
(*ಬರಹ : ಗೀತಾಂಜಲಿ ಎನ್.ಎಂ ಸೋಮವಾರಪೇಟೆ )
ಮಡಿಕೇರಿ ಏ.18 NEWS DESK : ಮಾನವ ಸಮಾಜದ ಬೆಳವಣಿಗೆ ಕೇವಲ ಇಂದಿನ ಆಧುನಿಕರಣದ ಸಾಧನೆಗಳ ಮೇಲೆ ಮಾತ್ರ ಆಧಾರವಾಗಿಲ್ಲ, ಅದು ಸಾವಿರಾರು ವರ್ಷಗಳ ಇತಿಹಾಸ, ಸಂಸ್ಕೃತಿ ಮತ್ತು ‘ಪರಂಪರೆಯ’ ಮೇಲೆಯು ಕಟ್ಟಲಾಗಿದೆ. ಈ ‘ಪರಂಪರೆ’ ಎಂಬ ಪದವು ನಮ್ಮ ಪೂರ್ವಿಕರಿಂದ ನಮಗೆ ಬಂದಿರುವ ಸಂಪತ್ತು ಎಂಬ ಅರ್ಥವನ್ನು ಒಳಗೊಂಡಿದೆ. ಇದು ಕೇವಲ ಕಟ್ಟಡಗಳು ಅಥವಾ ಸ್ಮಾರಕಗಳಷ್ಟೇ ಅಲ್ಲ, ಸಂಸ್ಕೃತಿ, ಭಾಷೆ, ಆಚರಣೆಗಳು, ಕಲೆ, ಸಾಹಿತ್ಯ ಮತ್ತು ನೈಸರ್ಗಿಕ ಸಂಪತ್ತುಗಳನ್ನೂ ಒಳಗೊಂಡಿದೆ. ಈ ನಿಟ್ಟಿನಲ್ಲಿ ಜಗತ್ತಿನ ಸಾಂಸ್ಕೃತಿಕ ವೈವಿಧ್ಯತೆಯನ್ನು ಸಂರಕ್ಷಿಸುವ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಏಪ್ರಿಲ್ 18 ಅನ್ನು ವಿಶ್ವ ಪರಂಪರೆಯ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನವನ್ನು “ಅಂತರರಾಷ್ಟ್ರೀಯ ಸ್ಮಾರಕಗಳು ಮತ್ತು ತಾಣಗಳ ದಿನ”ಎಂದೂ ಕರೆಯಲಾಗುತ್ತದೆ.ಈ ದಿನವನ್ನು ಯುನೆಸ್ಕೋದ ವಿಶ್ವ ಪರಂಪರೆಯ ಪಟ್ಟಿಯಿಂದ ಗುರುತಿಸಲ್ಪಟ್ಟ ಅದ್ಭುತ ಸಾಂಸ್ಕೃತಿಕ ಮತ್ತು ನೈಸರ್ಗಿಕ ಸಂಪತ್ತಿನ ಬಗ್ಗೆ ಜಾಗೃತಿ ಮೂಡಿಸಲು ಸಮರ್ಪಿಸಲಾಗಿದೆ. ಈ ವಿಶ್ವ ಪರಂಪರ ದಿನದ ಆಚರಣೆಯ ಹಿನ್ನಲೆ ಮತ್ತು ಇತಿಹಾಸವನ್ನು ನೋಡುವುದಾದರೆ, 1982 ರಲ್ಲಿ,ಅಂತರರಾಷ್ಟ್ರೀಯ ಸ್ಮಾರಕಗಳು ಮತ್ತು ತಾಣಗಳ ಮಂಡಳಿ (ICOMOS) ವಿಶ್ವ ಪರಂಪರೆಯ ದಿನವನ್ನು ಆಚರಿಸುವ ಪರಿಕಲ್ಪನೆಯನ್ನು ಪ್ರಸ್ತಾಪಿಸಿತು, ನಂತರ ಇದನ್ನು 1983 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಇದನ್ನು ಅನುಮೋದಿಸಿತು. 1982 ರಲ್ಲಿ ಯುನೆಸ್ಕೋ ವಿಶ್ವ ಸಾಂಸ್ಕೃತಿಕ ಮತ್ತು ನೈಸರ್ಗಿಕ ಪರಂಪರೆಯ ರಕ್ಷಣೆಗೆ ಸಂಬಂಧಿಸಿದ ಸಮಾವೇಶವನ್ನು ಅಂಗೀಕರಿಸಿದ ದಿನವನ್ನು ಗೌರವಿಸಲು ಏಪ್ರಿಲ್ 18 ಅನ್ನು ಆಚರಣೆಯ ದಿನಾಂಕವಾಗಿ ಆಯ್ಕೆ ಮಾಡಲಾಯಿತು..! ಈ ಆಚರಣೆ ನಮ್ಮ ಇತಿಹಾಸದ ಶ್ರೀಮಂತಿಕೆಯ ಮೇಲೆ ಬೆಳಕು ಚೆಲ್ಲುತ್ತದೆ ಮತ್ತು ವಿವಿಧ ಸಮುದಾಯಗಳ ವಿಶಿಷ್ಟ ಪರಂಪರೆಯನ್ನು ಅನ್ವೇಷಿಸಲು ಮತ್ತು ಪ್ರಶಂಸಿಸಲು ಅದನ್ನು ಉಳಿಸಿ ಕಾಪಾಡಲು ನಮಗೆ ಪ್ರೇರೇಪಿಸುತ್ತದೆ. ವಿಶ್ವ ಪರಂಪರೆಯ ತಾಣಗಳು ನಮ್ಮ ಇತಿಹಾಸದ ಸಾಕ್ಷಿಗಳಾಗಿವೆ. ಇವುಗಳು ನಮ್ಮ ಗುರುತು, ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಸಾಗಿಸುವ ಸೇತುವೆಯಾಗಿವೆ. ಇದು ಇತಿಹಾಸದ ಅರಿವು ಹೆಚ್ಚಿಸುತ್ತದೆ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ ಸಂಸ್ಕೃತಿಯ ವೈವಿಧ್ಯತೆಯನ್ನು ಉಳಿಸುತ್ತದೆ. ನಮ್ಮ ಪ್ರಪಂಚವು ಹಲವು ಗಮನಾರ್ಹ ಸ್ಥಳಗಳಿಂದ ಕೂಡಿದ್ದು ಪ್ರಾಚೀನ ಹಾಗೂ ಅದ್ಭುತವಾದ ಸ್ಮಾರಕಗಳು, ಉಸಿರು ಕಟ್ಟುವ ಮತ್ತು ವಿಸ್ಮಯಕಾರಿಯಾದ ಭೂದೃಶ್ಯಗಳು, ಸಾಂಪ್ರದಾಯಿಕ ಹಾಗೂ ಸಾಂಸ್ಕೃತಿಕ ತಾಣಗಳನ್ನು ಹೊಂದಿದೆ, ಇವೆಲ್ಲವೂ ಯುನೆಸ್ಕೋದಿಂದ ಗೊತ್ತುಪಡಿಸಿದ ಈ “ವಿಶ್ವ ಪರಂಪರೆಯ ತಾಣಗಳಾಗಿ ಶ್ರೀಮಂತ ಇತಿಹಾಸಕ್ಕೆ ಸಾಕ್ಷಿಯಾಗಿ ಇಂದು ನಿಂತಿವೆ, ಇವೆಲ್ಲವುಗಳು ನಾವು ಯಾರು, ಮತ್ತು ನಾವು ಎಲ್ಲಿಂದ ಬಂದಿದ್ದೇವೆ ಎಂಬುದರ ಸಾರವನ್ನು ಪ್ರತಿನಿಧಿಸುತ್ತವೆ, ಮತ್ತು ಈ ವಿಶ್ವ ಪರಂಪರೆಯ ದಿನವು ಅವುಗಳ ಮಹತ್ವವನ್ನು ಜಗತ್ತಿಗೆ ಎತ್ತಿ ತೋರಿಸುತ್ತದೆ. ಈ ವಿಶ್ವ ಪರಂಪರೆಯ ತಾಣಗಳು ನಮ್ಮ ಸಾಂಸ್ಕೃತಿಕ ಮತ್ತು ನೈಸರ್ಗಿಕ ಪರಂಪರೆಯ ಅಮೂಲ್ಯವಾದ ಭಾಗವಾಗಿರು ವುದರಿಂದ ಅವುಗಳನ್ನು ಕಾಪಾಡುವುದು, ಸಂರಕ್ಷಿಸುವುದು ಎಲ್ಲರ ಸಾಮೂಹಿಕ ಜವಾಬ್ದಾರಿಯಾಗಿದೆ, ವಿಶ್ವಪರಂಪರೆಯ ಸಂರಕ್ಷಣೆಯಲ್ಲಿ ಯುನೆಸ್ಕೋದ ಪಾತ್ರವನ್ನು ನೋಡುವುದಾದರೆ ಈ ಅಂತರರಾಷ್ಟ್ರೀಯ ಒಪ್ಪಂದವನ್ನು ಒಪ್ಪಿಕೊಂಡು ಪ್ರೋತ್ಸಾಹಿಸಿ ತಾಂತ್ರಿಕ ನೆರವು ನೀಡುತ್ತಾ ವಿಶ್ವ ಪರಂಪರೆಯ ತಾಣಗಳ ಸಂರಕ್ಷಣೆ ಮತ್ತು ನಿರ್ವಹಣೆ ಯನ್ನು ಬೆಂಬಲಿಸುತ್ತಾ ಬಂದಿದೆ,ಅಲ್ಲದೆ “ಅತ್ಯುತ್ತಮ ಸಾರ್ವತ್ರಿಕ ಮೌಲ್ಯ” ಎಂದು ಪರಿಗಣಿಸಲಾದ ಸಾಂಸ್ಕೃತಿಕ ಮತ್ತು ನೈಸರ್ಗಿಕ ತಾಣಗಳನ್ನು ಗುರುತಿಸುವುದು, ರಕ್ಷಿಸುವುದು ಮತ್ತು ಸಂರಕ್ಷಿಸುವ ಚೌಕಟ್ಟನ್ನು ಸ್ಥಾಪಿಸುತ್ತಿದೆ. ಪ್ರಪಂಚದಾದ್ಯಂತ ಸಾವಿರಾರು ಐತಿಹಾಸಿಕ ಸ್ಮಾರಕಗಳು ತಾಣಗಳು ಇವೆ. ಅವೆಲ್ಲವೂ ಪುರಾತನ ವೈಭವ ಮತ್ತು ಇತಿಹಾಸವನ್ನು ಸಾರುತ್ತವೆ, ಅದರಲ್ಲೂ ನಮ್ಮ ಭಾರತವು ಸಂಸ್ಕೃತಿ ಮತ್ತು ವೈವಿಧ್ಯತೆಯನ್ನು ವ್ಯಾಖ್ಯಾನಿಸುವ ಭವ್ಯವಾದ ಹಲವು ವಿಶೇಷ ಐತಿಹಾಸಿಕ ಸ್ಮಾರಕಗಳನ್ನು ಒಳಗೊಂಡಿದೆ, ಭಾರತದ ಶ್ರೀಮಂತ ಸಂಸ್ಕೃತಿ, ಇತಿಹಾಸ ಮತ್ತು ವಾಸ್ತುಶಿಲ್ಪದ ಅದ್ಭುತಗಳು ಅದರ ರೋಮಾಂಚಕ ತಾಣಗಳು ವೈವಿಧ್ಯಮಯ ಪರಂಪರೆಗೆ ಸಾಕ್ಷಿಯಾಗಿವೆ. ಬಂಡೆಯಿಂದ ಕೆತ್ತಿದ ಪ್ರಾಚೀನ ದೇವಾಲಯಗಳಿಂದ ಹಿಡಿದು ಪ್ರಸ್ತುತ ಕಾಲದ ಭವ್ಯ ಕೋಟೆಗಳವರೆಗೆ, ಭಾರತದ ಸಾಂಸ್ಕೃತಿಕ ಪರಂಪರೆಯು ಮಾನವ ಸಾಧನೆಯ ನಿಧಿಯಾಗಿದೆ. ಯುನೆಸ್ಕೋ ವಿಶ್ವ ಸಾಂಸ್ಕೃತಿಕ ಪರಂಪರೆಯ ತಾಣಗಳೆಂದು ಗುರುತಿಸಲ್ಪಟ್ಟ ಹಲವು ಗಮನಾರ್ಹ ತಾಣಗಳು ಭಾರತದಲ್ಲಿ ಮಾತ್ರವಲ್ಲದೆ ಜಾಗತಿಕ ವೇದಿಕೆಯಲ್ಲಿಯೂ ವಿಶೇಷ ಸ್ಥಾನವನ್ನು ಹೊಂದಿವೆ.ಅಲ್ಲದೆ ಪ್ರತಿಯೊಂದೂ ಒಂದು ವಿಶಿಷ್ಟ ಕಥೆಯನ್ನು ಹೇಳುತ್ತಾ, ಶತಮಾನಗಳಿಂದ ಅವುಗಳನ್ನು ನಿರ್ಮಿಸಿ ಪೋಷಿಸಿದ ಜನರ ಕಲಾತ್ಮಕತೆ, ಆಧ್ಯಾತ್ಮಿಕತೆ ಮತ್ತು ಜಾಣ್ಮೆಯನ್ನು ಪ್ರದರ್ಶಿಸುತ್ತಿವೆ,.ಈ ವಿಶಾಲ ಮತ್ತು ಸಾಂಸ್ಕೃತಿಕವಾದ ವೈವಿಧ್ಯಮಯ ತಾಣಗಳುದೇಶದ ಉದ್ದಕ್ಕೂ ಭಾರತದ ವಾಸ್ತುಶಿಲ್ಪ ಮತ್ತು ಐತಿಹಾಸಿಕ ರತ್ನಗಳ ಅದ್ಭುತಗಳಾಗಿ ಕಾಣ ಸಿಗುತ್ತವೆ, ಅವುಗಳ ಮಹತ್ವ ಮತ್ತು ಅವುಗಳ ಗೋಡೆಗಳೊಳಗೆ ಇರುವ ಆಕರ್ಷಕ ಕೆತ್ತನೆಗಳು ನಿರೂಪಣೆಗಳು,ಕಲಾ ಶಿಲ್ಪಗಳು ವಿಸ್ಮಯಕಾರಿಯಾಗಿದ್ದು ಎಲ್ಲರನ್ನೂ ಮಂತ್ರ ಮುಗ್ದರನ್ನಾಗಿಸುತ್ತವೆ, ಪ್ರಮುಖವಾಗಿ ಭಾರತದಲ್ಲಿ ಒಟ್ಟು 3000 ಕ್ಕೂ ಹೆಚ್ಚು ಪಾರಂಪರಿಕ ಸ್ಮಾರಕಗಳು ಮತ್ತು ತಾಣಗಳನ್ನು ಗುರುತಿಸಲಾಗಿದ್ದು ಅವುಗಳಲ್ಲಿ 43 ವಿಶ್ವ ಪರಂಪರೆಯ ತಾಣಗಳಿವೆ. ಇವುಗಳಲ್ಲಿ, 35 ಸಾಂಸ್ಕೃತಿಕ, ಏಳು ನೈಸರ್ಗಿಕ ಮತ್ತು ಕಾಂಚನ್ ಜುಂಗಾ ರಾಷ್ಟ್ರೀಯ ಉದ್ಯಾನವನವು ಮಿಶ್ರ ಪ್ರಕಾರದ, ಸಾಂಸ್ಕೃತಿಕ ಮತ್ತು ನೈಸರ್ಗಿಕ ಗುಣಲಕ್ಷಣಗಳಿಗಾಗಿ ಪಟ್ಟಿಮಾಡಲ್ಪಟ್ಟಿದೆ. ಭಾರತವು ವಿಶ್ವಾದ್ಯಂತ ಆರನೇ ಅತಿ ಹೆಚ್ಚು ತಾಣಗಳನ್ನು ಹೊಂದಿದೆ ಪಟ್ಟಿಮಾಡಲಾದ ಪ್ರಮುಖ ತಾಣಗಳ ಪೈಕಿ ಕೊನಾರ್ಕ್ ಸೂರ್ಯ ದೇವಾಲಯ,ಕುತುಬ್ ಮಿನಾರ್ ಆಗ್ರಾ ಕೋಟೆ,ತಾಜ್ ಮಹಲ್, ಕೆಂಪುಕೋಟೆ ಹಂಪಿಯಲ್ಲಿನ ಸ್ಮಾರಕಗಳು ಸೇರಿ ರಾಜಸ್ಥಾನದ ಪಿಂಕ್ ಸಿಟಿ ಎಂದು ಕರೆಯಲ್ಪಡುವ ಜೈಪುರವು ತನ್ನ ತಲ್ಲೀನಗೊಳಿಸುವ ಸಂಸ್ಕೃತಿ, ಭವ್ಯವಾದ ಕೋಟೆಗಳು ಮತ್ತು ಅರಮನೆಗಳಿಗೆ ವಿಶ್ವಪ್ರಸಿದ್ಧವಾಗಿದೆ ಅಜಂತಾ ಮತ್ತು ಎಲ್ಲೋರಾ ಗುಹೆಗಳು (ಮಹಾರಾಷ್ಟ್ರ) ಬೌದ್ಧ, ಹಿಂದೂ ಮತ್ತು ಜೈನ ದೇವಾಲಯಗಳು ಮತ್ತು ಕಲಾಕೃತಿಗಳನ್ನು ಒಳಗೊಂಡ ಪ್ರಾಚೀನ ಶಿಲಾ-ಕೆತ್ತನೆಯ ಗುಹೆ ಸಂಕೀರ್ಣಗಳು ಶಿಲ್ಪಕಲೆಗೆ ಹೆಸರುವಾಸಿಯಾಗಿ ಪ್ರಪಂಚದಾದ್ಯಂತ ಬಹಳ ಜನಪ್ರಿಯತೆಯನ್ನು ಪಡೆದಿವೆ, ಇನ್ನು ನಮ್ಮ ಕರ್ನಾಟಕಕ್ಕೆ ಬಂದರೆ ಶಿಲ್ಪಕಲೆಗಳ ತವರೂರಾದ ಬೇಲೂರು, ಹಳೇಬೀಡು, ಶ್ರವಣಬೆಳಗುಳ ಸೇರಿ ಸೋಮನಾಥಪುರ, ಹಂಪೆ, ಮೈಸೂರು ಅರಮನೆ, ಬಾದಾಮಿ ಐಹೊಳೆ, ಪಟದಕಲ್ಲು, ಇನ್ನೂ ಅನೇಕ ತಾಣಗಳು ಭಾರತದ ಶ್ರೀಮಂತ ಶಿಲ್ಪಕಲೆಗೆ ಇನ್ನಷ್ಟು ಮೆರಗನ್ನು ನೀಡುತ್ತಾ ಪ್ರಪಂಚದಾದ್ಯಂತ ಜನರನ್ನು ತನ್ನೆಡೆಗೆ ಸೆಳೆಯುತ್ತ ಆಕರ್ಷಿಸುತ್ತಿವೆ,ನಮ್ಮ ಪೂರ್ವಜರು ಹಲವಾರು ಪಾರಂಪರಿಕ ನೆಲೆಯನ್ನು ಸ್ಮಾರಕ ಮತ್ತು ಪ್ರಾಚೀನ ಕಟ್ಟಡಗಳು, ಐತಿಹಾಸಿಕ ತಾಣಗಳನ್ನು ಬಿಟ್ಟುಹೋಗಿದ್ದಾರೆ. ಇವು ದೇಶದ ಶ್ರೀಮಂತ ಇತಿಹಾಸವನ್ನು ಇಂದೂ ಸಾರುತ್ತಿವೆ, ಇವುಗಳನ್ನು ಮನುಕುಲದ ಆಸ್ತಿ ಎಂದು ರಕ್ಷಿಸುವುದೇ ವಿಶ್ವ ಪರಂಪರೆಯ ದಿನದ ಉದ್ದೇಶವಾಗಿದೆ, ಈ ಐತಿಹಾಸಿಕ ಸ್ಥಳಗಳಿಗೆ ಭೇಟಿನೀಡಿದಾಗ ಸ್ವಚ್ಛತೆಯನ್ನು ಕಾಪಾಡುವುದರ ಜೊತೆಗೆ ಕ್ಷುಲ್ಲಕ ಕಾರಣಗಳಿಗಾಗಿ ಅವುಗಳನ್ನು ಹಾನಿಗೊಳಿಸದೆ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ನಾವು ನಮ್ಮ ಪರಂಪರೆಯನ್ನು ಕಾಪಾಡಿದಾಗ ಮಾತ್ರ ನಮ್ಮ ಸಂಸ್ಕೃತಿಯ ಶಾಶ್ವತತೆಯನ್ನು ಖಚಿತಪಡಿಸಬಹುದು. ಆದ್ದರಿಂದ, ಪ್ರತಿಯೊಬ್ಬರೂ ಪರಂಪರೆಯ ರಕ್ಷಣೆಯಲ್ಲಿ ತಮ್ಮ ಪಾತ್ರವನ್ನು ನಿಭಾಯಿಸಬೇಕು. ಈ ನಿಟ್ಟಿನಲ್ಲಿ ನಮ್ಮ ಆಚಾರ ವಿಚಾರ ಕಲೆ ಇತಿಹಾಸ ಪರಂಪರೆ ಶ್ರೀಮಂತ ಸಂಸ್ಕೃತಿಯನ್ನು ಪ್ರತಿನಿಧಿಸುವ ತಾಣಗಳನ್ನು, ಶಿಲ್ಪಕಲೆಗಳನ್ನು ನಮ್ಮ ಮುಂದಿನ ತಲೆಮಾರಿನವರಿಗೆ ಉಳಿಸಿ ಬೆಳೆಸಬೇಕೆನ್ನುವ ವಿಶ್ವಪರಂಪರೆಯ ದಿನದ ಉದ್ದೇಶಗಳು ಯಶಸ್ವಿಯಾಗುವಲ್ಲಿ ಎಲ್ಲರೂ ಕೈ ಜೋಡಿಸೋಣ.ಇದು ನಮ್ಮ ಗುರುತಿನ ಉಳಿವು ಹಾಗಾಗಿ ನಾವು ಪರಂಪರೆಯನ್ನು ಉಳಿಸಿದಾಗ ಮಾತ್ರ ಭವಿಷ್ಯವು ತನ್ನ ಮೂಲಗಳನ್ನು ಕಂಡುಕೊಳ್ಳುತ್ತದೆ.









