
ಮಡಿಕೇರಿ ಜು.28 NEWS DESK : 17ನೇ ಶತಮಾನದ ಉತ್ತರಾರ್ಧದಲ್ಲಿ ಅರಸ ಮುದ್ದುರಾಜರು ನಿರ್ಮಿಸಿದ ಐತಿಹಾಸಿಕ ಮಡಿಕೇರಿ ಕೋಟೆಯ ಹೆಬ್ಬಾಗಿಲು ಕಳೆದ ಎರಡು ದಿನಗಳು ಬೀಸಿದ ಬಿರುಗಾಳಿಗೆ ಮುಚ್ಚಿಕೊಂಡವು. ಸುಮಾರು 50 ಅಡಿ ಎತ್ತರದ ಶಿಥಿಲಾವಸ್ಥೆಯಲ್ಲಿರುವ ಎರಡು ಬಾಗಿಲು ಗಾಳಿಯ ರಭಸಕ್ಕೆ ಮುಚ್ಚಿಕೊಂಡವು. ಆದರೆ ಮತ್ತೆ ಬಾಗಿಲನ್ನು ತೆರೆಯಲು ಸಾಧ್ಯವಾಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು. ನಂತರ ಅಧಿಕಾರಿಗಳು ಜೆಸಿಬಿ ಯಂತ್ರದ ಸಹಾಯದಿಂದ ಬಾಗಿಲನ್ನು ತೆರೆಯುವಲ್ಲಿ ಯಶಸ್ವಿಯಾದರು. ಈ ಐತಿಹಾಸಿಕ ಆಕರ್ಷಕ ಮಡಿಕೇರಿ ಕೋಟೆಗೆ ಪ್ರತಿದಿನ ನೂರಾರು ಪ್ರವಾಸಿಗರು ಆಗಮಿಸುತ್ತಾರೆ. ಭಾರತೀಯ ಪುರಾತತ್ವ ಇಲಾಖೆಯ ಅಧೀನದ ಕೋಟೆಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಕೋಟೆ ಮತ್ತಷ್ಟು ಆಕರ್ಷಣೆಯನ್ನು ಪಡೆದುಕೊಳ್ಳಲಿದೆ ಮತ್ತು ಹೆಬ್ಬಾಗಿಲು ಕೂಡ ದುರಸ್ತಿ ಕಾಣಲಿದೆ.









