
ಮಡಿಕೇರಿ ಸೆ.24 NEWS DESK : ಗೋಣಿಕೊಪ್ಪ ಕಾಲ್ಸ್ ಶಾಲಾ ಮೈದಾನದಲ್ಲಿ ಕೊಡಗು ಜಿಲ್ಲಾ ಕಿವುಡರ ಸಂಘ ಹಾಗೂ ಕರ್ನಾಟಕ ಕಿವುಡರ ಕ್ರೀಡಾ ಒಕ್ಕೂಟದ ವತಿಯಿಂದ 1ನೇ ಕರ್ನಾಟಕ ರಾಜ್ಯ ಕಿವುಡರ ಇಂಟರ್ ಶಾಲಾ ಅಥ್ಲೆಟಿಕ್ ಚಾಂಪಿಯನ್ಶಿಪ್ ಕ್ರೀಡಾಕೂಟ ನಡೆಯಿತು. ರಾಜ್ಯದ ವಿವಿಧ ಜಿಲ್ಲೆಗಳಾದ ಬಾಗಲಕೋಟೆ, ಗದಗ, ಕೋಲಾರ, ಬೆಂಗಳೂರು, ಮೈಸೂರು, ಮಂಡ್ಯ, ಕೊಡಗು ಸೇರಿದಂತೆ 16 ಜಿಲ್ಲೆಯ ಶಾಲೆಗಳ ಒಟ್ಟು 250 ವಿಶೇಷಚೇತನ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು. ಕ್ರೀಡಾಕೂಟದಲ್ಲಿ 800ಮೀ, 400ಮೀ, 200ಮೀ, 100 ಮೀ ಓಟ, ಎತ್ತರ ಜಿಗಿತ, ಉದ್ದ ಜಿಗಿತ, ಭಾರದ ಗುಂಡು ಎಸೆತ ಇನ್ನಿತರ ಕ್ರೀಡೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡು ತಮ್ಮ ಕ್ರೀಡಾ ಸಾಮರ್ಥ್ಯವನ್ನು ಪ್ರದರ್ಶಿಸಿದರು. ಕ್ರೀಡೆಯಲ್ಲಿ ಜಯಗಳಿಸಿದ ವಿಶೇಷಚೇತನ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಹಾಗೂ ಪದಕವನ್ನು ಸಂಸ್ಥೆಯ ವತಿಯಿಂದ ನೀಡಲಾಯಿತು. ಕ್ರೀಡಾಕೂಟವನ್ನು ಕಾಲ್ಸ್ ವಿದ್ಯಾ ಸಂಸ್ಥೆಯ ಪ್ರಾಂಶುಪಾಲರಾದ ಗೌರಮ್ಮ ನಾಚಪ್ಪ ಶುಭ ಹಾರೈಸಿದರು. ಕೊಡಗು ಜಿಲ್ಲಾ ಕಿವುಡರ ಸಂಘದ ಜಿಲ್ಲಾಧ್ಯಕ್ಷರಾದ ಗೌರು ಸೋಮಣ್ಣ ಮಾತನಾಡಿ, ಈ ರೀತಿಯ ಕ್ರೀಡೆಗಳಿಂದ ವಿಶೇಷ ಚೇತನ ಮಕ್ಕಳಿಗೆ ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಲು ಅವಕಾಶ ಸಿಗುವಂತಾಗುತ್ತದೆ, ಸರ್ಕಾರದಿಂದ ಈ ರೀತಿಯ ಕ್ರೀಡಾಕೂಟಗಳಿಗೆ ಅನುದಾನ ದೊರೆತರೆ ಇನ್ನೂ ದೊಡ್ಡ ಮಟ್ಟದಲ್ಲಿ ಕ್ರೀಡಾಕೂಟ ನಡೆಸಲು ಸಾಧ್ಯವಾಗುತ್ತದೆ ಎಂದರು. ಕೊಡಗು ಜಿಲ್ಲಾ ಕಿವುಡರ ಗೌರವ ಅಧ್ಯಕ್ಷರಾದ ಜೋಸೆಫ್ ಶ್ಯಾಮ್ ಮಾತನಾಡಿ, ಜಿಲ್ಲಾ ಕಿವುಡರ ಸಂಘದಿಂದ ರಾಜ್ಯಮಟ್ಟದ ಕ್ರೀಡಾಕೂಟ ನಡೆಸಲು ಕೊಡಗಿನ ದಾನಿಗಳ ಸಹಕಾರದಿಂದ ಸಾಧ್ಯವಾಯಿತು ಎಂದರು. ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ವಿರಾಜಪೇಟೆಯ ಲಿಟಲ್ ಸ್ಕಾಲರ್ ಅಕಾಡೆಮಿ ಮುಖ್ಯಸ್ಥರಾದ ಪೂಜಾ ಸಜೆಸ್ ಅವರು ಪ್ರಶಸ್ತಿ ಪಡೆದ ಮಕ್ಕಳಿಗೆ ಶುಭ ಹಾರೈಸಿದರು. ಕ್ರೀಡಾಕೂಟದಲ್ಲಿ ಮೈಸೂರು ಜಿಲ್ಲೆಯ ತಂಡ 23 ಅಂಕಗಳನ್ನು ಪಡೆದುಕೊಳ್ಳುವ ಮೂಲಕ ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಆದರೆ, ದಾವಣಗೆರೆ ಹಾಗೂ ಮಂಡ್ಯ ತಂಡ ತಲಾ 13 ಅಂಕ ಪಡೆಯುವ ಮೂಲಕ ಸಮಬಲದ ಹೋರಾಟದಲ್ಲಿ ಅಂತಿಮವಾಗಿ ದಾವಣಗೆರೆ ದ್ವಿತೀಯ ಸ್ಥಾನ ಪಡೆದು ರನ್ನರ್ಸ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡರು ಹಾಗೂ ಮಂಡ್ಯ ತೃತೀಯ ಸ್ಥಾನ ಪಡೆದುಕೊಂಡಿತು. ಈ ಸಂದರ್ಭ ಆಲ್ ಇಂಡಿಯಾ ಕಿವುಡರ ಒಕ್ಕೂಟದ ಅಧ್ಯಕ್ಷರಾದ ಕುಮಾರ್ ವಿ, ರಾಜ್ಯ ಕಿವುಡರ ಕ್ರೀಡಾ ಒಕ್ಕೂಟದ ಕಾರ್ಯದರ್ಶಿ ನವೀನ್ ಕುಮಾರ್ ಜಿ.ಎಸ್, ಗೋಣಿಕೊಪ್ಪ ಲಯನ್ಸ್ ಕ್ಲಬ್ ಕಾರ್ಯದರ್ಶಿ ಸೌಮ್ಯ ಎಂ.ಬಿ, ಕೊಡಗು ಕಾಫಿ ಎಸ್ಟೇಟ್ ಮಾಲೀಕರಾದ ಪಳಂಗಪ್ಪ ಕೆ.ಎಸ್, ರಾಜ್ಯ ಕಿವುಡರ ಒಕ್ಕೂಟದ ಅಧ್ಯಕ್ಷರಾದ ಎಂ.ಕಂಡ್ಕೂರ್ ಹಾಗೂ ಕೋಶಾಧಿಕಾರಿ ಸುರೇಶ್, ಆಯಿಷಾ, ಕೊಡಗು ಜಿಲ್ಲಾ ಕಿವುಡರ ಸಂಘದ ಉಪಾಧ್ಯಕ್ಷ ಕೆ.ಕೆ.ಶಂಕರ್ ನಾರಾಯಣ, ಚೆರ್ಮೆನ್ ಜೋಸೆಫ್ ಸಾಮ್, ಪ್ರಧಾನ ಕಾರ್ಯದರ್ಶಿ ರಂಜಿತ್ ಪುದಿಯತಂಡ, ಖಜಾಂಚಿ ಕೆ.ಎ.ಸುರೇಶ್ ಸೇರಿದಂತೆ ಕೊಡಗು ಕಿವುಡರ ಸಂಘದ ಪದಾಧಿಕಾರಿಗಳು ಹಾಗೂ ರಾಜ್ಯ ಕಿವುಡರ ಕ್ರೀಡಾ ಒಕ್ಕೂಟದ ಸದಸ್ಯರು 16 ಶಾಲೆಗಳ ಶಿಕ್ಷಕರು, ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು.








