ಮಡಿಕೇರಿ ಜು.18 : ಕೊಡಗಿನ ಕೆಲವು ತೋಟಗಳ ಲೈನ್ ಮನೆಗಳಲ್ಲಿ ಜೀತದಾಳುಗಳಾಗಿ ದುಡಿಯುತ್ತಿರುವ ಆದಿವಾಸಿ ಕಾರ್ಮಿಕರಿಗೆ ಸ್ವಂತ ಮನೆ ಮತ್ತು ಕೃಷಿಭೂಮಿ ನೀಡಬೇಕು ಎಂದು ದಲಿತ ಆದಿವಾಸಿ ಕೃಷಿ ಕಾರ್ಮಿಕ ಸಂಘದ ಕೊಡಗು ಜಿಲ್ಲಾ ಘಟಕ ಒತ್ತಾಯಿಸಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಮುಖಂಡ ಡಿ.ಎಸ್.ನಿರ್ವಾಣಪ್ಪ, ಜಿಲ್ಲೆಯ ಮೂಲ ನಿವಾಸಿಗಳಾದ ಪಣಿಯರವ, ಪಂಜರಿಯರವ, ಜೇನುಕುರುಬ, ಬೆಟ್ಟಕುರುಬ, ಮಲೆ ಕುಡಿಯರು, ದಲಿತರು ಸೇರಿದಂತೆ ಸಾವಿರಾರು ಕುಟುಂಬಗಳು ಶಾಶ್ವತ ನಿವೇಶನ, ಸೂರಿಲ್ಲದೆ ಉಳ್ಳವರ ತೋಟದ ಲೈನ್ ಮನೆಗಳಲ್ಲಿ ಜೀತ ಮಾಡುತ್ತಿದ್ದಾರೆ. ಕಾರ್ಮಿಕರ ಮೂಲ ದಾಖಲೆಗಳನ್ನು ಕಸಿದುಕೊಳ್ಳುವ ಪ್ರಕರಣಗಳು ಕೂಡ ಬೆಳಕಿಗೆ ಬಂದಿದೆ ಎಂದು ಆರೋಪಿಸಿದರು.
ಮಹಿಳೆಯರು, ಮಕ್ಕಳು, ಬಾಣಂತಿಯರು ಆರೋಗ್ಯ ಮತ್ತು ಜೀವನದ ಭದ್ರತೆ ಇಲ್ಲದೆ ಭೀತಿಯ ವಾತಾವರಣದಲ್ಲಿ ಲೈನ್ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಈ ಹಿನ್ನೆಯಲ್ಲ್ಲಿ ಸಂಘಟನೆ ವತಿಯಿಂದ ಲೈನ್ ಮನೆಯ ಕಾರ್ಮಿಕರ ಪಟ್ಟಿಯನ್ನು ಸಂಗ್ರಹಿಸಲಾಗುತ್ತಿದ್ದು, ಅವರ ಸ್ವ ವಿವರ ಹಾಗೂ ದಾಖಲಾತಿಗಳನ್ನು ಸಾಧ್ಯವಾದಷ್ಟು ಸಂಗ್ರಹಿಸಿ ಹಂತ ಹಂತವಾಗಿ ಸರ್ಕಾರಕ್ಕೆ ನೀಡಲಾಗುತ್ತದೆ. ಈಗಾಗಲೇ ಒಂದು ಕಂತಿನ ಪಟ್ಟಿಯನ್ನು ನೀಡಲಾಗಿದ್ದು, 2ನೇ ಕಂತಿನ ಅರ್ಜಿಯನ್ನು ಸಂಗ್ರಹಿಸಲಾಗುತ್ತಿದೆ ಎಂದರು.
ಸಿ ಮತ್ತು ಡಿ ದರ್ಜೆಯ ಭೂಮಿಯನ್ನು ಕಂದಾಯ ಭೂಮಿಯಾಗಿ ಪರಿವರ್ತನೆ ಮಾಡಿ ಭೂ ಹೀನ ಬಡ ಕೃಷಿ ಕಾರ್ಮಿಕರಿಗೆ ಹಂಚಬೇಕು, ಆದಿವಾಸಿ ಅರಣ್ಯ ಹಕ್ಕು ಕಾಯಿದೆ ಪಾರಂಪರಿಕ ಹಕ್ಕುಗಳನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು, ಬಲಾಡ್ಯರ ಕಂಪನಿಗಳ ಅಕ್ರಮ ಭೂಮಿಯನ್ನು ತೆರವುಗೊಳಿಸಿ ಬಡವರಿಗೆ ನೀಡಬೇಕೆಂದು ಒತ್ತಾಯಿಸಿದ ನಿರ್ವಾಣಪ್ಪ, ಸರ್ಕಾರ ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾ ಸಮಿತಿ ಸದಸ್ಯರಾದ ವೈ.ಜೆ.ಮಂಜು, ಜೆ.ಎಂ.ಸುರೇಶ್, ವೈ.ಬಿ.ಮೋಹನ, ವೈ.ಎಂ.ಸುರೇಶ್ ಹಾಗೂ ವೈ.ಎ.ಬಾಬು ಉಪಸ್ಥಿತರಿದ್ದರು.








