
ವಿರಾಜಪೇಟೆ ಆ.19 NEWS DESK : ಭವ್ಯ ರಾಷ್ಟ್ರದ ನಿರ್ಮಾಣದಲ್ಲಿ ಎನ್ಎಸ್ಎಸ್ ಹಾಗೂ ಯುವ ರೆಡ್ ಕ್ರಾಸ್ ಘಟಕಗಳ ಪಾತ್ರ ಅಪಾರವಾಗಿದೆ ಎಂದು ವಿರಾಜಪೇಟೆ ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಬೆನೆಡಿಕ್ಟ್ ಆರ್.ಸಾಲ್ಡಾನ್ಹಾ ಅವರು ಅಭಿಪ್ರಾಯಪಟ್ಟರು. ವಿರಾಜಪೇಟೆ ಸೆಂಟ್ ಆನ್ಸ್ ಪದವಿ ಕಾಲೇಜಿನ ಎನ್ಎಸ್ಎಸ್ ಹಾಗೂ ಯುವ ರೆಡ್ ಕ್ರಾಸ್ ಘಟಕಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ಎನ್ ಎಸ್ ಎಸ್ ಸಮಾಜ ಸೇವೆಯನ್ನು ಕಲಿಸಿದರೆ, ಯುವ ರೆಡ್ ಕ್ರಾಸ್ ಆರೋಗ್ಯದ ಪಾಠವನ್ನು ಕಲಿಸುತ್ತದೆ. ವಿದ್ಯಾರ್ಥಿಗಳು ಪ್ರಾಮಾಣಿಕತೆ, ಜವಾಬ್ದಾರಿಯುತ ಸೇವೆ ಹಾಗೂ ಮಾನವೀಯ ಮೌಲ್ಯಗಳನ್ನು ಅರಿತಾಗ ಮಾತ್ರ ನೈಜ ಸೇವೆಯು ಸಮಾಜಕ್ಕೆ ದೊರಕುತ್ತದೆ. ಆ ನಿಟ್ಟಿನಲ್ಲಿ ಭವಿಷ್ಯದ ಹಿತದೃಷ್ಟಿಯಿಂದ ಸರ್ವರೂ ಸದೃಢ ರಾಷ್ಟ್ರದ ನಿರ್ಮಾಣಕ್ಕೆ ಮುಂದಾಗಬೇಕು. ಯಂಗ್ ಇಂಡಿಯಾ ಬಲಿಷ್ಠವಾಗಬೇಕೆಂದರು. ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಸಂತ ಅನ್ನಮ್ಮ ಪದವಿ ಕಾಲೇಜಿನ ವ್ಯವಸ್ಥಾಪಕರಾದ ರೆ.ಫಾ.ಮದಲೈ ಮುತ್ತು, ಸೇವಾ ಮನೋಭಾವನೆ ಎಂಬುವುದು ಎಲ್ಲರಲ್ಲಿಯೂ ಬರಬೇಕು. ಪರರ ಹಿತಕ್ಕಾಗಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಬೇಕು. ಶಿಸ್ತನ್ನು ಪರಿಪಾಲಿಸುವುದರ ಜೊತೆಗೆ ಸಂಸ್ಥೆಗೂ ಹಾಗೂ ಪೋಷಕರಿಗೂ ಕೀರ್ತಿಯನ್ನು ತರಬೇಕೆಂದು ಸಲಹೆ ನೀಡಿದರು. ಸಕ್ರಿಯವಾಗಿ ಕಾಲೇಜಿನ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳಬೇಕೆಂದು ಕಿವಿಮಾತು ಹೇಳಿದರು. ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಹೇಮ ಮಾತನಾಡಿ, ಈ ಎರಡೂ ಘಟಕಗಳು ನಮ್ಮ ಕಾಲೇಜಿನಲ್ಲಿ ಕ್ರಿಯಾಶೀಲ ಘಟಕಗಳಾಗಿದ್ದು ಇತ್ತೀಚಿಗೆ ನ್ಯಾಕ್ ಸಂಸ್ಥೆಯವರಿಂದ ಘಟಕಗಳ ಕಾರ್ಯಚಟುವಟಿಕೆಗಳಿಗೆ ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ ಎಂದರು. ಈ ಘಟಕಗಳಿಂದ ಮತ್ತಷ್ಟು ವಿನೂತನ ಕಾರ್ಯಕ್ರಮಗಳು ಹೊರ ಹೊಮ್ಮಲ್ಲಿ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಭೋಧಿಸಿ ಮಾತನಾಡಿ, ಎನ್ ಎಸ್ ಎಸ್ ಹಾಗೂ ಯುವ ರೆಡ್ ಕ್ರಾಸ್ ಘಟಕಗಳು ನಮ್ಮ ವಿದ್ಯಾಸಂಸ್ಥೆಯಲ್ಲಿ ಪ್ರಮುಖವಾದ ಘಟಕಗಳಾಗಿದ್ದು, ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿವೆ ಎಂದರು. ವಿದ್ಯಾಸಂಸ್ಥೆ ಹಾಗೂ ಸಂಸ್ಥೆಯ ಹೊರಗೂ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಸಾಮಾಜಿಕ ಜಾಗೃತಿಯನ್ನು ಮೂಡಿಸುತ್ತಿದೆ ಎಂದು ಹೇಳಿದರು. ಕಾಲೇಜಿನ ಎನ್ ಎಸ್ ಎಸ್ ಘಟಕದ ಅಧಿಕಾರಿಗಳಾದ ಬಿ.ಎನ್.ಶಾಂತಿಭೂಷಣ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಯುವ ರೆಡ್ ಕ್ರಾಸ್ ಘಟಕದ ಅಧಿಕಾರಿ ವಿಲೀನ ಗೋನ್ಸಾಲ್ವೇಸ್ ಸ್ವಾಗತಿಸಿದರು, ವಿದ್ಯಾರ್ಥಿನಿ ಪ್ರಕೃತಿ ನಿರೂಪಿಸಿದರು, ವಿದ್ಯಾರ್ಥಿ ಮುತ್ತಪ್ಪ ವಂದಿಸಿದರು. ವಿದ್ಯಾಸಂಸ್ಥೆಯ ವತಿಯಿಂದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೆನೆಡಿಕ್ಟ್ ಆರ್ ಸಾಲ್ಡಾನ್ಹಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ಉಪನ್ಯಾಸಕರು, ಎನ್ ಎಸ್ ಎಸ್ ಹಾಗೂ ಯುವ ರೆಡ್ ಕ್ರಾಸ್ ಘಟಕಗಳ ಸ್ವಯಂ ಸೇವಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.









