ಮಡಿಕೇರಿ ಜು.1 : ಪತ್ರಿಕೆಗಳು ಸಮಾಜದ ಮುಖವಾಣಿಯಾಗಿ ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಬೇಕೆಂದು ರಾಜ್ಯ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕದ ಉಪಾಧ್ಯಕ್ಷ ಟಿ.ಕೆ. ಸಾಯಿ ಕುಮಾರ್ ಸಲಹೆ ನೀಡಿದ್ದಾರೆ. ಕೊಡಗು ಪತ್ರಕರ್ತರ ಸಂಘದ ಕುಶಾಲನಗರ ತಾಲೂಕು ಘಟಕದ ವತಿಯಿಂದ ಸುಂಟಿಕೊಪ್ಪದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪತ್ರಿಕೆಗಳಿಂದ ದೈನಂದಿನ ಆಗುಹೋಗುಗಳನ್ನು ತಿಳಿದುಕೊಳ್ಳಲು ಸಹಕಾರಿಯಾಗಿದೆ. ಸಂಕ್ಷಿಪ್ತವಾಗಿ ಪತ್ರಿಕಾ ದಿನಾಚರಣೆಯ ಇತಿಹಾಸವನ್ನು ಸ್ಮರಿಸಿದ ಅವರು ಪತ್ರಿಕೆಗಳು ಸದಾ ಕಾಲವೂ ಸಮಾಜಕ್ಕೆ ಪ್ರತಿಸ್ಪಂದಿಸುವ ಕೆಲಸವನ್ನು ಮಾಡುತ್ತಲೇ ಬಂದಿರುವುದನ್ನು ಕಾರಣಬಹುದಾಗಿದೆ. ಇಂದಿನ ಮಕ್ಕಳು ಪತ್ರಿಕೆಗಳನ್ನು ಓದುವ ಮೂಲಕ ಜ್ಞಾನ ಹೆಚ್ಚಿಸಿಕೊಳ್ಳಬೇಕೆಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ತಮ್ಮ ತಂದೆ ಮತ್ತು ತಾಯಿ ಹೆಸರಿನಲ್ಲಿ ಕುಶಾಲನಗರ ತಾಲೂಕು ಪತ್ರಕರ್ತರ ಸಂಘಕ್ಕೆ ದತ್ತಿನಿಧಿ ಘೋಷಣೆ ಮಾಡಿದರು. ಮುಖ್ಯ ಭಾಷಣಕಾರಾಗಿ ಕೊಡಗು ಪತ್ರಕರ್ತರ ಸಂಘದ ಗೌರವ ಸಲಹೆಗಾರರಾದ ಶ್ರೀಧರ್ ನೆಲ್ಲಿತ್ತಾಯ ಮಾತನಾಡಿ ಪತ್ರಿಕೋದ್ಯಮ ಇಂದು ಪತ್ರಿಕಾ ವಾಣಿಜ್ಯೋದ್ಯಮವಾಗಿ ಬದಲಾಗಿದೆ.…
ಲೇಖಕ: admin
ಸುಂಟಿಕೊಪ್ಪ ಜು.1 : ವೃಕ್ಷೋದ್ಭವ ಶ್ರೀ ಶಕ್ತಿ ಮಹಾಗಣಪತಿ ದೇವಾಲಯದ 19ನೇ ವರ್ಷದ ವಾರ್ಷಿಕೋತ್ಸವವ ಅಂಗವಾಗಿ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಶ್ರದ್ಧಾಭಕ್ತಿಯಿಂದ ನೆರವೇರಿತು. ಮುಂಜಾನೆಯಿಂದಲೇ ಪಂಚಾಮೃತ ಅಭಿಷೇಕ, ಸರ್ವ ಕಲಶಾಭಿಷೇಕ, ಕಳಶ ಜಲನಯನ, ಗಣಪತಿಹೋಮ, ಪೂರ್ಣಾಹುತಿ, ಪುಣ್ಯಾಹ ವಾಚನ, ಪೂರ್ಣಾಹುತಿ, ಪಂಚಾಮೃತ ಮಹಾ ಮಂಗಳಾರತಿ ಹಾಗೂ ಅನ್ನದಾನ ನಡೆಯಿತು. ನಂತರ ಭಕ್ತಾಧಿಗಳ ಭಜನಾ ಕಾರ್ಯಕ್ರಮಗಳು ಜರುಗಿದವು. ಈ ಸಂದರ್ಭ ಟ್ರಸ್ಟ್ ಅಧ್ಯಕ್ಷ ಎ.ಲೋಕೇಶ್ ಕುಮಾರ್, ಸಮಿತಿ ಅಧ್ಯಕ್ಷ ಬಿ.ರಮೇಶ್, ಕಾರ್ಯದರ್ಶಿ ಎಂ.ಮಂಜುನಾಥ್, ಉಪಾಧ್ಯಕ್ಷ ಬಿ.ದಿವಾಕರ್ ಪೂಜಾರಿ, ಪುಳಂಜನ ಕುಶಾಲಪ್ಪ, ಬಿ.ಎಸ್.ರಮೇಶ್, ಜಂಟಿ ಕಾರ್ಯದರ್ಶಿ ದಿವಾಕರ್ ರೈ, ಸಮಿತಿ ಸದಸ್ಯರಾದ ಬಿ.ಎಸ್.ಸದಾಶಿವ ರೈ, ಸುರೇಶ್, ಮನೀಷ್ ಚೌದರಿ, ಮಾಂಗಿಲಾಲ್ ಚೌದರಿ, ಎ.ಶ್ರೀಧರ್ ಕುಮಾರ್, ಸಾಗತ್, ಸುರೇಶ್ ಚಂದು, ಮನುಅಚ್ಚಮ್ಮಯ್ಯ, ಪವಿ, ಯಶೋದರ್, ಬಿ.ಆರ್.ಅರುಣ್ ಕುಮಾರ್, ಶಿವರಾಮನ್, (ಶಿವಮಣಿ) ನಿಖಿಲ್, ಹರೀಶ್ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ವಾರ್ಷಿಕೋತ್ಸವದ ಪ್ರಯುಕ್ತ ದೇವಾಲಯವನ್ನು ತಳಿರುತೋರಣ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.
ಸುಂಟಿಕೊಪ್ಪ ಜು.1 : ಚಾಲಕ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿರುವ ಘಟನೆ ಮಾದಾಪುರ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ. ಸುಂಟಿಕೊಪ್ಪದಿಂದ ಮಾದಾಪುರದ ಕಡೆಗೆ ತೆರಳುತ್ತಿದ್ದ ಕಾರು ಸ್ವಸ್ಥ ಪುನರ್ವಸತಿ ಕೇಂದ್ರದ ಸಮೀಪ ಚಾಲಕನ ನಿಯಂತ್ರಣ ಕಳೆದು ಕೊಂಡು ಪಲ್ಟಿಯಾಗಿ ರಸ್ತೆ ಬದಿಯ ಹಳ್ಳಕ್ಕೆ ಬಿದ್ದಿದೆ. ಕಾರಿನ ಚಾಲಕ ಹಾಗೂ ಸಹ ಪ್ರಯಾಣಿಕ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದು, ಪಲ್ಟಿಯಾ ರಬ್ಬಸಕ್ಕೆ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ.
ಮಡಿಕೇರಿ ಜು.1 : ಟಿ.ಶೆಟ್ಟಿಗೇರಿಯ ಗ್ರಾಮ ಪಂಚಾಯಿತಿ ಕಾರ್ಯಾಲಯದ ಸಭಾಂಗಣವನ್ನು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಉದ್ಘಾಟಿಸಿ, ಸಾರ್ವಜನಿಕರ ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುವಂತೆ ಸಲಹೆ ನೀಡಿದರು. ಈ ಸಂದರ್ಭ ಗ್ರಾ.ಪಂ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.
ಮಡಿಕೇರಿ ಜು.1 : ರಾಜ್ಯಾ ಶಾಲಾ ಶಿಕ್ಷಣ ಇಲಾಖಾ ಆಯುಕ್ತರಾಗಿ ಕೊಡಗು ಮೂಲಕ ಐಎಎಸ್ ಅಧಿಕಾರಿ ಬೊಳಂದಂಡ ಬಿ.ಕಾವೇರಿ (ತಾಮನೆ-ಬಲ್ಟಿಕಾಳಂಡ) ಆಯ್ಕೆಯಾಗಿದ್ದಾರೆ. ಈತನಕ ಸಮಗ್ರ ಶಿಕ್ಷಣ ಇಲಾಖೆಯ ಯೋಜನಾ ನಿರ್ದೇಶಕರಾಗಿ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದೀಗ ಪ್ರಾಥಮಿಕ ಶಿಕ್ಷಣ ಇಲಾಖೆ ಆಯುಕ್ತರನ್ನಾಗಿ ನಿಯೋಜಿಸಲಾಗಿದೆ. ಈ ಹಿಂದೆ ಕಾವೇರಿ ಅವರು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಾಗಿ, ಚಾಮರಾಜನಗರ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಬಲ್ಟಿಕಾಳಂಡ ಬೆಳ್ಯಪ್ಪ ಅವರ ಪುತ್ರಿಯಾಗಿರುವ ಕಾವೇರಿ ಮೂಲತಃ ಕಾರುಗುಂದದವರಾದ ಬೊಳಂದಂಡ ಮುತ್ತಣ್ಣ ಅವರ ಪತ್ನಿಯಾಗಿದ್ದಾರೆ.
ಮಡಿಕೇರಿ ಜು.1 : ಕೊಡಗು ಜಿಲ್ಲಾ ಪೊಲೀಸ್ ಘಟಕದ ವಿವಿಧ ಠಾಣೆ, ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸಿ ಜೂ.30 ರಂದು ನಿವೃತ್ತಿ ಹೊಂದಿದ ಪಿಎಸ್ಐ ಎಂ.ಕೆ ಸದಾಶಿವ, ಪಿಎಸ್ಐ ಕೆ.ನಾಗಾರಾಜು, ಪಿಎಸ್ಐ ಹೆಚ್.ಸಿ ಶಿವಣ್ಣ, ಪಿಎಸ್ಐ ಪಾಪೇಗೌಡ, ಎಎಸ್ಐ ಎಂ.ಸಿ.ಬೆಳ್ಳಿಯಪ್ಪ, ಎಆರ್ಎಸ್ಐ ಡಿ.ಎಂ. ರಮೇಶ್, ಎಆರ್ಎಸ್ಐ ಪಿ.ಡಿ ತಿಮ್ಮಯ್ಯ ಅವರನ್ನು ಕೊಡಗು ಜಿಲ್ಲಾ ಪೊಲೀಸ್ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು. ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ನಿವೃತ್ತರನ್ನು ಸನ್ಮಾನಿಸಿ ನಿವೃತ್ತ ಜೀವನ ಶುಭಪ್ರದವಾಗಿರಲೆಂದು ಹಾರೈಸಿದರು.
ಮಡಿಕೇರಿ ಜು.1 : ಸೋಮವಾರಪೇಟೆ ಹೋಂಸ್ಟೇ ಅಸೋಸಿಯೇಷನ್ ಸಭೆಯು ಅಧ್ಯಕ್ಷ ಸಿ.ಕೆ.ರೋಹಿತ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಸಂಘದ ಅಧ್ಯಕ್ಷ ರೋಹಿತ್ ಮಾತನಾಡಿ, ನಮ್ಮ ಅಸೋಸಿಯೇಷನ್ ವತಿಯಿಂದ ಆಗಿಂದಾಗೆ ಪ್ರವಾಸಿ ತಾಣಗಳ ಸ್ವಚ್ಛತಾ ಕಾರ್ಯ ಮಾಡುವುದರೊಂದಿಗೆ, ತಾಣಗಳ ಮಾಹಿತಿ ಫಲಕಗಳನ್ನು ಅಳವಡಿಸಬೇಕಿದೆ. ಇದರಿಂದ ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪ್ರವಾಸಿ ತಾಣಗಳನ್ನು ಗುರುತಿಸುವುದರೊಂದಿಗೆ, ತಾಣಗಳಲ್ಲಿ ಸಂತೋಷಪಡಲು ಅನುಕೂಲವಾಗುವುದು. ಅಲ್ಲದೆ, ಪ್ರವಾಸಿತಾಣಗಳಲ್ಲಿ ಮೂಲ ಸೌಕರ್ಯ ಸೇರಿದಂತೆ ಎಲ್ಲ ವ್ಯವಸ್ಥೆ ಕಲ್ಪಿಸಲು ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ತಿಳಿಸಿದರು. ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯ ಕೌನ್ಸಿಲರ್ ಗಳಾದ ಜತಿನ್ ಬೋಪಣ್ಣ, ಹೋಂಸ್ಟೇ ಮಾಲೀಕರು ಯಾವ ರೀತಿಯಲ್ಲಿ ಪರವಾನಗಿ ಪಡೆಯಬೇಕು ಮತ್ತು ಪ್ರಾವಾಸೋದ್ಯಮ ಇಲಾಖೆಯ ಮಾನದಂಡಗಳ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯ ಕೌನ್ಸಿಲರ್ ಗಳಾದ ಅಶ್ವಥ್, ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷ ಯೋಗೇಶ್, ಕಾರ್ಯದರ್ಶಿ ಅಭಿನಂದ್, ಖಜಾಂಚಿ ಪ್ರೀತಂ, ಕೊಡಗು, ಸಕಲೇಶಪುರ ಹೋಂಸ್ಟೇ ಅಸೋಸಿಯೇಷನ್ ಅಧ್ಯಕ್ಷ ಕೆ.ಎಸ್. ಕುಮಾರಸ್ವಾಮಿ, ಕಾರ್ಯದರ್ಶಿ ಜಯಪ್ರಕಾಶ್, ಖಜಾಂಚಿ ನವೀನ್ ಇದ್ದರು.
ಮಡಿಕೇರಿ ಜು.1 : ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2859 ಅಡಿಗಳು, ಇಂದಿನ ನೀರಿನ ಮಟ್ಟ 2820.69 ಅಡಿಗಳು. ಕಳೆದ ವರ್ಷ ಇದೇ ದಿನ 2855.48 ಅಡಿಗಳು. ಹಾರಂಗಿಯಲ್ಲಿ ಬಿದ್ದ ಮಳೆ 5.80 ಮಿ.ಮೀ., ಕಳೆದ ವರ್ಷ ಇದೇ ದಿನ 18.20 ಮಿ.ಮೀ. ಇಂದಿನ ನೀರಿನ ಒಳಹರಿವು 357 ಕ್ಯುಸೆಕ್, ಕಳೆದ ವರ್ಷ ಇದೇ ದಿನ 5785 ಕ್ಯುಸೆಕ್, ಇಂದಿನ ನೀರಿನ ಹೊರ ಹರಿವು ನದಿಗೆ 30 ಕ್ಯುಸೆಕ್. ನಾಲೆಗೆ 20 ಕ್ಯುಸೆಕ್. ಕಳೆದ ವರ್ಷ ಇದೇ ದಿನ ನೀರಿನ ಹೊರ ಹರಿವು ನದಿಗೆ 651 ಕ್ಯುಸೆಕ್. ನಾಲೆಗೆ 20 ಕ್ಯುಸೆಕ್.
ಮಡಿಕೇರಿ ಜು.1 : ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 13.51 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 36.36 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 315.33 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 726.72 ಮಿ.ಮೀ ಮಳೆಯಾಗಿತ್ತು. ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 23.03 ಮಿ.ಮೀ. ಕಳೆದ ವರ್ಷ ಇದೇ ದಿನ 56.48 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 482.01 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 1018.64 ಮಿ.ಮೀ. ಮಳೆಯಾಗಿತ್ತು. ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 8.26 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 29.83 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 232.48 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 635.84 ಮಿ.ಮೀ. ಮಳೆಯಾಗಿತ್ತು. ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 9.23 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 22.78 ಮಿ.ಮೀ.…
ಮಡಿಕೇರಿ ಜು.1 : ಕರಿಕೆ ಗ್ರಾ.ಪಂ ವ್ಯಾಪ್ತಿಯಲ್ಲಿ ಗಾಳಿ ಸಹಿತ ಮಳೆಯಾಗಿದ್ದು, 13ನೇ ಮೈಲಿನ ಕೆ.ಸುರೇಶ ಬಾಬು ಎಂಬವರ ಮನೆಗೆ ಹಾನಿಯಾಗಿದೆ. ಮನೆಯ ಮೇಲ್ಚಾವಣಿ ಒಂದು ಭಾಗ ಕುಸಿದ್ದು, ಅಪಾರ ನಷ್ಟ ಸಂಭವಿಸಿದೆ.ಇದರಿಂದ ಮನೆಯ ಒಳಗೆ ಮಳೆ ನೀರು ತುಂಬಿ ಮನೆಯ ವಸ್ತುಗಳಿಗೆ ಹಾನಿಯಾಗಿದ್ದು ಬಡ ಕುಟುಂಬ ಸಂಕಷ್ಟ ಅನುಭವಿಸುವಂತ್ತಾಗಿದೆ. ಸರ್ಕಾರದ ಸಂಬಂಧಪಟ್ಟ ಇಲಾಖೆಯವರು ಇವರಿಗೆ ಆದಂತಹ ನಷ್ಟವನ್ನು ಭರಿಸಿ ಕೊಡಬೇಕೆಂದು ಮನವಿ ಮಾಡಿದ್ದಾರೆ. ಸ್ಥಳಕ್ಕೆ ಗ್ರಾಮಲೆಕ್ಕಾಧಿಕಾರಿ ಜನಾರ್ಧನ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.






