
ಕುಶಾಲನಗರ ಆ.7 NEWS DESK : ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಕೊಡಗು ಜಿಲ್ಲಾ ಘಟಕದ ಸರ್ವ ಸದಸ್ಯರ ಸಭೆ ಕುಶಾಲನಗರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೇಂದ್ರ ಕಚೇರಿಯಲ್ಲಿ ನಡೆಯಿತು. ವೇದಿಕೆಯ ಜಿಲ್ಲಾ ಅಧ್ಯಕ್ಷ ಎ.ಟಿ ರಂಗಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ಪ್ರತಿ ಶಾಲೆಯಲ್ಲಿ ಮಾದಕ ವಸ್ತು ತಡೆ ಸಮಿತಿ ರಚನೆ ಬಗ್ಗೆ ಚರ್ಚೆ ನಡೆಯಿತು. ತಾಲೂಕು ಯೋಜನಾಧಿಕಾರಿಗಳಿಂದ ಪ್ರಥಮ ತ್ರೈಮಾಸಿಕ ಸಾಧನ ವರದಿ ಮಂಡಿಸಲಾಯಿತು. ವೇದಿಕೆಯ ಪ್ರಾದೇಶಿಕ ವಿಭಾಗದ ನಿರ್ದೇಶಕರಾದ ವಿವೇಕ್ ವಿ ಪಾಯಸ್ ಅವರು 2025 26ನೇ ಸಾಲಿನ ಕ್ರಿಯಾ ಯೋಜನೆಯ ಅನುಷ್ಠಾನದ ಬಗ್ಗೆ ಸಮಗ್ರ ಮಾಹಿತಿ ಒದಗಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿಗಳ ಬಗ್ಗೆ ಅಪಪ್ರಚಾರ ನಡೆಯುತ್ತಿರುವ ಬಗ್ಗೆ ಸಭೆಯಲ್ಲಿ ಜನಜಾಗೃತಿ ವೇದಿಕೆಯ ಸದಸ್ಯರು ಚರ್ಚೆ ನಡೆಸಿ, ಪ್ರಕರಣ ಸಂಬಂಧ ಸರ್ಕಾರದ ಎಸ್ಐಟಿ ರಚನೆ ಸ್ವಾಗತಿಸುವುದರೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಕಿಡಿಗೇಡಿಗಳು ಅನಾವಶ್ಯಕ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುತ್ತಿರುವ ವಿಷಯವನ್ನು ಖಂಡಿಸಿದರು. ಧರ್ಮಾಧಿಕಾರಿಗಳ ನಿಂದನೆ ಮಾಡುತ್ತಿರುವುದು ಕ್ಷೇತ್ರಕ್ಕೆ ಅಪಚಾರ ಮಾಡುವ ಬಗ್ಗೆ ಖಂಡನಾ ನಿರ್ಣಯ ಮಾಡುವುದರೊಂದಿಗೆ ಮುಂದಿನ ಕೆಲವೇ ದಿನಗಳಲ್ಲಿ ಜಿಲ್ಲಾಮಟ್ಟದ ಧರ್ಮ ಸಂರಕ್ಷಣಾ ಜಾಗೃತಿ ಜಾಥಾ ಹಮ್ಮಿಕೊಳ್ಳುವ ಬಗ್ಗೆ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು. ಈ ಸಂದರ್ಭ ವೇದಿಕೆಯ ಉಪಾಧ್ಯಕ್ಷರಾದ ವಿ.ಡಿ.ಪುಂಡರಿಕಾಕ್ಷ, ನಿಕಟಪೂರ್ವ ರಾಜ್ಯ ಅಧ್ಯಕ್ಷರಾದ ಹೊನ್ನವಳ್ಳಿ ಸತೀಶ್, ನಿಕಟ ಪೂರ್ವ ಅಧ್ಯಕ್ಷರಾದ ಅರುಣ ಬಾನಂಗಡ, ವೇದಿಕೆ ಜಿಲ್ಲಾ ಖಜಾಂಚಿ ಶಾಂತ ಮಲ್ಲಪ್ಪ, ಜಿಲ್ಲಾ ಕಾರ್ಯದರ್ಶಿಗಳಾದ ಲೀಲಾವತಿ ಮತ್ತು ಜಿಲ್ಲೆಯ ಸದಸ್ಯರು, ಯೋಜನೆಯ 6 ತಾಲ್ಲೂಕುಗಳ ಯೋಜನಾಧಿಕಾರಿಗಳು ಇದ್ದರು.








