
ಮಡಿಕೇರಿ NEWS DESK ಸೆ.28 : ಕಳೆದ 25 ವರ್ಷಗಳಿಂದ ಅಧಿಕಾರದಲ್ಲಿದ್ದರೂ ಅತಿಹೆಚ್ಚು ಮಳೆಯಾಗುವ ಕೊಡಗು ಜಿಲ್ಲೆಯಲ್ಲಿ ಸರ್ವಋತು ರಸ್ತೆಗಳನ್ನು ನಿರ್ಮಿಸಲಾಗದ ಬಿಜೆಪಿ ಮಂದಿ ಇಂದು ಶಾಸಕದ್ವಯರ ಜನಪ್ರಿಯತೆಯನ್ನು ಸಹಿಸದೆ ಪ್ರತಿಭಟನೆಯ ನಾಟಕವಾಡುತ್ತಿದ್ದಾರೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಹಾಗೂ ಬಗರ್ ಹುಕುಂ ಸಮಿತಿಯ ಸದಸ್ಯ ಜೆ.ಎಲ್.ಜನಾರ್ಧನ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕಳೆದ 25 ವರ್ಷಗಳಿಂದ ಅವೈಜ್ಞಾನಿಕ ರೂಪದ ಮತ್ತು ಕಳಪೆ ಗುಣಮಟ್ಟದ ಕಾಮಗಾರಿಗಳನ್ನು ಮಾಡಿರುವುದೇ ಇಂದು ಜಿಲ್ಲೆಯ ರಸ್ತೆಗಳು ಇಷ್ಟೊಂದು ಹದಗೆಡಲು ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ಜನ ನಿರಂತರವಾಗಿ ಅಧಿಕಾರವನ್ನು ನೀಡಿದರೂ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡದ ಕಾರಣ ಈ ಬಾರಿ ಇಬ್ಬರು ಕಾಂಗ್ರೆಸ್ ಶಾಸಕರನ್ನು ಗೆಲ್ಲಿಸಿದ್ದಾರೆ. ಚುನಾವಣೆ ಸಂದರ್ಭ ನೀಡಿದ ಭರವಸೆಯಂತೆ ಶಾಸಕದ್ವಯರು ಅಭಿವೃದ್ಧಿ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಗ್ರಾಮೀಣ ರಸ್ತೆ, ಸೇತುವೆಗಳು ಅಭಿವೃದ್ಧಿ ಹೊಂದುತ್ತಿವೆ, ಬಡವರ ನಿವೇಶನ, ಮನೆಗಳಿಗೆ ಹಕ್ಕುಪತ್ರ ದೊರೆಯುತ್ತಿದೆ. ಕ್ರೀಡಾಂಗಣಗಳು ಅಭಿವೃದ್ಧಿಯಾಗುತ್ತಿವೆ, ಅರ್ಧದಲ್ಲೇ ನಿಂತಿದ್ದ ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದಾರೆ. ಆಸ್ಪತ್ರೆಗಳು ಮೇಲ್ದರ್ಜೆಗೇರುತ್ತಿದ್ದು, ನೂತನ ವೈದ್ಯಕೀಯ ವ್ಯವಸ್ಥೆಗಳು ಲಭ್ಯವಾಗುತ್ತಿದೆ. ಸರಕಾರದ ಮಟ್ಟದಲ್ಲಿ ವ್ಯವಹರಿಸಿ ಜಿಲ್ಲೆಯಲ್ಲಿರುವ ಎಲ್ಲಾ ಸಮಾಜಗಳ ಅಭ್ಯುದಯಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಪಕ್ಷಾತೀತ ಮತ್ತು ಜಾತ್ಯಾತೀತವಾಗಿ ಎಲ್ಲಾ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಆದರೆ ನಿರಂತರ ಮಳೆಯ ಕಾರಣದಿಂದ ರಸ್ತೆಗಳ ಕಾಮಗಾರಿ ವಿಳಂಬವಾಗುತ್ತಿದೆ. ಇದನ್ನು ಜನರು ಕೂಡ ಅರ್ಥ ಮಾಡಿಕೊಂಡಿದ್ದಾರೆ. ಸರಕಾರದ ಐದು ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನ, ಕೊಡಗಿನ ಇಬ್ಬರು ಶಾಸಕರ ಕಳೆದ ಎರಡು ವರ್ಷಗಳ ಅಭಿವೃದ್ಧಿ ಕಾರ್ಯಗಳು ಮತ್ತು ಜನಪ್ರಿಯತೆಯನ್ನು ಸಹಿಸದ ಬಿಜೆಪಿ ಮಂದಿ ರಸ್ತೆಯನ್ನು ನೆಪ ಮಾಡಿಕೊಂಡು ಮಳೆಯಲ್ಲಿ ಪ್ರತಿಭಟನೆ ಮಾಡಿ ಜನರ ಹಾದಿ ತಪ್ಪಿಸುವ ಯತ್ನ ಮಾಡಿರುವುದು ಹಾಸ್ಯಾಸ್ಪದ ಎಂದು ಟೀಕಿಸಿದ್ದಾರೆ. ಕೊಡ್ಲಿಪೇಟೆಯಿಂದ ಮಡಿಕೇರಿ ವರೆಗಿನ ರಸ್ತೆ ಬಿಜೆಪಿ ಅವಧಿಯಲ್ಲೇ ಆಗಿದ್ದು, ಕಾಮಗಾರಿ ಸಮರ್ಪಕವಾಗಿರದ ಕಾರಣ ಹದಗೆಟ್ಟಿದೆ. ಇದಕ್ಕೆ ಈಗಿನ ಶಾಸಕರು ಹೊಣೆಯಲ್ಲ, ಈ ಹಿಂದಿನ ಶಾಸಕರ ಅವಧಿಯ ರಸ್ತೆಗಳ ಗುಂಡಿಗಳನ್ನು ಮುಚ್ಚುವುದಕ್ಕೇ ಒಂದು ವರ್ಷ ಬೇಕಾಯಿತು. ಶಾಸಕ ಡಾ.ಮಂತರ್ ಗೌಡ ಅವರು ಲೋಕೋಪಯೋಗಿ ಇಲಾಖೆ ಮತ್ತು ಮಲೆನಾಡು ಅಭಿವೃದ್ಧಿ ಯೋಜನೆ ಮೂಲಕ ಕೋಟ್ಯಾಂತರ ರೂ. ಅನುದಾನ ತಂದಿದ್ದಾರೆ. ಇತಿಹಾಸದಲ್ಲೇ ಸುಗ್ಗಿಕಟ್ಟೆಗಳಿಗೆ ಅನುದಾನ ನೀಡಿದ ಮೊದಲ ಶಾಸಕರಾಗಿದ್ದಾರೆ.
ಲೋಕೋಪಯೋಗಿ ಇಲಾಖೆ ಮೂಲಕ 186 ಕೋಟಿ ರೂ. ವೆಚ್ಚದಲ್ಲಿ ರಾಜ್ಯ ಹೆದ್ದಾರಿಗಳು ಮತ್ತು ಜಿಲ್ಲಾ ಮುಖ್ಯ ರಸ್ತೆಗಳು ಅಭಿವೃದ್ಧಿ ಕಾಣಲಿವೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಮಳೆ ನಿಂತ ತಕ್ಷಣ ಕಾಮಗಾರಿ ಆರಂಭಗೊಳ್ಳಲಿದೆ. ಜಿಲ್ಲೆಯ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 116 ಕೋಟಿ ರೂ. ವೆಚ್ಚದಲ್ಲಿ 1522 ಕಾಮಗಾರಿಗಳು ನಡೆಯಲಿವೆ. ಜಿಲ್ಲೆಯ ಎಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿನ ಕಾಮಗಾರಿಗಾಗಿ ಕ್ರಿಯಾಯೋಜನೆ ಸಿದ್ದಗೊಂಡಿದ್ದು, ತಾಂತ್ರಿಕ ಅನುಮೋದನೆ ದೊರಕಿದೆ. ಕೆ.ಆರ್.ಐ.ಡಿ.ಎಲ್ ಸಂಸ್ಥೆ ಮೂಲಕ ಜಿಲ್ಲೆಯಲ್ಲಿ 83 ಕೋಟಿ ರೂ. ವೆಚ್ಚದಲ್ಲಿ ಒಟ್ಟು 408 ಆಯ್ದ ಕಾಮಗಾರಿ ಮಾರ್ಚ್ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ ಎಂದು ಜೆ.ಎಲ್.ಜನಾರ್ಧನ್ ವಿವರಿಸಿದ್ದಾರೆ. ಅಭಿವೃಧ್ಧಿಪರ ಚಿಂತನೆಯ ಶಾಸಕರಿಬ್ಬರ ಜನಪ್ರಿಯತೆಯನ್ನು ಕ್ಷುಲ್ಲಕ ರಾಜಕಾರಣದ ಮೂಲಕ ಕುಗ್ಗಿಸಲು ಸಾಧ್ಯವಿಲ್ಲ ಎನ್ನುವುದನ್ನು ಬಿಜೆಪಿ ಮಂದಿ ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.









