
ಮಡಿಕೇರಿ ಆ.21 NEWS DESK : ಕೃಷಿಯಲ್ಲಿ ತ್ವರಿತ ಪ್ರಗತಿ ಸಾಧಿಸಬೇಕು. ಹೆಚ್ಚು ಆದಾಯವನ್ನು ಗಳಿಸುವುದರೊಂದಿಗೆ ಕಡಿಮೆ ಶ್ರಮದ ಬಳಕೆ ಆಗಬೇಕೆಂಬ ಉದ್ದೇಶದಿಂದ ಇತ್ತೀಚಿಗೆ ಕೀಟನಾಶಕ, ರಾಸಾಯನಿಕ ಗೊಬ್ಬರಗಳ ಬಳಕೆ ಹೆಚ್ಚುತ್ತಿದ್ದು, ಇದು ನಮ್ಮ ಆರೋಗ್ಯ ಸುತ್ತಮುತ್ತಲಿನ ಪರಿಸರ ಹಾಗೂ ಪ್ರಾಣಿ ಸಂಕುಲಗಳು ಕ್ಷೀಣಿಸಿ ಹೋಗಲು ಪ್ರಮುಖ ಕಾರಣವೆಂದು ಎಫ್.ಎಂ.ಕೆ.ಎಂ.ಸಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಇ.ತಿಪ್ಪೇಸ್ವಾಮಿ ಅಭಿಪ್ರಾಯಪಟ್ಟರು. ವಿರಾಜಪೇಟೆ ಕಾವೇರಿ ಪದವಿ ಕಾಲೇಜಿನ ಐಕ್ಯೂಎಸಿ ಹಾಗೂ ಅರ್ಥಶಾಸ್ತ್ರ ವಿಭಾಗದ ಸಹಯೋಗದಲ್ಲಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಕೊಡಗು ಜಿಲ್ಲೆಯಲ್ಲಿ ಭತ್ತ ಬೆಳೆಯ ಅವಕಾಶಗಳು ಹಾಗೂ ಸವಾಲುಗಳು ಎಂಬ ವಿಷಯದ ಕುರಿತ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಕೊಡಗು ಜಿಲ್ಲೆ ಬೆಟ್ಟ ಗುಡ್ಡಗಳಿಂದ ಆವೃತವಾದ ಪ್ರದೇಶ. ಇಲ್ಲಿ ಸಾವಯವ ಪದ್ಧತಿಯಲ್ಲಿ ಭತ್ತ ಬೆಳೆಸುವುದು ಅತಿ ಮುಖ್ಯ . ಭತ್ತ ಬೆಳೆಯುವ ಜಿಲ್ಲೆಗಳಲ್ಲಿ ಕೊಡಗು ಜಿಲ್ಲೆಯು ಸಹ ಒಂದಾಗಿದ್ದು, ಭತ್ತ ಬೆಳೆಯುವ ಪದ್ಧತಿ, ಸ್ವರೂಪ, ಭತ್ತದ ತಳಿಗಳು ಬೇರೆ ಯಾಗಿದೆ. ಕೊಡಗು ಜಿಲ್ಲೆಯಲ್ಲಿ ಕಳೆದ ವರ್ಷ ಮೂವತ್ತು ಸಾವಿರ ಹೆಕ್ಟರ್ ನಷ್ಟು ಭತ್ತವನ್ನು ಬೆಳೆಯಲಾಗಿತ್ತು. ಆದರೆ ಈ ವರ್ಷ ಇದರ ಪ್ರಮಾಣವು ಸಹ ಕಡಿಮೆಯಾಗಿದೆ ಎಂದರು. ಕೊಡಗಿನಲ್ಲಿ ಪ್ರತಿ ಹೆಕ್ಟೇರಿಗೆ 32 ಕ್ವಿಂಟಾಲ್ ಇಳುವರಿಯನ್ನು ಪಡೆಯಬಹುದಾಗಿತ್ತು. ಆದರೆ ವರ್ಷಗಳು ಕಳೆದಂತೆ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತಿರುವ ಕಾರಣದಿಂದಾಗಿ ಇಳುವರಿಯ ಪ್ರಮಾಣವು ಸಹ ಕಡಿಮೆಯಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಜಿಲ್ಲೆಯಲ್ಲಿ ಕಾಲುವೆ ನೀರಾವರಿ ಪದ್ಧತಿ ಇಲ್ಲದಿರುವುದು ಎಂದು ಹೇಳಿದರು. ಕೊಡಗು ಜಿಲ್ಲೆಯಲ್ಲಿ ಭತ್ತ ಬೆಳೆಯಲು ಇರುವ ಅವಕಾಶಗಳನ್ನು ನೋಡುವುದಾದರೆ ವಿಶಾಲವಾದ ಅಂತಹ ಕೃಷಿ ಭೂಮಿ, ಉತ್ತಮ ಮಳೆಯಾಗುವುದರಿಂದ ನೀರಿನ ಕೊರತೆಯೂ ಕೂಡ ಇರುವುದಿಲ್ಲ , ಇದರೊಂದಿಗೆ ಕೊಡಗಿನಲ್ಲಿ ಹೈನುಗಾರಿಕೆಯು ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿರುವುದರಿಂದ ಉತ್ತಮ ಸಾವಯವ ಗೊಬ್ಬರವು ಲಭ್ಯವಿದ್ದು ಭೂಮಿಯ ಫಲವತ್ತತೆಯನ್ನು ಹೆಚ್ಚಿಸಿ ಉತ್ತಮ ಇಳುವರಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಇದರೊಂದಿಗೆ ಪುಟ್ಟ ಜಿಲ್ಲೆಯಾದ ಕೊಡಗಿನಲ್ಲಿ ವಿವಿಧ ಕೃಷಿ ವಿಸ್ತರಣಾ ಸೇವೆಯ ಸಂಶೋಧನಾ ಸಂಸ್ಥೆಗಳು ಸಹ ಕಾರ್ಯವನ್ನು ನಿರ್ವಹಿಸುತ್ತಿದ್ದು ಅವರ ಸಹಕಾರದೊಂದಿಗೆ ಉತ್ತಮ ರೀತಿಯಲ್ಲಿ ಭತ್ತ ಬೆಳೆಯಬಹುದಾಗಿದೆ .ಆದರೂ ಜಿಲ್ಲೆಯಲ್ಲಿ ಭತ್ತದ ಬೆಳೆಯನ್ನು ಬೆಳೆಯಲು ಒಂದಷ್ಟು ಸವಾಲುಗಳು ಸಹ ಎದುರಿಸಬೇಕಾಗಿದ್ದು ನಗರೀಕರಣದ ಪರಿಣಾಮವಾಗಿ ಭತ್ತದ ಗದ್ದೆಗಳು ಸೈಟುಗಳಾಗಿ ಪರಿವರ್ತನೆಯಾಗುತ್ತಿದೆ. ಮೂಲಭೂತ ಸೌಕರ್ಯಗಳಲ್ಲೊಂದಾದ ರಸ್ತೆಯ ನಿರ್ಮಾಣಕ್ಕೆ ಹೆಚ್ಚಿನ ಪ್ರಮಾಣದ ಕೃಷಿ ಭೂಮಿ ನಷ್ಟವಾಗುತ್ತಿದೆ. ಅಷ್ಟೇ ಅಲ್ಲದೆ ವರ್ಷದಿಂದ ವರ್ಷಕ್ಕೆ ಅಂತರ್ಜಲದ ಪ್ರಮಾಣವು ಕುಸಿಯುತ್ತಿದ್ದು ಗುಡ್ಡಗಾಡು ಪ್ರದೇಶವಾದ ಕಾರಣ ಕೃಷಿ ಭೂಮಿಯಲ್ಲಿ ಮಣ್ಣಿನ ಸವಕಳಿ ಆಗುತ್ತಿದೆ. ನೀರು ಮೇಲ್ಬಾಗದಿಂದ ಹರಿದು ಬರುವುದರಿಂದ ಕೃಷಿ ಭೂಮಿಯಲ್ಲಿ ಪೋಷಕಾಂಶಗಳ ನಿರ್ವಹಣೆ ಕಷ್ಟವಾಗುತ್ತಿದೆ. ಇದರೊಂದಿಗೆ ನಿರಂತರವಾಗಿ ಕಾಡುಪ್ರಾಣಿಗಳ ಹಾವಳಿ ಕಳೆ ಗಿಡಗಳು ಹಾಗೂ ಕಾರ್ಮಿಕರ ಸಮಸ್ಯೆಯಿಂದಾಗಿ ಇತ್ತೀಚಿನ ದಿನಗಳಲ್ಲಿ ಕೃಷಿ ಚಟುವಟಿಕೆ ಗಣನೀಯವಾಗಿ ಕಡಿಮೆಯಾಗುತ್ತಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಬೇನಿಡಿ ಆರ್.ಸಲ್ದಾನ, ಕೊಡಗು ಜಿಲ್ಲೆ ಕೃಷಿ ಪ್ರಧಾನವಾದ ಜಿಲ್ಲೆಯಾಗಿದ್ದು, ಕೃಷಿಯು ನಮ್ಮ ಹಿರಿಯರಿಂದ ಬಳುವಳಿಯಾಗಿ ಬಂದ ಒಂದು ಸಂಸ್ಕೃತಿ. ಅದರಲ್ಲೂ ಭತ್ತದ ಬೆಳೆ. ಭತ್ತದ ಬೆಳೆಯು ನಮ್ಮ ಆಚಾರ ವಿಚಾರ ಹಬ್ಬ ಹರಿದಿನಗಳೊಂದಿಗೆ ನಿಕಟ ಸಂಬಂಧವನ್ನು ಹೊಂದಿದೆ. ಇತ್ತೀಚಿನ ದಿನಗಳಲ್ಲಿ ಭತ್ತದ ಗದ್ದೆಗಳನ್ನು ಪಾಳು ಬಿಡುತ್ತಿರುವುದು ಬೇಸರದ ಸಂಗತಿಯಾಗಿದ್ದು ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಹುತ್ತರಿ ಅಂತಹ ಕೃಷಿ ಪ್ರಧಾನಗಳನ್ನು ಆಚರಿಸಲು ಬೇರೆ ಜಿಲ್ಲೆಗಳಿಂದ ಕದಿರು ತರುವ ಪರಿಸ್ಥಿತಿ ಎದುರಾಗಬಹುದು. ಆದ್ದರಿಂದ ಯುವ ಜನತೆ ಕೃಷಿಯ ಕಡೆಗೆ ಒಲವನ್ನು ತೋರಿಸಿ ವಿದ್ಯಾಭ್ಯಾಸದೊಂದಿಗೆ ಕೃಷಿ ಚಟುವಟಿಕೆಗಳನ್ನು ಸಹ ಕಲಿಯಬೇಕೆಂದರು. ಅಂತಿಮ ಬಿ.ಎ.ವಿದ್ಯಾರ್ಥಿನಿ ಪಿ.ಅಂಜಲಿ, ಅಂತಿಮ ಬಿ.ಕಾಂ.ವಿದ್ಯಾರ್ಥಿನಿಯರಾದ ಬಿ.ಎಸ್.ರಕ್ಷಿತಾ, ಮುತ್ತಮ್ಮ , ದ್ವಿತೀಯ ಬಿ.ಎ ವಿದ್ಯಾರ್ಥಿನಿ ದೀಕ್ಷ ಕೊಡಗಿನಲ್ಲಿ ಭತ್ತದ ಬೆಳೆಯ ಅವಕಾಶಗಳು ಹಾಗೂ ಸವಾಲುಗಳು ಎಂಬ ವಿಷಯದ ಕುರಿತು ವಿಚಾರ ಮಂಡನೆ ಮಾಡಿದರು. ಈ ಸಂದರ್ಭ ಕಾಲೇಜಿನ ಐಕ್ಯೂ ಎಸಿ ಸಂಚಾಲಕಿ ಪ್ರಿಯ ಮುದ್ದಪ್ಪ , ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ನಾಗರಾಜು, ಕಾಲೇಜಿನ ಉಪ ಪ್ರಾಂಶುಪಾಲೆ ಡಾ. ವೀಣಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ಉಪನ್ಯಾಸಕ ವರ್ಗ, ಆಡಳಿತಾತ್ಮಕ ಸಿಬ್ಬಂದಿಗಳು ವಿದ್ಯಾರ್ಥಿಗಳು ಹಾಜರಿದ್ದರು.









