
ಮಡಿಕೇರಿ NEWS DESK ಸೆ.27 : ಶ್ರೀ ಓಂಕಾರೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ನೂತನ ಆಡಳಿತ ಮಂಡಳಿ ಪ್ರಸಕ್ತ ಸಾಲಿನ ಮಾರ್ಚ್ನಲ್ಲಿ ರಚನೆಯಾಯಿತು. ಆ ಬಳಿಕ ದೇವಸ್ಥಾನದ ಸ್ವತ್ತುಗಳ ಬಗ್ಗೆ ಪಾರದರ್ಶಕತೆಯನ್ನು ಕಂಡುಕೊಳ್ಳ್ಳುವ ಸಲುವಾಗಿ ಸಮಿತಿಯ ವ್ಯಾಪ್ತಿಗೆ ಒಳಪಡುವ ಶ್ರೀ ಓಂಕಾರೇಶ್ವರ, ಶ್ರೀ ಆಂಜನೇಯ ಹಾಗೂ ಕೋಟೆ ಶ್ರೀ ಮಹಾಗಣಪತಿ ದೇವಾಲಯಗಳಲ್ಲಿನ ಚಿನ್ನ, ಬೆಳ್ಳಿ ಮತ್ತು ಇತರೆ ಆಭರಣಗಳ ಮೌಲ್ಯಮಾಪನವನ್ನು ಮಾಡಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಎ.ಸಿ.ಚುಮ್ಮಿ ದೇವಯ್ಯ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಸಮಿತಿಯ ಸದಸ್ಯರು, ಅರ್ಚಕ ವೃಂದ, ದೇವಾಲಯ ಸಿಬ್ಬಂದಿ, ಆರಕ್ಷಕ ಇಲಾಖೆ, ಜಿಲ್ಲಾಧಿಕಾರಿಗಳ ಕಚೇರಿ ಸಿಬ್ಬಂದಿಗಳ ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ವಿಡಿಯೋ ಚಿತ್ರೀಕರಣದೊಂದಿಗೆ ಇದೇ ಸಾಲಿನ ಜೂ.11 ರಂದು ಮೌಲ್ಯಮಾಪನ ನಡೆಸಲಾಯಿತೆಂದು ವಿವರಿಸಿದರು. ಮೌಲ್ಯಮಾಪನದಂತೆ ಶ್ರೀ ಓಂಕಾರೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದಂತೆ 22 ಗ್ರಾಂ 100 ಮಿಲಿ ಗ್ರಾಂ ಚಿನ್ನ, 83 ಕೆ.ಜಿ 472 ಗ್ರಾಂ ಬೆಳ್ಳಿ ಆಭರಣಗಳು, 40 ಕೆ.ಜಿ. 810 ಗ್ರಾಂ ಹಿತ್ತಾಳೆ ಮತ್ತು 3 ಕೆ.ಜಿ. ಕಂಚಿನ ಸಾಮಾಗ್ರಿಗಳಿವೆ. ಶ್ರೀ ಆಂಜನೇಯ ದೇವಾಲಯಕ್ಕೆ ಸಂಬಂಧಿಸಿದಂತೆ 1 ಗ್ರಾಂ ಚಿನ್ನ, 19 ಕೆ.ಜಿ. 609 ಗ್ರಾಂ ಬೆಳ್ಳಿ ಆಭರಣಗಳಿವೆ. ಕೋಟೆ ಶ್ರೀ ಗಣಪತಿ ದೇವಾಲಯಕ್ಕೆ ಸಂಬಂಧಿಸಿದಂತೆ 120 ಗ್ರಾಂ 840 ಮಿಲಿ ಗ್ರಾಂ ಚಿನ್ನ, 18 ಗ್ರಾಂ 450 ಮಿಲಿ ಗ್ರಾಂ ಬೆಳ್ಳಿ ಆಭರಣಗಳಿವೆ ಎಂದರು. ನಮ್ಮ ನೂತನ ಆಡಳಿತ ಮಂಡಳಿ ದೇವಸ್ಥಾನದ ಉಸ್ತುವಾರಿಯ ಹಂತಗಳಲ್ಲಿ ಸಂಪೂರ್ಣ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಮೌಲ್ಯಮಾಪನ ಮಾಡಲಾಗಿದೆ. ಈ ಎಲ್ಲಾ ಮಾಹಿತಿ ಜಿಲ್ಲಾಡಳಿತಕ್ಕೂ ತಿಳಿದಿದೆ ಎಂದು ಹೇಳಿದರು. ವ್ಯವಸ್ಥಾಪನಾ ಸಮಿತಿಯ ಸದಸ್ಯರು ಹಾಗೂ ವಕೀಲರಾದ ಎಂ.ಎ.ನಿರಂಜನ್ ಅವರು ಮಾತನಾಡಿ, ನೂತನ ಆಡಳಿತ ಮಂಡಳಿ ಅಧಿಕಾರ ವಹಿಸಿಕೊಂಡ ಬಳಿಕ ದೇವಸ್ಥಾನಕ್ಕೆ ಸೇರಿರಬಹುದಾದ ಆಸ್ತಿಗಳ ದಾಖಲೆಗಳನ್ನು ಪರಿಶೀಲಿಸಿದಾಗ, ಶ್ರೀ ಓಂಕಾರೇಶ್ವರ ದೇವಸ್ಥಾನಕ್ಕೆ ಈ ಹಿಂದೆ ದಾನ ನೀಡಿದ ಆಸ್ತಿಗಳಲ್ಲಿ ಯಾವೊಂದು ಆಸ್ತಿಯು ದೇವಸ್ಥಾನದ ಸ್ವಾಧೀನದಲ್ಲಿ ಇಲ್ಲದಿರುವುದು ಕಂಡು ಬರುತ್ತಿದ್ದು, ಇದೊಂದು ದುಃಖಕರ ವಿಚಾರ. ಈ ಸಂಬಂಧ ಇದೀಗ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನ ಪ್ರಯತ್ನ ನಡೆಸಿರುವುದಾಗಿ ತಿಳಿಸಿದರು.
ವ್ಯವಸ್ಥಾಪನಾ ಸಮಿತಿಯ ಸದಸ್ಯ ಜಿ.ರಾಜೇಂದ ಅವರು ಮಾತನಾಡಿ, ತಾಂಬೂಲ ಪ್ರಶ್ನೆಯಲ್ಲಿ ಕಂಡು ಬಂದಂತೆ ಶ್ರೀ ಆಂಜನೇಯ ದೇವಸ್ಥಾನದ ಒಳಭಾಗದಲ್ಲಿ ‘ನವಗ್ರಹ ಪ್ರತಿಷ್ಠಾಪನೆ’ಯನ್ನು ದಾನಿಗಳ ನೆರವಿನೊಂದಿಗೆ ಮಾಡಲು ಸಮಿತಿ ನಿರ್ಧರಿಸಿದೆ. ಇದರೊಂದಿಗೆ ದೇವಸ್ಥಾನದ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಸರಕಾರದ ಸಹಕಾರದೊಂದಿಗೆ 5 ಕೋಟಿ ರೂ. ವೆಚ್ಚದಲ್ಲಿ ನಡೆಸಲು ಉದ್ದೇಶಿಸಲಾಗಿದೆ ಎಂದರು. ಉದ್ದೇಶಿತ ಅಭಿವೃದ್ಧಿ ಕಾರ್ಯಗಳಂತೆ ಶ್ರೀ ಓಂಕಾರೇಶ್ವರ ಮತ್ತು ಶ್ರೀ ಆಂಜನೇಯ ದೇವಾಲಯಕ್ಕೆ ಹೊಂದಿಕೊಂಡಿರುವ ಪ್ರವೇಶ ದ್ವಾರವನ್ನು ಎಡಬದಿಗೆ ಶಿವಲಿಂಗ ಮತ್ತು ನಂದಿಯ ಮೂರ್ತಿ, ಮಧ್ಯ ಭಾಗದಲ್ಲಿ ಪಟ್ಟಾಭಿರಾಮ, ಲಕ್ಷ್ಮಣ, ಸೀತೆಯ ವಿಗ್ರಹ, ಬಲಭಾಗದಲ್ಲಿ ಕೈಮುಗಿದು ಕುಳಿತಿರುವ ಭಂಗಿಯಲ್ಲಿನ ಆಂಜನೇಯ ಮೂರ್ತಿಯನ್ನು ಅಳವಡಿಸಲು ಉದ್ದೇಶಿಸಲಾಗಿದೆ. ಎರಡು ದೇವಸ್ಥಾನಗಳಲ್ಲಿ ಪ್ರವೇಶ ದ್ವಾರ, ಪ್ರಾರ್ಥನಾ ಕೇಂದ್ರ, ನವಗ್ರಹ ವೃಕ್ಷೋದ್ಯಾನ, ಕೆರೆ ಅಂಗಣ ಜೀರ್ಣೋದ್ಧಾರ ಕಾರ್ಯಗಳನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿಯ ಸದಸ್ಯ ಅಂಬೆಕಲ್ಲು ಕುಶಾಲಪ್ಪ ಹಾಗೂ ವೀಣಾಕ್ಷಿ ಉಪಸ್ಥಿತರಿದ್ದರು.








