
ಮಡಿಕೇರಿ ನ.8 NEWS DESK : ಸರ್ವರಿಗೂ ಶುದ್ಧ ಕುಡಿಯುವ ನೀರನ್ನು ಒದಗಿಸಬೇಕೆನ್ನುವ ಕೇಂದ್ರ ಸರ್ಕಾರದ ಪರಿಕಲ್ಪನೆಯ ‘ಜಲ ಜೀವನ್ ಮಿಷನ್’ ಯೋಜನೆಯಡಿ, ಕಾಂತೂರು ಮೂರ್ನಾಡು ಗ್ರಾಮ ಪಂಚಾಯ್ತಿಯ ‘ಕಾಂತೂರು’ ಮತ್ತು ‘ಕಿಗ್ಗಾಲು’ ಗ್ರಾಮಗಳಲ್ಲಿ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದು, ಇನ್ನು ಮೂರು ತಿಂಗಳಿನ ಅವಧಿಯ ಒಳಗಾಗಿ ಇಡೀ ಪಂಚಾಯ್ತಿಯಲ್ಲಿ ಯೋಜನೆ ಪೂರ್ಣವಾಗಿ ಜಾರಿಗೆ ಬರುವ ವಿಶ್ವಾಸವನ್ನು ಪಂಚಾಯ್ತಿ ಅಧ್ಯಕ್ಷ ಕುಶನ್ ರೈ ವ್ಯಕ್ತಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಲ ಜೀವನ್ ಮಿಷನ್ ಯೋಜನೆಯನ್ನು ಕಾಂತೂರು ಮತ್ತು ಕಿಗ್ಗಾಲು ಗ್ರಾಮಗಳಲ್ಲಿ ಅತ್ಯಂತ ವ್ಯವಸ್ಥಿತವಾಗಿ ಜಾರಿಗೊಳಿಸುವುದಕ್ಕೆ ಪ್ರಮುಖವಾಗಿ ಅಲ್ಲಿನ ಸಾರ್ವಜನಿಕರ ಸಂಪೂರ್ಣ ಸಹಕಾರ, ಪಂಚಾಯ್ತಿ ಜನಪ್ರತಿನಿಧಿಗಳು, ಇಂಜಿನಿಯರ್ಗಳ ಪರಿಶ್ರಮವೆ ಕಾರಣವೆಂದು ಸ್ಪಷ್ಟಪಡಿಸಿದರು. ಕಿಗ್ಗಾಲು ಮತ್ತು ಕಾಂತೂರು ಗ್ರಾಮಗಳಲ್ಲಿ ಯೋಜನೆಯಡಿ ಕುಡಿಯುವ ನೀರನ್ನು ಕಾವೇರಿ ನದಿಯಿಂದ ಒದಗಿಸಲಾಗುತ್ತಿದೆ. ಕಿಗ್ಗಾಲು ಗ್ರಾಮದಲ್ಲಿ ಯೋಜನೆಯಡಿ 249 ಮನೆಗಳಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಲಾಗಿದ್ದರೆ, ಕಾಂತೂರು ಗ್ರಾಮದಲ್ಲಿ 726 ಮನೆಗಳಿಗೆ ನೀರನ್ನು ಒದಗಿಸುವ ಕಾರ್ಯ ಮಾಡಲಾಗಿದೆಯೆಂದು ಮಾಹಿತಿಯನ್ನಿತ್ತರು. ಕಾಂತೂರು ಗ್ರಾಮದಲ್ಲಿ 89.29 ಲಕ್ಷ ರೂ. ವೆಚ್ಚದಲ್ಲಿ ಹಾಗೆಯೇ ಕಿಗ್ಗಾಲು ಗ್ರಾಮದಲ್ಲಿ 1.89 ಕೊಟಿ ರೂ.ವೆಚ್ಚದಲ್ಲಿ ಯೋಜನೆಯನ್ನು ಪೂರ್ಣಗೊಳಿಸಲಾಗಿದೆ. ಕಿಗ್ಗಾಲು ಗ್ರಾಮದಲ್ಲಿ ಜಲ ಜೀವನ್ ಮಿಷನ್ ಯೋಜನೆಯ ಜಾರಿಗೆ 30 ಸಾವಿರ ಲೀಟರ್ ಸಾಮಥ್ರ್ಯದ ಎರಡು ನೀರಿನ ಟ್ಯಾಂಕ್, 20 ಸಾವಿರ ಲೀಟರ್ ಸಾಮಥ್ರ್ಯದ ಒಂದು ಟ್ಯಾಂಕ್, ನೀರು ಶುದ್ಧೀಕರಣ ಮತ್ತು ಸಂಗ್ರಹಕ್ಕಾಗಿ 50 ಸಾವಿರ ಲೀಟರ್ ಸಾಮಥ್ರ್ಯದ ಎರಡು ಟ್ಯಾಂಕ್ಗಳನ್ನು ನಿರ್ಮಿಸಲಾಗಿದೆಯೆಂದು ಮಾಹಿತಿಯನ್ನಿತ್ತರು. :: ದೂರದ ಮನೆಗಳಿಗೆ ನೀರೊದಗಿಸುವುದು ಕಷ್ಟ :: ಜಲ ಜೀವನ್ ಯೋಜನೆಯಡಿ ಯಾವುದೇ ಪ್ರದೇಶದ ಗುಂಪು ಮನೆಗಳಿಗೆ ಶುದ್ಧ ನೀರನ್ನು ಸಮರ್ಪಕವಾಗಿ ಒದಗಿಸಬಹುದಾಗಿದೆ. ಆದರೆ, ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಮನೆಗಳು ದೂರ ದೂರದಲ್ಲಿರುವುದರಿಂದ ಪ್ರಾಯೋಗಿಕವಾಗಿ ಒಂದು ಮನೆಗೆ ನೀರೊದಗಿಸಲು ಕಿಲೋಮೀಟರ್ ದೂರ ಪೈಪ್ ಲೈನ್ ಮಾಡುವುದು ಕಷ್ಟದ ವಿಚಾರ. ಹೀಗೆ ಮಾಡಿದರು ಅಗತ್ಯ ಒತ್ತಡದ ಕೊರತೆಯಿಂದ ನೀರು ಆ ಮನೆಗೆ ತಲುಪುವುದು ಕಷ್ಟ. ಇಂತಹ ತಾತ್ರಿಕವಾದ ಕೆಲ ಸಮಸ್ಯೆಗ¼ನ್ನು ಹೊರತು ಪಡಿಸಿದರೆ, ಕಾಂತೂರು ಮೂರ್ನಾಡು ಪಂಚಾಯ್ತಿಯಿಂದ ಎರಡು ಗ್ರಾಮಗಳಲ್ಲಿ ಜಲ ಜೀವನ್ ಮಿಷನ್ನ್ನು ಯಶಸ್ವಿಯಾಗಿ ಅನುಷ್ಠಾನ ಗೊಳಿಸಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು. :: ಇನ್ನು ಮೂರು ತಿಂಗಳಲ್ಲಿ ಪೂರ್ಣ ವಿಶ್ವಾಸ :: ಕಾಂತೂರು ಮೂರ್ನಾಡು ಪಂಚಾಯ್ತಿಗೆ ಒಳಪಟ್ಟ ಮುತಾರ್ಮುಡಿ, ಬಾಡಗ, ಐಕೊಳ ಮತ್ತು ಕೋಡಂಬೂರು ಗ್ರಾಮಗಳಲ್ಲಿ ಮುಂದಿನ ಮೂರು ತಿಂಗಳ ಒಳಗಾಗಿ ಜಲಜೀವನ್ ಮಿಷನ್ ಅನುಷ್ಠಾನ ಗೊಳ್ಳುವ ವಿಶ್ವಾಸವನ್ನು ಕುಶನ್ ರೈ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಗ್ರಾಪಂ ಉಪಾಧ್ಯಕ್ಷರಾದ ನಿ.ಎಸ್.ರೇಖಾ, ಸದಸ್ಯರಾದ ಸುಮಾ ಸುಂದರಿ, ವಿಜು ತಿಮ್ಮಯ್ಯ, ಯಶ್ವಿನ್ ಪೊನ್ನಪ್ಪ, ರೀತಾ ಸುದರ್ಶನ್ ಉಪಸ್ಥಿತರಿದ್ದರು.









