
ಮಡಿಕೇರಿ ಅ.29 NEWS DESK : ರಾಜಾಸೀಟು ರಸ್ತೆಯಲ್ಲಿ ಪಾರ್ಕಿಂಗ್ ಶುಲ್ಕ ಸಂಗ್ರಹವನ್ನು ಏಕಾಏಕಿ ಸ್ಥಗಿತಗೊಳಿಸಿದ ಕ್ರಮದ ಕುರಿತು ಮಡಿಕೇರಿ ನಗರಸಭೆಯ ಸಾಮಾನ್ಯ ಸಭೆಯಲ್ಲಿ ತೀವ್ರ ಚರ್ಚೆ ನಡೆಯಿತು. ನಗರಸಭೆಯ ಸಭಾಂಗಣದಲ್ಲಿ ಅಧ್ಯಕ್ಷೆ ಪಿ.ಕಲಾವತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಎಸ್ಡಿಪಿಐ ಸದಸ್ಯ ಅಮಿನ್ ಮೊಹಿಸಿನ್ ಅವರು ರಾಜಾಸೀಟು ಬಳಿ ವಾಹನ ಪಾರ್ಕಿಂಗ್ ಶುಲ್ಕ ವಸೂಲಾತಿ ಸ್ಥಗಿತಗೊಂಡಿದೆ. ಈ ದಿಢೀರ್ ನಿರ್ಧಾರಕ್ಕೆ ಕಾರಣವೇನೆಂದು ಪ್ರಶ್ನಿಸಿದರು. ಬಿಜೆಪಿ ಸದಸ್ಯ ಕೆ.ಎಸ್.ರಮೇಶ್ ಅವರು ಮಾತನಾಡಿ ರಾಜಾಸೀಟು ಬಳಿ ವಾಹನ ಪಾರ್ಕಿಂಗ್ ಶುಲ್ಕ ವಸೂಲಾತಿಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸುವಂತೆ ಒತ್ತಾಯಿಸಿದರು. ಈ ಸಂದರ್ಭ ಅಧ್ಯಕ್ಷರ ಸೂಚನೆಯಂತೆ ಕೌನ್ಸಿಲ್ ಕಾರ್ಯದರ್ಶಿ ತಾಹಿರ್ ಅವರು ಉತ್ತರ ನೀಡಿ ರಾಜಾಸೀಟು ಬಳಿ ಪಾರ್ಕಿಂಗ್ ಟೆಂಡರನ್ನು 37.85 ಲಕ್ಷ ರೂ.ಗಳಿಗೆ ನೀಡಲಾಗಿದ್ದು, ಈ ಟೆಂಡರ್ ಮೊತ್ತದಲ್ಲಿ ಟೆಂಡರ್ದಾರರು 17.79 ಲಕ್ಷ ರೂ.ಗಳನ್ನಷ್ಟೇ ಪಾವತಿಸಿದ್ದಾರೆ. ಸುಮಾರು 20 ಲಕ್ಷ ರೂ. ಪಾವತಿಗೆ ಬಾಕಿ ಇರುವುದರಿಂದ, ಶುಲ್ಕ ವಸೂಲಾತಿ ಸ್ಥಗಿತಕ್ಕೆ ಆದೇಶಿಸಿ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದರು. ಈ ಹಂತದಲ್ಲಿ ಮಾತನಾಡಿದ ಆಡಳಿತ ಪಕ್ಷ ಬಿಜೆಪಿಯ ಸದಸ್ಯ ಎಸ್.ಸಿ.ಸತೀಶ್ ಅವರು ಮಾತನಾಡಿ, ಟೆಂಡರ್ ಮೊತ್ತದ ಪಾವತಿಗೆ ಇರುವ ನಿಯಮಾವಳಿಗಳೇನು ಮತ್ತು ಟೆಂಡರ್ದಾರರಿಂದ ಪುರ್ಣ ಮೊತ್ತವನ್ನು ಪಾವತಿಸಿಕೊಳ್ಳದೆ ಪಾರ್ಕಿಂಗ್ ಶುಲ್ಕ ವಸೂಲಾತಿಗೆ ಅವಕಾಶ ನೀಡಿದ್ದಾದರು ಹೇಗೆ ಎಂದು ಅಧ್ಯಕ್ಷರ ವಿರುದ್ಧ ಹರಿಹಾಯ್ದರು. ಅಲ್ಲದೆ ಇದೇ ನಿಯಮವನ್ನು ಮಾರುಕಟ್ಟೆಯ ಮೀನು ಮತ್ತು ಕೋಳಿ ಮಾಂಸ ಮಾರಾಟ ಮಾಡುತ್ತಿದ್ದ ಮಳಿಗೆದಾರರಿಗೆ ಯಾಕೆ ಅನ್ವಯಿಸಿಲ್ಲ ಎಂದು ಪ್ರಶ್ನಿಸಿದರು. ಮೀನು ಮಳಿಗೆದಾರರು ಬಾಡಿಗೆ ನೀಡಿಲ್ಲವೆಂದು ಮಳಿಗೆ ಮುಚ್ಚಿಸಿದ ಮರುದಿನವೇ ಅದನ್ನು ತೆರೆಯಲು ಅವಕಾಶ ಮಾಡಿಕೊಟ್ಟಿದ್ದಾದರು ಹೇಗೆ ಎಂದು ಏರು ಧ್ವನಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ಆಡಳಿತ ಪಕ್ಷದ ಸದಸ್ಯೆ ಶ್ವೇತ ರವೀಂದ್ರ, ಕಾಳಚಂಡ ಅಪ್ಪಣ್ಣ ಹಾಗೂ ಕಾಂಗ್ರೆಸ್ ಸದಸ್ಯ ಬಿ.ವೈ.ರಾಜೇಶ್ ಅವರು ಧ್ವನಿ ಗೂಡಿಸಿದರು. ಈ ಸಂದರ್ಭ ಸಭೆÉ ಗೊಂದಲದ ಗೂಡಾಯಿತು. ಎಸ್.ಸಿ.ಸತೀಶ್ ಮಾತನಾಡಿ ಟೆಂಡರ್ ನಿಯಮದಂತೆ ಟೆಂಡರ್ ಮೊತ್ತವನ್ನು ಒಟ್ಟಾಗಿ ಪಾವತಿಸಿದ ನಂತರವಷ್ಟೇ ಗುತ್ತಿಗೆದಾರನಿಗೆ ಶುಲ್ಕ ವಸೂಲಾತಿಗೆ ಅವಕಾಶ ನೀಡಬೇಕು. ಆದರೆ ಇಲ್ಲಿ ಟೆಂಡರ್ ನಿಯಮವನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದರು. ಈ ಸಂದರ್ಭ ಪೌರಾಯುಕ್ತ ಹೆಚ್.ಆರ್.ರಮೇಶ್ ಅವರು ಮಾತನಾಡಿ, ರಾಜಾಸೀಟು ಬಳಿಯ ಪಾರ್ಕಿಂಗ್ ಶುಲ್ಕ ಸ್ಥಗಿತಗೊಳಿಸುವಂತೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಮೌಖಿಕವಾಗಿ ತಿಳಿಸಿದರು. ಈ ಬಗ್ಗೆ ಲಿಖಿತ ಹೇಳಿಕೆಯನ್ನು ತಯಾರಿಸಿ ಅವರಿಂದ ಸಹಿ ಪಡೆದುಕೊಂಡು ಪಾರ್ಕಿಂಗ್ ಶುಲ್ಕ ಸಂಗ್ರಹ ಸ್ಥಗಿತಕ್ಕೆ ನೋಟಿಸ್ ನೀಡಿರುವುದಾಗಿ ಸ್ಪಷ್ಟಪಡಿಸಿದರು. ಸಭೆಯಲ್ಲಿ ಮತ್ತೆ ಕಾವೇರಿದ ವಾತಾವರಣ ಸೃಷ್ಟಿಯಾಗಿ ಪಾರ್ಕಿಂಗ್ ವಿಚಾರದಲ್ಲಿ ಈ ರೀತಿಯ ಕ್ರಮ ಕೈಗೊಳ್ಳಲಾಗಿದೆ, ಆದರೆ ಮೀನು ಮಾರುಕಟ್ಟೆ ವಿಷಯದಲ್ಲಿ ಮಳಿಗೆ ಸ್ಥಗಿತಗೊಳಿಸಿ ಮತ್ತೆ ಅವಕಾಶ ನೀಡಲು ಕಾರಣವೇನೆಂದು ಎಸ್.ಸಿ.ಸತೀಶ್ ಪ್ರಶ್ನಿಸಿದರು. *ತನಿಖೆಯಾಗಲಿ* ಎಸ್ಡಿಪಿಐ ಸದಸ್ಯ ಅಮಿನ್ ಮೊಹಿಸಿನ್ ಮಾತನಾಡಿ, ರಾಜಾಸೀಟು ಪಾರ್ಕಿಂಗ್ ಮತ್ತು ಮೀನು ಮಾರುಕಟ್ಟೆ ಮಳಿಗೆಯ ವಿಚಾರಗಳು ವಿಭಿನ್ನವಾಗಿವೆ. ಮೀನು ಮಾರುಕಟ್ಟೆ ಮಳಿಗೆಗೆ ಸಂಬಂಧಿಸಿದಂತೆ ಟೆಂಡರ್ದಾರರು ರಾಜ್ಯ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ, ನ್ಯಾಯಾಲಯವು ಈ ವಿಚಾರವನ್ನು ಸ್ಥಳೀಯ ಲೋಕ ಅದಾಲತ್ನಲ್ಲಿ ಬಗೆಹರಿಸಿಕೊಳ್ಳುವಂತೆ ತಿಳಿಸಿದೆ. ಅಲ್ಲದೆ ಮಳಿಗೆಗಳಿಗೆ ಮೂಲ ಸೌಲಭ್ಯ ಕಲ್ಪಿಸುವಲ್ಲಿಯವರೆಗೆ ಮೀನು ಮಾರಾಟವನ್ನು ಮುಂದುವರಿಸಲು ಅವಕಾಶ ನೀಡಿದೆ ಎಂದು ಸಭೆಯ ಗಮನ ಸೆಳೆದರು.
ನಗರಸಭೆಯಲ್ಲಿ ನಡೆದಿರುವ ಎಲ್ಲಾ ಹರಾಜು ಪ್ರಕರಣಗಳಿಗೆ ಸಂಬಂಧಿಸಿದಂತೆ ದೊಡ್ಡ ಮಟ್ಟದ ತನಿಖೆಯಾಗಬೇಕೆಂದು ಎಸ್.ಸಿ.ಸತೀಶ್ ಆಗ್ರಹಿಸಿದರು.
ಈಗಾಗಲೇ ಸ್ಥಗಿತಗೊಳಿಸಲಾಗಿರುವ ಮೀನು ಮಳಿಗೆಗಳನ್ನು ಪುನರಾರಂಭಿಸಲು ಅವಕಾಶ ನೀಡುವಂತೆ ಸದಸ್ಯರು ಮಾಡಿದ ಆಗ್ರಹಕ್ಕೆ ಅಧ್ಯಕ್ಷರು ಒಪ್ಪಿಗೆ ಸೂಚಿಸಿದರು.









