
ಮಡಿಕೇರಿ ಆ.14 NEWS DESK : ಕೊಡಗಿನಲ್ಲಿ ಉನ್ನತ ಶಿಕ್ಷಣ ಪಡೆಯುವವರ ಪ್ರಮಾಣ ರಾಜ್ಯದ ಶೇಕಡವಾರು ಪ್ರಮಾಣಕ್ಕಿಂತ ಅತ್ಯಂತ ಕಡಿಮೆ ಇದ್ದು, ಜಿಲ್ಲೆಯ ಪ್ರತಿ ವಿದ್ಯಾರ್ಥಿಯು ಉನ್ನತ ಶಿಕ್ಷಣವನ್ನು ಪಡೆಯಬೇಕೆನ್ನುವ ಉದ್ದೇಶ ಕೊಡಗು ವಿಶ್ವವಿದ್ಯಾನಿಲಯದ್ದಾಗಿದೆ. ಈ ನಿಟ್ಟಿನಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತಿರುವುದಾಗಿ ಕೊಡಗು ವಿವಿ ಕಲಪತಿಗಳಾದ ಪ್ರೊ.ಅಶೋಕ ಸಂಗಪ್ಪ ಆಲೂರ ತಿಳಿಸಿದರು. ನಗರದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಉನ್ನತ ಶಿಕ್ಷಣ ಪಡೆಯುವವರ ಪ್ರಮಾಣ ಕರ್ನಾಟಕದಲ್ಲಿ ಶೇ.33 ಇದ್ದರೆ, ಕೊಡಗಿನಲ್ಲಿ ಇದರ ಪ್ರಮಾಣ ಕೇವಲ ಶೇ.18. ಈ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೊಡಗು ವಿವಿ ಶ್ರಮಿಸುತ್ತಿದ್ದು, ವಿವಿಯ ಸ್ನಾತಕೋತ್ತರ ತರಗತಿಗಳಿಗೆ ಪ್ರವೇಶ ಆರಂಭವಾಗಿದ್ದು ಹೆಚ್ಚಿನ ವಿದ್ಯಾರ್ಥಿಗಳು ಪ್ರವೇಶವನ್ನು ಪಡೆಯಬೇಕೆಂದು ವಿನಂತಿಸಿಕೊಂಡರು. :: ಮೂರು ಹೊಸ ವಿಷಯಗಳ ಪಿಜಿ ಆರಂಭ :: ಚಿಕ್ಕಅಳುವಾರದ ಕೊಡಗು ವಿವಿಯಲ್ಲಿ ಪ್ರಸಕ್ತ ಸಾಲಿನಿಂದ ವಿಜ್ಞಾನ ವಿಭಾಗದಲ್ಲಿ ‘ಸಸ್ಯ ಶಾಸ್ತ್ರ’, ‘ಪರಿಸರ ವಿಜ್ಞಾನ’ ಹಾಗೂ ‘ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ’ ಹೊಸ ವಿಷಯಗಳ ಸ್ನಾತಕೋತ್ತರ ಪದವಿಗೆ ಅವಕಾಶವನ್ನು ಒದಗಿಸಲಾಗಿದೆಯೆಂದು ಮಾಹಿತಿಯನ್ನಿತ್ತುರು. ಇನ್ನುಳಿದಂತೆ ವಿಜ್ಞಾನ ವಿಭಾಗದಲ್ಲಿ ಸೂಕ್ಷ್ಮಾಣು ಜೀವ ವಿಜ್ಞಾನ, ಜೀವ ರಸಾಯನ ಶಾಸ್ತ್ರ, ಯೋಗ ವಿಜ್ಞಾನ, ರಸಾಯನ ಶಾಸ್ತ್ರ, ಗÀಣಕ ವಿಜ್ಞಾನ, ಕಲಾ ವಿಭಾಗದಲ್ಲಿ ಎಂಎಸ್ಡಬ್ಲ್ಯು, ಎಂಎ ಕನ್ನಡ, ರಾಜ್ಯ ಶಾಸ್ತ್ರ, ಇತಿಹಾಸ, ಕೊಡವ ಸ್ನಾತಕೋತ್ತರ ಪದವಿಗಳಿಗೆ ಪ್ರವೇಶ ಪಡೆಯಬಹುದಾಗಿದೆ. ಇವುಗಳೊಂದಿಗೆ ಯೋಗ ವಿಜ್ಞಾನ ವಿಭಾಗದಿಂದ ಡಿಪ್ಲೋಮ ಹಾಗೂ ಸರ್ಟಿಫಿಕೇಟ್ ಕೋರ್ಸ್ಗಳು, ಕೊಡವ ಪಿಜಿ ಡಿಪ್ಲೋಮ ಹಾಗೂ ಸರ್ಟಿಫಿಕೇಟ್ ಕೊರ್ಸ್ಗಳು ಸೇರಿದಂತೆ ಒಟ್ಟು 15 ಕೋರ್ಸ್ಗಳು ಲಭ್ಯವಿರುವುದಾಗಿ ತಿಳಿಸಿದರು. :: ಮೂರು ಕಾಲೇಜುಗಳಲ್ಲಿ ಪಿಜಿಗೆ ಅವಕಾಶ :: ಕೊಡಗು ವಿವಿ ಅಧೀನದಲ್ಲಿ ಜಿಲ್ಲೆ 25 ಕಾಲೇಜುಗಳು ಬರುತ್ತದೆ. ಇವುಗಳಲ್ಲಿ ಮಡಿಕೇರಿಯ ಎಫ್ಎಂಕೆಎಂಸಿ, ಗೋಣಿಕೊಪ್ಪಲಿನ ಕಾವೇರಿ ಕಾಲೇಜು ಮತ್ತು ವಿರಾಜಪೇಟೆ ಅಂತ ಅನ್ನಮ್ಮ ಕಾಲೇಜುಗಳಲ್ಲಿ ಕೆಲ ವಿಷಯಗಳಿಗೆ ಸಂಬಂಧಿಸಿದಂತೆ ಸ್ನಾತಕೋತ್ತರ ಪದವಿ ಪಡೆಯಲು ಅವಕಾಶವಿದ್ದು, ಆ ವಿಭಾಗದ ವಿದ್ಯಾರ್ಥಿಗಳು ಅದರ ಸದುಪಯೋಗ ಪಡೆದುಕೊಳ್ಳಬಹುದು. ಕೊಡಗು ವಿವಿಯ ಸ್ನಾತಕೋತ್ತರ ತರಗತಿಗೆಗೆ ಪ್ರವೇಶ ಪಡೆಯುವವರು ಹೆಚ್ಚಿನ ಮಾಹಿತಿಗಾಗಿ ಕೊಡಗು ವಿಶ್ವ ವಿದ್ಯಾನಿಲಯದ ಜ್ಞಾನ ಕಾವೇರಿ ಆವರಣ ಮೊ.9035476889, 9845821071ನ್ನು ಸಂಪರ್ಕಿಸಬಹುದೆಂದು ತಿಳಿಸಿದರು. :: ಕೌಶಲ್ಯ ಆಧಾರಿತ ತರಬೇತಿ :: ಕೊಡಗು ವಿವಿಯಲ್ಲಿ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗಾಗಿ ಕೌಶಲ್ಯ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತಿದೆ ಮತ್ತು ವಿದ್ಯಾರ್ಥಿಗಳಿಗೆ ಉತ್ತಮ ಉದ್ಯೋಗಾವಕಾಶ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಪ್ರತಿಷ್ಠಿತ ಉದ್ಯಮ ಸಂಸ್ಥೆಗಳ ಜೊತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆಯೆಂದು ಮಾಹಿತಿ ನೀಡಿದರು. ಕೊಡಗು ವಿವಿ ರಿಜಿಸ್ಟ್ರಾರ್ ಡಾ.ಸುರೇಶ್ ಅವರು ಮಾತನಾಡಿ, ಕೊಡಗು ವಿವಿಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಯುವಕ ಮತ್ತು ಯುವತಿಯರ ವಸತಿ ನಿಲಯಗಳು ಇವೆ. ವಿವಿಗೆ ಬರಲು ಅನುಕೂಲವಾಗುವಂತೆ ಕೆಎಸ್ಆರ್ಟಿಸಿ ಬಸ್ ವ್ಯವಸ್ಥೆಯೂ ಕುಶಾಲನಗರದಿಂದ ಇರುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಡಿಕೇರಿ ಎಫ್ಎಂಕೆಎಂಸಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಡಾ.ರಾಘವ, ಉಪನ್ಯಾಸಕರಾದ ಪ್ರೊ.ರವಿ ಶಂಕರ್ ಉಪಸ್ಥಿತರಿದ್ದರು.








