
ಮಡಿಕೇರಿ NEWS DESK ಆ.4 : ಮಡಿಕೇರಿಯ ರಾಜಾಸೀಟ್ನಲ್ಲಿ ‘ಗ್ಲಾಸ್ ಬ್ರಿಡ್ಜ್’ ಮತ್ತು ‘ಫುಡ್ ಕೋರ್ಟ್’ ನಿರ್ಮಾಣಕ್ಕೆ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆಗಳು ನಡೆದಿದ್ದರು, ನಗರಸಭೆಯ ಗಮನಕ್ಕೆ ಬಾರದ ಬಗ್ಗೆ ತುರ್ತು ಸಭೆಯಲ್ಲಿ ತೀವ್ರ ವಿರೋಧ ವ್ಯಕ್ತವಾಯಿತು. ಈ ಬಗ್ಗೆ ಅಗತ್ಯ ಮಾಹಿತಿಯನ್ನು ಪಡೆದುಕೊಳ್ಳುವ ಮೂಲಕ ಮತ್ತೆ ಸಭೆ ನಡೆಸಿ ವಿಸ್ತೃತ ಚರ್ಚೆ ನಡೆಸುವ ನಿರ್ಣಯವನ್ನು ಕೈಗೊಳ್ಳಲಾಯಿತು. ನಗರಸಭೆಯ ಸಭಾಂಗಣದಲ್ಲಿ ಅಧ್ಯಕ್ಷೆ ಪಿ.ಕಲಾವತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಆರಂಭದಲ್ಲೆ, ಕಾಂಗ್ರೆಸ್ ಸದಸ್ಯ ಬಿ.ವೈ.ರಾಜೇಶ್ ಸೇರಿದಂತೆ ನಾಮನಿರ್ದೇಶಿತ ಸದಸ್ಯರು, ಗ್ಲಾಸ್ ಬ್ರಿಡ್ಜ್ ಮತ್ತು ಫುಡ್ ಕೋರ್ಟ್ ಯೋಜನೆಯನ್ನು ಸರ್ಕಾರ ರೂಪಿಸಿದೆ. ಇದಕ್ಕೆ ವಿರೋಧ ಮಾಡುವ ಉದ್ದೇಶದಿಂದಲೇ ತುರ್ತು ಸಭೆ ಕರೆಯಲಾಗಿದೆ. ಈ ಸಭೆಯನ್ನು ಯಾವುದೇ ಕಾರಣಕ್ಕೂ ನಡೆಯಲು ಬಿಡುವುದಿಲ್ಲ ಎಂದು ವೇದಿಕೆಯ ಮುಂಭಾಗಕ್ಕೆ ಬಂದು ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದರು. ಕಾಂಗ್ರೆಸ್ ಸದಸ್ಯರ ವಿರೋಧಕ್ಕೆ ಪ್ರತಿಯಾಗಿ ಬಿಜೆಪಿ ಸದಸ್ಯರು, ನಗರಸಭೆಯ ಗಮನಕ್ಕೆ ಬಾರದೆ ಬಹುಕೋಟಿ ಯೋಜನೆಯನ್ನು ಜಾರಿ ಗೊಳಿಸಲಾಗುತ್ತಿದೆ ಎಂದು ವಿರೋಧ ವ್ಯಕ್ತಪಡಿಸಿದರು. ಈ ಬಗ್ಗೆ ಸಭೆ ನಡೆಯಲೇಬೇಕೆಂದು ಪಟ್ಟು ಹಿಡಿಯುವ ಮೂಲಕ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಈ ಸಂದರ್ಭ ಅಧ್ಯಕ್ಷರು, ವಿಷಯಕ್ಕೆ ಸಂಬಂಧಿಸಿದಂತೆ ಎಲ್ಲ ಸದಸ್ಯರಿಗೆ ಅವರವರ ಅಭಿಪ್ರಾಯಗಳನ್ನು ತಿಳಿಸಲು ಅವಕಾಶ ಕೊಡುವುದಾಗಿ ತಿಳಿಸುವುದರೊಂದಿಗೆ ಸದಸ್ಯರು ತಮ್ಮ ತಮ್ಮ ಆಸನಗಳಿಗೆ ಮರಳಿದರು. ಚರ್ಚೆ ಸಂದರ್ಭ ಕಾಂಗ್ರೆಸ್ ಸದಸ್ಯ ಬಿ.ವೈ.ರಾಜೇಶ್, ಸರ್ಕಾರದ ಯೋಜನೆಯನ್ನು ಸರ್ಕಾರದ ಭಾಗವಾದ ನಗರಸಭೆ ವಿರೋಧಿಸುವುದು ಸರಿಯಲ್ಲ ಎಂದರು. ಇದಕ್ಕೆ ಪ್ರತ್ಯುತ್ತರ ನೀಡಿದ ಉಪಾಧ್ಯಕ್ಷ ಮಹೇಶ್ ಜೈನಿ, ಉದ್ದೇಶಿತ ಯೋಜನೆಗೆ ಮಾಜಿ ಸಚಿವ ಎಂ.ಸಿ.ನಾಣಯ್ಯ, ಸಂಸದ ಯದುವೀರ್ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ಯೋಜನೆಯಿಂದ ನಿಮಗೆ ವೈಯಕ್ತಿಕ ಲಾಭವಿದೆಯೇ ಎಂದು ಪ್ರಶ್ನಿಸಿದರು. ಬಿ.ವೈ.ರಾಜೇಶ್ ಮಾತನಾಡಿ, ಗ್ಲಾಸ್ ಬ್ರಿಡ್ಜ್ ವಿರೋಧಕ್ಕಾಗಿಯಷ್ಟೆ ಕರೆದಿರುವ ತುರ್ತು ಸಭೆ. ಇದರೊಂದಿಗೆ ಮತ್ತೆರಡು ವಿಷಯಗಳನ್ನು ಸೇರಿಸಲಾಗಿದೆಯಷ್ಟೆ. ಯೋಜನೆಯ ಬಗ್ಗೆ ಮಾಹಿತಿ ಇಲ್ಲದೆ, ತುರ್ತು ಸಭೆ ಕರೆದದ್ದು ಹೇಗೆ, ನಿಮ್ಮ ಸ್ವಂತ ಚಿಂತನೆ ಇಲ್ಲವೆ ಎಂದು ಅಧ್ಯಕ್ಷರನ್ನು ಪ್ರಶ್ನಿಸಿದಾಗ ಒಂದಷ್ಟು ಮಾತಿನ ಚಕಮಕಿ ನಡೆಯಿತು. ಎಸ್ಡಿಪಿಐ ಸದಸ್ಯ ಮನ್ಸೂರ್ ಮಾತನಾಡಿ, ಅಗತ್ಯ ಮಾಹಿತಿ ಇಲ್ಲವೆಂದಾದರೆ ಗ್ಲಾಸ್ ಬ್ರಿಡ್ಜ್ ಮತ್ತು ಫುಡ್ ಕೋರ್ಟ್ ವಿಚಾರ ಸಭೆಗೆ ಯಾಕೆ ತಂದಿದ್ದೀರ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ಕಲಾವತಿ, ಇತ್ತೀಚಿನ ದಿನಗಳಲ್ಲಿ ಮುಂಗಾರಿನ ಅವಧಿಯಲ್ಲಿ ಬರೆ ಕುಸಿತ ಮೊದಲಾದವು ಸಂಭವಿಸುತ್ತಿದೆ. ರಾಜಾಸೀಟಿನಲ್ಲಿ ಗ್ಲಾಸ್ ಬ್ರಿಡ್ಜ್ ಬರುವುದರಿಂದ ತೊಂದರೆಯಾಗಬಹುದು, ಎಲ್ಲರಿಗೂ ಒಳ್ಳೆಯಯದಾಗಲಿ ಎನ್ನುವುದು ನಮ್ಮ ಉದ್ದೇಶ, ಈ ಕಾರಣಕ್ಕೆ ತುರ್ತು ಸಭೆ ಕರೆದಿರುವುದಾಗಿ ಸ್ಪಷ್ಟಪಡಿಸಿದರು. ಎಸ್ಡಿಪಿಐ ಸದಸ್ಯ ಅಮಿನ್ ಮೊಹಿಸಿನ್ ಮಾತನಾಡಿ, ರಾಜಾಸೀಟಿನಲ್ಲಿ ಜಿಪ್ ಲೈನ್ ಆರಂಭದ ಸಂದರ್ಭ ನಗರಸಭೆಯ ಗಮನಕ್ಕೆ ತರಲಿಲ್ಲ, ಉದ್ಘಾಟನೆಗೆ ಮಾತ್ರ ಕರೆಯಲಾಗಿತ್ತು. ಇದೀಗ ಗ್ಲಾಸ್ ಬ್ರಿಡ್ಜ್ ಬಗ್ಗೆಯೂ ನಗರಸಭೆಗೆ ಮಾಹಿತಿ ನೀಡಿಲ್ಲ. ಈ ಹಿನ್ನೆಲೆ ಗ್ಲಾಸ್ ಬ್ರಿಡ್ಜ್ ಬೇಡವೆಂದಾದರೆ ಜಿಪ್ ಲೈನ್ ಸಹ ಬೇಡವೆಂದು ನಿರ್ಧಾರ ಮಾಡುವಂತೆ ಒತ್ತಾಯಿಸಿದರು. ಬಿಜೆಪಿ ಸದಸ್ಯ ಉಮೇಶ್ ಸುಬ್ರಮಣಿ ಮಾತನಾಡಿ, ರಾಜಾಸೀಟ್ ಪಕ್ಕದಲ್ಲೆ ಇರುವ ಇಂದಿರಾನಗರ, ಚಾಮುಂಡೇಶ್ವರಿ ನಗರಗಳು ಮಳೆಯಿಂದ ಸಂಕಷ್ಟಕ್ಕೆ ಸಿಲುಕುವ ಸೂಕ್ಷ್ಮ ವಲಯಗಳು. ಮುಂಗಾರಿನ ಅವಧಿಯಲ್ಲಿ ಮನೆಗಳನ್ನು ತೆರವುಗೊಳಿಸುವಂತೆ ಹಲವರಿಗೆ ನೋಟಿಸನ್ನು ಹಿಂದೆ ನೀಡಲಾಗಿದೆ. ಇದರ ಪಕ್ಕದಲ್ಲೆ ಇರುವ ರಾಜಾಸೀಟು ಸಹ ಬೆಟ್ಟ ಪ್ರದೇಶವೆ ಆಗಿದೆ. ಅಲ್ಲಿ ಗ್ಲಾಸ್ ಬ್ರಿಡ್ಜ್ ಯೋಜನೆ ಜಾರಿ ಎಷ್ಟು ಸರಿ ಎಂದು ಪ್ರಶ್ನಿಸಿದರು. ಇದರ ನಿರ್ಮಾಣದಿಂದ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತದೆ. ಈ ಸಂದರ್ಭ ಉದ್ಭವಿಸುವ ಪಾರ್ಕಿಂಗ್ ಸಮಸ್ಯೆ ಬಗೆಹರಿಸುವವರಾರು. ಸರ್ಕಾರಕ್ಕೆ ಲಾಭವಾಗುತ್ತದೆ ಎನ್ನುವ ಕಾರಣಕ್ಕೆ ಯೋಜನೆ ಬೆಂಬಲಿಸಲು ಬರುವುದಿಲ್ಲ, ನಮ್ಮ ತೀವ್ರ ವಿರೋಧವಿದೆ ಎಂದರು. ಸದಸ್ಯ ಕೆ.ಎಸ್.ರಮೇಶ್ ಮಾತನಾಡಿ, ಶಾಸಕರ ಪ್ರಯತ್ನದಿಂದ ಕೋಟ್ಯಾಂತರ ವೆಚ್ಚದ ಗ್ಲಾಸ್ ಬ್ರಿಡ್ಜ್ ಬರುತ್ತಿದೆ ಎಂದರೆ ಸಂತೋಷ. ಇದನ್ನು ರಾಜಾಸೀಟಿನಲ್ಲಿ ನಿರ್ಮಿಸಲು ಸಾಧ್ಯವಿಲ್ಲ ಎಂದಾದರೆ ಬೇರೆ ಕಡೆ ಮಾಡಲಿ ಎಂದು ಸಲಹೆ ನೀಡಿದರು. ಯೋಜನೆಯ ಜಾರಿಯ ಹಂತದಲ್ಲಿ ನಗರಸಭೆಯ ಕನಿಷ್ಟ ಅಭಿಪ್ರಾಯವನ್ನು ಪಡೆಯದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಸುದೀರ್ಘ ಚರ್ಚೆಯ ಬಳಿಕ ನಗರಸಭೆಯ ಗಮನಕ್ಕೆ ತಾರದೆ ಯೋಜನೆಯ ಅನುಷ್ಟಾನಕ್ಕೆ ಮುಂದಾಗಿರುವುದಕ್ಕೆ ವಿರೋಧವನ್ನು ವ್ಯಕ್ತಪಡಿಸುವ ಮತ್ತು ಅಗತ್ಯ ಮಾಹಿತಿಯನ್ನು ಪಡೆದ ಬಳಿಕ ಮತ್ತೆ ಸಭೆ ನಡೆಸುವ ನಿರ್ಧಾರ ಕೈಗೊಳ್ಳಲಾಯಿತು.









