಬದುಕಿಗೆ ವಿರಾಜಪೇಟೆ ಶಾಸಕರರಾದ ಎ.ಎಸ್ ಪೊನ್ನಣ್ಣ ಅವರು ಮಾಡುತ್ತಿರುವ ಜನಪರ ಕಾರ್ಯಗಳು ಯುವ ಜನತೆಗೆ ಮಾದರಿಯಾಗುತ್ತಿದೆ. ಕೊಡಗಿನಂತಹ ಕುಖ್ಯಾತ ಜಿಲ್ಲೆಗೆ ಇಂತಹ ಶಾಸಕರ ಅಗತ್ಯವಿದೆ ಎಂದು ಬಹುಜನ ಕಾರ್ಮಿಕರ ಸಂಘಟನೆಯ ಜಿಲ್ಲಾಧ್ಯಕ್ಷರಾದ ಕೆ.ಮೊಣ್ಣಪ್ಪ ಅವರು ಪ್ರಸಂಶಿಸಿದರು. ವಿರಾಜಪೇಟೆಯ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕೊಡಗಿನ ಕಟ್ಟ ಕಡೆಯ ಜನಾಂಗದ ಧ್ವನಿ, ನ್ಯಾಯವಾದಿ, ತೀಕ್ಷ್ಣ ಮಾತಿನ ಚತುರ, ಬಡವರ ಜೀವಾಳವಾಗಿದ್ದ ಎ.ಕೆ.ಸುಬ್ಬಯ್ಯ ಅವರ ಪ್ರತಿ ರೂಪದಂತೆ ಭಾಷವಾಗುತ್ತಿರುವ ತಂದೆಗೆ ತಕ್ಕ ಮಗನೆನಿಸಿರುವ ಕೊಡಗಿನ ಜನಪರ ನಾಯಕರಾಗಿರುವ ಎ.ಎಸ್ ಪೊನ್ನಣ್ಣ ಅವರಿಗೆ ಕೊಡಗಿನ ನಿವೇಶನ ರಹಿತ, ಭೂ ರಹಿತ, ಶೋಷಿತರ ಪರವಾಗಿ ಮತ್ತು ಬಹುಜನ ಕಾರ್ಮಿಕರ ಸಂಘಟನೆಯ ಪರವಾಗಿ ಧನ್ಯವಾದಗಳನ್ನು ತಿಳಿಸಿದರು. ಕ್ಷೇತ್ರದಲ್ಲಿ 1559 ಆದಿವಾಸಿ ಕುಟುಂಬಗಳಿಗೆ ನಿವೇಶನ ಹಕ್ಕು ಪತ್ರ ವಿತರಣೆ ಹಾಗೂ 20 ಸಾವಿರ ನಿವೇಶನ ರಹಿತರಿಗೆ ಸವಲತ್ತು ಕಲ್ಪಿಸಲು ಶಾಸಕ ಎ.ಎಸ್. ಪೊನ್ನಣ್ಣ ಅವರು ಮುಂದಾಗಿರುವುದು ಸಂತಸದ ವಿಚಾರ ಎಂದರು. ಕಳೆದ 25 ವರ್ಷಗಳಿಂದ ಕೊಡಗಿನಲ್ಲಿ ಆದಿವಾಸಿಗಳು ಸವಲತ್ತುಗಳಿಂದ ವಂಚಿತರಾಗಿದ್ದಾರೆ. ಹೀನಾಯ ಬದುಕು ನಡೆಸುತ್ತಿರುವ ಆದಿವಾಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಶಾಸಕ ಎ.ಎಸ್.ಪೊನ್ನಣ್ಣ ಆಶಾಕಿರಣದಂತೆ ಗೋಚರಿಸುತ್ತಿದ್ದಾರೆ ಎಂದರು. ಕೊಡಗು ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ಬಡ ಕಾರ್ಮಿಕರು ಲೈನು ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಸ್ವಂತ ಜಾಗ, ವಸತಿ ಇಲ್ಲದೆ ಶೋಷಿತರಾಗಿ ಉಳಿದಿದ್ದಾರೆ. ಈ ಕುಟುಂಬಗಳಿಗೆ ಐದೂ ತಾಲ್ಲೂಕುಗಳ ಗ್ರಾ.ಪಂ. ವ್ಯಾಪ್ತಿಯ ಸರ್ಕಾರಿ ಕಂದಾಯ ಭೂಮಿಯ ಸರ್ವೆ ನಡೆಸಿ ಪಂಚಾಯಿತಿ ವ್ಯಾಪ್ತಿಯಲ್ಲಿ ಕನಿಷ್ಠ 50 ಎಕರೆ ಜಾಗವನ್ನು ಗುರುತಿಸಿ ನಿವೇಶನ ಒದಗಿಸಬೇಕು ಎಂದು ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಮಿತಿಗಳ ಉಪಾಧ್ಯಕ್ಷ ಹೆಚ್.ಜಿ. ಮಹೇಶ್, ಹೋಬಳಿ ಅಧ್ಯಕ್ಷ ಹೆಚ್.ಪಾಪಣ್ಣ, ನಿವೇಶನ ಹೋರಾಟಗಾರರಾದ ಎಂ.ಎಸ್.ಗೀತಾ ಮತ್ತು ಕುಸುಮಾವತಿ ಉಪಸ್ಥಿತರಿದ್ದರು.
ವರದಿ : ಎಂ.ರಂಜಿತ್ ಮೌರ್ಯ








