
ಮಡಿಕೇರಿ ಸೆ.26 NEWS DESK : ಲೋಕೋಪಯೋಗಿ ಇಲಾಖೆ ಮೂಲಕ 186 ಕೋಟಿ ರೂ. ವೆಚ್ಚದಲ್ಲಿ ರಾಜ್ಯ ಹೆದ್ದಾರಿಗಳು ಮತ್ತು ಜಿಲ್ಲಾ ಮುಖ್ಯ ರಸ್ತೆಗಳು ಅಭಿವೃದ್ಧಿ ಕಾಣಲಿವೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಮಳೆ ನಿಂತ ತಕ್ಷಣ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ಎ.ಎಸ್.ಟಾಟು ಮೊಣ್ಣಪ್ಪ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಶಾಸಕರುಗಳೇ ಇದ್ದ 25 ವರ್ಷಗಳ ಅವಧಿಯಲ್ಲಿ ನಡೆಯದ ಅಭಿವೃದ್ಧಿ ಕಾರ್ಯಗಳು ಕಾಂಗ್ರೆಸ್ ಆಡಳಿತದ ಈ ಅವಧಿಯಲ್ಲಿ ನಡೆಯುತ್ತಿದೆ. ಇದನ್ನು ಸಹಿಸದ ಬಿಜೆಪಿ ಪ್ರಚಾರಕ್ಕಾಗಿ ಜಿಲ್ಲೆಯ ಜನರಿಗೆ ತಪ್ಪು ಸಂದೇಶವನ್ನು ನೀಡುತ್ತಿದೆ. ರಸ್ತೆ ಕಾಮಗಾರಿಗಾಗಿ ಒತ್ತಾಯಿಸಿ ಮಳೆಗಾಲದಲ್ಲಿ ಪ್ರತಿಭಟನೆ ನಡೆಸುವುದು ಹಾಸ್ಯಾಸ್ಪದ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೇವಲ ಎರಡು ವರ್ಷಗಳಲ್ಲಿ ಶಾಸಕರಾದ ಎ.ಎಸ್.ಪೊನ್ನಣ್ಣ ಹಾಗೂ ಡಾ.ಮಂತರ್ ಗೌಡ ಅವರು ಸರಕಾರದಿಂದ ದೊಡ್ಡ ಮೊತ್ತದ ಅನುದಾನ ತರುವಲ್ಲಿ ಯಶಸ್ವಿಯಾಗಿದ್ದು, ಅವರನ್ನು ಬಿಜೆಪಿಗರು ಅಭಿನಂದಿಸಲಿ ಎಂದು ಒತ್ತಾಯಿಸಿದರು.ಮಡಿಕೇರಿ ಭಾಗಮಂಡಲ ರಸ್ತೆ, ಮಡಿಕೇರಿ ವಿರಾಜಪೇಟೆ ಗೋಣಿಕೊಪ್ಪ ರಸ್ತೆ, ಗೋಣಿಕೊಪ್ಪ ಕುಟ್ಟ ರಸ್ತೆ, ಕೊಣನೂರು ಮಾಕುಟ್ಟ ರಸ್ತೆ, ಹುಣಸೂರು ತಲಕಾವೇರಿ ರಸ್ತೆ, ಮಡಕೇರಿ ಸೋಮವಾರಪೇಟೆ ರಸ್ತೆ, ಮಡಿಕೇರಿ ಕಡಮಕಲ್ಲು ರಸ್ತೆ, ಹಾಕತ್ತೂರು ಅರೆಕಾಡು, ಅಭ್ಯತ್ ಮಂಗಲ ರಸ್ತೆ, ಕತ್ತಲೆ ಕಾಡು, ಮರಗೋಡು, ಕೊಂಡಗೇರಿ ರಸ್ತೆ, ಐಗೂರು-ಕಿರಗಂದೂರು ಕೊಡಗದ್ದೆ ರಸ್ತೆ, ಪೆರುಂಬಾಡಿ ಬಿಟ್ಟಂಗಾಲ ರಸ್ತೆ, ಕೆದಮಳ್ಳೂರು ಕಡಂಗ ರಸ್ತೆ, ನಾಪೋಕ್ಲು ಬಲ್ಲಮಾವಟಿ ಭಾಗಮಂಡಲ ರಸ್ತೆ, ಅಮ್ಮತ್ತಿ ತಿತಿಮತಿ ರಸ್ತೆ, ಚೆಟ್ಟಿಮಾನಿ ದಬ್ಬಡ್ಕ ಕಲ್ಲುಗುಂಡಿ ರಸ್ತೆ, ಕಾಟಕೇರಿ, ಗೊಳಿಕಟ್ಟೆ, ಹರವನಾಡು ಅವಂದೂರು ರಸ್ತೆ, ಪೊನ್ನಂಪೇಟೆ ಕಾನೂರು ರಸ್ತೆ, ಮಸಗೋಡು ಯಲಕನೂರು ಕಣಿವೆ ರಸ್ತೆ, ಶ್ರೀಮಂಗಲ ನಾಲ್ಕೇರಿ ರಸ್ತೆ, ಆಲೂರು ಅಂಕನಹಳ್ಳಿ ರಸ್ತೆ, ಸೋಮವಾರಪೇಟೆ ಶಾಂತಹಳ್ಳಿ ರಸ್ತೆ ಸೇರಿದಂತೆ ಒಟ್ಟು 68 ಮುಖ್ಯ ರಸ್ತೆಗಳು (ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳು) ಅಭಿವೃದ್ಧಿ ಕಾಣಲಿವೆ. ಮಳೆ ನಿಂತ ತಕ್ಷಣ ಕಾಮಗಾರಿ ಆರಂಭಗೊಳ್ಳಲಿದ್ದು, ನಂತರ ವಾಹನಗಳ ಸಂಚಾರ ಸುಗಮವಾಗಲಿದೆ. ಬಿಜೆಪಿ ಮಂದಿಗೆ ಮಾಹಿತಿಯ ಕೊರತೆ ಇದ್ದಲ್ಲಿ ಮಾಹಿತಿ ಹಕ್ಕಿನ ಮೂಲಕ ಪಡೆಯಲಿ ಎಂದು ಟಾಟು ಮೊಣ್ಣಪ್ಪ ಸವಾಲು ಹಾಕಿದರು. ಮತ್ತೋರ್ವ ವಕ್ತಾರ ತೆನ್ನಿರ ಮೈನಾ ಮಾತನಾಡಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮೂಲಕ ಕೊಡಗು ಜಿಲ್ಲೆಯ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 116 ಕೋಟಿ ರೂ. ವೆಚ್ಚದಲ್ಲಿ 1522 ಕಾಮಗಾರಿಗಳು ನಡೆಯಲಿವೆ. ಜಿಲ್ಲೆಯ ಎಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿನ ಕಾಮಗಾರಿಗಾಗಿ ಕ್ರಿಯಾಯೋಜನೆ ಸಿದ್ದಗೊಂಡಿದ್ದು, ತಾಂತ್ರಿಕ ಅನುಮೋದನೆ ದೊರಕಿದೆ ಎಂದು ಹೇಳಿದರು.
ಕೆ.ಆರ್.ಐ.ಡಿ.ಎಲ್ ಸಂಸ್ಥೆ ಮೂಲಕ ಜಿಲ್ಲೆಯಲ್ಲಿ 83 ಕೋಟಿ ರೂ. ವೆಚ್ಚದಲ್ಲಿ ಒಟ್ಟು 408 ಆಯ್ದ ಕಾಮಗಾರಿ ಮಾರ್ಚ್ ಅಂತ್ಯಕ್ಕೆ ಪೂರ್ಣಗೊಳ್ಳಲಿದ್ದು, ಇದರ ಜೊತೆಗೆ ಶಾಸಕ ಎ.ಎಸ್.ಪೊನ್ನಣ್ಣ ಹಾಗೂ ಡಾ.ಮಂತರ್ ಗೌಡ ಅವರ ಶಾಸಕರ ನಿಧಿಯಿಂದ ತಲಾ 50 ಕೋಟಿಯಂತೆ ಒಟ್ಟು ನೂರು ಕೋಟಿ ರೂ.ಗಳಲ್ಲಿ ಶೇ.80 ರಷ್ಟನ್ನು ಗ್ರಾಮೀಣ ರಸ್ತೆಗಳ ಅಭಿವೃದ್ಧಿಗಾಗಿ ಮೀಸಲಿಡಲಾಗಿದೆ. ಇದರ ಮಾಹಿತಿ ಬಿಜೆಪಿಯ ಮಾಜಿ ಶಾಸಕರುಗಳಿಗೆ ಲಭ್ಯವಾಗಿದ್ದು, ತಾವು 20 ವರ್ಷಗಳಲ್ಲಿ ಮಾಡದೇ ಇದ್ದ ಸಾಧನೆಯನ್ನು ಎರಡೇ ವರ್ಷಗಳಲ್ಲಿ ಕಾಂಗ್ರೆಸ್ ಶಾಸಕರು ಮಾಡುತ್ತಿರುವುದನ್ನು ಕಂಡು ವಿಚಲಿತರಾಗಿದ್ದಾರೆ. ಇದೇ ಕಾರಣಕ್ಕೆ ಮಳೆಗಾಲದಲ್ಲಿಯೇ ಪ್ರತಿಭಟನೆಯ ನಾಟಕವಾಡಿದ್ದಾರೆ ಎಂದು ತೆನ್ನಿರ ಮೈನಾ ಟೀಕಿಸಿದರು. ಜಿಲ್ಲಾ ಸಾಮಾಜಿಕ ಜಾಲತಾಣದ ಅಧ್ಯಕ್ಷ ಹೊಸೂರು ಸೂರಜ್ ಮಾತನಾಡಿ, ವಿರಾಜಪೇಟೆ ಶಾಸಕರು ಕಾಮಗಾರಿಗಳ ದಾಖಲೆಯ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಬಿಜೆಪಿಗರು ರಾಜಕೀಯ ಲಾಭಕ್ಕಾಗಿ ಪ್ರತಿಭಟನೆ ನಡೆಸಿದ್ದು, ಇದು ಹಾಸ್ಯಾಸ್ಪದ ಎಂದು ಟೀಕಿಸಿದರು. ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ.ಇಸ್ಮಾಯಿಲ್ ಮಾತನಾಡಿ, ಕಾವೇರಿ ಜಾತ್ರೆ ಸಂಬಂಧ 60 ಲಕ್ಷ ರೂ. ವೆಚ್ಚದಲ್ಲಿ ಮಡಿಕೇರಿ ಭಾಗಮಂಡಲ ರಸ್ತೆ ಗುಂಡಿ ಮುಚ್ಚುವ ಕಾರ್ಯ ನಡೆಯಲಿದೆ. ಮುಂದಿನ ದಿನಗಳಲ್ಲಿ ರಸ್ತೆ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಕಾಣಲಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಡಿ.ಸಿ.ಸಿ ಸದಸ್ಯರಾದ ಟಿ.ಎಲ್.ಸುರೇಶ್ ಹಾಗೂ ಖಲೀಲ್ ಬಾಷಾ ಉಪಸ್ಥಿತರಿದ್ದರು.









