
ಮಡಿಕೇರಿ ಜು.28 NEWS DESK : ನ್ಯಾಷನಲ್ ಮೆಡಿಕೋಸ್ ಸಂಸ್ಥೆಯ ಕೊಡಗು ಘಟಕ ಮತ್ತು ಕೊಡಗು ಸಂಸ್ಕೃತಿ ಸಿರಿ ಬಳಗ ಟ್ರಸ್ಟ್ ವತಿಯಿಂದ ಮಡಿಕೇರಿ ನಗರಸಭೆ ಪೌರ ಕಾರ್ಮಿಕರಿಗೆ ಉಚಿತ ವೈದ್ಯಕೀಯ ತಪಾಸಣೆ ಶಿಬಿರ ಹಾಗೂ ಔಷಧಿಗಳ ವಿತರಣಾ ಕಾರ್ಯಕ್ರಮ ನಡೆಯಿತು. ನಗರಸಭೆಯ ಸ್ಥಾಯಿ ಸಮತಿ ಸಭಾಂಗಣದಲ್ಲಿ ನಡೆದ ಶಿಬಿರವನ್ನು ಪೌರಾಯುಕ್ತ ಹೆಚ್.ಆರ್.ರಮೇಶ್ ಹಾಗೂ ಪೌರ ಕಾರ್ಮಿಕ ಸುಂದರ ಅವರು ಉದ್ಘಾಟಿಸಿದರು. ಪೌರಾಯುಕ್ತ ಹೆಚ್.ಆರ್.ರಮೇಶ್ ಮಾತನಾಡಿ ನಗರದ ಸ್ವಚ್ಛತೆಗಾಗಿ ಪೌರ ಕಾರ್ಮಿಕರು ಬೆಳಗ್ಗಿನಿಂದ ಸಂಜೆಯವರೆಗೆ ಶ್ರಮ ಪಡುತ್ತಾರೆ. ಶ್ರಮಿಕ ಜೀವಿಗಳು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಎಂದರು. ಪೌರ ಕಾರ್ಮಿಕರ ಆರೋಗ್ಯವನ್ನು ಕಾಪಾಡಬೇಕು ಎನ್ನುವ ಉದ್ದೇಶದಿಂದ ನ್ಯಾಷನಲ್ ಮೆಡಿಕೋಸ್ ಸಂಸ್ಥೆ ಮತ್ತು ಕೊಡಗು ಸಂಸ್ಕೃತಿ ಸಿರಿ ಬಳಗ ಆರೋಗ್ಯ ಶಿಬಿರವನ್ನು ಆಯೋಜಿಸಿರುವುದು ಶ್ಲಾಘನೀಯ. ಸಂಘಟಕರಿಗೆ ಪೌರ ಕಾರ್ಮಿಕರ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು. ಜಿಲ್ಲಾ ಆಸ್ಪತ್ರೆಯ ತುರ್ತು ಘಟಕ ಮತ್ತು ನ್ಯಾಷನಲ್ ಮೆಡಿಕೋಸ್ ಸಂಸ್ಥೆಯ ಮುಖ್ಯಸ್ಥ ಡಾ.ಮೋಹನ್ ಅಪ್ಪಾಜಿ ಕೋಲೆಯಂಡ ಅವರು ಮಾತನಾಡಿ ನಿರಂತರ ಸ್ವಚ್ಛತಾ ಕಾರ್ಯದ ಮೂಲಕ ಸಮಾಜದ ಆರೋಗ್ಯ ಕಾಪಾಡುವ ಪೌರ ಕಾರ್ಮಿಕರು ತಮ್ಮ ಆರೋಗ್ಯದ ಬಗ್ಗೆಯೂ ಎಚ್ಚರ ವಹಿಸಬೇಕು. ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು. ಆರೋಗ್ಯ ಶಿಬಿರವನ್ನು ಆಯೋಜನೆ ಮಾಡುವ ವಿಚಾರದಲ್ಲಿ ಪೌರಾಯುಕ್ತರು ಹೆಚ್ಚು ಆಸಕ್ತಿ ತೋರಿ ಕೇವಲ ಮೂರು ದಿನಗಳಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಟ್ಟು ಸಹಕರಿಸಿರುವುದು ಹೆಮ್ಮೆ ಎನಿಸಿದೆ. ಪೌರ ಕಾರ್ಮಿಕರು ಈ ರೀತಿಯ ಆರೋಗ್ಯ ಶಿಬಿರಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಸಂಸ್ಕೃತಿ ಸಿರಿ ಬಳಗ ಟ್ರಸ್ಟ್ ನ ಅಧ್ಯಕ್ಷೆ ಈರಮಂಡ ಹರಿಣಿ ವಿಜಯ್ ಮಾತನಾಡಿ ಪೌರ ಕಾರ್ಮಿಕರು ಕೊರೆಯುವ ಚಳಿ, ಮಳೆಯನ್ನೂ ಲೆಕ್ಕಿಸದೆ ಪ್ರತಿ ದಿನ ಬೆಳಿಗ್ಗೆ ಮಡಿಕೇರಿ ನಗರದ ಸ್ವಚ್ಛತಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಇವರಿಗಾಗಿ ಆರೋಗ್ಯ ಶಿಬಿರವನ್ನು ಆಯೋಜಿಸುವ ಮೂಲಕ ಅಳಿಲು ಸೇವೆ ಮಾಡುವ ಭಾಗ್ಯ ನಮಗೆ ದೊರೆತ್ತಿದೆ ಎಂದು ತಿಳಿಸಿದರು. ನ್ಯಾಷನಲ್ ಮೆಡಿಕೋಸ್ ಸಂಸ್ಥೆಯ ಸಹಯೋಗದೊಂದಿಗೆ ಸಿರಿ ಬಳಗ ಟ್ರಸ್ಟ್ ಈಗಾಗಲೇ ಹಲವು ಶಿಬಿರಗಳನ್ನು ಆಯೋಜಿಸಿ ಯಶಸ್ವಿಯಾಗಿದೆ. ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿರುವ ವೈದ್ಯರುಗಳು ಕೂಡ ಶಿಬಿರಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯವೆಂದರು. ಟ್ರಸ್ಟಿ ಹಾಗೂ ಸಮಾಜ ಸೇವಕ ಕೆ.ಎಂ.ಬಿ.ಗಣೇಶ್ ಅವರು ಮಾತನಾಡಿ ಭೂಮಿಯ ಮೇಲೆ ಜೀವಿಸುವ ಮಾನವರೆಲ್ಲರೂ ಒಂದೇ ಆಗಿದ್ದು, ಎಲ್ಲೂ ಮೇಲುಕೀಳೆಂಬ ಭೇದಭಾವ ಇರಬಾರದು. ನಾವೆಲ್ಲರೂ ಮನುಷ್ಯರು, ಮಾನವೀಯ ಧರ್ಮ ದೊಡ್ಡದು. ಇದೇ ಕಾರಣಕ್ಕೆ ಪೌರ ಕಾರ್ಮಿಕರು ಹಾಗೂ ಅವರ ಕುಟುಂಬದ ಸದಸ್ಯರ ಆರೋಗ್ಯದ ಮೇಲಿನ ಕಾಳಜಿಯಿಂದ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಹೇಳಿದರು. ನ್ಯಾಷನಲ್ ಮೆಡಿಕೋಸ್ ಸಂಸ್ಥೆಯ ವೈದ್ಯ ವಿದ್ಯಾರ್ಥಿ ಡಾ.ವಿಕ್ರಂ ಶೆಟ್ಟಿ ಮಾತನಾಡಿ ಸಂಸ್ಥೆಯು ಈಗಾಗಲೇ ಜಮ್ಮು ಕಾಶ್ಮೀರದಿಂದ ಕೇರಳದವರೆಗೆ ವಿವಿಧ ಭಾಗಗಳಲ್ಲಿ ಆರೋಗ್ಯ ಶಿಬಿರಗಳನ್ನು ನಡೆಸಿದೆ. ಸಂಸ್ಥೆ ಹಾಗೂ ವೈದ್ಯರು ಸ್ವಾರ್ಥ ರಹಿತವಾಗಿ ಸೇವೆ ಸಲ್ಲಿಸುತ್ತಿದ್ದು, ಪೌರ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಿ ಅಗತ್ಯ ಔಷಧಿಗಳನ್ನು ನೀಡಲಾಗುವುದು. ಹೆಚ್ಚಿನ ಚಿಕಿತ್ಸೆಯ ಅನಿವಾರ್ಯತೆ ಇದ್ದರೆ ವೈದ್ಯರ ಸಲಹೆಯಂತೆ ಸಹಕರಿಸಲಾಗುವುದು ಎಂದು ತಿಳಿಸಿದರು. ಪೌರಾಯುಕ್ತರು ಸೇರಿದಂತೆ 35ಕ್ಕೂ ಹೆಚ್ಚು ಪೌರಕಾರ್ಮಿಕರು ಆರೋಗ್ಯ ಶಿಬಿರದ ಲಾಭ ಪಡೆದರು. ಕೊಡಗು ಮೆಡಿಕಲ್ ಕಾಲೇಜ್ ನ ವೈದ್ಯರುಗಳಾದ ಡಾ.ಬಸವರಾಜು, ಡಾ.ಭರತ್, ಡಾ.ಮಹೇಶ್ವರ, ಡಾ.ಶಾಹಿಲ್, ವೈದ್ಯ ವಿದ್ಯಾರ್ಥಿಗಳು ಹಾಗೂ ಆರೋಗ್ಯ ಶ್ರುಶೂಷಕರು ಅರೋಗ್ಯ ತಪಾಸಣೆ ನಡೆಸಿದರು. ಸಂಸ್ಕೃತಿ ಸಿರಿ ಬಳಗ ಟ್ರಸ್ಟ್ ನ ಉಪಾಧ್ಯಕ್ಷರಾದ ನಿಶಾ ಮೋಹನ್, ಪ್ರಮುಖರಾದ ಈರಮಂಡ ವಿಜಯ್ ಉತ್ತಯ್ಯ, ಸದಸ್ಯರಾದ ಮಂಜುಳಾ ಶಿವಕುಮಾರ್, ಸರಿತಾ ಅಯ್ಯಪ್ಪ, ಸಿಂಧೂರ್ ಅನಿಲ್, ನಗರಸಭೆಯ ಸಿಬ್ಬಂದಿಗಳಾದ ರಂಗಪ್ಪ, ಅಕ್ರಂ ಮತ್ತಿತರರು ಉಪಸ್ಥಿತರಿದ್ದರು.










