

ಮಡಿಕೇರಿ NEWS DESK ಅ.24 : ಕೊಡಗು ಜಿಲ್ಲಾ ಏಲಕ್ಕಿ ಮಾರಾಟ ಸಹಕಾರ ಸಂಘದ 2025-30 ನೇ ಸಾಲಿನ ಆಡಳಿತ ಮಂಡಳಿಗೆ ಇದೇ ಅ.26 ರಂದು ಚುನಾವಣೆ ನಡೆಯಲಿದೆ. ಹಾಲಿ ಅಧಿಕಾರದಲ್ಲಿರುವ ಅಧ್ಯಕ್ಷ ಸೂದನ ಎಸ್.ಈರಪ್ಪ ಅವರ ನೇತೃತ್ವದ ರೈತ ಮಿತ್ರಕೂಟ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದೆ. 2020ರಲ್ಲಿ ರೈತಮಿತ್ರಕೂಟ ತಂಡವನ್ನು ರಚಿಸಿಕೊಂಡು ಭರ್ಜರಿ ಜಯ ಸಾಧಿಸಿದ ಸೂದನ ಎಸ್.ಈರಪ್ಪ ಅವರು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಸಂಘದಲ್ಲಿ ಕಳೆದ 35-40 ವರ್ಷಗಳಿಂದ ಏಲಕ್ಕಿ ವ್ಯವಹಾರ ನಡೆಯುತ್ತಿರಲಿಲ್ಲ. ಇದನ್ನು ಮನಗಂಡು ಕಳೆದ ನಾಲ್ಕು ವರ್ಷಗಳಿಂದ “ಉತ್ಪತಿ” ಎಂಬ ಹೆಸರಿನ ಸಾಂಬಾರ ಮಳಿಗೆಯೊಂದನ್ನು ಸ್ಥಾಪಿಸಿ ವ್ಯಾಪಾರಕ್ಕೆ ಒತ್ತು ನೀಡಲಾಯಿತು. ಕೊಡಗಿನ ಏಲಕ್ಕಿಯನ್ನು ಸಂಘದ ಮೂಲಕ ಖರೀದಿಸಿ ಗ್ರಾಹಕರಿಗೆ ಮಾರಾಟ ಮಾಡುವ ವ್ಯವಸ್ಥೆಯನ್ನು ಆರಂಭಿಸಲಾಯಿತು. ಗುಣಮಟ್ಟದ ಏಲಕ್ಕಿ, ಕರಿಮೆಣಸು, ವೈನ್, ಜೇನುತಪ್ಪ ಮುಂತಾದ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ. ಕಳೆದ ಹಲವು ವರ್ಷಗಳಿಂದ ಸೋಮವಾರಪೇಟೆ ಶಾಖೆ ನಷ್ಟದಲ್ಲಿದ್ದು, ಪರ್ಯಾಯ ಮಾರ್ಗದ ಮೂಲಕ ರೈತಪರ ಯೋಜನೆಗಳನ್ನು ರೂಪಿಸಿ ಶಾಖೆಯನ್ನು ನಷ್ಟದಿಂದ ಲಾಭದೆಡೆಗೆ ಕೊಂಡೊಯ್ಯಲು ಎಲ್ಲಾ ಪ್ರಯತ್ನಗಳನ್ನು ಮಾಡುವ ಉದ್ದೇಶದಿಂದ ಚುನಾವಣೆಯನ್ನು ಎದುರಿಸುತ್ತಿರುವುದಾಗಿ ಮಾಜಿ ಅಧ್ಯಕ್ಷ ಬಿ.ಈ.ಬೋಪಯ್ಯ ಹಾಗೂ ಹಾಲಿ ಅಧ್ಯಕ್ಷ ಸೂದನ ಎಸ್.ಈರಪ್ಪ ತಿಳಿಸಿದ್ದಾರೆ. ‘ರೈತ ಮಿತ್ರಕೂಟ’ ಕೆಲವು ಹೊಸಮುಖಗಳೊಂದಿಗೆ ಹಳೆಯ ನಿರ್ದೇಶಕರನ್ನು ಉಳಿಸಿಕೊಂಡು ಚುನಾವಣೆಗೆ ಸಜ್ಜಾಗಿದೆ. 17 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಈಗಾಗಲೇ ವಿರಾಜಪೇಟೆ ಮತ್ತು ಪೊನ್ನಂಪೇಟೆ ಕ್ಷೇತ್ರದಿಂದ ಹಾಗೂ ಬಿ.ಸಿ.ಎಂ.ಬಿ ಸ್ಥಾನದಿಂದ ಮೈತ್ರಿ ಕೂಟದ ನಾಲ್ವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸುಮಾರು 1000 ಮತದಾರರಿರುವ ಸಂಘದಲ್ಲಿ ಸರಳ ವ್ಯಕ್ತಿತ್ವದ ಅಧ್ಯಕ್ಷ ಎಂದೇ ಹೆಸರಾಗಿರುವ ಸೂದನ ಎಸ್.ಈರಪ್ಪ ಹಾಗೂ ರಾಜಕೀಯ ಪಕ್ಷದ ಬೆಂಬಲ ಪಡೆದಿರುವ ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. ಕೊಡಗು ಜಿಲ್ಲಾ ಏಲಕ್ಕಿ ಮಾರಾಟ ಸಹಕಾರ ಸಂಘ 1939ರಲ್ಲಿ ಸ್ಥಾಪನೆಯಾಯಿತು. ಅನೇಕ ಹಿರಿಯರು ಪಕ್ಷಾತೀತವಾಗಿ ದುಡಿದು ಬೆಳೆಸಿದ ಸಂಸ್ಥೆ ಇದಾಗಿದೆ. ಒಂದು ಕಾಲದಲ್ಲಿ ಕೊಡಗಿನಲ್ಲಿ ವರ್ಷಕ್ಕೆ ಮೂರು ಲಕ್ಷ ಕೆ.ಜಿ ಏಲಕ್ಕಿ ಹರಾಜು ಆಗುತ್ತಿತ್ತು. ಕಟ್ಟೆರೋಗ ಮೊದಲಾದ ಕಾರಣಗಳಿಂದ ಏಲಕ್ಕಿ ಬೆಳೆ ರೈತರಿಂದ ಕೈತಪ್ಪಿತು. ಪರ್ಯಾಯವಾಗಿ ಬಹಳ ವರ್ಷಗಳ ಹಿಂದೆ ಕೇಂದ್ರ ಕಚೇರಿ ಮಡಿಕೇರಿ, ಸೋಮವಾರಪೇಟೆ, ಚೇರಂಬಾಣೆ ಮತ್ತು ವಿರಾಜಪೇಟೆಯಲ್ಲಿ ಹತ್ಯಾರು ಮಳಿಗೆಗಳನ್ನು ತೆರೆದು ಸಂಘವನ್ನು ಮುನ್ನಡೆಸಿಕೊಂಡು ಬರಲಾಗುತ್ತಿದೆ.
ಭಾನುವಾರ ನಡೆಯುವ ಚುನಾವಣೆ ಪ್ರತಿಷ್ಠೆಯಿಂದ ಕೂಡಿದ್ದು, ರೈತ ಮಿತ್ರಕೂಟ ಮತ್ತು ರಾಜಕೀಯ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ಏರ್ಪಡುವ ಸಾಧ್ಯತೆ ಇದೆ.








