
ಮಡಿಕೇರಿ ನ.8 NEWS DESK : ಅಮ್ಮತ್ತಿ ಪ್ರೌಢಶಾಲಾ ಮೈದಾನದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ 14 ಹಾಗೂ 17 ವಯೋಮಿತಿಯ ಬಾಲಕ/ಬಾಲಕಿಯರ ಫುಟ್ಬಾಲ್ ಪಂದ್ಯಾವಳಿಯನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಉದ್ಘಾಟಿಸಿದರು. ನಂತರ ಮಾತನಾಡಿದ ಶಾಸಕರು, ಜಗತ್ತಿನಾದ್ಯಂತ ಮಾನ್ಯತೆ ಪಡೆದಿರುವ ಪ್ರಮುಖ ಆಟಗಳಲ್ಲಿ ಫುಟ್ಬಾಲ್ ಮುಂಚೂಣಿಯಲ್ಲಿದೆ. ದೇಹದ ಸಮತೋಲನ ಕಾಪಾಡಿಕೊಂಡು ಚಾಕಚಕ್ಯತೆಯಿಂದ ಎದುರಾಳಿಯನ್ನು ನಿಭಾಯಿಸುತ್ತಾ ಆಡುವ ಈ ಆಟ ಮಾನಸಿಕ ಸಮತೋಲನ ಹಾಗೂ ಸ್ಥೈರ್ಯ ನೀಡುವಂತಹದು. ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಕ್ರೀಡೆಯು ಮಹತ್ವ ಪಾತ್ರವನ್ನು ವಹಿಸುತ್ತದೆ. ಎಲ್ಲರೂ ಕ್ರೀಡಾ ಸ್ಪೂರ್ತಿಯಿಂದ ಆಟವನ್ನು ಆಡಿ ಯಶಸ್ಸು ಕಾಣುವಂತಾಗಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಅಮ್ಮತಿ ಪ್ರೌಢ ಶಾಲೆ ಅಧ್ಯಕ್ಷರು ಕಾವಾಡಿಚಂಡ ಯು.ಗಣಪತಿ, ಪಕ್ಷದ ಪ್ರಮುಖರು ಚೆಕು, ಅನಿಲ್, ಎ.ವಿ.ಮಂಜುನಾಥ್, ಪಿ.ಎ.ನಾಗೇಶ್, ಕ್ಷೇತ್ರ ಶಿಕ್ಷಣ ಅಧಿಕಾರಿಗಳು, ಶಿಕ್ಷಣ ಇಲಾಖೆಯ ವಿವಿಧ ಸಂಘದ ಅಧ್ಯಕ್ಷರು,ಪದಾಧಿಕಾರಿಗಳು, ರಾಜ್ಯ ಮಟ್ಟದ ಕ್ರೀಡಾ ಕೂಟ್ಟಕ್ಕೆ ವಿವಿಧ ಜಿಲ್ಲೆಯಿಂದ ಆಗಮಿಸಿದ ಬಾಲಕ -ಬಾಲಕಿಯರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.









