
ಸೋಮವಾರಪೇಟೆ ಸೆ.30 NEWS DESK : ಸಕಲೇಶಪುರ ಡಿಪ್ಪೋಗೆ ಸೇರಿದ ಹಳೆಯ ಕೆ.ಎಸ್.ಆರ್.ಟಿ.ಸಿ ಬಸ್ ಒಂದು ಮಾರ್ಗ ಮಧ್ಯೆಯೇ ಹಲವು ಬಾರಿ ನಿಂತು ಪ್ರಯಾಣಿಕರಿಗೆ ತೊಂದರೆ ಉಂಟುಮಾಡಿದ ಘಟನೆ ಕೂತಿ–ತೋಳುರುಶೆಟ್ಟಳ್ಳಿ ಮಾರ್ಗದಲ್ಲಿ ನಡೆದಿದೆ. ಹೆತ್ತೂರು–ವನಗೂರು–ಕೂಡುರಸ್ತೆ–ಕೂತಿ–ತೋಳುರುಶೆಟ್ಟಳ್ಳಿ ಮಾರ್ಗವಾಗಿ ಸೋಮವಾರಪೇಟೆಗೆ ಮಧ್ಯಾಹ್ನ 12 ಗಂಟೆಗೆ ತಲುಪಬೇಕಾದ ಸರ್ಕಾರಿ ಸಾರಿಗೆ ಬಸ್ ಇಂದು ಹಲವೆಡೆ ನಿಂತು, ಎತ್ತರದ ಪ್ರದೇಶದ ರಸ್ತೆಯಲ್ಲಿ ಚಳಿಸದೇ ಪ್ರಯಾಣಿಕರನ್ನು ಕೆಳಗಿಳಿಸಿ ನಂತರ ಮತ್ತೆ ಹತ್ತಿಸಿಕೊಂಡು ಸಾಗುವ ಪರಿಸ್ಥಿತಿ ಎದುರಾಯಿತು. ಇದರಿಂದಾಗಿ ಬಸ್ ಸುಮಾರು ಒಂದು ಗಂಟೆ ತಡವಾಗಿ ಸೋಮವಾರಪೇಟೆಗೆ ತಲುಪಿತು. ಈ ಘಟನೆಯಿಂದ ಬೇಸತ್ತ ಸಾರ್ವಜನಿಕರು ಸೋಮವಾರಪೇಟೆ ಸಂಚಾರಿ ನಿರೀಕ್ಷಕ ಹಾಗೂ ಬಸ್ ಚಾಲಕ ಮತ್ತು ನಿರ್ವಾಹಕರನ್ನು ತರಾಟೆಗೆ ತೆಗೆದುಕೊಂಡ ಘಟನೆಯು ನಡೆಯಿತು. ಪ್ರತಿದಿನ ಈ ಮಾರ್ಗದಲ್ಲಿ ಹಳೆಯ ‘ಗುಜರಿ’ ಬಸ್ಸುಗಳನ್ನು ನಿಯೋಜಿಸುವುದರಿಂದ ನಿರಂತರ ತೊಂದರೆ ಎದುರಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು ಸಕಲೇಶಪುರ ಡಿಪ್ಪೋ ವ್ಯವಸ್ಥಾಪಕರಿಗೆ ಹಲವಾರು ಬಾರಿ ಸಮಸ್ಯೆ ತಿಳಿಸಿದರು ಈ ವರೆಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು. ಬಸ್ಗಳು ಹಳೆಯದಾಗಿದ್ದು, ಮಲೆನಾಡು ಪ್ರದೇಶವಾಗಿರುವ ಈ ಮಾರ್ಗದಲ್ಲಿ ರಸ್ತೆಯು ಇಳಿಜಾರು ಹಾಗೂ ಎತ್ತರದ ಪ್ರದೇಶದಿಂದ ಕೂಡಿದ್ದು ಬಸ್ ಚಾಲಕರು ಜೀವ ಕೈಯಲ್ಲಿ ಹಿಡಿದು ಓಡಿಸಬೇಕಾದ ಪರಿಸ್ಥಿತಿ ಪ್ರತಿದಿನ ನಿರ್ಮಾಣವಾಗಿದೆ. ಬಸ್ ನಲ್ಲಿ ಚಲಿಸುವ ಪ್ರಯಾಣಿಕರ ಗತಿಯೇನು ಎಂಬುದು ಪ್ರಶ್ನೆಯಾಗಿದೆ. ಮಡಿಕೇರಿ-ಸೋಮವಾರಪೇಟೆ ಹಾಗೂ ಸಕಲೇಶಪುರ ಭಾಗದ ಇಬ್ಬರು ಶಾಸಕರು ತಕ್ಷಣವೇ ಗಮನಹರಿಸಿ ಹೊಸ ಬಸ್ಸುಗಳನ್ನು ನಿಯೋಜಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.








