
ಮಡಿಕೇರಿ ಸೆ.26 NEWS DESK : ಮಡಿಕೇರಿ ದಸರಾ ಸಮಿತಿ ಮತ್ತು ಯುವ ದಸರಾ ಸಮಿತಿ ವತಿಯಿಂದ ಸೆ.26 ಮತ್ತು 27ರಂದು ಯುವ ದಸರಾ ಪ್ರಯುಕ್ತ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಅಧ್ಯಕ್ಷ ಕವನ್ ಕೊತ್ತೋಳಿ ತಿಳಿಸಿದರು. ನಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಯುವ ದಸರಾವನ್ನು ವಿಜೃಂಭಣೆಯಿಂದ ನಡೆಸಲು ಯುವಕರ ತಂಡ ಸಜ್ಜಾಗಿದ್ದು, ವಿಶೇಷ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದರು. ಸೆ.26 ರಂದು ನಗರದ ಬಾಲಭವನದಲ್ಲಿ ಉದ್ಯೋಗ ವಿನಿಮಯ ಕಚೇರಿ ಸಹಭಾಗಿತ್ವದಲ್ಲಿ ಮೊದಲ ಬಾರಿಗೆ ಯುವದಸರಾದಲ್ಲಿ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ಹಲವು ಪ್ರತಿಷ್ಠಿತ ಕಂಪೆನಿಗಳು ಭಾಗವಹಿಸುತ್ತಿದ್ದು, ಯುವಜನತೆ ಇದರ ಸದುಪಯೋಗ ಪಡೆದುಕೊಳ್ಳುವಂತೆ ಕವನ್ ಕೊತ್ತೋಳಿ ಮನವಿ ಮಾಡಿದರು. ಅಂದು ಬೆಳಗ್ಗೆ 10 ಗಂಟೆಗೆ ನಗರಸಭೆ ಅಧ್ಯಕ್ಷೆ ಹಾಗೂ ದಸರಾ ಸಮಿತಿ ಅಧ್ಯಕ್ಷೆ ಪಿ.ಕಲಾವತಿ ಅವರು ಅಧ್ಯಕ್ಷತೆ ವಹಿಸಲಿದ್ದು, ಪ್ರಮುಖರಾದ ಪ್ರಕಾಶ್ ಆಚಾರ್ಯ, ಹರಿಪ್ರಸಾದ್ ಕೋಚನ, ಹಬೀಬ್ ಅಹ್ಮದ್, ಶರಣ್ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಅಲ್ಲದೆ ಬೆಳಗ್ಗೆ 10.30 ಗಂಟೆಯಿಂದ ಮಧ್ಯಾಹ್ನ 3.30 ಗಂಟೆಯವರೆಗೆ ನಗರದ ಗಾಂಧಿ ಮೈದಾನದಲ್ಲಿ ಶ್ವಾನ ಪ್ರದರ್ಶನ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಡಿಕೇರಿ ಕ್ಷೇತ್ರದ ಶಾಸಕ ಮಂತರ್ಗೌಡ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಮೂಡ ಅಧ್ಯಕ್ಷ ಬಿ.ವೈ.ರಾಜೇಶ್, ಪಶು ವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಲಿಂಗರಾಜು ದೊಡ್ಡಮಾನಿ, ಇತರರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು. ಸೆ.27 ರಂದು ಬೆಳಗ್ಗೆ 7 ಗಂಟೆಗೆ ಸೈಕಲ್ ಜಾಥಾ ಮತ್ತು ಬೆಳಗ್ಗೆ 10.30 ಗಂಟೆಗೆ ಬೈಕ್ ಜಾಥಾ ನಡೆಯಲಿದೆ. ನಗರದ ಸುದರ್ಶನ ವೃತ್ತದಿಂದ ಜನರಲ್ ತಿಮ್ಮಯ್ಯ ವೃತ್ತ, ಖಾಸಗಿ ಬಸ್ ನಿಲ್ದಾಣ, ಕಾವೇರಿ ಹಾಲ್ ಮುಖಾಂತರ ಎಲ್ಐಸಿಯಾಗಿ ಗಾಂಧಿ ಮೈದಾನದಲ್ಲಿ ಕೊನೆಗೊಳ್ಳಲಿದೆ. ಸೈಕಲ್ ಜಾಥಾವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜ್ ಉದ್ಘಾಟಿಸಲಿದ್ದಾರೆ. ಬೈಕ್ ಜಾಥಾಕ್ಕೆ ಉಪ ವರಿಷ್ಠಾಧಿಕಾರಿ ದಿನೇಶ್ ಬಾರಿಕೆ ಅವರು ಚಾಲನೆ ನೀಡಲಿದ್ದಾರೆ. ಸಂಜೆ 6 ಗಂಟೆಗೆ ರಾಜ್ಯಮಟ್ಟದ ನೃತ್ಯ ಸ್ಪರ್ಧೆ ನಡೆಯಲಿದೆ. ಸಂಜೆ 7 ಗಂಟೆಗೆ ನಡೆಯುವ ಕಾರ್ಯಕ್ರಮ ಅಧ್ಯಕ್ಷತೆಯನ್ನು ಕವನ್ ಕೊತ್ತೋಳಿ ವಹಿಸಲಿದ್ದು, ಹಾಸನ ಲೋಕಸಭಾ ಕ್ಷೇತ್ರದ ಸಂಸದ ಶ್ರೇಯಸ್.ಎಂ.ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಗ್ಯಾರೆಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಮೆಹಾರೋಜ್ ಖಾನ್, ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ಗೌಡ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಮತ್ತು ಶಾಸಕರಾದ ಎ.ಎಸ್.ಪೊನ್ನಣ್ಣ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು. ಯುವ ದಸರಾ ಆಕರ್ಷಣೆಯಾಗಿ ಐಶ್ವರ್ಯ ರಂಗರಾಜನ್ ತಮ್ಮ ಹಾಡಿನ ಮೂಲಕ ಜನರನ್ನು ರಂಜಿಸಲಿದ್ದಾರೆ. ಲೈವ್ ಮಸಿಕ್, ಡಿಜೆ ಹಾಗೂ ಜನಪ್ರಿಯ ಸೆಲೆಬ್ರಿಟಿಗಳಿಂದ ವಿಶೇಷ ಕಾರ್ಯಕ್ರಮಗಳಿದೆ ಎಂದು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಯುವ ದಸರಾ ಸಮಿತಿ ಉಪಾಧ್ಯಕ್ಷ ಟಿ.ಆರ್.ಅರ್ಜುನ್, ಖಜಾಂಚಿ ಸುನೀಲ್, ಪ್ರಧಾನ ಕಾರ್ಯದರ್ಶಿ ಕೆ.ಶರಣ್, ಕಾರ್ಯದರ್ಶಿ ಲಿನೇಶ್, ಸಂಘಟನಾ ಕಾರ್ಯದರ್ಶಿ ಪವಿತ್ರ ಉಪಸ್ಥಿತರಿದ್ದರು.









