ಸೋಮವಾರಪೇಟೆ ಜ.8 : ರಕ್ತದಾನದಿಂದ ಜೀವದಾನಮಾಡಿದಂತೆ ಎಂದು ಕಿರಿಕೊಡ್ಲಿ ಮಠಾಧೀಶ ಶ್ರೀ ಸದಾಶಿವ ಸ್ವಾಮೀಜಿ ತಿಳಿಸಿದರು.
ಸೋಮವಾರಪೇಟೆಯ ತಥಾಸ್ತು ಸಂಸ್ಥೆ ಹಾಗೂ ಜಿಲ್ಲಾ ರಕ್ತನಿಧಿ ಘಟಕದ ವತಿಯಿಂದ ಶ್ರೀ ಶಿವಕುಮಾರ ಸ್ವಾಮೀಜಿ ಸ್ಮರಣಾರ್ಥ ಸೋಮವಾರಪೇಟೆಯ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಆಯೋಜಿಸಿದ್ದ ರಕ್ತ ದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ರಕ್ತ ದಾನ ಮಾಡುವುದರಿಂದ ಒಂದು ಜೀವ ಉಳಿಸಿದಂತಾಗುತ್ತದೆ. ಅಪಘಾತ ಮುಂತಾದ ತುರ್ತು ಸಂದರ್ಭಗಳಲ್ಲಿ ರಕ್ತ ನೀಡಲು ಮುಂದಾಗಬೇಕೆಂದರು.
ನೂರಾಹನ್ನೊಂದು ವರ್ಷಗಳ ಕಾಲ ಬಾಳಿ ಜಾತಿ, ಮತ, ಭೇದ ನೀಡದೆ ಸರ್ವಜನಾಂಗದ ಮಕ್ಕಳಿಗೂ ಶಿಕ್ಷಣ, ದಾಸೋಹ ಹಾಗೂ ಆಶ್ರಯ ನೀಡಿದ ಕಾಯಕಯೋಗಿ ಶಿವಕುಮಾರ ಸ್ವಾಮಿಗಳ ದಾಸೋಹ ದಿನದ ನೆನಪಿನಲ್ಲಿ ಇಂತಹ ಶಿಬಿರಗಳನ್ನು ಆಯೋಜಿಸಿರುವುದು ಶ್ಲಾಘನೀಯ ಎಂದರು.
ಜಿಲ್ಲಾ ರಕ್ತ ನಿಧಿ ಮುಖ್ಯಸ್ಥ ಡಾ.ಕರುಂಬಯ್ಯ ಮಾತನಾಡಿ, ರಕ್ತದಾನ ಶ್ರೇಷ್ಠವಾದದ್ದು ಆದ್ದರಿಂದ ಆರೋಗ್ಯವಂತ ವ್ಯಕ್ತಿಗಳು ವರ್ಷಕ್ಕೆ ಮೂರು ನಾಲ್ಕು ಬಾರಿ ರಕ್ತ ದಾನಮಾಡಬಹುದೆಂದು ಸಲಹೆ ನೀಡಿದರು.
ಹಲವು ಸಂದರ್ಭಗಳಲ್ಲಿ ರಕ್ತ ಅನಿವಾರ್ಯವಾಗಿದೆ ಆದ್ದರಿಂದ ದಾನಿಗಳು ಮುಂದೇಬರಬೇಕು ಎಂದ ಅವರು ರಕ್ತ ಕೊಟ್ಟವರಿಗೂ ಅನುಕೂಲವಿದೆ ಎಂದರು.
ಕಾರ್ಯಕ್ರಮದ ವೇದಿಕೆಯಲ್ಲಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಶಿವಪ್ರಸಾದ್, ವೈದ್ಯರಾದ ಡಾ.ಸತೀಶ್, ತಥಾಸ್ತು ಸಂಸ್ಥೆ ಅಧ್ಯಕ್ಷ ಉದಯ್, ಶಿವಕುಮಾರ ಸ್ವಾಮೀಜಿ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಎಸ್.ಮಹೇಶ್, ಪಟ್ಟಣ ಪಂಚಾಯ್ತಿ ಸದಸ್ಯ ಮೃತ್ಯುಂಜಯ ಹಾಜರಿದ್ದರು.
ಈ ಸಂದರ್ಭ ತಥಾಸ್ತು ಸಾತ್ವಿಕ ಸಂಸ್ಥೆಯ ಕಾರ್ಯದರ್ಶಿ ಬಿ.ಟಿ. ಜನಾರ್ಧನ್, ಕಾನೂನು ಸಲಹೆಗಾರರಾದ ರೂಪಾ ಕಾಳಪ್ಪ, ಖಜಾಂಚಿ ಗಣೇಶ್ ಮರಗೋಡು, ಸದಸ್ಯರುಗಳಾದ ಶಿವಕುಮಾರ್, ಗಿರೀಶ್ ಹೆಚ್.ಆರ್. ಶಿವಕುಮಾರ್ ಹಾಗೂ ಮುಂತಾದವರು ಹಾಜರಿದ್ದರು.








