
ಮಡಿಕೇರಿ NEWS DESK ಜು.27 : ಕನ್ನಡ ಸಾಹಿತ್ಯ ಪರಿಷತ್ತಿನ ಮೂರ್ನಾಡು ಹೋಬಳಿ ಘಟಕದ ವತಿಯಿಂದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಮೂರ್ನಾಡುವಿನ ಪಿಎಂ ಶ್ರೀ ಮಾದರಿ ಪ್ರಾಥಮಿಕ ಶಾಲೆಯ ಸಹಯೋಗದಲ್ಲಿ ದಿ.ಕೊಕ್ಕಲೆರ ಚಂಗಪ್ಪ ಅವರ ಜ್ಞಾಪಕಾರ್ಥ ದತ್ತಿನಿಧಿ ಸ್ವೀಕಾರ, ಹಿರಿಯ ಸಾಹಿತಿ ಕಿಗ್ಗಾಲು ಎಸ್.ಗಿರೀಶ್ ಅವರು ರಚಿಸಿರುವ ಪತ್ತೆದಾರಿ ಕಾದಂಬರಿ “ಕಣ್ಮರೆಯಾದ ಕಾಂತಮಣಿ” ಪುಸ್ತಕ ಬಿಡುಗಡೆ ಮತ್ತು ಮೂರ್ನಾಡು ಹೋಬಳಿ ಶಾಲೆಗಳ ಶಿಕ್ಷಕರುಗಳಿಗೆ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು. ಮೂರ್ನಾಡುವಿನ ಪಿಎಂ ಶ್ರೀ ಮಾದರಿ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಅವರು ಜಿಲ್ಲೆಯಲ್ಲಿ 50ಕ್ಕೂ ಹೆಚ್ಚು ದತ್ತಿ ಪ್ರಶಸ್ತಿಗಳಿದ್ದು, ಮೂರ್ನಾಡಿನಲ್ಲಿ ಇದೇ ಮೊದಲ ಬಾರಿಗೆ ದತ್ತಿನಿಧಿ ಸ್ಥಾಪನೆ ಮಾಡಿರುವುದು ಪ್ರಶಂಸನೀಯವೆಂದರು.
ಇಲ್ಲಿಯವರೆಗೆ ಎಲ್ಲಾ ಕಡೆ ಮಕ್ಕಳಿಗಾಗಿ ಪ್ರಬಂಧ ಸ್ಪರ್ಧೆ ನಡೆಯುತ್ತಿತ್ತು, ಇದೀಗ ಮೂರ್ನಾಡು ಹೋಬಳಿ ಘಟಕದ ವತಿಯಿಂದ ಮೊದಲ ಬಾರಿಗೆ ಶಿಕ್ಷಕರುಗಳಿಗೆ ಕನ್ನಡ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿರುವುದು ವಿಭಿನ್ನ ಚಿಂತನೆಯಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಜಿಲ್ಲಾವ್ಯಾಪಿ ವಿಸ್ತರಿಸಲಾಗುವುದು ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಮೂರ್ನಾಡು ಹೋಬಳಿ ಘಟಕದ ಅಧ್ಯಕ್ಷೆ ಈರಮಂಡ ಹರಿಣಿ ವಿಜಯ್ ಅವರು ಮುಂದಿನ ದಿನಗಳಲ್ಲಿ ಸಾಹಿತ್ಯದ ಬೆಳವಣಿಗೆಗೆ ಪೂರಕವಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು. ಮೂರ್ನಾಡು ಹೋಬಳಿ ಘಟಕದ ಮೂಲಕ ಕನ್ನಡ ಸಾಹಿತ್ಯ ಲೋಕವನ್ನು ಬೆಳೆಸಲು ಸ್ಥಳೀಯ ನಾಗರೀಕರು, ಸಂಘ ಸಂಸ್ಥೆಗಳು, ಪದಾಧಿಕಾರಿಗಳು ತುಂಬಾ ಸಹಕಾರ ನೀಡುತ್ತಿದ್ದಾರೆ. ಇಂದಿನ ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿ ಕನ್ನಡಾಭಿಮಾನಿಗಳು ಆಗಮಿಸಿದ್ದಾರೆ. ದಿ.ಕೊಕ್ಕಲೆರ ಚಂಗಪ್ಪ ಅವರ ಜ್ಞಾಪಕಾರ್ಥ ದತ್ತಿನಿಧಿ ಸ್ಥಾಪಿಸಿದ ಕೊಕ್ಕಲೆರ ಬೋಜಮ್ಮ ಹಾಗೂ ಮಕ್ಕಳಿಗೆ ಮತ್ತು ಇಂದಿನ ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದ ದಾನಿಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು. ಮಡಿಕೇರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕಡ್ಲೆರ ತುಳಸಿ ಮೋಹನ್ ಮಾತನಾಡಿ ಮೂರ್ನಾಡಿನ ಜನರ ಕನ್ನಡ ಪ್ರೇಮ ಇತರರಿಗೆ ಮಾದರಿಯಾಗಿದೆ, ಮೂರ್ನಾಡು ಹೋಬಳಿ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪರಿಶ್ರಮದಿಂದ ಕನ್ನಡಪರ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ಮೂಡಿ ಬರುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮೂರ್ನಾಡುವಿನ ನಿವೃತ್ತ ದೈಹಿಕ ಶಿಕ್ಷಕರು ಹಾಗೂ ಕಾಫಿ ಬೆಳೆಗಾರರಾದ ಕಂಬಿರಂಡ ಕಿಟ್ಟು ಕಾಳಪ್ಪ ಅವರು ಮಾತನಾಡಿ ಕನ್ನಡನಾಡು ನುಡಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಕಾರ್ಯಪ್ರವೃತ್ತರಾಗಬೇಕು. ಪೋಷಕರು ಮಕ್ಕಳಲ್ಲಿ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಮೂಡಿಸಬೇಕು ಎಂದು ಕರೆ ನೀಡಿದರು. ‘ಕಣ್ಮರೆಯಾದ ಕಾಂತಮಣಿ’ ಕಾದಂಬರಿಯ ರಚನೆಕಾರ ಹಿರಿಯ ಸಾಹಿತಿ ಕಿಗ್ಗಾಲು ಎಸ್.ಗಿರೀಶ್ ಅವರು ಮಾತನಾಡಿ ಸಾಹಿತ್ಯ ಕ್ಷೇತ್ರದ ಬೆಳವಣಿಗೆಯಲ್ಲಿ ಪುಸ್ತಕಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅಭಿಪ್ರಾಯಪಟ್ಟರು. ಪ್ರಬಂಧ ಸ್ಪರ್ಧೆಯ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ ಹಿರಿಯ ಪತ್ರಕರ್ತ ಕುಡೆಕಲ್ ಸಂತೋಷ್ ಹಾಗೂ ಬರಹಗಾರ್ತಿ ಸುಶೀಲ ಅವರು ಮಾತನಾಡಿ ಸ್ಪರ್ಧೆಗೆ 14 ಪ್ರಬಂಧಗಳು ಬಂದಿದ್ದು, ಎಲ್ಲವೂ ಉತ್ತಮ ಬರಹಗಳಾಗಿದ್ದವು. ತೀರ್ಪು ನೀಡಲು ಕಷ್ಟವಾಯಿತು, ಈ ರೀತಿಯ ಕನ್ನಡ ಪ್ರೇಮ ಮತ್ತು ಆಸಕ್ತಿ ಎಲ್ಲರಲ್ಲೂ ಮೂಡಬೇಕು ಎಂದರು. ಮೂರ್ನಾಡು ಗ್ರಾ.ಪಂ ಅಧ್ಯಕ್ಷ ಬಿ.ಎಸ್.ಕುಶನ್ ರೈ ಅವರು ಮಾತನಾಡಿ ಮೂರ್ನಾಡಿನಲ್ಲಿ ನಿರಂತರವಾಗಿ ಕನ್ನಡಪರ ಕಾರ್ಯಕ್ರಮಗಳು ನಡೆಯುತ್ತಿದ್ದು, ಸಾಹಿತ್ಯ ಪರಿಷತ್, ಬರಹಗಾರರು ಹಾಗೂ ಸ್ಥಳೀಯ ಜನರ ಕನ್ನಡಾಭಿಮಾನ ಅತ್ಯಂತ ಶ್ಲಾಘನೀಯವೆಂದು ಮೆಚ್ಚುಗೆ ವ್ಯಕ್ತಪಡಿಸಿದರು. ಹೊದ್ದೂರು ಗ್ರಾ.ಪಂ ಅಧ್ಯಕ್ಷ ಎಚ್.ಎ.ಹಂಸ ಅವರು ಮಾತನಾಡಿ ಕನ್ನಡವನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬರು ಸಮಯವನ್ನು ಮೀಸಲಿಟ್ಟು ಶ್ರಮ ವಹಿಸಬೇಕು, ಗ್ರಾ.ಪಂ ಗ್ರಂಥಾಲಯಗಳಲ್ಲಿ ಜಿಲ್ಲೆಯ ಸಾಹಿತಿಗಳ ಪುಸ್ತಕಗಳನ್ನು ಇಡುವಂತಾಗಬೇಕು. ಕನ್ನಡಪರ ಕಾರ್ಯಕ್ರಮಗಳಿಗೆ ನನ್ನ ಸಂಪೂರ್ಣ ಸಹಕಾರವಿದೆ ಎಂದು ತಿಳಿಸಿದರು. *ದತ್ತಿನಿಧಿ ಹಸ್ತಾಂತರ*
ದಿ.ಕೊಕ್ಕಲೆರ ಚಂಗಪ್ಪ ಅವರ ಜ್ಞಾಪಕಾರ್ಥವಾಗಿ ಮೂರ್ನಾಡುವಿನ ನಿವೃತ್ತ ಶಿಕ್ಷಕಿ ಕೊಕ್ಕಲೆರ ಬೋಜಮ್ಮ ಹಾಗೂ ಮಕ್ಕಳು ಶಿಕ್ಷಕರ ಪ್ರಬಂಧ ಸ್ಪರ್ಧೆಗಾಗಿ ಸ್ಥಾಪಿಸಿರುವ ರೂ.30 ಸಾವಿರದ ದತ್ತಿನಿಧಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮೂರ್ನಾಡು ಹೋಬಳಿ ಘಟಕದ ಅಧ್ಯಕ್ಷೆ ಈರಮಂಡ ಹರಿಣಿ ವಿಜಯ್ ಅವರು ಪರಿಷತ್ ನ ಜಿಲ್ಲಾಧ್ಯಕ್ಷ ಎಂ.ಪಿ.ಕೇಶವ ಕಾಮತ್ ಅವರಿಗೆ ಹಸ್ತಾಂತರಿಸಿದರು. ಹಿರಿಯ ಸಾಹಿತಿ ಕಿಗ್ಗಾಲು ಎಸ್.ಗಿರೀಶ್ ಅವರು ಬರೆದಿರುವ 23ನೇ ಪುಸ್ತಕ ‘ಕಣ್ಮರೆಯಾದ ಕಾಂತಮಣಿ’ಯನ್ನು ನಿವೃತ್ತ ಶಿಕ್ಷಕಿ ಹಾಗೂ ಸಾಹಿತಿ ದಂಬೆಕೋಡಿ ಸುಶೀಲ ಅವರು ಬಿಡುಗಡೆ ಮಾಡಿದರು. “ಕನ್ನಡ ಭಾಷೆಯ ಬೆಳವಣಿಗೆಗೆ ಮಾರ್ಗೋಪಾಯಗಳು” ಎಂಬ ವಿಷಯದ ಕುರಿತು ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಶಿಕ್ಷಕಿಯರಿಗೆ ಬಹುಮಾನ ಮತ್ತು ಪ್ರಶಂಸನಾ ಪತ್ರವನ್ನು ನೀಡಿ ಗೌರವಿಸಲಾಯಿತು.
ಮಡಿಕೇರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ಅಧ್ಯಕ್ಷ ಕುಡೆಕಲ್ ಸಂತೋಷ್, ಸಾಹಿತಿಗಳಾದ ಕಿಗ್ಗಾಲು ಗಿರೀಶ್ ಹಾಗೂ ದಂಬೇಕೋಡಿ ಸುಶೀಲ ಅವರನ್ನು ಮೂರ್ನಾಡು ಹೋಬಳಿ ಘಟಕದ ವತಿಯಿಂದ ಗೌರವಿಸಲಾಯಿತು. ವೇದಿಕೆಯಲ್ಲಿ ಪಿಎಂ ಶ್ರೀ ಶಾಲೆಯ ಮುಖ್ಯೋಪಾಧ್ಯಾಯರಾದ ಬಿ.ಎನ್.ಪುಷ್ಪಾವತಿ ಉಪಸ್ಥಿತರಿದ್ದರು. ವಿಶೇಷ ಆಹ್ವಾನಿತರಾಗಿ ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಿ.ಜಿ.ಅನಂತಶಯನ, ಸಾಹಿತಿ ವೈಲೇಶ್. ಪಿ.ಎಸ್, ಕಸಾಪದ ಜಿಲ್ಲಾ ಮಾಜಿ ಕಾರ್ಯದರ್ಶಿ ಮೊಹಮ್ಮದ್ ಅರಪಟ್ಟು, ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ಕೋಂಪುಳಿರ ಮಮತಾ, ಸಹ ಕಾರ್ಯದರ್ಶಿ ಅಪ್ಪಚಂಡ ಸುಚಿತ, ಕೋಶಾಧಿಕಾರಿ ಮಡೆಯಂಡ ಸೂರಜ್, ಪದಾಧಿಕಾರಿಗಳಾದ ಮುನೀರ್, ರೋಸ್ಲಿ, ಈರ ಸುಬ್ಬಯ್ಯ, ಮುಂಡಂಡ ವಿಜು, ಮಠದಮನೆ ಧನಂಜಯ, ಗ್ರಾ.ಪಂ ನಿವೃತ್ತ ಪಿಡಿಒ ಕೇಶವ, ಮಡೆಯಂಡ ಪ್ರೀನಾ, ತೇಲಪಂಡ ಗುಲ್ಸನ್, ಮೂರ್ನಾಡು ಗ್ರಾ.ಪಂ ಸದಸ್ಯರುಗಳು, ಮೂರ್ನಾಡು ಹೋಬಳಿಯ ವಿವಿಧ ಸಮಾಜ ಹಾಗೂ ಸಂಘ ಸಂಸ್ಥೆಗಳ ಅಧ್ಯಕ್ಷರುಗಳು, ಮುಖಂಡರು, ವಿವಿಧ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. *ಯೋಧರಿಗೆ ನಮನ* ಇದೇ ಸಂದರ್ಭ ಕಾರ್ಗಿಲ್ ವಿಜಯ ದಿನದ ಅಂಗವಾಗಿ ವೀರ ಯೋಧರಿಗೆ ಗೌರವ ನಮನ ಸಲ್ಲಿಸಲಾಯಿತು. ಪಿಎಂ ಶ್ರೀ ಶಾಲೆಯ ವಿದ್ಯಾರ್ಥಿಗಳು “ನೀನೇ ರಾಮ ನೀನೇ ಶಾಮ” ಪ್ರಾರ್ಥನೆ ಗೀತೆ ಹಾಡಿ, ಜಾನಪದ ನೃತ್ಯ ಮಾಡಿದರು. ಜ್ಞಾನಜ್ಯೋತಿ ಶಾಲೆಯ ವಿದ್ಯಾರ್ಥಿಗಳು ಜಾನಪದ ನೃತ್ಯ ಪ್ರದರ್ಶಿಸಿದರು. ಕಾರ್ಯಕ್ರಮ ನೀಡಿದ ವಿದ್ಯಾರ್ಥಿಗಳಿಗೆ ಪ್ರಶಂಸನಾ ಪತ್ರ ನೀಡಲಾಯಿತು. ಸಾಹಿತ್ಯ ಪರಿಷತ್ತಿನ ಪದಾಧಿಕಾರಿ ಮೀನಾಕ್ಷಿ ಕೇಶವ ಸ್ವಾಗತಿಸಿ, ಗೌರವ ಕಾರ್ಯದರ್ಶಿ ಕಟ್ಟೆಮನೆ ಮಹಾಲಕ್ಷ್ಮಿ ವಂದಿಸಿ, ಕಾಮೆಯಂಡ ಕಲ್ಪನಾ ಸಾಮ್ರಾಟ್ ನಿರೂಪಿಸಿದರು. *ಪ್ರಬಂಧ ಸ್ಪರ್ಧೆ ವಿಜೇತರು* ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಹಾಕತ್ತೂರು ಸರಕಾರಿ ಪ್ರೌಢ ಶಾಲಾ ಸಹ ಶಿಕ್ಷಕಿ ಪುಷ್ಪ ಕೆ.ಕೆ ಪ್ರಥಮ, ಮೂರ್ನಾಡು ಪಿಎಂ ಶ್ರೀ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಗೌತಮಿ ಬಿ.ಎನ್ ದ್ವಿತೀಯ ಹಾಗೂ ಹಾಕತ್ತೂರು ಸರಕಾರಿ ಪ್ರೌಢ ಶಾಲೆಯ ಶಿಕ್ಷಕ ಕೆ.ಜಿ.ಭವಾನಿ ಶಂಕರ್ ತೃತೀಯ ಬಹುಮಾನ ಗಳಿಸಿದರು. ಅತಿಥಿ ಗಣ್ಯರು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಮೂರ್ನಾಡು ಹೋಬಳಿ ಘಟಕದ ಪದಾಧಿಕಾರಿಗಳು ಬಹುಮಾನ ವಿತರಿಸಿದರು.









