
ಕುಶಾಲನಗರ ಜು.28 NEWS DESK : ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳ ಕಾರ್ಯಕಾರಿಣಿ ಸಭೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಕುಶಾಲನಗರ ಸರ್ಕಾರಿ ಬಾಲಕಿಯರ ಪ್ರೌಢಶಾಲಾ ಸಭಾಂಗಣದಲ್ಲಿ ನಡೆಯಿತು. ಜಿಲ್ಲಾಧ್ಯಕ್ಷ ಹೆಚ್.ಜಿ.ಕುಮಾರ್, ಕಾರ್ಯದರ್ಶಿ ಎಸ್.ಎಂ.ಮಹೇಂದ್ರ ಅವರನ್ನು ತಾಲ್ಲೂಕು ಸಂಘದಿಂದ ಸನ್ಮಾನಿಸಲಾಯಿತು. ನೂತನವಾಗಿ ಪದಾಧಿಕಾರಿಗಳಾಗಿ ದಿನೇಶ್ ಗೌಡಳ್ಳಿ, ಹೂಬಟ್೯ ಡಯಾಸ್, ಸಿ.ಡಿ.ಲೋಕೇಶ್, ವಿಕ್ರಾಂತ್ ಕೇಳ್ಕರ್, ವಿಜಯ್ ಕುಮಾರ್, ಅರುಣ್ ಕುಮಾರ್ ಅವರನ್ನು ಆಯ್ಕೆಮಾಡಿಕೊಳ್ಳಲಾಯಿತು. ಅನುದಾನಿತ ಶಾಲಾ ಶಿಕ್ಷಕರು ಅನುಭವಿಸುತ್ತಿರುವ ವೇತನದ ಸಮಸ್ಯೆ, ಇನ್ಕ್ರಮೆಂಟ್, ಟೈಂ ಬಾಂಡ್,ಇನ್ನಿತರ ವಿಷಯಗಳ ಬಗೆ ಚರ್ಚಿಸಿ, ಕ್ಷೇತ್ರಶಿಕ್ಷಣಾಧಿಕಾರಿ ಹಾಗೂ ಉಪನಿರ್ದೇಶಕರನ್ನು ಭೇಟಿ ಮಾಡಿ ಚರ್ಚಿಸಿ ಸಮಸ್ಯೆಯನ್ನು ಬಗೆಹರಿಸಲು ಸಭೆಯಲ್ಲಿ ತೀರ್ಮಾನ ಮಾಡಲಾಯಿತು. ತಾಲ್ಲೂಕಿನ ಎಲ್ಲಾ ಪ್ರೌಢಶಾಲೆಗಳಿಗೆ ಭೇಟಿ ನೀಡಿ ಸಹಶಿಕ್ಷಕರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಆಲಿಸಿ ಪರಿಹಾರ ಮಾಡುವ ಬಗ್ಗೆ ಚರ್ಚಿಸಲಾಯಿತು. ತಾಲ್ಲೂಕಿನ ಪದಾಧಿಕಾರಿಗಳು ತಾಲ್ಲೂಕಿನ ಕಾರ್ಯಕಾರಿಣಿ ಸಭೆಯನ್ನು ಶನಿವಾರಸಂತೆ, ಕುಶಾಲನಗರ ಹಾಗೂ ಸೋಮವಾರಪೇಟೆಯಲ್ಲಿ ನಡೆಸಲು ತೀರ್ಮಾನ ಮಾಡಲಾಯಿತು. ಜೂಮ್ ಮೀಟಿಂಗ್ ಮುಖಾಂತರ ತಿಂಗಳಿಗೊಮ್ಮೆ ಸಭೆಯನ್ನು ಮಾಡಲು ತೀರ್ಮಾನಿಸಲಾಯಿತು. ಸದಸ್ಯತ್ವ ಶುಲ್ಕವನ್ನು ಆಯಾ ಭಾಗದ ಪದಾಧಿಕಾರಿಗಳು ಸಂಗ್ರಹಿಸಲು ತೀರ್ಮಾನ ಮಾಡಲಾಯಿತು. ಸಂಘದಲ್ಲಿರುವ ಹಣಕಾಸಿನ ಬಗೆಗೆ ಚರ್ಚಿಸಲಾಯಿತು. ಎಲ್ ಬಿ ಎ ಹಾಗೂ ಎಫ್ ಎಲ್ ಎನ್ ಬಗೆಗೆ ಚರ್ಚಿಸಲಾಯಿತು. ವರ್ಗಾವಣೆ ಸಮಸ್ಯೆ ಹಾಗೂ ಹೆಚ್ಚುವರಿ ಶಿಕ್ಷಕರ ಸಮಸ್ಯೆಯ ಬಗೆಗೆ ಚರ್ಚಿಸಲಾಯಿತು. ತ್ರಿಭಾಷಾ ಸೂತ್ರದ ಪರವಾಗಿ ನಮ್ಮ ಹಿಂದಿ ಭಾಷಾ ಶಿಕ್ಷಕರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ನೀಡುವುದಕ್ಕೆ ತೀರ್ಮಾನಿಸಲಾಯಿತು. ಸಭೆಯಲ್ಲಿ ತಾಲ್ಲೂಕು ಸಂಘದ ಅಧ್ಯಕ್ಷ ಕೆ.ಆರ್.ರತ್ನಕುಮಾರ್ ಕಾರ್ಯದರ್ಶಿ ಟಿ.ವಿ.ಶೈಲಾ, ಜಿಲ್ಲಾ ಖಜಾಂಚಿ ಎ.ಸಿ.ಮಂಜುನಾಥ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ದಯಾನಂದ ಪ್ರಕಾಶ್, ವಿಭಾಗೀಯ ಕಾರ್ಯದರ್ಶಿ ನವೀನ್, ರಾಜ್ಯಪರಿಷತ್ ಸದಸ್ಯ ಕೆ.ಪಿ.ಜಯಕುಮಾರ್, ಸರ್ಕಾರಿ ನೌಕರರ ಸಂಘದ ನಿರ್ದೇಶಕರು ಹಾಗೂ ಉಪಾಧ್ಯಕ್ಷ ಯಶ್ವಂತ್, ಖಜಾಂಚಿ ಕವಿತಾ, ಅನುದಾನಿತ ಶಿಕ್ಷಣ ಸಂಘದ ತಾಲ್ಲೂಕು ಅಧ್ಯಕ್ಷ ವೆಂಕಟನಾಯಕ್, ಪದಾಧಿಕಾರಿಗಳಾದ ಶ್ರೀಕಾಂತ್, ಪ್ರಕಾಶ್, ಎಂ.ಪಿ.ಶಿವಕುಮಾರಿ, ಮಂಗಳಾ ಭಾಗವಹಿಸಿದ್ದರು.









