
ಮಡಿಕೇರಿ NEWS DESK ಅ.1 : ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಉತ್ಸವದಲ್ಲಿ 150ಕ್ಕೂ ಅಧಿಕ ವರ್ಷಗಳಿಂದ ಪಾಲ್ಗೊಳ್ಳುತ್ತಾ ದಶಮಂಟಪಗಳ ಸಾರಥಿ ಎಂದೇ ಖ್ಯಾತಿಯಾಗಿರುವ ಪೇಟೆ ಶ್ರೀ ರಾಮಮಂದಿರ ದೇವಾಲಯ ದಸರಾ ಮಂಟಪ ಸಮಿತಿ ಈ ಬಾರಿಯ ಉತ್ಸವ ಆಚರಣೆಗೆ ಸಜ್ಜಾಗುತ್ತಿದೆ ಎಂದು ಸಮಿತಿಯ ಅಧ್ಯಕ್ಷ ಆರ್.ಎಸ್. ಶಿವಮೂರ್ತಿ ತಿಳಿಸಿದ್ದಾರೆ. ಎರಡು ಟ್ರ್ಯಾಕ್ಟರ್ ಗಳನ್ನು ಬಳಸಲಾಗುತ್ತಿದ್ದು, ಶ್ರೀ ಕೃಷ್ಣನಿಂದ ಗೀತೋಪದೇಶ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲಾಗುತ್ತಿದೆ. ದಿಂಡಿಗಲ್ನ ಸೆಲ್ವಂ ಎಲೆಕ್ಟ್ರಿಕ್ಸ್ ನವರು ಲೈಟಿಂಗ್ ಬೋರ್ಡ್ ಅಳವಡಿಸಲಿದ್ದು, ಕೊಣನೂರಿನ ಪಿಂಟೋ ಸೌಂಡ್ಸ್ನವರು ಧ್ವನಿವರ್ಧಕ ಹಾಗೂ ಸ್ಟುಡಿಯೋ ಸೆಟ್ಟಿಂಗ್ಸ್ ವ್ಯವಸ್ಥೆ ಮಾಡಲಿದ್ದಾರೆ. ಪ್ಲಾಟ್ಫಾರಂ ನಿರ್ಮಾಣ, ನೆಟ್ವರ್ಕ್ ಹಾಗೂ ಟ್ರ್ಯಾಕ್ಟರ್ ಸೆಟ್ಟಿಂಗ್ಸ್ ಮಡಿಕೇರಿ ಎಸ್ಕೆವೈಸಿ ತಂಡದವರು ಮಾಡಲಿದ್ದಾರೆ. ಒಟ್ಟು 4 ಕಲಾಕೃತಿಗಳನ್ನು ಬಳಸಲಾಗುತ್ತಿದ್ದು, ಸಮಿತಿ ಸದಸ್ಯರೇ ಕಲಾಕೃತಿಗಳನ್ನು ರಚಿಸಲಿದ್ದಾರೆ. ಒಟ್ಟು ರೂ. 10 ಲಕ್ಷ ವೆಚ್ಚದಲ್ಲಿ ಮಂಟಪವನ್ನು ಹೊರತರಲಾಗುತ್ತಿದೆ ಎಂದು ಶಿವಮೂರ್ತಿ ಮಾಹಿತಿ ನೀಡಿದರು.









