


ಮಡಿಕೇರಿ ಆ.25 NEWS DESK : ವಿರಾಜಪೇಟೆಯ ಪ್ರಗತಿ ಶಾಲೆಯಲ್ಲಿ ಆಯೋಜನೆಗೊಂಡಿರುವ ವಿರಾಜಪೇಟೆ ತಾಲ್ಲೂಕು ಮಟ್ಟದ ಕ್ರೀಡಾ ಕೂಟವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಉದ್ಘಾಟಿಸಿದರು. ಬಳಿಕ ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಿದ ಶಾಸಕರು, ಕ್ರೀಡೆಯು ಪ್ರತಿಯೊಬ್ಬರ ಜೀವನದಲ್ಲಿ ಮಾನಸಿಕ ಸಮತೋಲನ ವೃದ್ಧಿಸಿಕೊಂಡು ವಿದ್ಯಾಭ್ಯಾಸವನ್ನು ಉತ್ತಮ ರೀತಿಯಲ್ಲಿ ಮಾಡಲು ಸಹಕಾರಿಯಾಗಿದೆ. ದೈಹಿಕ ಸಾಮರ್ಥ್ಯವನ್ನು ಕಾಪಾಡಿಕೊಳ್ಳಲು ಕ್ರೀಡೆಯು ಬಹುಮುಖ್ಯವಾಗಿದೆ. ಪ್ರತಿಯೊಂದು ಕ್ರೀಡೆಯಲ್ಲಿಯೂ ಸೋಲು ಗೆಲುವಿನೊಂದಿಗೆ ಭಾಗವಹಿಸುವಿಕೆಯೂ ಅತಿ ಮುಖ್ಯವಾಗಿರುತ್ತದೆ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮನ್ನು ಕ್ರೀಡೆಯಲ್ಲಿ ತೊಡಗಿಸಿಕೊಂಡು ಉನ್ನತ ಪ್ರದರ್ಶನವನ್ನು ನೀಡಿ ಜೀವನದಲ್ಲಿ ಯಶಸ್ಸು ಕಾಣುವಂತಾಗಬೇಕೆಂದು ಶುಭ ಹಾರೈಸಿದರು. ಈ ಸಂದರ್ಭ ಪ್ರಗತಿ ಶಾಲೆಯ ಸಂಸ್ಥಾಪಕರು, ಮಾದಂಡ ಎಸ್.ಪೂವಯ್ಯ, ಮಾದಂಡ ತಿಮ್ಮಯ್ಯ ಆಡಳಿತ ಅಧಿಕಾರಿ, ಸುಷ್ಮ ತಿಮ್ಮಯ್ಯ, ಪುರಸಭೆ ಅಧ್ಯಕ್ಷೆ ದೇಚಮ್ಮ ಕಾಳಪ್ಪ, ಉಪಾಧ್ಯಕ್ಷೆ ಫಸಿಯಾ ತಬ್ಸುಂ,ಪುರಸಭೆ ಸಾಯಿ ಸಮಿತಿ ಅಧ್ಯಕ್ಷ ಅಬುದುಲ್ ಜಲಿಲ್, ಬಿ.ಇ.ಆನಂದ್, ವಿವಿಧ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು, ಸಿಬ್ಬಂದಿಗಳು, ಪುರಸಭೆ ಸದಸ್ಯರಾದ ರಾಜೇಶ್, ಮತೀನ್, ಕಾಂಗ್ರೆಸ್ ಮುಖಂಡರಾದ ಜೋಕಿಮ್, ಕುಂದಚೀರ ಮಂಜು ದೇವಯ್ಯ, ಎ.ವಿ.ಮಂಜುನಾಥ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಜಮ್ಮಡ ಸೋಮಣ್ಣ ಹಾಗೂ ಪ್ರಮುಖರು ಉಪಸ್ಥಿತರಿದ್ದರು.








