
ಮಡಿಕೇರಿ ಸೆ.26 NEWS DESK : ಸರಕಾರಿ ಕಾರ್ಯಕ್ರಮ ಸೇರಿದಂತೆ ಎಲ್ಲಾ ಸಭೆ ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಬಾಟಲ್ ನೀರಿನ ಬಳಕೆಯನ್ನು ನಿಷೇಧಿಸಬೇಕು ಮತ್ತು ನಗರಸಭೆ ನಗರದ 10 ಸ್ಥಳಗಳಲ್ಲಿ ಕುಡಿಯುವ ನೀರಿನ ಫಿಲ್ಟರ್ ಗಳನ್ನು ಅಳವಡಿಸಬೇಕು ಎಂದು ಮಡಿಕೇರಿ ನಗರ ಚೇಂಬರ್ ಆಫ್ ಕಾಮರ್ಸ್ ಒತ್ತಾಯಿಸಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಚೇಂಬರ್ ಆಫ್ ಕಾಮರ್ಸ್ನ ನಗರಾಧ್ಯಕ್ಷ ಸಂತೋಷ್ ಅಣ್ವೇಕರ್ ಹಾಗೂ ಜಿಲ್ಲಾ ನಿರ್ದೇಶಕ ಧನಂಜಯ ಎಂ. ಅವರು ಸ್ವತ: ಸರಕಾರದ ಕಾರ್ಯದರ್ಶಿಗಳೇ ಸಭೆ ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಬಾಟಲ್ ನೀರು ಮತ್ತು ಪ್ಲಾಸ್ಟಿಕ್ ಲೋಟಗಳನ್ನು ಬಳಸಬಾರದೆಂದು ಆದೇಶ ಮಾಡಿದ್ದರೂ ಸರಕಾರಿ ಕಾರ್ಯಕ್ರಮಗಳಲ್ಲಿ ಕೂಡ ಇವುಗಳನ್ನು ಬಳಸಲಾಗುತ್ತಿದೆ. ಸ್ವಚ್ಛ ಪರಿಸರಕ್ಕಾಗಿ ತಕ್ಷಣ ಇದನ್ನು ನಿಲ್ಲಿಸಬೇಕು ಎಂದು ಮನವಿ ಮಾಡಿದ್ದಾರೆ. 2 ಲೀಟರ್ ಗಿಂತ ಕಡಿಮೆ ಪ್ರಮಾಣದ ನೀರಿನ ಬಾಟಲ್ ಮಾರಾಟ ಮಾಡದಂತೆ ಸಗಟು ವ್ಯಾಪಾರಸ್ಥರು ಹಾಗೂ ಚಿಲ್ಲರೆ ಮಾರಾಟ ಅಂಗಡಿ ಮಾಲೀಕರಲ್ಲಿ ಕಳೆದ ಜನವರಿಯಿಂದ ಮನವಿ ಮಾಡಿಕೊಂಡು ಬರಲಾಗಿದೆ. ಇದೇ ಆ.1 ರಿಂದ ಈ ನೀರಿನ ಬಾಟಲಿಗಳ ಮಾರಾಟವನ್ನು ನಗರಸಭೆ ಕಡ್ಡಾಯವಾಗಿ ನಿಷೇಧಿಸಿದೆ. ಆದರೆ ನಗರದಲ್ಲಿ ನೀರಿನ ಬಾಟಲ್ ಗಳನ್ನು ಮಾರಾಟ ಮತ್ತು ಬಳಕೆ ಮಾಡಲಾಗುತ್ತಿದೆ. ದಸರಾದ ಈ ದಿನಗಳಲ್ಲಿ ಬಾಟಲಿಗಳ ತ್ಯಾಜ್ಯದ ರಾಶಿ ಸುಂದರ ಪರಿಸರಕ್ಕೆ ಹಾನಿ ಉಂಟು ಮಾಡುತ್ತಿದೆ. 2024-25ರ ಪ್ರವಾಸೋದ್ಯಮ ಇಲಾಖೆಯ ಅಂಕಿ ಅಂಶದ ಪ್ರಕಾರ 45 ಲಕ್ಷಕ್ಕೂ ಅಧಿಕ ಪ್ರವಾಸಿಗರು ಮಡಿಕೇರಿ ನಗರಕ್ಕೆ ಭೇಟಿ ನೀಡಿದ್ದಾರೆ. ಕನಿಷ್ಠ 25 ರಿಂದ 30 ಲಕ್ಷ ನೀರಿನ ಬಾಟಲ್ ಮಡಿಕೇರಿ ನಗರ ಒಂದರಲ್ಲೇ ಕಂಡು ಬಂದಿದೆ. ಈ ಬಾಟಲ್ ಗಳು ತೋಡು, ಚರಂಡಿಗಳಲ್ಲಿ, ಕಾಡಿನ ಮಧ್ಯ ಭಾಗದಲ್ಲಿ ಮತ್ತಿತರ ಸಾರ್ವಜನಿಕ ಸ್ಥಳಗಳಲ್ಲಿ ಮರುಬಳಕೆಯಾಗದ ಸ್ಥಿತಿಯಲ್ಲಿ ರಾಶಿ ಬಿದ್ದಿರುವುದನ್ನು ಗಮನಿಸಿದ್ದೇವೆ. ಚರಂಡಿ ಮತ್ತು ತೋಡುಗಳಲ್ಲಿ ನೀರು ಸರಾಗವಾಗಿ ಹರಿಯಲು ಪ್ಲಾಸ್ಟಿಕ್ ಬಾಟಲಿಗಳು ಅಡಚಣೆಯನ್ನುಂಟು ಮಾಡುತ್ತಿವೆ. ಎಲ್ಲೆಂದರಲ್ಲಿ ಬಿದ್ದಿರುವ ಖಾಲಿ ಬಾಟಲಿಗಳಿಂದ ಸೊಳ್ಳೆ, ಕ್ರಿಮಿ, ಕೀಟಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸಾಂಕ್ರಾಮಿಕ ರೋಗ ಹರಡುವುದಕ್ಕೂ ಕಾರಣವಾಗುತ್ತಿದೆ. ಪರಿಸರದ ಮೇಲೂ ನೀರಿನ ಪ್ಲಾಸ್ಟಿಕ್ ಬಾಟಲಿಗಳು ದುಷ್ಪರಿಣಾಮ ಉಂಟು ಮಾಡುತ್ತಿರುವುದರಿಂದ ಜಿಲ್ಲಾಡಳಿತ ಮತ್ತು ನಗರಸಭೆ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದೆ. ಆದ್ದರಿಂದ ವರ್ತಕರು 2 ಲೀಟರ್ ಗಿಂತ ಕಡಿಮೆ ಪ್ರಮಾಣದ ನೀರಿನ ಬಾಟಲ್ ಮಾರಾಟ ಮಾಡದೆ ಮಡಿಕೇರಿ ನಗರದ ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕೆಂದು ಸಂತೋಷ್ ಅಣ್ವೇಕರ್ ಹಾಗೂ ಧನಂಜಯ ಎಂ. ಮನವಿ ಮಾಡಿದ್ದಾರೆ. ನಗರಸಭೆ ಕೂಡ ಪರಿಸರ ಮತ್ತು ಪ್ರವಾಸಿಗರ ಹಿತದೃಷ್ಟಿಯಿಂದ ನಗರದ 10 ಸ್ಥಳಗಳಲ್ಲಿ ಕುಡಿಯುವ ನೀರಿನ ಫಿಲ್ಟರ್ ಗಳನ್ನು ಅಳವಡಿಸುವ ಕಾರ್ಯವನ್ನು ಆಯುಧ ಪೂಜೆಯೊಳಗೆ ಪೂರ್ಣಗೊಳಿಸಬೇಕೆಂದು ಒತ್ತಾಯಿಸಿದ್ದಾರೆ. ನಗರದಲ್ಲಿ ಪ್ಲಾಸ್ಟಿಕ್ ಚೀಲಗಳ ಬಳಕೆಗೆ ನಿಷೇಧವಿದ್ದರೂ ಇತ್ತೀಚಿನ ದಿನಗಳಲ್ಲಿ ಇದರ ಬಳಕೆ ಹೆಚ್ಚಾಗುತ್ತಿದೆ. ವರ್ತಕರು ಹಾಗೂ ಗ್ರಾಹಕರು ಸ್ವಯಂ ಪ್ರೇರಿತರಾಗಿ ಇದಕ್ಕೆ ಕಡಿವಾಣ ಹಾಕಬೇಕು ಎಂದು ತಿಳಿಸಿದ್ದಾರೆ.








