
ಸಿದ್ದಾಪುರ ಅ.30 NEWS DESK : ವಿನೂತನವಾಗಿ ತಣಲ್ ಸಂಸ್ಥೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವುದು ನಿಜವಾಗಿಯೂ ಶ್ಲಾಘನೀಯ ಎಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು. ಸಿದ್ದಾಪುರದ ತಣಲ್ ಸಂಸ್ಥೆ ವತಿಯಿಂದ ಬಡ ಕಿಡ್ನಿ ರೋಗಿಗಳಿಗೆ ಡಯಾಲಿಸಿಸ್ ಮಾಡಲು ಸಹಾಯಾರ್ಥವಾಗಿ ಮಾಡುತ್ತಿರುವ ಬಿರಿಯಾನಿ ಚಾಲೆಂಜ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಇತ್ತೀಚೆಗೆ ಕಿಡ್ನಿರೋಗದಿಂದ ಬಳಲುತ್ತಿರುವವವರು ಹೆಚ್ಚಾಗಿದ್ದು ಎಲ್ಲರಿಗೂ ಡಯಾಲಿಸಿಸ್ ಮಾಡುವುದು ಅಸಾಧ್ಯವಾಗಿದೆ. ಈ ನಡುವೆ ಬಡವರಿಗಾಗಿ ತಣಲ್ ಸಂಸ್ಥೆ ಕಡಿಮೆ ವೆಚ್ಚದಲ್ಲಿ ಹಾಗೂ ಇನ್ನೂ ಕೆಲವರಿಗೆ ಉಚಿತವಾಗಿ ಮಾಡುತ್ತಿರುವುದು ಉತ್ತಮ ಕಾರ್ಯವಾಗಿದೆ.ಇತ್ತೀಚೆಗೆ ತಣಲ್ ಸಂಸ್ಥೆ ಬಿರಿಯಾನಿಚಾಲೆಂಜ್ ಎಂಬ ವಾಕ್ಯದೊಂದಿಗೆ ಸಾರ್ವಜನಿಕರಿಗೆ ಬಿರಿಯಾನಿ ನೀಡುವ ಮೂಲಕ ಅದರಿಂದ ಬರುವ ಹಣದಿಂದ ಬಡ ರೋಗಿಗಳ ಚಿಕಿತ್ಸೆಗೆ ನೆರವಾಗುತ್ತಿರುವ ಮೂಲಕ ಸಂಘಟನೆಯು ನಿಜವಾದ ಸೇವೆಯನ್ನು ನೀಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭ ಜನಪ್ರತಿನಿಧಿಗಳು, ಸಮಾಜ ಸೇವಕರು, ದಾನಿಗಳು, ಗಣ್ಯರು ಹಾಜರಿದ್ದರು. :: ಏನಿದು ಬಿರಿಯಾನಿ ಚಾಲೆಂಜ್….! :: ಕಡಿಮೆ ವೆಚ್ಚದಲ್ಲಿ ಡಯಾಲಿಸಿಸ್ ನಡೆಸಿ ಬಡ ರೋಗಿಗಳ ಆಶಾಕಿರಣವಾಗಿರುವ ದಯಾ ರಿಹ್ಯಾಬಿಟೇಷನ್ ಟ್ರಸ್ಟ್ ತಣಲ್ ಸಂಸ್ಥೆಯ ಸಹಯೋಗದೊಂದಿಗೆ ಪ್ರಾರಂಬಭಿಸಿದ ಡಯಾಲಿಸಿಸ್ ಕೇಂದ್ರದ ಉಳಿವಿಗಾಗಿ ಏರ್ಪಡಿಸಿದ್ದ ಬಿರಿಯಾನಿ ಚಾಲೆಂಜ್ ಗೆ ವ್ಯಾಪಕ ಸ್ಪಂದನೆ ದೊರೆತಿದೆ. ಸಂಘ ಸಂಸ್ಥೆಗಳು ದಾನಿಗಳ ಸಹಕಾರದೊಂದಿಗೆ ಬಿರಿಯಾನಿ ತಯಾರಿಸಿ ಮನೆಗಳಿಗೆ ಮಾರಾಟ ಮಾಡಿ ಬಂದ ಹಣವನ್ನು ಸಂಸ್ಥೆಗೆ ನೀಡುವ ಮೂಲಕ ಸಾಲದ ಸುಳಿಯಿಂದ ಪಾರು ಮಾಡುವುದರೊಂದಿಗೆ ಮುಂದಿನ ದಿನಗಳಲ್ಲಿ ಉಚಿತವಾಗಿ ರೋಗಿಗಳಿಗೆ ಡಯಾಲಿಸಿಸ್ ಸೇವೆಯನ್ನು ಒದಗಿಸುವ ಸಲುವಾಗಿ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಶಾಲಾ ವಿದ್ಯಾರ್ಥಿಗಳು, ಅನಾಥಾಶ್ರಮಗಳು, ಮಹಿಳಾ ಸಂಘಟನೆಗಳು,ಕಛೇರಿ ಸಿಬ್ಬಂದಿಗಳು , ಸಾರ್ವಜನಿಕರು ಸಂಘ ಸಂಸ್ಥೆಯವರು ಸಂಸ್ಥೆಯೊಂದಿಗೆ ಕೈಜೋಡಿಸುವುದರ ಮೂಲಕ ಸುಮಾರು 12 ಸಾವಿರ ವೆಜ್ ಹಾಗೂ ನಾನ್ ವೆಜ್ ಬಿರಿಯಾನಿಗಳನ್ನ ಖರೀದಿಸುವ ಮೂಲಕ ಸಂಕಷ್ಟದಲ್ಲಿರುವ ರೋಗಿಗಳಿಗೆ ನೆರವಾಗಲು ಮಾನವೀಯತೆಯೊಂದಿಗೆ ಸೇವಾ ಮನೋಭಾವದ ಸಮಾಜ ಸೇವೆಗೆ ಕೈಜೋಡಿಸಿ ಸಾತ್ ನೀಡಿದ್ದಾರೆ. ಸಂಸ್ಥೆ ಆರಂಭಿಸಿದ ಬಿರಿಯಾನಿ ಚಾಲೆಂಜಿಗೆ ಜಾತಿ ಮತ ಭೇದ ಮರೆತು ನೂರಾರು ಮಂದಿ ಯುವ ಸಮೂಹ ಸ್ವಯಂಸೇವಕರಾಗಿ ಸೇವೆ ಸಲ್ಲಿಸಿ ಯಶಸ್ಸು ಕಂಡಿದ್ದಾರೆ. ಕಳೆದ ಆರು ವರ್ಷಗಳಿಂದ ಕಡಿಮೆ ವೆಚ್ಚದಲ್ಲಿ ರೋಗಿಗಳಿಗೆ ಡಯಾಲಿಸಿಸ್ ಸೇವೆಯನ್ನು ಒದಗಿಸುವ ಮೂಲಕ ತೀರ್ವ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಸಂಸ್ಥೆಯನ್ನು ಹಾಗೂ ಬಡರೋಗಿಗಳಿಗೆ ನೆರವಾಗುವ ದೃಷ್ಟಿಯಿಂದ ಸಾಮಾಜಿಕ ಕಳಕಳಿಯೊಂದಿಗೆ ಮುಂದೆ ಬಂದ ಸಂಘಟನೆಗಳು ಬಿರಿಯಾನಿ ಚಾಲೆಂಜ್ ವಿನೂತನ ಮಾದರಿಯ ಪ್ರಯೋಗ ಮಾಡುವ ಮೂಲಕ ಕಳೆದ ಎರಡು ವರ್ಷಗಳಿಂದ ಸಂಸ್ಥೆಗೆ ನೆರವಾಗುವುದು ರೊಂದಿಗೆ ರಿಯಾಯಿತಿ ದರದಲ್ಲಿ ನೀಡುತ್ತಿದೆ ಚಿಕಿತ್ಸೆಯನ್ನು ಮತ್ತಷ್ಟು ಸರಳವಾಗಿಸುವುದರೊಂದಿಗೆ ಈ ವರ್ಷ ಹೆಚ್ಚು ಬಿರಿಯಾನಿ ತಯಾರಿಸಿ ಮಾರಾಟ ಮಾಡುವ ಮೂಲಕ ಮುಂದಿನ ದಿನಗಳಲ್ಲಿ ಉಚಿತ ಸೇವೆಯ ಚಿಂತನೆ ಮಾಡಿದೆ.









