
ಮಡಿಕೇರಿ NEWS DESK ಆ.29 : ಅಮ್ಮತ್ತಿಯ ಸಂತ ಅಂತೋನಿಯವರ ದೇವಾಲಯದ ಜಾಗದಲ್ಲಿ ನಿರ್ಮಿಸಲು ಉದ್ದೇಶಿಸಿರುವ 66 ಕೆವಿ ಸಾಮರ್ಥ್ಯದ ವಿದ್ಯುತ್ ಸ್ಥಾವರದ ಸ್ಥಳವನ್ನು ಬದಲಾಯಿಸುವಂತೆ ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ನೇತೃತ್ವದಲ್ಲಿ ಅಮ್ಮತ್ತಿ ದೇವಾಲಯದ ಹಾಗೂ ವಿರಾಜಪೇಟೆ ತಾಲ್ಲೂಕು ಘಟಕದ ಸದಸ್ಯರು ಇಂದು ಶಾಸಕರ ಗೃಹ ಕಚೇರಿಯಲ್ಲಿ ಎ.ಎಸ್.ಪೊನ್ನಣ್ಣ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ದೇವಾಲಯದ ಮುಂಭಾಗದಲ್ಲಿ ನೂತನ ದೇವಾಲಯ ನಿರ್ಮಿಸಲು ಭಕ್ತಾದಿಗಳು ನಿರ್ಧರಿಸಿದ್ದು, ಪ್ರಸ್ತಾವಿತ 66 ಕೆವಿ ವಿದ್ಯುತ್ ಸ್ಥಾವರ ನಿರ್ಮಾಣದಿಂದ ದೇವಾಲಯದ ಕಾಮಗಾರಿಗೆ ತೊಡಕು ಉಂಟಾಗಲಿದೆ. ಆದ್ದರಿಂದ ವಿದ್ಯುತ್ ಸ್ಥಾವರದ ಸ್ಥಳವನ್ನು ಬದಲಾಯಿಸುವಂತೆ ಪ್ರಮುಖರು ಕೋರಿದರು. ಮನವಿಗೆ ಸ್ಪಂದಿಸಿದ ಶಾಸಕ ಎ.ಎಸ್.ಪೊನ್ನಣ್ಣ ಅವರು ವಿದ್ಯುತ್ ಇಲಾಖೆಯ ಎಇ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಕಾಮಗಾರಿಯ ಸ್ಥಳ ಬದಲಾವಣೆಗೆ ಸಂಬ0ಧಿಸಿದ0ತೆ ತುರ್ತು ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಭೇಟಿಯ ಸಂದರ್ಭ ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಅಧ್ಯಕ್ಷ ಜಾನ್ಸನ್ ಪಿಂಟೋ, ಉಪಾಧ್ಯಕ್ಷ ಜೋಕಿಂ ರಾಡ್ರಿಗಸ್, ವಿರಾಜಪೇಟೆ ತಾಲ್ಲೂಕು ಅಧ್ಯಕ್ಷ ಆಗಸ್ಟಿನ್ ಸೇವಿಯರ್, ಜಿಲ್ಲಾ ಸಮಿತಿ ಸದಸ್ಯ ಮಾರ್ವಿನ್ ಲೋಬೋ ಸೇರಿದಂತೆ ಅಮ್ಮತ್ತಿ ಧರ್ಮಕೇಂದ್ರದ ಭಕ್ತಾದಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭ ಅಸೋಸಿಯೇಷನ್ ವತಿಯಿಂದ ಶಾಸಕ ಎ.ಎಸ್.ಪೊನ್ನಣ್ಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.









