
ಮಡಿಕೇರಿ ಅ.30 NEWS DESK : ಅರೆಭಾಷಿಕ ಗೌಡ ಜನಾಂಗದ ಶಾಸಕರ ಅಭಿಮಾನಿಗಳ ವತಿಯಿಂದ ಭಾಗಮಂಡಲದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರನ್ನು ಸನ್ಮಾನಿಸಲಾಯಿತು. ಪವಿತ್ರ ಕಾವೇರಿ ತುಲಾ ಸಂಕ್ರಮಣ ಸಂದರ್ಭ ಶಾಸಕರು ಅತ್ಯಂತ ಅಚ್ಚುಕಟ್ಟಾಗಿ, ಸೌಹಾರ್ದಯುತವಾಗಿ ಎಲ್ಲಾ ಜನಾಂಗದವರು ತಾಯಿ ಕಾವೇರಿ ತೀರ್ಥ ಸ್ವರೂಪಿಣಿಯಾಗಿ ಉಗಮಿಸುವುದನ್ನು ವೀಕ್ಷಿಸಲು ವ್ಯವಸ್ಥೆ ಕಲ್ಪಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು. ಸ್ಥಳೀಯ ಹಾಗೂ ಸುತ್ತಮುತ್ತಲಿನ ಅರೆಭಾಷಿಕ ಗೌಡ ಜನಾಂಗದ ಶಾಸಕರ ಅಭಿಮಾನಿಗಳು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕರು, ನಮ್ಮ ನಾಡು ಸುಖ-ಶಾಂತಿ, ಸಮೃದ್ಧಿ ಹಾಗೂ ಸೌಹಾರ್ದತೆಯಿಂದ ಇರಬೇಕಾದರೆ ಎಲ್ಲರೂ ಒಂದೇ ಎಂಬ ಭಾವನೆಯಿಂದ ಪರಸ್ಪರ ಸೌಹಾರ್ದತೆಯಿಂದ ಎಲ್ಲಾ ಕೆಲಸ ಕಾರ್ಯಗಳನ್ನು ಮಾಡಬೇಕು. ತಾಯಿ ಕಾವೇರಿಯ ಆಶೀರ್ವಾದ ಎಲ್ಲರ ಮೇಲಿರಬೇಕೆಂದರೆ ಎಲ್ಲರೂ ತಾಯಿಯ ಇಚ್ಛೆಯಂತೆ ನಾಡಿನ ಒಳಿತಿಗಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಡಿಸಿಸಿ ಪ್ರಧಾನ ಕಾರ್ಯದರ್ಶಿ ಕೊಲ್ಯದ ಗಿರೀಶ್, ನಾಪೋಕ್ಲು ಬ್ಲಾಕ್ ಅಧ್ಯಕ್ಷರು ಇಸ್ಮಾಯಿಲ್, ಭಾಗಮಂಡಲ ವಲಯ ಅಧ್ಯಕ್ಷರು ವೆಂಕಟೇಶ್, ಹರ್ಷ, ಪ್ರಕಾಶ್, ಸೂರಜ್ ಹೊಸೂರು, ಸಂಪನ್ ಅಯ್ಯಪ್ಪ, ರವಿರಾಜ್ ಹೊಸೂರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.









