
ಮಡಿಕೇರಿ ಆ.1 NEWS DESK : ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ರೈತರು ಕೃಷಿ ಚಟುವಟಿಕೆಗಳಲ್ಲಿ ತಲ್ಲೀನರಾಗಿರುತ್ತಾರೆ. ಪ್ರಸ್ತುತ ಜಿಲ್ಲೆಯಲ್ಲಿ ಭತ್ತ ಹಾಗೂ ಮುಸುಕಿನ ಜೋಳದ ಬೆಳೆಗಳ ಬಿತ್ತನೆ ಕಾರ್ಯಗಳು ಪ್ರಗತಿಯಲ್ಲಿವೆ. ಒಟ್ಟು 30525 ಹೆಕ್ಟೇರ್ಗೆ ಇಲ್ಲಿಯವರೆಗೆ 5864 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ/ ನಾಟಿ ಕಾರ್ಯ ಪೂರ್ಣಗೊಂಡಿದೆ. ಜಿಲ್ಲೆಯ ಕೃಷಿ, ತೋಟಗಾರಿಕೆ ಮತ್ತು ಕಾಫಿ ಬೆಳೆಗಳಿಗೆ 2025ನೇ ಸಾಲಿನ ಮುಂಗಾರು ಹಂಗಾಮಿಗೆ ಸುಮಾರು 88677 ಮೆ.ಟನ್ ರಸಗೊಬ್ಬರಗಳ ಅವಶ್ಯಕತೆ ಇದೆಯೆಂದು ಅಂದಾಜಿಸಲಾಗಿದೆ. ಏಪ್ರಿಲ್ ಮಾಹೆಯ ಆರಂಭಿಕ ದಾಸ್ತಾನು (ಕಾಪು ದಾಸ್ತಾನು ಸೇರಿ) 35,924 ಮೆ.ಟನ್ ಇದ್ದು, ಜುಲೈ, 28 ರವರೆಗೆ 54520 ಮೆ.ಟನ್ ರಸ ಗೊಬ್ಬರ ವಿವಿಧ ತಯಾರಕ ಸಂಸ್ಥೆಗಳಿಂದ ಜಿಲ್ಲೆಗೆ ಸರಬರಾಜಾಗಿದೆ. ಒಟ್ಟಾರೆಯಾಗಿ ಇಲ್ಲಿಯವರೆಗೆ 90,444 ಮೆ. ಟನ್. ರಸಗೊಬ್ಬರ ಜಿಲ್ಲೆಯ ರೈತರಿಗೆ ಲಭ್ಯವಿದ್ದು, ಸುಮಾರು 60,126 ಮೆ. ಟನ್ ರಸಗೊಬ್ಬರವನ್ನು ರೈತರಿಗೆ ವಿತರಣೆ/ ಮಾರಾಟ ಮಾಡಲಾಗಿದೆ. ಬಾಕಿ 30,318 ಮೆ. ಟನ್ ರಸಗೊಬ್ಬರ (ಯೂರಿಯಾ 5855 ಮೆಟನ್, ಡಿಎಪಿ–1643 ಮೆಟನ್, ಎಂಓಪಿ 5526 ಮೆ.ಟನ್, ಎನ್ಪಿಕೆ ಕಾಂಪ್ಲೆಕ್ಸ್ 16250 ಮೆಟನ್ ಹಾಗೂ ಎಸ್ಎಸ್ಪಿ 1043 ಮೆಟನ್) ಹಾಲಿ ದಾಸ್ತಾನಿದ್ದು, ಜಿಲ್ಲೆಯಲ್ಲಿ ಯಾವುದೇ ರಸಗೊಬ್ಬರಗಳ ಕೊರತೆಯಿರುವುದಿಲ್ಲ. ಈ ಹಿನ್ನೆಲೆಯಲ್ಲಿ ರೈತರು ರಸಗೊಬ್ಬರಗಳ ಲಭ್ಯತೆ ಬಗ್ಗೆ ಯಾವುದೇ ಆತಂಕ ಪಡುವ ಅಗತ್ಯವಿರುವುದಿಲ್ಲ ಎಂದು ಕೊಡಗು ಜಿಲ್ಲಾ ಜಂಟಿ ಕೃಷಿ ನಿರ್ದೇಶಕರಾದ ಚಂದ್ರಶೇಖರ್ ಅವರು ತಿಳಿಸಿದ್ದಾರೆ.








