ಮಡಿಕೇರಿ ನ.28 : ಐತಿಹಾಸಿಕ ಹಿನ್ನೆಲೆ ಹೊಂದಿರುವ ನಗರದ ಕೋಟೆ ಆವರಣದಲ್ಲಿ ಮಡಿಕೇರಿ ಕೊಡವ ಸಮಾಜ, ಶ್ರೀ ಓಂಕಾರೇಶ್ವರ ದೇವಾಲಯ ಸಮಿತಿ ಮತ್ತು ಪಾಂಡೀರ ಕುಟುಂಬಸ್ಥರ ಸಂಯುಕ್ತ ಆಶ್ರಯದಲ್ಲಿ ಪುತ್ತರಿ ಕೋಲಾಟ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಧಾನಸಭೆಯ ಮಾಜಿ ಅಧ್ಯಕ್ಷ ಕೆ.ಜಿ.ಬೋಪಯ್ಯ ಅವರು, ಕೊಡವ ಸಮುದಾಯದ ಶ್ರೀಮಂತ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಎಲ್ಲರೂ ಕೈಜೋಡಿಸಬೇಕು, ಯಾವುದೇ ಸಂಸ್ಕೃತಿ ನಶಿಸಿ ಹೋಗದಂತೆ ಎಚ್ಚರ ವಹಿಸಬೇಕೆಂದು ಹೇಳಿದರು.
ರಾಜ್ಯದಲ್ಲಿ ಸುಗ್ಗಿ ಹಬ್ಬದ ಮಾದರಿಯಲ್ಲೇ ಕೊಡಗು ಜಿಲ್ಲೆಯಲ್ಲಿ ಪುತ್ತರಿ ಕೋಲಾಟ ಅನಾದಿ ಕಾಲದಿಂದಲೇ ನಡೆದುಕೊಂಡು ಬರುತ್ತಿದೆ. ರಾಜವಂಶಸ್ಥರು ಅರಮನೆ ಮೈದಾನದಲ್ಲಿ ಪುತ್ತರಿ ಕೋಲಾಟ ನಡೆಸಿಕೊಂಡು ಬಂದಿದ್ದರು. ಕಾಲಾನಂತರ ಕೋಲಾಟವನ್ನು ಗದ್ದುಗೆ ಆವರಣಕ್ಕೆ ಸ್ಥಳಾಂತರವಾಗಿತ್ತು. ಆ ಬಳಿಕ ಕೊಡವ ಸಮಾಜ, ಕೊಡವ ಸಾಹಿತ್ಯ ಅಕಾಡೆಮಿಯ ಸಲಹೆಯಂತೆ ತಮ್ಮ ಅವಧಿಯಲ್ಲಿ ಮತ್ತೆ ಅರಮನೆ ಮೈದಾನಕ್ಕೆ ಸ್ಥಳಾಂತರ ಮಾಡಲಾಗಿದ್ದು, ಇದೀಗ ಹಲವು ವರ್ಷಗಳಿಂದ ಎಲ್ಲರ ಸಹಕಾರದಿಂದ ಕೋಲಾಟ ಯಶಸ್ವಿಯಾಗಿ ನಡೆಯುತ್ತಿದೆ. ಇಂತಹ ಪದ್ಧತಿ, ಪರಂಪರೆಗಳು, ಆಚಾರ ವಿಚಾರಗಳನ್ನು ನಶಿಸಲು ಬಿಡದೆ ಎಲ್ಲರೂ ಅದರ ಉಳಿವಿಗೆ ಪ್ರೋತ್ಸಾಹ ನೀಡಬೇಕೆಂದು ಬೋಪಯ್ಯ ಹೇಳಿದರು.
ಪಾಂಡೀರ ಕುಟುಂಬಸ್ಥರಿಂದ ಪ್ರಾರಂಭಿಕವಾಗಿ ಪುತ್ತರಿ ಕೋಲಾಟ ನಡೆಯಿತು. ಪಾಂಡೀರ ಕುಟುಂಬದ ಮಹಿಳಾ ಸದಸ್ಯರಿಂದ ನಡೆದ ಉಮ್ಮತ್ತಾಟ್, ತಾಲಿಪಾಟ್ ನೃತ್ಯ ಪ್ರದರ್ಶನ ಗಮನ ಸೆಳೆಯಿತು. ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ದರಾಗಿ ವಿವಿಧ ನೃತ್ಯ ಪ್ರಕಾರಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಮಡಿಕೇರಿ ಕೊಡವ ಸಮಾಜದಿಂದ ಕೋಲಾಟ್, ಉಮ್ಮತ್ತಾಟ್, ಪರೆಯಕಳಿ ನಡೆಯಿತು. ಕಾರ್ಯಕ್ರಮದ ನಂತರ ಕೊಡಗಿನ ಸಾಂಪ್ರದಾಯಿಕ ವಾಲಗಕ್ಕೆ ನೆರೆದಿದ್ದವರು ಕುಣಿದು ಸಂಭ್ರಮಿಸಿದರು.
ಪಾಂಡೀರ ಕುಟುಂಬದ ಪಟ್ಟೆದಾರ ಪಾಂಡೀರ ಮೇದಪ್ಪ, ಪದ್ಮಶ್ರೀ ಐಮುಡಿಯಂಡ ರಾಣಿ ಮಾಚಯ್ಯ, ಶ್ರೀಓಂಕಾರೇಶ್ವರ ದೇವಾಲಯ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ರಮೇಶ್ ಹೊಳ್ಳ, ಕಾರ್ಯನಿರ್ವಹಣಾಧಿಕಾರಿ ದೇವರಾಜ್, ನಗರ ಸಭೆ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಪಾಂಡೀರ ವಿಜಯ, ಪಾಂಡೀರ ಮುತ್ತಣ್ಣ, ಸಜನ್ ಪೂಣಚ್ಚ, ಸಂತು ಸೇರಿದಂತೆ ಮಡಿಕೇರಿ ಕೊಡವ ಸಮಾಜದ ಆಡಳಿತ ಮಂಡಳಿ ಪದಾಧಿಕಾರಿಗಳು, ಕೊಡವ ಸಮಾಜದ ಪೊಮ್ಮಕ್ಕಡ ಕೂಟದ ಸದಸ್ಯರು, ವಿವಿಧ ಕೊಡವ ಕೇರಿಗಳ ಅಧ್ಯಕ್ಷರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.











