
ಮಡಿಕೇರಿ ಸೆ.22 NEWS DESK : ಕೊಡವರು ಕೊಡವ ಧರ್ಮಕ್ಕೆ ಸೇರಿದವರಾಗಿರುವುದರಿಂದ ಸರಕಾರದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಸಂದರ್ಭ ಕೊಡವರು ತಮ್ಮ ಜಾತಿ, ಧರ್ಮವನ್ನು ‘ಕೊಡವ’ ಎಂದೇ ನಮೂದಿಸಬೇಕೆಂದು ಹಿರಿಯ ಕೊಡವ ಅಭಿಮಾನಿಗಳ ಸಂಘದ ಪ್ರಮುಖ ಉಳ್ಳಿಯಡ ಎಂ.ಪೂವಯ್ಯ ಅವರು ಮನವಿ ಮಾಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೊಡವ ಧರ್ಮ’ ವಿಚಾರಕ್ಕೆ ಸಂಬಂಧಿಸಿದಂತೆ ಅಖಿಲ ಕೊಡವ ಸಮಾಜದಿಂದ ಕರೆಯಲಾಗಿದ್ದ ಸಭೆಯಲ್ಲಿ, ಒಂದು ಗುಂಪಿನ ಕೆಲವರು ವಿನಾಕಾರಣ ಗದ್ದಲವೆಬ್ಬಿಸಿ ಸಭೆಯನ್ನೇ ನಡೆಯದಂತೆ ಮಾಡಿರುವುದು ಖಂಡನೀಯವೆಂದು ತಿಳಿಸಿದರು. ಕೊಡವರು ಮೂಲದಲ್ಲಿ ‘ಕೊಡವ ಧರ್ಮ’ದವರೇ ಆಗಿದ್ದಾರೆ. 15ನೇ ಶತಮಾನದವರೆಗೂ ಇತರೆ ಯಾವುದೇ ಧರ್ಮಗಳ ಚೌಕಟ್ಟಿಗೆ ಒಳಪಡದೆ ತಮ್ಮದೇ ಆದ ಬದುಕಿನ ಪದ್ಧತಿ, ರೀತಿ ರಿವಾಜುಗಳೊಂದಿಗೆ ಬದುಕುತ್ತಿದ್ದರು. 16ನೇ ಶತಮಾನದ ಮಧ್ಯಭಾಗ 1540ರಿಂದ ಇಕ್ಕೇರಿ ರಾಜವಂಶಸ್ಥ ಲಿಂಗಾಯಿತ ರಾಜರು 1834ರವರೆಗೆ ಕೊಡಗನ್ನಾಳಿದರು. ಈ ಹಂತದಲ್ಲಿ ಕೊಡಗಿನ ಕೊಡವರ ಕೊಡವ ಧರ್ಮದಲ್ಲಿ ಸಾಕಷ್ಟು ಬದಲಾವಣೆಗಳು ಕಂಡು ಬಂದವು, ನಮ್ಮಲ್ಲಿ ಇಲ್ಲದ ಹಬ್ಬಗಳ ಆಚರಣೆಗಳನ್ನು ಅನುಸರಿಸಲಾರಂಭಿಸಿದರು ಎಂದು ಅಭಿಪ್ರಾಯಪಟ್ಟರು. ಕೊಡವ ಸಮುದಾಯದವರು ಕಳೆದ ಕೆಲವು ಶತಮಾನಗಳಿಂದ ಅನ್ಯ ಧರ್ಮದ ಪ್ರಭಾವಕ್ಕೆ ಒಳಗಾಗಿ ಇತರೆ ಧರ್ಮದ ಆಚರಣೆಗಳನ್ನು ತಮ್ಮಲ್ಲಿ ಅಳವಡಿಸಿಕೊಂಡರು. ಈ ರೀತಿ ಕಾಲಾಂತರದಲ್ಲಿ ಆಗಿರುವ ತಪ್ಪನ್ನು ತಿದ್ದಿಕೊಂಡು ಪರಿವರ್ತನೆಯ ಈ ಸಮಯದಲ್ಲಿ ನಡೆಯುತ್ತಿರುವ ಜಾತಿ ಸಮೀಕ್ಷೆಯ ಸಂದರ್ಭ ನಮ್ಮ ಮೂಲ ಧರ್ಮವನ್ನು ಸಾರುವುದರೊಂದಿಗೆ, ಕೊಡವ ಧರ್ಮದಲ್ಲಿಯೇ ಬದುಕನ್ನು ಮುಂದುವರೆಸುವುದು ಸೂಕ್ತ ಎಂದರು. ಸಂಘದ ಸದಸ್ಯರಾದ ಉಳ್ಳಿಯಡ ಡಾಟಿ ಪೂವಯ್ಯ ಅವರು ಮಾತನಾಡಿ, ಶತ ಶತಮಾನಗಳಿಂದ ಕೊಡಗಿನಲ್ಲಿರುವ ಕೊಡವರು ತಮ್ಮ ಆಚಾರ ವಿಚಾರ ಸಂಸ್ಕೃತಿಗಳೊಂದಿಗೆ ಬದುಕು ನಡೆಸುತ್ತಿದ್ದವರು. ಕೊಡವ ಧರ್ಮ ಸಂವಿಧಾನ ಬದ್ಧವಾಗಿ ಅಧಿಕೃತವಾಗಿಲ್ಲವಾದರು, ಈ ಬಗ್ಗೆ ಬೇಡಿಕೆಯನ್ನು ಮುಂದಿಟ್ಟು, ಅದನ್ನು ಪಡೆಯುವ ನಿಟ್ಟಿನಲ್ಲಿ ಮುನ್ನಡಿಯನ್ನಿಡುವುದಾಗಿ ತಿಳಿಸಿದರು. ಕೊಕ್ಕಲೇರ ಎ.ಕಾರ್ಯಪ್ಪ ಅವರು ಮಾತನಾಡಿ, ಕೊಡವರಿಗೆ ಕಾವೇರಿ ಸಂಕ್ರಮಣ, ಪುತ್ತರಿ, ಕೈಲ್ ಪೋಲ್ದ್ ಪ್ರಮುಖ ಹಬ್ಬಗಳು. ಕೊಡವರಿಗೆ ಹಿಂದಿನಿಂದಲೂ ಯಾವುದೇ ಮಠಗಳಾಗಲಿ, ಗುರುಗಳಾಗಲಿ ಇಲ್ಲ. ನಮ್ಮ ದೇವರು ಎಂದರೆ ಅದು ‘ಗುರು ಕಾರೋಣ’ರು ಮಾತ್ರ. ಹೀಗಿದ್ದೂ ಇತರೆ ಧರ್ಮದ ಪ್ರಭಾವಗಳಿಂದ ನಾವು ನಮ್ಮದಲ್ಲದ ಹಬ್ಬಹರಿದಿನಗಳನ್ನು ಆಚರಿಸುತ್ತಿರುವುದಾಗಿ ಗಮನ ಸೆಳೆದರು. ಮಣವಟ್ಟಿರ ಪಾಪು ಚಂಗಪ್ಪ ಮಾತನಾಡಿ, ಹುಟ್ಟಿನಿಂದ ಸಾವಿನವರೆಗಿನ ಕೊಡವ ಸಮುದಾಯದ ಆಚರಣೆಗಳು ಸಂಪೂರ್ಣ ವಿಭಿನ್ನವಾಗಿದೆ. ಇತ್ತೀಚಿನ ದಿನಗಳಲ್ಲಿ ಹಿಂದೂ ಆಚರಣೆಗಳಿಗೆ ಕೊಡವರು ಒತ್ತು ನೀಡಿದ್ದಾರೆ ಎಂದರು.








