ಮಡಿಕೇರಿ ಏ.18 : ಜಿಲ್ಲಾಧಿಕಾರಿಗಳು ಹಾಗೂ ಚುನಾವಣಾಕಾರಿಗಳ ಆದೇಶವಿಲ್ಲದೆ ಪೊಲೀಸರು ಜಮ್ಮಾ ಹಿಡುವಳಿದಾರರ ಕೋವಿಗಳನ್ನು ವಶಕ್ಕೆ ಪಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿರುವ ಜಿಲ್ಲಾ ಬಿಜೆಪಿ ವಕ್ತಾರ ಮಹೇಶ್ ಜೈನಿ, ತಕ್ಷಣ ಈ ಪ್ರಕ್ರಿಯೆಯನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪ್ರತಿ ಚುನಾವಣೆಯ ಸಂದರ್ಭ ಜಿಲ್ಲಾಧಿಕಾರಿಗಳು ಹಾಗೂ ಚುನಾವಣಾಧಿಕಾರಿಗಳ ಆದೇಶದಂತೆ ಲೈಸನ್ಸ್ ಪಡೆದು ಬಳಸುತ್ತಿರುವವರ ಕೋವಿಯನ್ನು ಪೊಲೀಸ್ ಇಲಾಖೆ ಠೇವಣಿ ಇಟ್ಟುಕೊಳ್ಳುವುದು ಸಾಮಾನ್ಯ. ಈ ಕ್ರಮಕ್ಕೆ ಕೊಡಗಿನ ಜನ ಕೂಡ ಸಹಕಾರ ನೀಡುತ್ತಾ ಬಂದಿದ್ದಾರೆ. ಜಮ್ಮಾ ಹಿಡುವಳಿದಾರರ ಕೋವಿಗಳಿಗೆ ಪ್ರತಿ ಚುನಾವಣೆ ಸಂದರ್ಭದಲ್ಲೂ ವಿನಾಯಿತಿ ನೀಡಲಾಗಿದೆ. ಆದರೆ 2023 ರ ಚುನಾವಣೆಯಲ್ಲಿ ಯಾವುದೇ ಆದೇಶ ಮತ್ತು ಮುನ್ಸೂಚನೆ ಇಲ್ಲದೆ ಜಮ್ಮಾ ಹಿಡುವಳಿದಾರರ ಮನೆಗಳಿಗೆ ಪೊಲೀಸರು ತೆರಳಿ ಕೋವಿ ನೀಡುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಪೊಲೀಸ್ ಇಲಾಖೆಯ ಈ ಕ್ರಮದಿಂದ ಕೊಡಗಿನಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ. ಈ ಹಿಂದಿನ ಯಾವುದೇ ಚುನಾವಣೆಗಳಲ್ಲಿ ಜಿಲ್ಲೆಯಲ್ಲಿ ಕೋವಿಯಿಂದ ರಾಜಕೀಯ ಘರ್ಷಣೆಯಾದ ಉದಾಹರಣೆಗಳಿಲ್ಲ. ಆದರೂ ಈ ಚುನಾವಣೆಯಲ್ಲಿ ಜಮ್ಮಾ ಹಿಡುವಳಿದಾರರಿಗೆ ವಿನಾಕಾರಣ ಕಿರುಕುಳ ನೀಡಲಾಗುತ್ತಿದೆ. ಜಮ್ಮಾ ಹಿಡುವಳಿದಾರರ ಪರವಾಗಿ ಕೊಡಗು ಜಿಲ್ಲಾ ಬಿಜೆಪಿ ರಾಜ್ಯದ ಗೃಹಮಂತ್ರಿ ಹಾಗೂ ಚುನಾವಣಾ ಆಯೋಗಕ್ಕೂ ದೂರು ನೀಡಲಾಗುವುದು ಎಂದು ಮಹೇಶ್ ಜೈನಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕೆಂದು ಒತ್ತಾಯಿಸಿದ್ದಾರೆ.








