
ಮಡಿಕೇರಿ NEWS DESK ಅ.29 : ಶಿಕ್ಷಣ ಮತ್ತು ಸಮುದಾಯದ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಗುರುತಿಸಿ ರೋಟರಿ ಮಡಿಕೇರಿ ಸಂಸ್ಥೆಯು ಮೂವರು ಸರಕಾರಿ ಶಾಲಾ ಶಿಕ್ಷಕರಿಗೆ ರೋಟರಿ ನೇಷನ್ ಬಿಲ್ಡರ್ಸ್ ಪ್ರಶಸ್ತಿಯನ್ನು ನೀಡಿ ಗೌರವಿಸಿತು.
ನಗರದ ರೋಟರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಡಿಕೇರಿ ಸರಕಾರಿ ಜೂನಿಯರ್ ಕಾಲೇಜ್ ನ ಕನ್ನಡ ಶಿಕ್ಷಕಿ ಗೌರಿ ಕೆ.ಬಿ., ಕಕ್ಕಬ್ಬೆ ಪ್ರೌಢಶಾಲೆಯ ಇಂಗ್ಲಿಷ್ ಶಿಕ್ಷಕ ಕುಟ್ಟಂಜೆಟ್ಟಿರ ಎಂ.ಶರತ್ ಹಾಗೂ ಮಾದಾಪುರದ ಡಿ.ಚೆನ್ನಮ್ಮ ಪಿಯು ಕಾಲೇಜ್ ನ ಪ್ರಾಂಶುಪಾಲ ಸಿ.ಜಿ.ಮಂದಪ್ಪ ಅವರುಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ರೋಟರಿ ಜಿಲ್ಲೆ 3181 ಜಿಲ್ಲಾ ಯೋಜನೆಗಳ ಅಧ್ಯಕ್ಷ ರೊಟೇರಿಯನ್ ಕೆ.ಎಸ್.ತಮ್ಮಯ್ಯ ಅವರು ಸಿ.ಜಿ.ಮಂದಪ್ಪ ಅವರಿಗೆ, ರೋಟರಿ ಕ್ಲಬ್ ಸೇವಾ ನಿರ್ದೇಶಕ ರೋ.ಎಂ.ಎಂ.ಕಾರ್ಯಪ್ಪ, ಕ್ಲಬ್ ಖಜಾಂಚಿ ರೋ.ಈಶ್ವರ ಭಟ್ ಅವರು ಗೌರಿ ಕೆ.ಬಿ ಅವರಿಗೆ ಹಾಗೂ ರೋ.ಪಿಡಿಜಿ ಡಾ.ರವಿ ಅಪ್ಪಾಜಿ ಅವರು ಕುಟ್ಟಂಜೆಟ್ಟಿರ ಎಂ.ಶರತ್ ಅವರಿಗೆ ಪ್ರಶಸ್ತಿ ಮತ್ತು ಪ್ರಶಂಸನಾ ಪತ್ರವನ್ನು ನೀಡಿ ಗೌರವಿಸಿದರು.
ಪಬ್ಲಿಕ್ ಇಮೇಜ್ ಮತ್ತು ಕ್ಲಬ್ ಬುಲೆಟಿನ್ ಸಂಪಾದಕ ರೋ.ಟಿ.ಎನ್.ಪ್ರಿನ್ಸ್ ಪೊನ್ನಣ್ಣ ಅವರು ಗೌರಿ ಕೆ.ಬಿ. ಅವರನ್ನು ಪರಿಚಯಿಸಿದರು. ಕ್ಲಬ್ ವೃತ್ತಿಪರ ಸೇವಾ ನಿರ್ದೇಶಕ ರೋ.ಮನೋಹರ್ ಕಾಮತ್ ಅವರು ಸಿ.ಜಿ.ಮಂದಪ್ಪ ಅವರನ್ನು ಹಾಗೂ ಕ್ಲಬ್ ಕಾರ್ಯದರ್ಶಿ ರೋ.ಬಿ.ಎಂ.ಸೋಮಣ್ಣ ಅವರು ಕುಟ್ಟಂಜೆಟ್ಟಿರ ಎಂ.ಶರತ್ ಅವರನ್ನು ಸಭೆಗೆ ಪರಿಚಯಿಸಿದರು. ಪ್ರಶಸ್ತಿ ಪಡೆದ ಮೂವರು ಶಿಕ್ಷಕರು ರೋಟರಿ ಮಡಿಕೇರಿ ನೀಡಿದ ಗೌರವಕ್ಕೆ ಕೃತಜ್ಞತೆ ಸಲ್ಲಿಸಿದರು. ರೋಟರಿ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.








