ಮಡಿಕೇರಿ, NEWS DESK ಸೆ.17 : ಇತಿಹಾಸ ಪ್ರಸಿದ್ಧ ಮಡಿಕೇರಿ ದಸರಾ ಜನೋತ್ಸವದ ಧಾರ್ಮಿಕ ಆಕರ್ಷಣೆಯಾದ ನಾಲ್ಕು ಶಕ್ತಿ ದೇವತೆಗಳ ಕರಗೋತ್ಸವದ ಶೋಭಾಯಾತ್ರೆ ವಿಜಯದಶಮಿಯ ದಿನವಾದ ಅ.21ರಂದು ನಡೆಯಲಿದೆ ಎಂದು ಶ್ರೀ ಕಂಚಿಕಾಮಾಕ್ಷಿಯಮ್ಮ ದೇವಾಲಯ ಸಮಿತಿಯ ಗೌರವಾಧ್ಯಕ್ಷ ಜಿ.ವಿ.ರವಿಕುಮಾರ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಗರದ ಶ್ರೀ ಕಂಚಿಕಾಮಾಕ್ಷಿಯಮ್ಮ ದೇವಸ್ಥಾನದಲ್ಲಿ ಸೆ.16ರಂದು ಸಂಪ್ರದಾಯದAತೆ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ನಾಲ್ಕು ಶಕ್ತಿ ದೇವತೆಗಳ ದೇವಸ್ಥಾನಗಳ ಅರ್ಚಕರು, ಗೌಳಿ ಸಮುದಾಯದ ಪ್ರಮುಖರು ಹಾಗೂ ಆಡಳಿತ ಮಂಡಳಿ ಸದಸ್ಯರು ಕರಗೋತ್ಸವದ ಶೋಭಾಯಾತ್ರೆಯ ಕುರಿತು ಚರ್ಚಿಸಿ ಈ ನಿರ್ಣಯ ಕೈಗೊಂಡಿದ್ದಾರೆ ಎಂದರು.
ಸಭೆಯ ನಿರ್ಣಯದಂತೆ ಮಹಾಲಯ ಅಮಾವಾಸ್ಯೆಯ ಮರುದಿನವಾದ ಅ.11ರಂದು ಶ್ರೀ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ, ಶ್ರೀ ಕಂಚಿಕಾಮಾಕ್ಷಿಯಮ್ಮ, ಶ್ರೀ ದಂಡಿನ ಮಾರಿಯಮ್ಮ ಹಾಗೂ ಶ್ರೀ ಕೋಟೆ ಮಾರಿಯಮ್ಮ ದೇವಸ್ಥಾನಗಳಿಂದ ಸಂಪ್ರದಾಯದAತೆ ಕರಗಗಳು ಆರಂಭಗೊಳ್ಳಲಿವೆ. ಬಳಿಕ ಆಯುಧಪೂಜೆಯ ಮರುದಿನವಾದ ವಿಜಯದಶಮಿಯ ಅ.21ರಂದು ರಾತ್ರಿ ನಾಲ್ಕು ಕರಗಗಳ ಶೋಭಾಯಾತ್ರೆ ನಡೆಯಲಿದ್ದು, ಬನ್ನಿಮಂಟಪದ ಪಂಪ್ ಕೆರೆಗೆ ತೆರಳಿ ಬನ್ನಿ ಕಡಿಯುವ ಸಾಂಪ್ರದಾಯಿಕ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಕರಗೋತ್ಸವದ ದಿನವನ್ನು ನಾಲ್ಕು ಶಕ್ತಿ ದೇವತೆಗಳ ದೇವಸ್ಥಾನಗಳ ಪದಾಧಿಕಾರಿಗಳು ಶ್ರೀ ಕಂಚಿಕಾಮಾಕ್ಷಿಯಮ್ಮ ದೇವಸ್ಥಾನದಲ್ಲಿ ಸಭೆ ಸೇರಿ ಚರ್ಚಿಸಿ ನಿಗದಿಪಡಿಸುವುದು ಹಿಂದಿನಿAದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ. ಅದರಂತೆ ಇದೀಗ ಅ.21ರಂದು ಕರಗೋತ್ಸವ ನಡೆಸಲು ನಿರ್ಧರಿಸಲಾಗಿದ್ದು, ಈ ಕುರಿತು ಯಾವುದೇ ಗೊಂದಲವಿಲ್ಲ ಎಂದು ಜಿ.ವಿ.ರವಿಕುಮಾರ್ ಸ್ಪಷ್ಟಪಡಿಸಿದರು.
ಶ್ರೀ ಕಂಚಿಕಾಮಾಕ್ಷಿ ದೇವಾಲಯ ಸಮಿತಿಯ ಗೌರವಾಧ್ಯಕ್ಷ ಹಾಗೂ ಶ್ರೀ ದಂಡಿನ ಮಾರಿಯಮ್ಮ ದೇವಸ್ಥಾನದ ಅರ್ಚಕ ಪಿ.ಎ.ಲೋಕನಾಥ್ ಮಾತನಾಡಿ, ನಾಲ್ಕು ಶಕ್ತಿ ದೇವತೆಗಳ ದೇವಸ್ಥಾನಗಳಲ್ಲಿ ಅನಾದಿ ಕಾಲದಿಂದ ಪೂಜೆ-ಪುನಸ್ಕಾರಗಳನ್ನು ನಡೆಸಿಕೊಂಡು ಬಂದಿರುವ ಗೌಳಿ ಸಮುದಾಯದ ಪ್ರಮುಖರು, ಅರ್ಚಕರು ಹಾಗೂ ದೇವಸ್ಥಾನ ಸಮಿತಿಯವರು ಒಗ್ಗೂಡಿ ಕರಗೋತ್ಸವದ ಆಚರಣೆ ಕುರಿತು ನಿರ್ಣಯ ಕೈಗೊಂಡಿದ್ದಾರೆ ಎಂದರು.
ಸಮಿತಿ ಖಜಾಂಚಿ ಜಿ.ಸಿ.ರಮೇಶ್ ಮಾತನಾಡಿ, ಎಲ್ಲಾ ಶಕ್ತಿ ದೇವತೆಗಳ ದೇವಸ್ಥಾನಗಳ ಪ್ರಮುಖರು ಹಾಗೂ ಸಮುದಾಯದ ಹಿರಿಯರ ಒಮ್ಮತದೊಂದಿಗೆ ಕರಗೋತ್ಸವದ ದಿನಾಂಕವನ್ನು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಸಮಿತಿ ಉಪಾಧ್ಯಕ್ಷ ಜಿ.ಸಿ.ಜಗದೀಶ್ ಮಾತನಾಡಿ, ಪ್ರತಿವರ್ಷ ವಿಜಯದಶಮಿಯಂದು ಮೈಸೂರು ದಸರಾ ಜಂಬೂಸವಾರಿಯ ಬಳಿಕ ಮಡಿಕೇರಿಯಲ್ಲಿ ರಾತ್ರಿ ಕರಗಗಳ ಶೋಭಾಯಾತ್ರೆ ನಡೆಯುತ್ತದೆ. ಹಿಂದಿನಿAದ ನಡೆದುಕೊಂಡು ಬಂದ ಸಂಪ್ರದಾಯದAತೆ ಈ ಬಾರಿಯೂ ಅ.21ರಂದು ರಾತ್ರಿ ಶೋಭಾಯಾತ್ರೆ ನಡೆಯಲಿದ್ದು, ಪಂಪ್ ಕೆರೆಗೆ ತೆರಳಿ ಬನ್ನಿ ಕಡಿಯುವ ಕಾರ್ಯಕ್ರಮ ಜರುಗಲಿದೆ ಎಂದು ಹೇಳಿದರು.
ಕರಗೋತ್ಸವಕ್ಕೆ ಚಾಲನೆ ನೀಡುವ ಬನ್ನಿಮಂಟಪದ ಪಂಪ್ ಕೆರೆ ಮುಖದ್ವಾರದಲ್ಲಿ ಗೋಪುರ ನಿರ್ಮಿಸಲಾಗುತ್ತಿದ್ದು, ಅದರಲ್ಲಿ ನಾಲ್ಕು ಶಕ್ತಿ ದೇವತೆಗಳ ಮುಖಗಳನ್ನು ಅಳವಡಿಸಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಜಿ.ಸಿ.ಜಗದೀಶ್ ತಿಳಿಸಿದರು.
ಇತ್ತೀಚೆಗೆ ಶ್ರೀ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ಅ.20ರಂದು ದಶಮಂಟಪಗಳ ಮೆರವಣಿಗೆ ನಡೆಸುವ ಕುರಿತು ನಿರ್ಣಯ ಕೈಗೊಳ್ಳಲಾಗಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಮಿತಿ ಪ್ರಮುಖರು, ಕರಗೋತ್ಸವದ ದಿನಾಂಕವನ್ನು ಸಂಪ್ರದಾಯದAತೆ ಶ್ರೀ ಕಂಚಿಕಾಮಾಕ್ಷಿಯಮ್ಮ ದೇವಸ್ಥಾನದಲ್ಲಿ ಸಭೆ ಸೇರಿ ನಿರ್ಧರಿಸಲಾಗುತ್ತದೆ. ಕುಂದುರುಮೊಟ್ಟೆ ದೇವಸ್ಥಾನದಲ್ಲಿ ನಡೆದ ಸಭೆಯ ಕುರಿತು ತಮ್ಮಲ್ಲಿ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಜಿ.ಎಲ್.ದಾಸ್ ಹಾಗೂ ಗೌರವಾಧ್ಯಕ್ಷ ಜಿ.ಜಿ.ಬಾಲಕೃಷ್ಣ ಉಪಸ್ಥಿತರಿದ್ದರು.








