ಮಡಿಕೇರಿ ಆ.28 : ನಗರದ ಹೃದಯ ಭಾಗದಲ್ಲಿರುವ ವೀರ ಸೇನಾನಿಗಳ ಪ್ರತಿಮೆಗಳಿಗೆ ಹಾನಿಯಾಗದಂತೆ ಅಗತ್ಯ ಸುರಕ್ಷತಾ ಕ್ರಮಗಳನ್ನು ನಗರಸಭೆ ಕೈಗೊಳ್ಳಬೇಕು ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ವೀರಯೋಧ ಜನರಲ್ ತಿಮ್ಮಯ್ಯ ಅವರ ಪ್ರತಿಮೆ ನೆಲಕ್ಕುರುಳಿದ ಬೆನ್ನಲ್ಲೇ ಸ್ಕಾ÷್ವಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ ಪ್ರತಿಮೆ ಇರುವ ವೃತ್ತಕ್ಕೂ ಕೆಎಸ್ಆರ್ಟಿಸಿ ಬಸ್ ಡಿಕ್ಕಿಯಾಗಿದೆ. ಇದೆಲ್ಲವೂ ಉದ್ದೇಶಪೂರ್ವಕ ಕೃತ್ಯಗಳು ಎನ್ನುವ ಸಂಶಯ ಮೂಡುತ್ತಿದೆ ಎಂದು ಆರೋಪಿಸಿದ್ದಾರೆ.
ದೇಶದ ರಕ್ಷಣೆಗಾಗಿ ಇಡೀ ಜೀವನವನ್ನೇ ಮುಡುಪಾಗಿಟ್ಟ ಯೋಧರ ಪ್ರತಿಮೆಗಳನ್ನಷ್ಟೇ ಸ್ಥಾಪಿಸಲು ವೀರ ಪರಂಪರೆಯ ಕೊಡವರು ಅಪೇಕ್ಷೆ ಪಡುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಪ್ರತಿಮೆಗಳನ್ನು ಹಾನಿಗೊಳಿಸುವ ಮೂಲಕ ಕೊಡವರ ಭಾವನೆಗಳಿಗೆ ದಕ್ಕೆ ತರುವ ಪ್ರಯತ್ನಗಳು ನಡೆಯುತ್ತಿದೆ. ನಗರದಲ್ಲಿ ಫೀ.ಮಾ.ಕಾರ್ಯಪ್ಪ, ಜನರಲ್ ತಿಮ್ಮಯ್ಯ, ಮೇಜರ್ ಮಂಗೇರಿರ ಮುತ್ತಣ್ಣ ಹಾಗೂ ಸ್ಕಾ÷್ವಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ ಪ್ರತಿಮೆಗಳಿವೆ. ನಾಲ್ವರ ಪ್ರತಿಮೆಗಳನ್ನು ವೀರರ ಪರಮ ತ್ಯಾಗಕ್ಕಾಗಿ ಸ್ಥಾಪಿಸಲಾಗಿದೆ. ಇವುಗಳಲ್ಲಿ ಈಗಾಗಲೇ ಎರಡು ಪ್ರತಿಮೆಗಳಿಗೆ ಹಾನಿ ಮಾಡುವ ಮೂಲಕ ವೀರ ಸೇನಾನಿಗಳಿಗೆ ಅಗೌರವ ತೋರಲಾಗಿದೆ.
ಈ ಘಟನೆಗಳು ನಡೆದರೂ ಮಡಿಕೇರಿ ನಗರಸಭೆ ಪ್ರತಿಮೆಗಳ ಸುರಕ್ಷತೆಗೆ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿಲ್ಲ. ಫೀ.ಮಾ.ಕಾರ್ಯಪ್ಪ ಅವರ ಪ್ರತಿಮೆಗೆ ವಿದ್ಯುತ್ ದೀಪದ ವ್ಯವಸ್ಥೆ ಮಾಡದೆ ಕತ್ತಲೆಯಲ್ಲಿ ಇಡಲಾಗಿದೆ. ಈ ರೀತಿಯ ನಿರ್ಲಕ್ಷö್ಯವನ್ನು ಸಹಿಸಲು ಸಾಧ್ಯವಿಲ್ಲ. ಟ್ರಾಫಿಕ್ ಸಮಸ್ಯೆಯನ್ನು ಉಲ್ಲೇಖಿಸಿ ನಗರದ ಹೃದಯಭಾಗದಿಂದ ವೀರ ಯೋಧರ ಪ್ರತಿಮೆಗಳನ್ನು ಸ್ಥಳಾಂತರಿಸುವ ತಂತ್ರ ಇದರಲ್ಲಿ ಅಡಗಿದೆ. ಕೊಡವ ವೀರರ ಪ್ರತಿಮೆಗಳ ಸ್ಥಳಾಂತರ ಮಾತ್ರವಲ್ಲದೆ, ಈ ಮಣ್ಣಿನಿಂದ ಕೊಡವ ಜನಾಂಗದ ಜನಾಂಗೀಯ ನಿರ್ಮೂಲನೆಯ ದುರುದ್ದೇಶವೂ ಇದೆ.
2016ರಲ್ಲಿ ದುಷ್ಕರ್ಮಿಗಳು ದೇವಟ್ ಪರಂಬುವಿನಲ್ಲಿ ಕೊಡವ ನರಮೇಧದ ಸ್ಮಾರಕವನ್ನು ಅರ್ತ್ ಮೂವರ್ ಮೂಲಕ ನಾಶಪಡಿಸಿದ್ದರು. ಇದು ಕೊಡವ ಜನಾಂಗಕ್ಕೆ ದೊಡ್ಡ ಹಾನಿ ಮತ್ತು ಅವಮಾನವಾಗಿದೆ. ಈ ಬೆಳವಣಿಗೆಗಳನ್ನು ಗಮನಿಸಿದರೆ ಸ್ಥಳೀಯ ಕೊಡವರು ಅಪಾಯದಲ್ಲಿದ್ದಾರೆ, ತಮ್ಮ ತಾಯ್ನಾಡಿನಲ್ಲೇ ಅಸುರಕ್ಷಿತರಾಗಿದ್ದಾರೆ. ಕೊಡವ ಪರಂಪರೆಯ ಗುರುತುಗಳು ಕರ್ನಾಟಕದಡಿಯಲ್ಲಿ ಅಸುರಕ್ಷಿತವಾಗಿವೆ ಎಂದು ನಾಚಪ್ಪ ಆರೋಪಿಸಿದ್ದಾರೆ.








