
ಮಡಿಕೇರಿ NEWS DESK ಸೆ.23 : ಸ್ವಸ್ತಿಕ್ ಎಂಟರ್ಟೈನ್ಮೆಂಟ್ ಬ್ಯಾನರ್ ನಡಿ ನಿರ್ಮಾಣಗೊಂಡಿರುವ ‘ಕಂದೀಲು’ ಕನ್ನಡ ಚಲನಚಿತ್ರಕ್ಕೆ ಚಿತ್ರದ ನಿರ್ದೇಶಕಿ ಕೊಡಗಿನ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಹಾಗೂ ನಿರ್ಮಾಪಕ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಅವರು ರಾಷ್ಟ್ರಪತಿಗಳಿಂದ ಇಂದು ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದರು. ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡಿದರು. 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಪ್ರಾದೇಶಿಕ ಚಿತ್ರ ವಿಭಾಗಗಳಲ್ಲಿ ಕನ್ನಡ ಸೇರಿದಂತೆ ಒಟ್ಟು 13 ಪ್ರಾದೇಶಿಕ ಭಾಷೆಗಳ 13 ಸಿನಿಮಾಗಳಿಗೆ ರಾಷ್ಟ್ರ ಪ್ರಶಸ್ತಿ ನೀಡಲಾಯಿತು. ಕೊಡಗು ಜಿಲ್ಲೆಯ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಅವರು ನಿರ್ಮಿಸಿ, ನಿರ್ದೇಶಿಸಿರುವ ‘ಕಂದೀಲು’ ಚಿತ್ರ ಫೀಚರ್ ಫಿಲ್ಮ್ ವಿಭಾಗದಲ್ಲಿ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ‘ಕಂದೀಲು’ ಗ್ರಾಮವೊಂದರ ಕಥೆಯಾಗಿದ್ದು, ರೈತ ಹಾಗೂ ಆತನ ಕುಟುಂಬದ ಸುತ್ತ ಬೆಳಕು ಚೆಲ್ಲಲಾಗಿದೆ. ‘ಕಂದೀಲು’ ಚಿತ್ರದ ಮೂಲಕ ರಾಷ್ಟ್ರೀಯ ಪ್ರಶಸ್ತಿಯನ್ನು ಗಳಿಸಿರುವ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಅವರು ರಾಷ್ಟ್ರ ಪ್ರಶಸ್ತಿ ಪಡೆದ ಕೊಡಗಿನ ಮೊದಲ ಮಹಿಳಾ ನಿರ್ದೇಶಕಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ರಾಷ್ಟ್ರೀಯ ಪ್ರಶಸ್ತಿ ಪಡೆದು ಹರ್ಷ ವ್ಯಕ್ತಪಡಿಸಿದ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಹಾಗೂ ಪತಿ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಅವರು ಇಡೀ ಚಿತ್ರತಂಡ ಹಾಗೂ ಕಲಾವಿದರ ಸಹಕಾರದಿಂದ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿದೆ. ಈ ಪ್ರಶಸ್ತಿ ಚಲನಚಿತ್ರ ರಂಗದಲ್ಲಿ ಮತ್ತಷ್ಟು ಸೇವೆಯನ್ನು ಸಲ್ಲಿಸಲು ಸ್ಫೂರ್ತಿ ತುಂಬಿದೆ ಎಂದರು. ಕೊಲ್ಕತ್ತ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾಗಿದ್ದ “ಕಂದೀಲು” ಚಲನಚಿತ್ರ 15ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕನ್ನಡ ಸಿನಿಮಾದ ಸ್ಪರ್ಧಾತ್ಮಕ ವಿಭಾಗದಲ್ಲಿ “2ನೇ ಅತ್ಯುತ್ತಮ ಚಿತ್ರ ಪ್ರಶಸ್ತಿ” ಯನ್ನು ತನ್ನದಾಗಿಸಿಕೊಂಡಿತ್ತು. ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದ ಈ ಚಿತ್ರ ವಿಶ್ವ ವಿಖ್ಯಾತ ಮೈಸೂರು ದಸರಾ ಚಲನಚಿತ್ರೋತ್ಸವದಲ್ಲಿ ಇನಾಕ್ಸ್ ಚಿತ್ರಮಂದಿರದಲ್ಲಿ ಪ್ರದರ್ಶನಗೊಂಡು ಜನಮೆಚ್ಚುಗೆ ಪಡೆದುಕೊಂಡಿತ್ತು. ವಿಭಿನ್ನ ಕಥಾ ಹಂದರದ ‘ಕಂದೀಲು’ ಚಿತ್ರದ ಮುಖ್ಯಪಾತ್ರದಲ್ಲಿ ಪ್ರಭಾಕರ್ ಬಿ.ಕುಂದರ, ವಿನಿತಾ ರಾಜೇಶ್, ಗುರು ತೇಜಸ್, ಬಾಲ ನಟಿಯಾಗಿ ಈರಮಂಡ ಕುಷಿ ಕಾವೇರಮ್ಮ, ಚಂದ್ರಕಾಂತ್ ಕೋಟುಪಾಡಿ, ವೆಂಕಟೇಶ್ ಪಸಾದ್, ಹರಿಣಿ ವಿಜಯ್, ರಮೇಶ್ ಕೂಡ್ಲು, ಬಸವರಾಜ್, ಆಡುಗುಡಿ ಶ್ರೀನಿವಾಸ್, ಮಂಜುನಾಥ್, ಶಿವಕುಮಾರ್, ಹನುಮಂತ, ಜಿ.ಸಿ.ಪರಮೇಶ್ ಗೂಗರದೊಡ್ಡಿ, ದೊಡ್ಡಣ್ಣ, ಬಂಗಾರಶೆಟ್ಟಿ ಮುದುವಾಡಿ, ರತ್ನಾಕುಮಾರಿ, ರೋಹಿಣಿ ಮತ್ತಿತರರು ಅಭಿನಯಿಸಿದ್ದಾರೆ. ಶ್ರೀ ಸುರೇಶ್ ಸಂಗೀತ, ಪಿ.ವಿ.ಆರ್.ಸ್ವಾಮಿ ಛಾಯಾಗ್ರಹಣ ಚಿತ್ರಕ್ಕಿದ್ದು, ಕಥೆ, ಸಂಕಲನ, ಸಂಭಾಷಣೆ ಎನ್.ನಾಗೇಶ್, ಚಿತ್ರಕಥೆ ಸ.ಹರೀಶ್ ಹಾಗೂ ಎನ್.ನಾಗೇಶ್ ಒದಗಿಸಿದ್ದಾರೆ. ಪ್ರಸನ್ನ ಪನಕನಹಳ್ಳಿ, ನಾಗರಾಜ್ ಡಿಕ್ಕಿ, ಇತಿಹಾಸ್ ಶಂಕರ್, ಕಲರಿಂಗ್ ಬುಟ್ಟಂಡ ನಿಖಿಲ್ ಕಾರ್ಯಪ್ಪ, ಕಲಾ ನಿರ್ದೇಶನ ಚೇತನ್ ಕೆಂಕೆರೆ, ಮೇಕಪ್ ಶಿವು, ಕಾಸ್ಟಿಮ್ ಡಿಸೈನರ್ ಸುಧಾ ಪ್ರೊಡಕ್ಸನ್ ಟೀಮ್ ಮೂರ್ತಿ, ಲೈಟಿಂಗ್ ಟೀಮ್ ಹೆಚ್ಎಸ್ಎಂ ಸಿನಿ ಸರ್ವಿಸ್, ಪೋಸ್ಟ್ ಪ್ರೊಡಕ್ಷನ್ ರಾಷ್ಟ್ರಕ್ ಮಿಡಿಯಾ ಸೆಲ್ಯೂಷನ್, ಪೋಸ್ಟ್ ಡಿಸೈನರ್ ದೇವು, ಪ್ರೊಡಕ್ಷನ್ ಡಿಸೈನರ್ ಪಿವಿಆರ್ ಸ್ವಾಮಿ ನಿರ್ವಹಿಸಿದ್ದಾರೆ.











