
ಮಡಿಕೇರಿ ನ.3 NEWS DESK : ಸಿದ್ದಾಪುರ ಸಂತ ಅನ್ನಮ್ಮ ವಿದ್ಯಾಸಂಸ್ಥೆಯಲ್ಲಿ 70ನೇ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕೊಡವ, ಕನ್ನಡ ಭಾಷೆಯ ಸಾಹಿತಿ ಮಂಡೇಪಂಡ ಗೀತಾ ಮಂದಣ್ಣ ಮಾತನಾಡಿ, ಭಾಷಾವಾರು ಪ್ರಾಂತ್ಯದ ಪ್ರಕಾರ ಕನ್ನಡ ನಾಡನ್ನ ಮೈಸೂರು ಸಂಸ್ಥಾನ ಮಾಡಿ ನಂತರ ಕರ್ನಾಟಕ ರಾಜ್ಯ ಎಂದು ಗುರುತು ಮಾಡಿ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡಲಾಗುತ್ತಿದೆ. ನಮ್ಮ ಕರ್ನಾಟಕ ಕನ್ನಡ ಭಾಷೆ, ಸಂಸ್ಕೃತಿ, ಸಿರಿವಂತಿಕೆಯಲ್ಲಿ, ವಿದ್ಯೆಯಲ್ಲಿ, ಸಾಹಿತ್ಯದಲ್ಲಿ, ಉದ್ಯೋಗದಲ್ಲಿ, ಮುಂಚೂಣಿಯಲ್ಲಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಕನ್ನಡವನ್ನು ಬೆಳೆಸುವುದು ಹಾಗೂ ಕನ್ನಡದಲ್ಲಿ ಮಾತನಾಡುವುದು ತುಂಬ ಕುಂಠಿತವಾಗುತ್ತಿದೆ ಹಾಗೂ ಇಂಗ್ಲೀಷ್ ಪ್ರಭಾವ ಹೆಚ್ಚಾಗುತ್ತಿದ್ದು, ಮುಂದಿನ ದಿನಗಳಲ್ಲಿ ಕನ್ನಡ ಭಾಷೆಯನ್ನು ನಮ್ಮ ದೈನಂದಿನ ಬದುಕಿನಲ್ಲಿ ಬಳಸಬೇಕು ಹಾಗೂ ನಾಡು ನುಡಿಯನ್ನು ಗೌರವಿಸಿ ಪೋಷಿಸುವ ಕೆಲಸವಾಗಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅನ್ನಮ್ಮ ಶಾಲೆಯ ವ್ಯವಸ್ಥಾಪಕಿ ಮಾರ್ಜರಿ ವಹಿಸಿದರು. ಸಂತ ಅನ್ನಮ್ಮ ಶಾಲೆಯ ಪ್ರಾಂಶುಪಾಲೆ ಲೆನಿಟ್, ಕಾಲೇಜು ಪ್ರಾಂಶುಪಾಲೆ ರಜಿನ ತೋಮಸ್,
ಶಾಲಾ ಶಿಕ್ಷಕಿಯರಾದ ಲೇನಿ, ಸುನಿತಾ, ತೆರೇಸ, ಪ್ರಮೀಳಾ, ಸುಜಾತ, ರೀಟಾ, ಸೇರಿದಂತೆ ಪೋಷಕರು ಮಕ್ಕಳು ಹಾಜರಿದ್ದರು. ಇದೇ ಸಂದರ್ಭ ಮಂಡೇಪಂಡ ಗೀತಾ ಮಂದಣ್ಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಶಾಲೆಯಲ್ಲಿ ನಡೆದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆಯಿತು.









